ಊರು: ಸುರಪುರವೆಂಬ ಹಳ್ಳಿ, ಮಿತ್ರರ ಹೆಸರು: ಸೋಮ, ಭೀಮ, ಮತ್ತು ಚಾಮ. ವರ್ಗ: ಸ್ವಲ್ಪ ಮಧ್ಯಮ ವರ್ಗದ ಬಡತನದ ಜೀವನ, ಮಾತಿಗೆ ಸೇರುವ ಜಾಗ: ಊರ ಹೊರಗಿನ ಅರಳಿ ಕಟ್ಟೆ.
(ಭೀಮ ಮತ್ತು ಚಾಮ ಅರಳಿ ಕಟ್ಟೆ ಮೇಲೆ ಕುಳಿತುಕೊಂಡು, ಎಲೆ ಅಡಿಕೆ ಹಾಕಿಕೊಂಡು ಮಾತನಾಡಿಕೊಳ್ಳುತ್ತಿರುವಾಗ, ಚಾಮ ತಾನು ಕಂಡ ಕೆಟ್ಟ ಕನಸನ್ನು ವರ್ಣಿಸುತ್ತಿರುವಾಗ…)
ಚಾಮ: ಇವತ್ತೇನೋ ಅಯ್ತದೆ ಕಣ್ಲ ಭೀಮ, ಯಾರ್ಗೋ ಏಟು ಒಡಿತದೆ ನೋಡ್ತಿರು..
ಭೀಮ: ಹೂ ಕಣ್ಲಾ ಬಿಡ್ಲಾ ನೀನು ಹೇಳದು ಸರಿ ಐತೆ, ಎಂತ ಕೆಟ್ಟ ಕನಸ್ಲಾ ಅದು, ಕಂಡಂಗೆ ಕಣ್ಣ ಎದುರೇ ದುಡ್ಡು ಎತ್ತುಕೊಂಡು ಓಡೋದಂಗೆ ಕನಸಾಗೆ…?
ಚಾಮ: ಹೂ ಕಣ್ಲಾ..
(ಅದೇ ಸಮಯಕ್ಕೆ ಸರಿಯಾಗಿ ಅಲ್ಲಿಗೆ ಆತುರ ಆತುರವಾಗಿ ಓಡಿ ಬಂದ ಸೋಮ…)
ಸೋಮ: ಎಲ್ಲ ಮುಗಿದು ಹೋಯ್ತು ಕಣ್ರಪ್ಪೋ ಎಲ್ಲ ಮುಗಿದು ಹೋಯ್ತು…
ಭೀಮ: ಅಂತದ್ದು ಏನಾಯ್ತೋ…? ಹಿಂಗ ಬಡ್ಕೋತ್ತಿದ್ದೀ..
ಸೋಮ: ನನ್ನ ಬ್ಯಾಂಕ್ ನಿಂದ ಯಾರೊ ಹ್ಯಾಕ್ ಮಾಡಿ ಹಣ ಎತ್ತೌರೆ ಎಲ್ಲ ಹೊರಟೋಯ್ತಪ್ಪೋ ಹೊರಟೋಯ್ತು..
ಭೀಮ: ಹೌದನ್ಲ, ಅಯ್ಯೋ ಸಿವನೆ, ಅದೆಂಗೆ ಒಸಿ ಡೀಟೇಲ್ಸ್ ಹೇಳ್ಳ..
ಚಾಮ: ಹಾ ನೋಡ್ಲಾ ಭೀಮ ನಾನು ಈಗಿನ್ನು ಹೇಳ್ದಂಗೆ ಆತು..
ಭೀಮ: ಹೌದು ಕಣ್ಲಾ ಚಾಮ ನೀನು ಹೇಳ್ದಂಗೆ ಆತು, ಭವಿಷ್ಯ ನಿಜ ಆಯ್ತು ನೋಡು..
ಚಾಮ: ಅದು ಭವಿಷ್ಯ ಅಲ್ಲ ಕಳ್ಳಾ ಅದು..ಕನಸು…
ಭೀಮ: ಹೂ ಕರೆಕ್ಟು, ಮಾತು ವೆತ್ತಾಸ ಆತು ಅಟ್ಟೆ…
(ಸೋಮ ವರ್ಣಿಸಲು ಶುರು ಮಾಡಿದ)
ಸೋಮ: ಬೆಳಗ್ಗೆ ಎದ್ದೇನೆ ಗೋಡೆಗೆ ಗೊಣ್ಣೆ ಸೀಟಿ, ಪಕ್ಕದ ಮನೆ ಪೇಪರ್ ದೇಕ್ಕೊಂಡು ಓದ್ಕೊಂಡು, ಜಗಲಿ ಮೇಲೆ ಕುಂತಿದ್ನಾ…
ಭೀಮ ಮತ್ತು ಚಾಮ: ಹಾ!!!!!….
ಸೊಮ: ನನ್ನ ಹೆಂಡ್ತಿ ಬಿಸಿ ಬಿಸಿ ಸೀಗೆ ಕಾಯಿ ನೀರು ತಂದು ಕೊಟ್ಲಾ…
ಭೀಮ: ಸೀಗೆ ಕಾಯಿ ನೀರು!….?
ಸೋಮ: ನಮ್ ಮನೇಲಿ ಕಾಪಿ(ಕಾಫಿ) ಅಂಗೆಯ ಇರದು…
ಭೀಮ: ಓ ಕಾಪಿಗೆ ಅಂಗೆ ಹೇಳ್ದಾ….ವಾಕೆ ವಾಕೆ (ಒಕೆ ಒಕೆ) ನಂಗು ನಿಮ್ ಮನೆ ಕಾಪಿ ಕುಡ್ದು ಅವತ್ತು ಹಸೂರು ವಾಂತಿ ಬಂದಿತ್ತು ಹೇಳು.
ಸೋಮ: ಏ ಅದು ಕಾಪಿ ಕುಡ್ದು ಅಲ್ಲ ಬಿಡು, ಖಾಲಿ ಹೊಟ್ಟೆಗೆ ಎಣ್ಣೆ ಕುಡ್ಕೊಂಡು ಬಂದು ಕಾಪಿ ಕುಡ್ದೆ.. ಮತ್ತಿನ್ನೇನಾಯ್ತದೆ ಪಿತ್ತ ಹೊರಗ್ ಬಂತು
ಭೀಮ: ಇರ್ಲಿ ಬುಡು ಆಮೇಕೆ ಏನಾಯ್ತು ಮುಂದ್ಕೇಳು..
ಸೋಮ: ಸರಿ ಒಂದು ಗಂಟೆಲಿ 4 ಲೈನ್ ಓದಿದ್ನಾ…?
ಭೀಮ: 4 ಲೈನು ಓದಕ್ಕೆ 1 ಗಂಟೆ ತಗೊಂಡಾ….? ನಾನಾಗಿದ್ರೆ 2 ಗಂಟೆ ತಗೊತಿದ್ದೆ ಬಿಡು… ನೀನೇ ವಿದ್ಯಾವಂತ…
ಸೋಮ: ಹೂ ಮತ್ತೆ… ನಾನು 4ನೇ ಕ್ಲಾಸು ಗಂಟ ಓದಿವ್ನಿ ಕಣ್ಳಾ ಅಟ್ಟಾದ್ರು ಸ್ಪೀಡು ಬೇಡ್ವೇ…?
ಭೀಮ: ನಾನು 5ನೇ ಕ್ಲಾಸ್ ಗಂಟ ಓದಿವ್ನಿ, ಆದ್ರೂ ಸ್ಪೀಡ್ ಕಡಿಮೆ ಆತಲಾ ಯಂಗೆ ಇದು….?
ಸೋಮ: ನಿಂಗೆ ಇದ್ಯೆ ತಲೆಗೆ ಹತ್ತಿಲ್ಲ ಬುಡು…ಸುಮ್ನೆ ತಲೆ ದಪ್ಪ..
ಚಾಮ: ನಾನು 6 ಗಂಟ ಓದಿವ್ನಿ..
ಭೀಮ: ಏ ಸುಮ್ನೆ ಕೂಂತುಕೊಂಡ್ಲಾ ಚಾಮ ನೆಟ್ಟಗೆ ಮೂರೊಂದ್ಲ ಮೂರು ಮಗ್ಗಿ ಹೇಳ್ಳ ಫಸ್ಟು ನೋಡವ….
ಚಾಮ: ಮೂರೊಂದ್ಲ ಮೂರು….ಮೂರೆಡ್ಲ ಆರು…ಮೂರ್ಮೂರ್ಲಿ ಒಂ…
ಸೋಮ: ಏ ಸಾಕು ಸುಮ್ನೆ ಕುಂತ್ಕೊಂಡ್ರುಲಾ ನನ್ ಗೋಳು ಕೇಳ್ರುಲಾ…ಫಸ್ಟು..
ಚಾಮ: (ಭೀಮನ ಕಿವಿಯಲ್ಲಿ) ಸೋಮ ಹೋದ್ಮ್ಯಾಕೆ ಫುಲ್ ಹೇಳ್ತಿನಿ ಭೀಮು..
ಭೀಮ: (ತಲೆ ಕೆರಕೊಳ್ತಾ…) ಏನು ಬ್ಯಾಡ ಬಿಡು ನೀನು 6 ಗಂಟ ಅಂತ ಗೊತ್ತಾತು..
(ಚಾಮ ತಾನು ಭೀಮನಿಗಿಂತ ವಿದ್ಯಾವಂತ ಎನ್ನುವಂತೆ ತನ್ನ ಕಾಲರ್ ಎತ್ತಿದ)
ಭೀಮ ಮತ್ತು ಚಾಮ: ಸರಿ ಮುಂದಕ್ಕೆ ಹೇಳ್ಳ ಸೋಮು..
ಸೋಮ: ಆವಾಗ ನನ್ ಮೊಬೈಲ್ ಗೆ ಟಿಣಕ್ ಅಂತ ಮೆಸೇಜು ಬಂತಾ, ಆಮೇಕೆ ಪೋನು ಬಂತಾ…. ಅತ್ತಿಂದ ಹುಡ್ಗೀ.. ನಿಮ್ಮ ಕೆವೈಸಿ ಅದೆಂತದೋ ಅಪ್ಡೇಟ್ ಮಾಡ್ತೀವ್ನಿ ಒಟಿಪಿ ಹೇಳಿ ಅಂದ್ಲಾ ಮುದ್ದಾಗಿ..
ಭೀಮ: ಹಾ!!!!!….ಹುಡ್ಗಿ ಹಂಗಂದ್ಲಾ…? ನಮ್ಗ್ಯಾರು ಇಂತೋರು ಫೋನೆ ಮಾಡಕ್ಕಿಲ್ಲ ನೋಡು…ನೀನು ಪುಣ್ಯ ಮಾಡಿದ್ದೆ..ನೋಡಕ್ಕೆ ಹೆಂಗಿದ್ಲು..
ಸೋಮ: ಏ ಫೋನ್ನಾಗೆ ಮಕ ಎಂಗ್ಲಾ ಕಾಣ್ತದೆ…. ಅದಲ್ಲ ತಡಿಲಾ ವಸಿ ಅದ್ರುದ್ದೆ ಎಫೆಕ್ಟು ಹೇಳ್ತಿನಿ…
ಭೀಮ: ಸರಿ ಹೇಳು.. ಯಾಕೋ ಜ್ವರ ಬಂದಂಗೆ ಆಯ್ತಾಯ್ತೆ…ಮುಂದಕ್ಕೆ ಹೇಳು..
ಸೋಮ: ಏ ಇವನ್ಯಾನ್ಲಾ ನಾನೇನು ಕಥೆ ಏಳ್ತಿವ್ನಾ…
ಚಾಮ: ಏ ಅವನು ವಸಿ ಹಾಗೆಯ ಹುಡ್ಗಿ ಅಂದ್ರೆ..
ಸೋಮ: ನೀನು ಹಾಗೆಯ ಬಿಡು ನೀನೇನು ಕಮ್ಮಿ ಇಲ್ಲ..ಇದ್ದದ್ರಲ್ಲಿ ನಾನೇ ವಸಿ ಎಲ್ಲರ್ಗಿಂತ ಬಿಗಿಯಾಗಿ ಇಡ್ಕೊಂಡಿರೋನು..
ಚಾಮ: ಓ ಅದ್ಕೆ ಮತ್ತೆ ದುಡ್ಡು ಕಳಕೊಂಡು ಬಂದಿರದು..
ಸೋಮ: ಏನ್ಲಾ ಅಂದೆ..
ಚಾಮ: ಏನಿಲ್ಲ ಪಾಪ ಆಮೇಲೇನಾಯ್ತು ಅಂದೆ.
ಸೋಮ: ಆಮೆಲೆ ನಾನು ಎತ್ತಗೋ ಯಾಚ್ನೆ ಮಾಡ್ತಾ ಒಟಿಪಿ ಹೇಳುದ್ನಾ, ಆಮೆಕೆ ನನ್ ದುಡ್ಡೆಲ್ಲಾ ಒಂಟೋಯ್ತು ಕಂಡ್ರುಲಾ…ಒಂಟೋಯ್ತು. ಬ್ಯಾಲೆನ್ಸ್ ಸೊನ್ನೆ ಆಗೋಯ್ತು ಕಂಡ್ರುಲಾ..ಸೊನ್ನೆ ಆಗೋಯ್ತು…ಈಗ ಏನ್ಲಾ ಮಾಡ್ಲೀ..ಊಊಊಊ.(ಅಳು)
ಭೀಮ: ಅಯ್ಯೋ ಪಾಪ ಏನೇ ಆದ್ರು ನಿಂಗೆ ಇಂಗೆ ಆಗ್ಬಾರ್ದಿತ್ತು.
ಚಾಮ: ಹೂ ಕಣ್ಲಾ ಪಾಪ ಫ್ರಂಡು ಕಷ್ಟದಲ್ಲಿ ಅವ್ನೆ, ಅವ್ನಿಗೆ ಏನಾದ್ರು ಸಹಾಯ ಮಾಡ್ಬೇಕಲ್ಲಾ ಭೀಮೂ…
ಭೀಮ: ಸೋಮನಿಗೆ ನಾವಲ್ದೆ ಇನ್ಯಾರ್ಲ ಸಹಾಯ ಮಾಡರು.
ಚಾಮ: ಹು ಕಣ್ಲಾ, ಸರಿ ಏನ ಮಾಡವ…?
ಭೀಮ: ನೋಡು ನಾನು ಒಂದು ಸಾವಿರ ಕೊಡ್ತಿನಿ, ನೀನು ಒಂದು ಸಾವರಿ ಕೊಡು ಪಾಪ ಕಷ್ಟದಲ್ಲಿ ಅವ್ನೆ…ಆಮೆಕೆ ನೋಡ್ಕೊಳವ ಏನಂತಿ?
ಚಾಮ: ಸರಿ ಕಣೋ ಭೀಮು, ತಗೋ ಸೋಮ ಒಂದು ಸಾವರಿ ನನ್ ಕಡೆಯಿಂದ.
ಭೀಮ: ತಗೋ ಸೋಮ ನನ್ನ ಕಡೆಯಿಂದ
(ಎಂದು ಇಬ್ಬರೂ ಒದೊಂದು ಸಾವಿರ ಹಣ ಕೊಡುತ್ತಾರೆ. ಹಣ ತೆಗೆದುಕೊಂಡ ನಂತರ ಸೋಮ….)
ಸೋಮ: ನಿಮ್ಮ ಉಪ್ಕಾರ ಮರೆಯಕ್ಕಿಲ್ಲ ಭೀಮು ಚಾಮು…(ಕಣ್ಣೊರೆಸಿಕೊಳ್ಳುತ್ತಾ)
ಚಾಮ: ಅದರ್ಲಿ ನಾವ ಕೇಳ್ಳೇ ಇಲ್ಲ ನೋಡು ಭೀಮು, ಎಷ್ಟು ಅಮೌಂಟು ಕಳ್ಕೊಂಡೆ ಸೋಮು…
ಸೋಮ: ನೋಡ್ಲಾ ಮೊದ್ಲೇ ಸಂಘದ್ದು ಕಂತು ಕಟ್ಟಿದ್ದೆ, ಬಸ್ಯಂದು ಸಾಲ ವಾಪಸ್ ಕೊಟ್ಟಿದ್ದೆ, ಎಲ್ಲ ಹೋಗಿ ಒಂದ್ ಮೂವತ್ತು ರೂಪಾಯಿ ಇತ್ತು ನೋಡು ಬ್ಯಾಂಕ್ ಬ್ಯಾಲೆನ್ಸ್, ಇವತ್ತು ನಮ್ ಮೂವರಿಗೆ 3 ಮಜ್ಜಿಗೆ ಪಾಕೆಟ್ ತರವ ಅದ್ರಲ್ಲಿ ಅನ್ಕೊಂಡಿದ್ದೆ, ಅಷ್ಟ್ರಲ್ಲಿ ಹಿಂಗಾಗೋಯ್ತು…
(ಸೋಮ 30 ರೂಪಾಯಿ ಅನ್ನುತ್ತಿದ್ದಂತೆ ಭೀಮ ಮತ್ತು ಚಾಮ ಒಂದು ಕ್ಷಣ ಸ್ಥಬ್ಧರಾಗಿ, ಒಬ್ಬರನ್ನೊಬ್ಬರು ಮುಖ ನೋಡಿಕೊಂಡು…ನಂತರ ಭೀಮ…ಕೋಪದ ಮುಖದಲ್ಲಿ…)
ಭೀಮ: ಲೇ ಸೋಮ ಮತ್ತೆ ಇಟ್ಟೊತ್ತು ಸಾವಿರಾರ್ ರುಪಾಯಿ ಕಳ್ಕೊಂಡಂಗೆ ಆಡದ್ಯಲ್ಲ, ಬರಿ ಮೂವತ್ತು ರೂಪಾಯಿಗೆ….ಇನ್ನ ಸಾವಿರಾರ್ ರೂಪಾಯ್ ಕಳ್ಕೊಂಡಿದ್ರೆ ಇನ್ನೆಂಗ್ಲಾ ಆಡ್ತಿದ್ದೆ… ಏ ನಂದು ದುಡ್ಡು ವಾಪಸ್ ಕೊಡಪ್ಪ ಫಸ್ಟು..
ಚಾಮ: ನನ್ ಕೈಲಿದ್ದದ್ದು ಕಾಸು ಕೊಟ್ನಲ್ಲ, ನಂದು ವಾಪಸ್ ಕೊಡಪ್ಪ ಫಸ್ಟು…
ಸೋಮ: ಇರ್ಲಿ ಬಿಡ್ರುಲಾ ಫ್ರಂಡುಗುಳಾ….ಹಬ್ಬಕ್ಕೆ ಮರಿ ತರವ ಅನ್ಕೊಂಡಿದ್ದೆ, ಸದ್ಯ ಹೇಗೋ ಕಾಸಾಯ್ತು….ನಿಮ್ಮ ಉಪ್ಕಾರ ಮರೆಯಕ್ಕಿಲ್ಲ ಭೀಮು ಸೋಮು, ಹಬ್ಬಕ್ಕೆ ನಮ್ ಮನೆಗೆ ಊಟಕ್ಕ್ ಬಂದ್ರುಲಾ ಎರಡು ಮರಿ ತರ್ತೀನಿ..
ಭೀಮ ಮತ್ತು ಸೋಮ: ಏಯ್ ಯಾವ್ ಊಟನೂ ಬೇಡ ಗೀಟನು ಬೇಡ ನಮ್ ದುಡ್ಡು ವಾಪಸ್ ಕೊಡಪ್ಪ ಇಲ್ಲಿ ನಾವು ಯಾಕೋ ಮಡಿಕ್ಕೊಂಡಿದ್ದು, ಕೊಡು ಇಲ್ಲಿ (ಎಂದು ಅವನ ಕಿಸೆಯೊಳಗೆ ಕೈ ಹಾಕಲು ಹೋದಾಗ ಸೋಮ ಅಲ್ಲಿಂದ ಅವರಿಬ್ಬಿಂದ ತಪ್ಪಿಸಿಕೊಂಡು ಓಡಿ ಹೋಗುತ್ತಾನೆ….ಓಡಿ ಓಡಿ ಸುಸ್ತಾಗಿ ನಿಂತ ಭೀಮ, ಚಾಮನಿಗೆ ….)
ಭೀಮ: ನಿನ್ ಭವಿಷ್ಯ ಸುಳ್ಳಾಯ್ತು ಕಣ್ಲಾ ಚಾಮ… ಲೇ ಚಾಮ ಮೊದಲು ನಿಂಗೆ ಹೊಡಿಬೇಕು, ನೀನೆ ಅಲ್ವೇ ಸೋಮಂಗೆ ಸಹಾಯ ಮಾಡುವ ಅಂತ ನನ್ ತಲೆ ಕೆಡಿಸಿ ದುಡ್ಡು ಕೊಡಿಸಿದ್ದು (ಎಂದು ಚಾಮನಿಗೆ ಹೊಡೆಯಲು ಕೈ ಎತ್ತುತ್ತಾನೆ…. ಆಗ ಚಾಮ..)
ಚಾಮ: ಲೇ ಭೀಮ ಅದು ಭವಿಷ್ಯ ಅಲ್ಲ ಕಳ್ಳಾ, ಕನಸು…. (ಎಂದು ಕೂಗುತ್ತಾ ಭೀಮನಿಂದ ತಪ್ಪಿಸಿಕೊಂಡು ಓಡಿ ಹೋಗುತ್ತಾನೆ)

ಸಂಪಾದಕರ ನುಡಿ
ಗ್ರಾಮೀಣ ಬದುಕಿನ ಸರಳತೆ, ಸ್ನೇಹದ ನೈಜತೆ ಮತ್ತು ಇಂದಿನ ಡಿಜಿಟಲ್ ಯುಗದ ವಂಚನೆಗಳ ಕುರಿತು ಹಾಸ್ಯದ ಮೂಲಕ ಅರಿವು ಮೂಡಿಸುವ ಪ್ರಯತ್ನವೇ “ಅರಳಿ ಕಟ್ಟೆ ಮಿತ್ರರು” ಸರಣಿಯ ಈ ನಾಲ್ಕನೇ ಪ್ರಸಂಗ.
ಸೋಮ, ಭೀಮ ಮತ್ತು ಚಾಮ ಎಂಬ ಮೂವರು ಗೆಳೆಯರ ಮಾತುಕತೆಯಲ್ಲಿ ಹಳ್ಳಿಯ ಜೀವನದ ಮುಗ್ಧತೆ, ಶಿಕ್ಷಣದ ಕೊರತೆಯಿಂದ ಉಂಟಾಗುವ ಹಾಸ್ಯಾಸ್ಪದ ಸನ್ನಿವೇಶಗಳು ಹಾಗೂ ಮೊಬೈಲ್ ಮತ್ತು ಬ್ಯಾಂಕಿಂಗ್ ವ್ಯವಹಾರಗಳಲ್ಲಿ ಜನರು ಹೇಗೆ ಮೋಸಕ್ಕೆ ಒಳಗಾಗುತ್ತಾರೆ ಎಂಬುದನ್ನು ಮನರಂಜನಾತ್ಮಕವಾಗಿ ಚಿತ್ರಿಸಲಾಗಿದೆ.
ವಿಶೇಷವಾಗಿ, ಬ್ಯಾಂಕ್ ಖಾತೆ ಹ್ಯಾಕ್ ಆಗಿ ಲಕ್ಷಾಂತರ ರೂಪಾಯಿ ಕಳೆದುಕೊಂಡಂತೆ ದುಃಖಿಸುತ್ತಿದ್ದ ಸೋಮ ಕೊನೆಯಲ್ಲಿ ಕೇವಲ ಮೂವತ್ತು ರೂಪಾಯಿ ಮಾತ್ರ ಕಳೆದುಕೊಂಡಿರುವುದು ಬಹಿರಂಗವಾಗುವ ದೃಶ್ಯ ಪ್ರೇಕ್ಷಕರನ್ನು ಹೊಟ್ಟೆ ಹುಣ್ಣಾಗುವಂತೆ ನಗಿಸುತ್ತದೆ. ಸ್ನೇಹಿತರು ಸಹಾನುಭೂತಿಯಿಂದ ಸಾವಿರಾರು ರೂಪಾಯಿ ಸಹಾಯ ಮಾಡಿದ ನಂತರ ಅವರ ಪ್ರತಿಕ್ರಿಯೆ ಮತ್ತಷ್ಟು ಹಾಸ್ಯವನ್ನು ಉಂಟುಮಾಡುತ್ತದೆ.
ಲೇಖಕ ವೇಣುಗೋಪಾಲ್ ಅವರು ಗ್ರಾಮೀಣ ಭಾಷೆಯ ಸೊಗಡನ್ನು ಉಳಿಸಿಕೊಂಡು, ಸರಳ ಸಂಭಾಷಣೆಗಳ ಮೂಲಕ ಪರಿಣಾಮಕಾರಿ ಹಾಸ್ಯ ಸೃಷ್ಟಿಸಿದ್ದಾರೆ. ಜೊತೆಗೆ, ಅಪರಿಚಿತರಿಗೆ OTP, ಬ್ಯಾಂಕ್ ವಿವರಗಳನ್ನು ನೀಡಬಾರದು ಎಂಬ ಸಾಮಾಜಿಕ ಸಂದೇಶವನ್ನೂ ಕಥೆಯೊಳಗೆ ಅಡಗಿಸಿದ್ದಾರೆ.
ಮನರಂಜನೆಯ ಜೊತೆಗೆ ಜಾಗೃತಿಯನ್ನೂ ನೀಡುವ ಈ ಪ್ರಸಂಗ ಎಲ್ಲ ವರ್ಗದ ಪ್ರೇಕ್ಷಕರ ಮೆಚ್ಚುಗೆಗೆ ಪಾತ್ರವಾಗಲಿದೆ ಎಂಬ ನಂಬಿಕೆ ನಮ್ಮದು.
– ಸಂಪಾದಕರು
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/ISmeQjik4LbG9KvWhKlbCC


