ರಾಮನಗರ: ಬಿಜೆಪಿ ಜೆಡಿಎಸ್ ಕಾರ್ಯರ್ತರ ಮಧ್ಯ ಹೊಂದಾಣಿಕೆ ಇಲ್ಲ, ಚುನಾವಣೆ ಬಳಿಕ ಅಲ್ಲೊಂದು ಮಹಾಯುದ್ಧ ನಡೆಯಲಿದೆ ಎಂದು ಡಿಸಿಎಂ ಡಿ ಕೆ ಶಿವಕುಮಾರ್ ಭವಿಷ್ಯ ನುಡಿದಿದ್ದಾರೆ.
ಚನ್ನಪಟ್ಟಣದಲ್ಲಿ ನಡೆದ ಪ್ರಚಾರ ಸಭೆಯಲ್ಲಿ ಮಾತನಾಡಿದ ಡಿ ಕೆ ಶಿವಕುಮಾರ್ ಜೆಡಿಎಸ್ ನಾಯಕ ಹೆಚ್.ಡಿ. ಕುಮಾರಸ್ವಾಮಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಈ ಮೊದಲು ಕಾಂಗ್ರೆಸ್ ಜೆಡಿಎಸ್ ಸೇರಿ ಅನಿತಾ ಕುಮಾರಸ್ವಾಮಿಯವರನ್ನು ಚುನಾವಣೆಗೆ ನಿಲ್ಲಿಸಿದ್ದೆವು ಆಗ ಅವರು ಗೆದ್ದಿದ್ದರು. ಆದರೆ ಈಗ ಜೆಡಿಎಸ್ ಕಾರ್ಯಕರ್ತರಿಗೆ ಬಿಜೆಪಿ ಜೊತೆ ಹೊಂದಾಣಿಕೆ ಆಗಲ್ಲ. ಬಿಜೆಪಿ ಅವರಿಗೂ ಜೆಡಿಎಸ್ ಜೊತೆ ಹೊಂದಾಣಿಕೆ ಇಲ್ಲ. ಚುನಾವಣೆ ಬಳಿಕ ಇಲ್ಲೊಂದು ಮಹಾಯುದ್ಧ ಶುರುವಾಗಲಿದೆ ಎಂದು ಡಿಕೆಶಿ ಹೇಳಿದರು.
ಜೆಡಿಎಸ್ ಪಕ್ಷ ಉಳಿಬೇಕು, ಜಾತ್ಯಾತೀತತೆ ಉಳಿಯಬೇಕು ಎಂಬ ಕಾರಣಕ್ಕೆ ಜೆಡಿಎಸ್ಗೆ ಬೆಂಬಲ ಕೊಟ್ಟು ಮುಖ್ಯಮಂತ್ರಿ ಸ್ಥಾನ ಕೊಟ್ಟಿದ್ದೆವು ಆದರೆ ಅದನ್ನು ಉಳಿಸಿಕೊಳ್ಳಲು ಆಗಲಿಲ್ಲ. ಇದೇ ಯೋಗೇಶ್ವರ್ ಅವತ್ತು ಹೆಚ್ಡಿಕೆಯನ್ನುಸಿಎಂ ಸ್ಥಾನದಿಂದ ಇಳಿಸಲು ಯತ್ನಿಸಿದ್ದರು. ಬಿ ಎಸ್ ಯಡಿಯೂರಪ್ಪ, ಗೋಪಾಲಯ್ಯ, ಅಶ್ವತ್ಥನಾರಾಯಣ್, ಅಶೋಕ್ ಎಲ್ಲಾ ಕುಮಾರಸ್ವಾಮಿಯನ್ನು ಕೆಳಗಿಳಿಸಿದ್ದರು. ಈಗ ಅವರೆಲ್ಲ ಹೆಚ್ಡಿಕೆ ಬಳಿ ಬಂದು ಕೂತಿದ್ದಾರೆ. ನೀವೆಲ್ಲ ಕಾರ್ಯಕರ್ತರು ಹೋರಾಟ ಮಾಡಿದ್ರಿ, ದ್ವೇಷ ಕಟ್ಟಿಕೊಂಡ್ರಿ, ಕೇಸ್ಗಳು ಬಿತ್ತು ಅದಕ್ಕೆ ಬೆಲೆ ಇಲ್ಲ ಎಂದು ಡಿಸಿಎಂ ಕಿಡಿಕಾರಿದರು.
ಯಾವ ಸಿದ್ದಾಂತ, ಯಾವ ನೀತಿಯೂ ಇಲ್ಲದೇ, ಮೈತ್ರಿ ಮಾಡಿಕೊಂಡಿದ್ದಾರೆ ಎಂದ ಡಿಕೆಶಿ, ಕುಮಾರಸ್ವಾಮಿಗೆ ಪ್ರಶ್ನೆ ಇಟ್ಟಿದ್ದಾರೆ. ಅಧಿಕಾರ ಇತ್ತು, ಬಿಜೆಪಿ ಜೊತೆ ಹೊಂದಾಣಿಕೆ ಇತ್ತು ಆದರೂ ಜೆಡಿಎಸ್ ಕಾರ್ಯಕರ್ತರಿಗೆ ಒಂದು ಹುದ್ದೆ ನೀಡಿಲ್ಲ, ಚನ್ನಪಟ್ಟಣದಲ್ಲಿ ಒಬ್ಬ ಕಾರ್ಯಕರ್ತನನ್ನೂ ರಕ್ಷಣೆ ಮಾಡಿಲ್ಲ, ಹೀಗಾಗಿ ಮಂಡ್ಯಕ್ಕೆ ಹೋಗಿ ನಿಂತಿದ್ದಿಯಾ? ಭಾವನನ್ನ ಬೇರೆ ಪಕ್ಷದಿಂದ ನಿಲ್ಲಿಸಿದ್ದೀಯಾ ಇದಕ್ಕಿಂತ ಬೇರೆ ಅವಮಾನ ಇಲ್ಲ ಎಂದು ಏಕವಚನದಲ್ಲೇ ಮಾತನಾಡಿದರು.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/G7IPvItJj7JHrybOIW3296