ಕೊರಟಗೆರೆ: ರೋಟರಿ ಸಂಸ್ಥೆಯು ಅಂತರಾಷ್ಟ್ರೀಯ ಮಟ್ಟದಲ್ಲಿ ಹಮ್ಮಿಕೊಂಡಿರುವ ಬೃಹತ್ ಯೋಜನೆಗಳು ಯಶಸ್ವಿಯಾಗಿವೆ. ಧಾರ್ಮಿಕ ಕೇಂದ್ರಗಳು ಕೇವಲ ಧಾರ್ಮಿಕ ಆಚರಣೆಗಳಿಗೆ ಸೀಮಿತವಾಗದೆ, ಸಮಾಜಕ್ಕೆ ಪ್ರಗತಿಪರ ಚಿಂತನೆಗಳನ್ನು ಧಾರೆ ಎರೆಯಬೇಕು ಎಂದು ಸಿದ್ದರಬೆಟ್ಟ ಬಾಳೆಹೊನ್ನೂರು ಖಾಸಾ ಶಾಖಾ ಶ್ರೀಮಠದ ವೀರಭದ್ರ ಶಿವಾಚಾರ್ಯ ಸ್ವಾಮೀಜಿ ತಿಳಿಸಿದರು.
ತಾಲ್ಲೂಕಿನ ಸಿ.ಎನ್. ದುರ್ಗ ಹೋಬಳಿಯ ಸಿದ್ದರಬೆಟ್ಟದ ಬಾಳೆಹೊನ್ನೂರು ಖಾಸಾ ಶಾಖಾ ಶ್ರೀಮಠದ ಸಮುದಾಯ ಭವನದಲ್ಲಿ ರೋಟರಿ ಸಿದ್ದರಬೆಟ್ಟ ವತಿಯಿಂದ ಆಯೋಜಿಸಲಾಗಿದ್ದ ವೇದಿಕೆ ಕಾರ್ಯಕ್ರಮದ ದಿವ್ಯ ಸಾನಿಧ್ಯ ವಹಿಸಿ ಶ್ರೀಗಳು ಮಾತನಾಡಿದರು.
ಕಾರ್ಯಕ್ರಮದಲ್ಲಿ ಪ್ರಪಂಚದ ಜಾಗತಿಕ ಸಮಸ್ಯೆಗಳ ಬಗ್ಗೆ ಬೇಸರ ವ್ಯಕ್ತಪಡಿಸಿದ ಶ್ರೀಗಳು, “ಇಂದು ಎಲ್ಲೆಡೆ ಜಾಗತಿಕ ಸಮಸ್ಯೆಗಳ ಭೀತಿ ಆವರಿಸಿದೆ. ಅಂತರ್ಜಲ ಮಟ್ಟ ತೀವ್ರವಾಗಿ ಕುಸಿದಿರುವುದು ಆತಂಕಕಾರಿ ವಿಷಯ. ಹೀಗಾಗಿ ಸಂಸ್ಥೆಯು ಹಮ್ಮಿಕೊಂಡಿರುವ ಬೋರ್ವೆಲ್ ರೀಚಾರ್ಜ್ ಯೋಜನೆಗೆ ರೈತರು ಕೈಜೋಡಿಸಬೇಕಿದೆ,” ಎಂದರು.
ಅಲ್ಲದೆ, ರೋಟರಿ ಅಧ್ಯಕ್ಷ ಬಾಲಾಜಿ ದರ್ಶನ್ ನೇತೃತ್ವದಲ್ಲಿ ೨೦೨೫-೨೬ನೇ ಸಾಲಿನಲ್ಲಿ ೩೫ಕ್ಕೂ ಹೆಚ್ಚು ಸಾಮಾಜಿಕ ಕಾರ್ಯಕ್ರಮಗಳನ್ನು ಯಶಸ್ವಿಯಾಗಿ ನಡೆಸಿರುವುದನ್ನು ಶ್ಲಾಘಿಸಿದರು. ಗಂಗಾಧರ ಶಾಸ್ತ್ರಿಗಳ ಆರಂಭಿಕ ಶ್ರಮದಿಂದ ಸಂಸ್ಥೆ ಇಂದು ಎಲ್ಲೆಡೆ ಪ್ರಶಂಸೆಗೆ ಪಾತ್ರವಾಗಿದ್ದು, ‘ಕಾಮಧೇನು’ ಯೋಜನೆ ಮೂಲಕ ರೈತರಿಗೆ ೨೩೪೧ ಹಸುಗಳನ್ನು ವಿತರಿಸಿರುವುದು ಶ್ಲಾಘನೀಯ ಎಂದು ಶ್ರೀಗಳು ನುಡಿದರು.
ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ರೋಟರಿ ಜಿಲ್ಲಾ ರಾಜ್ಯಪಾಲರಾದ ಎಲಿಜಬೆತ್ ಚೆರಿಯನ್, “ಸಮಾಜ ಅಭಿವೃದ್ಧಿಯಾಗಬೇಕಾದರೆ ಮುಖ್ಯವಾಗಿ ಮೌಲ್ಯಗಳಿರಬೇಕು. ಮೌಲ್ಯಯುತ ಗುಣವಿದ್ದಾಗ ಮಾತ್ರ ಸಾಮಾಜಿಕ ಕಾರ್ಯಕ್ರಮಗಳು ಯಶಸ್ವಿಯಾಗಲು ಸಾಧ್ಯ. ಶ್ರೀಮಠದಂತಹ ಧಾರ್ಮಿಕ ಕೇಂದ್ರಗಳ ಜೊತೆಗೂಡಿ ಕೆಲಸ ಮಾಡಿರುವುದು ಹೆಮ್ಮೆಯ ತಂದಿದೆ,” ಎಂದರು.
ಇಂದಿನ ಆಧುನಿಕ ಜಗತ್ತಿನಲ್ಲಿ ಸೋಷಿಯಲ್ ಮೀಡಿಯಾ ಪ್ರಮುಖ ಪಾತ್ರ ವಹಿಸುತ್ತಿದ್ದು, ಸಿದ್ದರಬೆಟ್ಟದ ಸಸ್ಯೌಷಧಿಗಳ ಪ್ರಚಾರ ಜಾಗತಿಕ ಮಟ್ಟದಲ್ಲಿ ಹೆಚ್ಚಾಗಬೇಕಿದೆ. ತಮಗೆ ರೋಟರಿಯಲ್ಲಿ ಸ್ಥಾನಮಾನ ಇರಲಿ, ಇಲ್ಲದಿರಲಿ ಶ್ರೀಮಠದ ಸಾಮಾಜಿಕ ಕಾರ್ಯಕ್ರಮಗಳಿಗೆ ಸದಾ ಕೈಜೋಡಿಸುವುದಾಗಿ ಅವರು ಭರವಸೆ ನೀಡಿದರು.
ಸಹಾಯಕ ರಾಜ್ಯಪಾಲ ಜನಾರ್ಧನ್ ಮಾತನಾಡಿ, “ಇದು ಭಾರತದ ಇತಿಹಾಸದಲ್ಲೇ ಧಾರ್ಮಿಕ ಕೇಂದ್ರ ಮತ್ತು ಅಂತರಾಷ್ಟ್ರೀಯ ಸಂಸ್ಥೆಯೊಂದರ ಅಪೂರ್ವ ಸಂಗಮವಾಗಿದೆ. ಪೂಜ್ಯರ ಆಶೀರ್ವಾದದಿಂದ ರೋಟರಿ ಸಂಸ್ಥೆ ಯಶಸ್ವಿಯಾಗಿ ಮುನ್ನಡೆಯುತ್ತಿದೆ,” ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ರೋಟರಿ ಸಿದ್ದರಬೆಟ್ಟ ಅಧ್ಯಕ್ಷ ಬಾಲಾಜಿ ದರ್ಶನ್ ಮಾತನಾಡಿ, “ಶ್ರೀಗಳ ಮಾರ್ಗದರ್ಶನದಲ್ಲಿ ‘ಕಾಮಧೇನು’ ಹಾಗೂ ‘ಬೋರ್ವೆಲ್ ರಿಚಾರ್ಜ್’ ನಂತಹ ಯೋಜನೆಗಳ ಮೂಲಕ ಗ್ರಾಮೀಣ ರೈತರ ಬದುಕು ಹಸನಾಗಿದೆ. ಮುಂದಿನ ದಿನಗಳಲ್ಲಿ ೫ ಗ್ರಾಮಗಳನ್ನು ದತ್ತು ಪಡೆದು ಅಭಿವೃದ್ಧಿ ಪಡಿಸುವ ಗುರಿ ಹೊಂದಿದ್ದೇವೆ,” ಎಂದು ತಮ್ಮ ಸಂಕಲ್ಪ ತೊಟ್ಟರು.
ಶ್ರೀಮಠದಲ್ಲಿ ಕಾರ್ಮಿಕ ವರ್ಗದವರಿಗಾಗಿ ಹಾಗೂ ಬಡ ಕುಟುಂಬಗಳಿಗಾಗಿ ಸತತ ೧೨ ತಿಂಗಳ ಕಾಲ ಹಮ್ಮಿಕೊಳ್ಳಲಾಗಿದ್ದ ಉಚಿತ ಆರೋಗ್ಯ ಶಿಬಿರದ ಪ್ರಯೋಜನವನ್ನು ೬೦೦ಕ್ಕೂ ಹೆಚ್ಚು ಮಂದಿ ಪಡೆದುಕೊಂಡಿದ್ದಾರೆ. ಈ ಯಶಸ್ವಿ ಕಾರ್ಯಕ್ಕಾಗಿ ಶ್ರೀಮಠದ ವತಿಯಿಂದ ರೋಟರಿ ಕಾರ್ಯದರ್ಶಿ ರವಿ ಟಿ. ಅವರಿಗೆ ಕೃತಜ್ಞತೆ ಸಲ್ಲಿಸಲಾಯಿತು.
ಈ ಸಮಾರಂಭದಲ್ಲಿ ಜಿಲ್ಲಾ ಕಾರ್ಯದರ್ಶಿ ರೇಣುಕೇಶ್ವರ ಸ್ವಾಮಿ, ಎಂ.ಎಸ್ ಉಮೇಶ್, ವಲಯ ರಾಯಭಾರಿ ಪ್ರಸನ್ನಕುಮಾರ್, ವಲಯ ಕಾರ್ಯದರ್ಶಿ ಶ್ರೀನಿವಾಸ್ ಮೂರ್ತಿ, ನವೀನ್ ಕರಿಯಪ್ಪ, ಸಚಿನ್, ಜಯಚಂದ್ರ ಆರಾಧ್ಯ, ನಿರಂಜನ್, ಗಂಗಾಧರ ಶಾಸ್ತ್ರಿ, ಪಂಚಾಕ್ಷರಯ್ಯ, ದೊಡ್ಡಯ್ಯ ಗೌಡ್ರು, ರೀತು.ಜಿ, ಇಂದಿರಾ ಕೆ.ಎನ್ ಸೇರಿದಂತೆ ಹಲವು ಪ್ರಮುಖರು ಉಪಸ್ಥಿತರಿದ್ದರು.
ವರದಿ: ಮಂಜುಸ್ವಾಮಿ ಎಂ.ಎನ್.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/ISmeQjik4LbG9KvWhKlbCC


