ಮೈಸೂರು: ಮುಂದಿನ ವಿಧಾನ ಸಭಾ ಚುನಾವಣೆಯಲ್ಲಿ ತಿ.ನರಸೀಪುರ ವಿಧಾನ ಸಭಾ ಕ್ಷೇತ್ರದಿಂದ ಕಣಕ್ಕಿಳಿಯಲು ಸಾಮಾಜಿಕ ಹೋರಾಟಗಾರ ಸೋಸಲೆ ಸಿದ್ದರಾಜು ಅವರು ಸಿದ್ಧರಾಗಿದ್ದು, ಶೀಘ್ರದಲ್ಲೇ ತಮ್ಮ ಸ್ಪರ್ಧೆಯ ಬಗ್ಗೆ ಬಹಿರಂಗವಾಗಿ ಘೋಷಿಸಲಿದ್ದಾರೆ ಎಂದು ತಿಳಿದು ಬಂದಿದೆ.
ಸುಮಾರು 20 ವರ್ಷಗಳ ಕಾಲ ಬಹುಜನ ಚಳುವಳಿಯಲ್ಲಿ ಸೇವೆ ಸಲ್ಲಿಸಿರುವ ಸೋಸಲೆ ಸಿದ್ದರಾಜು ಅವರು ಸಾರ್ವಜನಿಕ ಜೀವನದಲ್ಲಿ ಚಿರಪರಿಚಿತರಾಗಿದ್ದಾರೆ. ಬಹುಜನ ವಿದ್ಯಾರ್ಥಿ ಸಂಘದ ಮೂಲಕ ವಿದ್ಯಾರ್ಥಿ ಮುಖಂಡರಾಗಿ ಹಲವಾರು ಹೋರಾಟಗಳಲ್ಲಿ ಪಾಲ್ಗೊಂಡಿದ್ದರು.
ಸೋಸಲೆ ಸಿದ್ದರಾಜು ಅವರು ಯಾವ ಪಕ್ಷದಿಂದ ಸ್ಪರ್ಧಿಸಲಿದ್ದಾರೆ ಎಂಬ ಬಗ್ಗೆ ಸ್ಪಷ್ಟವಾದ ಮಾಹಿತಿ ಲಭ್ಯವಾಗಿಲ್ಲ. ಆದರೆ, ಪಕ್ಷೇತರರಾಗಿ ಅವರು ಕಣಕ್ಕಿಳಿಯುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ.ಮಾಜಿ ಸಚಿವ, ಕೊಳ್ಳೇಗಾಲ ಶಾಸಕರ ಆಪ್ತ ವಲಯದಲ್ಲಿ ಗುರುತಿಸಿಕೊಂಡಿರುವ ಸೋಸಲೆ ಸಿದ್ದರಾಜು ಅವರು, 2023ರ ವಿಧಾನ ಸಭಾ ಚುನಾವಣೆಯಲ್ಲಿ ರಾಜಕೀಯ ಅಖಾಡಕ್ಕೆ ಧುಮುಕುವ ಮುನ್ಸೂಚನೆ ನೀಡಿದ್ದಾರೆ.
ಇನ್ನೂ ಚುನಾವಣೆಗೆ ಸ್ಪರ್ಧಿಸುವ ವಿಚಾರಕ್ಕೆ ಸಂಬಂಧಿಸಿದಂತೆ ಪತ್ರಿಕೆಯೊಂದಕ್ಕೆ ಹೇಳಿಕೆ ನೀಡಿರುವ ಅವರು, ಮುಂಬರುವ ಚುನಾವಣೆಯಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಬೇಕು ಎಂದು ತೀರ್ಮಾನಿಸಿದ್ದೇನೆ, ಆಮ್ ಆದ್ಮಿ ಪಕ್ಷದವರು ಸಂಪರ್ಕ ಮಾಡಿದ್ದಾರೆ. ಮೊದಲ ಪ್ರಯತ್ನದಲ್ಲೇ ರಾಜಕೀಯ ಚಿತ್ರಣ ಬದಲಿಸಿ ಬಿಡುತ್ತೇನೆ ಅನ್ನೋ ಹುಂಬತನವಿಲ್ಲ. ತಿ.ನರಸೀಪುರ ಕ್ಷೇತ್ರದ ಮತದಾರರು ರಾಷ್ಟ್ರೀಯ ಪಕ್ಷವನ್ನೂ ನೋಡಿದ್ದಾರೆ, ಪ್ರಾದೇಶಿಕ ಪಕ್ಷವನ್ನೂ ನೋಡಿದ್ದಾರೆ. ಬದಲಾವಣೆ ಬಯಸುವವರು ನನ್ನನ್ನು ಬೆಂಬಲಿಸುತ್ತಾರೆ ಎಂದು ನಂಬಿದ್ದೇನೆ ಎಂದು ತಿಳಿಸಿದ್ದಾರೆ.
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/L4EDpegaxhmLTkOnd50sAy