ಬೆಂಗಳೂರು: ಅಗತ್ಯ ವಸ್ತುಗಳ ಬೆಲೆ ಏರಿಕೆ ಒಂದೆಡೆಯಾದರೆ, ಇನ್ನೊಂದೆಡೆ ಯುಗಾದಿ ಹಬ್ಬದ ಸಂಭ್ರಮ ಸಡಗರ ಮನೆ ಮಾಡಿದೆ. ಹಾಲು, ಹೂವು, ಹಣ್ಣು, ತರಕಾರಿ ಸೇರಿದಂತೆ ಮತ್ತಿತರ ದಿನೋಪಯೋಗಿ ವಸ್ತುಗಳ ಬೆಲೆ ಗಗನಕ್ಕೇರಿದೆ. ಈ ಬಾರಿ ಬೆಲೆ ಏರಿಕೆಯೊಂದಿಗೆ ಜನ ಯುಗಾದಿ ಹಬ್ಬ ಆಚರಿಸುತ್ತಿದ್ದಾರೆ.
ಯುಗಾದಿ ಹಬ್ಬದ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ, ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್, ಕೇಂದ್ರ ಸಚಿವ ಎಚ್. ಡಿ. ಕುಮಾರಸ್ವಾಮಿ ಸೇರಿದಂತೆ ಹಲವು ಗಣ್ಯರು ಸಾಮಾಜಿಕ ಜಾಲತಾಣ ಎಕ್ಸ್ ಮೂಲಕ ನಾಡಿನ ಜನತೆಗೆ ಶುಭಾಶಯ ಕೋರಿದ್ದಾರೆ.
ಇದು ಭರವಸೆ ಮತ್ತು ಜೀವನೋತ್ಸಾಹದೊಂದಿಗೆ ಸಂಬಂಧ ಹೊಂದಿರುವ ವಿಶೇಷ ಹಬ್ಬವಾಗಿದೆ. ಸಂತೋಷ ಮತ್ತು ಸಾಮರಸ್ಯದ ಮನೋಭಾವ ಬೆಳೆಯಲಿ ಮತ್ತು ಅರಳಲಿ ಎಂದು ಪ್ರಧಾನಿ ಮೋದಿ ಟ್ವೀಟ್ ಮಾಡಿದ್ದಾರೆ.
‘ಯುಗ ಯುಗಾದಿ ಕಳೆದರೂ ಯುಗಾದಿ ಮರಳಿ ಬರುತಿದೆ’ ನಾಡಿನೆಲ್ಲೆಡೆ ವಿಶ್ವಾವಸು ಸಂವತ್ಸರದ ಆಚರಣೆ, ಹಬ್ಬದ ಸಂಭ್ರಮ ನೋವು – ನಲಿವು, ಸೋಲು – ಗೆಲುವು, ಕಷ್ಟ – ಸುಖಗಳ ಜೀವನ ಸಂದೇಶ ಸಾರುವ ಹಬ್ಬ ಯುಗಾದಿ. ದುಃಖದ ಕಹಿಬೇವು, ಸಂತಸದ ಸಿಹಿಬೆಲ್ಲ ಎರಡನ್ನೂ ಸಮಚಿತ್ತದಿಂದ ಸ್ವೀಕರಿಸಿ, ಭರವಸೆಯೊಂದಿಗೆ ಮುನ್ನಡೆಯೋಣ, ಬೇವಿನಂತ ಕಹಿ ಅನುಭವಗಳಿಂದ ಕಲಿತ ಪಾಠವು ಬೆಲ್ಲದಂತ ಸಿಹಿ ಬದುಕಿಗೆ ಮುನ್ನುಡಿಯಾಗಲಿ. ಯುಗದ ಆದಿಯು ನಾಡಿನಲ್ಲಿ ಸುಖ, ಶಾಂತಿ ಸಮೃದ್ಧಿಯನ್ನು ತರಲಿ ಎಂದು ಹಾರೈಸುವುದಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಬರೆದುಕೊಂಡಿದ್ದಾರೆ.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Bc4BbJiZ9pF3L0M4QgZdQ4