ಕೊಲೆ ಆರೋಪದಲ್ಲಿ ಬಂಧನಕ್ಕೊಳಗಾಗಿರುವ ನಟ ದರ್ಶನ್ ಅಭಿಮಾನಿಯೊಬ್ಬ ನಗರದ ಪಂಚರ್ ಅಂಗಡಿಯಲ್ಲಿ ಕೆಲಸ ಮಾಡುವ ಯುವಕನಿಗೆ ಜೀವ ಬೆದರಿಕೆ ಹಾಕಿರುವುದು ತಡವಾಗಿ ಬೆಳಕಿಗೆ ಬಂದಿದೆ.
ಸದ್ಯ ಬೆದರಿಕೆ ಹಾಕಿದ್ದರು ಎನ್ನಲಾದ ಆಡಿಯೋ ವೈರಲ್ ಆಗಿದ್ದು, ಯಾದಗಿರಿ ಪೊಲಿಸರು ದರ್ಶನ್ ಅಭಿಮಾನಿ ಸಂಘದ ಅಧ್ಯಕ್ಷ ರಾಜು ಎಂಬಾತನನ್ನ ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ. ಗಂಗಾ ನಗರದ ನಿವಾಸಿ ಅಭಿ ಎಂಬ ಯುವಕನಿಗೆ ದರ್ಶನ್ ಅಭಿಮಾನಿ ಸಂಘದ ಜಿಲ್ಲಾಧ್ಯಕ್ಷ ರಾಜು ಇತ್ತೀಚೆಗೆ ಬೆದರಿಕೆ ಹಾಕಿದ್ದರು ಎನ್ನಲಾದ ಆಡಿಯೋ ಸಾಮಾಜಿಕ ಜಾಲತಾಣದಲ್ಲಿ ಸದ್ದು ಮಾಡುತ್ತಿದೆ.
ಆಡಿಯೋದಲ್ಲಿ ರಾಜು, ಬಾಸ್ ಬಗ್ಗೆ ಮಾತನಾಡಿದ್ರೆ ಕೊಲೆ ಮಾಡೋದಾಗಿ ಬೆದರಿಕೆ ಹಾಕಿದ್ದಾನೆ ಎನ್ನಲಾಗಿದೆ. ಅಭಿ, ಬಾಸ್ ಬಾಸ್ ಎಂದು ಬಕೆಟ್ ಯಾಕೆ ಹಿಡಿತೀರಿ, ತಾಯಿ-ತಂದೆಗೆ ಬಕೆಟ್ ಹಿಡಿಯಿರಿ ಎಂದು ಇನ್ಸ್ಟಾಗ್ರಾಮ್ನಲ್ಲಿ ಸ್ಟೇಟಸ್ ಹಾಕಿದ್ದ. ಇದರಿಂದ ಸಿಟ್ಟಿಗೆದ್ದ ರಾಜು, ಅಭಿಗೆ ಕರೆ ಮಾಡಿ, ವೀಡಿಯೋ ಡಿಲೀಟ್ ಮಾಡದೇ ಇದ್ರೆ ಜೀವಂತ ಸುಡೋದಾಗಿ ಬೆದರಿಸಿದ್ದಾನೆ. ಜೊತೆಗೆ ಕೂಡಲೇ ಕ್ಷಮೆ ಕೇಳಿ ವೀಡಿಯೋ ಮಾಡಿ ಹಾಕುವಂತೆ ಧಮ್ಕಿ ಹಾಕಿದ್ದಾನೆ.
ಈ ವೇಳೆ ದೂರವಾಣಿ ಕರೆಯನ್ನ ರೆಕಾರ್ಡ್ ಮಾಡಿ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಮಾಡಿದ್ದಾನೆ ಎಂದು ಹೇಳಲಾಗಿದೆ. ಇನ್ನೂ ರಾಜು ಧಮ್ಕಿ ಹಾಕಿದ್ದ ಎನ್ನಲಾದ ಆಡಿಯೋ ವೈರಲ್ ಆಗುತ್ತಿದ್ದಂತೆ ಪೊಲೀಸರು ಅಲರ್ಟ್ ಆಗಿದ್ದಾರೆ. ಕೂಡಲೇ ಮಾಹಿತಿ ಪಡೆದು ರಾಜುನನ್ನ ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ. ಇದೀಗ ಜೀವ ಬೆದರಿಕೆಯಿಂದ ಅಭಿಯ ಪೋಷಕರು ಆತಂಕಕ್ಕೆ ಒಳಗಾಗಿದ್ದು, ಬೆದರಿಕೆ ಹಾಕಿರುವ ವ್ಯಕ್ತಿಯ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದ್ದಾರೆ.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/G7IPvItJj7JHrybOIW3296