ತುಮಕೂರು: ಕರ್ನಾಟಕ ವಿದ್ಯುತ್ ಪ್ರಸರಣ ನಿಗಮ ನಿಯಮಿತ ವತಿಯಿಂದ ವಿಶೇಷಾಧಿಕ ವೋಲ್ಟೇಜ್ ವಿದ್ಯುತ್ ಮಾರ್ಗಗಳ ಸಮೀಪದಲ್ಲಿ ಅಥವಾ ಕೆಳಗೆ ಸುರಕ್ಷಿತ ಅಂತರವನ್ನು ಕಾಪಾಡಿಕೊಳ್ಳುವ ನಿಟ್ಟಿನಲ್ಲಿ ಸಾರ್ವಜನಿಕರಿಗೆ ಅರಿವು ಮೂಡಿಸುವ ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು.
ನಗರದ ಗೆದ್ದಲಹಳ್ಳಿ ಪ್ರಮುಖ ರಸ್ತೆಯಲ್ಲಿ ಸಾರ್ವಜನಿಕ ಹಿತಾಸಕ್ತಿಗಾಗಿ ಹೈಟೆನ್ಷನ್ ವಿದ್ಯುತ್ ತಂತಿಯಿಂದಾಗಬಹುದಾದ ಅನಾಹುಗಳ ಬಗ್ಗೆ ಅರಿವು ಮೂಡಿಸಲಾಯಿತು. ನಿಮ್ಮ ಸುರಕ್ಷತೆಯೇ ನಮ್ಮ ಪ್ರಥಮ ಆದ್ಯತೆ ಎಂಬ ಧ್ಯೇಯ ವಾಕ್ಯದೊಂದಿಗೆ ಸಾರ್ವಜನಿಕರಿಗೆ ಕರ ಪತ್ರ ವಿತರಣೆ ಮಾಡಿ ಅರಿವು ಮೂಡಿಸಲಾಯಿತು.
ಈ ಕುರಿತು ಮಾತನಾಡಿದ ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ ಪುರುಷೋತ್ತಮ್, ನಗರದ ಮೇಳೆಕೋಟೆಯಿಂದ ಬಡ್ಡಿಹಳ್ಳಿಯ ವರೆಗೂ ಇರುವ ಹೈಟೆನ್ಷನ್ ವಿದ್ಯುತ್ ತಂತಿ ಯ ಕೆಳಗೆ ಯಾವುದೇ ರೀತಿಯ ಕಟ್ಟಡ ನಿರ್ಮಾಣ, ಬಟ್ಟೆ ಒಣಗಿಸುವುದು ಸೇರಿದಂತೆ ಇತರೆ ಕಾರ್ಯಗಳನ್ನು ಲೈನ್ ಕೆಳಗೆ ನಿರ್ವಹಿಸದಂತೆ ನೋಟಿಸ್ ಜಾರಿ ಮಾಡಿ ತಿಳಿಹೇಳಿ ಅರಿವು ಮೂಡಿಸಲಾಗುತ್ತಿದೆ ಎಂದರು.
ನಗರದಲ್ಲಿ ಎಲ್ಲಿ ಹೈಟೆನ್ಷನ್ ವಿದ್ಯುತ್ ಪೂರೈಕೆಯಾಗುತ್ತಿದೆಯೋ ಆ ಭಾಗದಲ್ಲಿ ಸಾರ್ವಜನಿಕರಿಗೆ ಅರಿವು ಮೂಡಿಸಲಾಗುತ್ತಿದೆ. ಹೈಟೆನ್ಷನ್ ವಿದ್ಯುತ್ ತಂತಿಯ ಬಗ್ಗೆ ಕೆಲವರಿಗೆ ಮಾಹಿತಿ ಇರುವುದಿಲ್ಲ. ವಿದ್ಯುತ್ ಪ್ರವಹಿಸು ಸಮಯದಲ್ಲಿ ತಂತಿ ಮುಟ್ಟದಿದ್ದರು ಅದರ ವ್ಯಾಪ್ತಿಯಲ್ಲಿ ಹೋದರು ವಿದ್ಯುತ್ ನಿಂದ ಅನಾಹುವಾಗುತ್ತದೆ. ಮಕ್ಕಳ ಗಾಳಿ ಪಟ ಬಿಡುವುದು, ಸಾರ್ವಜನಿಕರು ವಿದ್ಯುತ್ ಟವರ್ ಗಳಿಗೆ ದನ ಕರುಗಳನ್ನು ಕಟ್ಟುವುದರಿಂದ ವಿದ್ಯುತ್ ಅನಾಹುತಕ್ಕೆ ಕಾರಣರಾಗುತ್ತಾರೆ ಎಂದರು.
220/66 ಕೆ.ವಿ, ಅಧಿಕ ಒತ್ತಡ ಮಾರ್ಗಗಳ ಸಮೀಪ ಕಿಟಕಿಗಳಿದ್ದಲ್ಲಿ, ಅಂತಹ ಕಿಟಕಿಗಳನ್ನು ಶಾಶ್ವತವಾಗಿ ಮುಚ್ಚಬೇಕು. ವಿಶೇಷಾಧಿಕ ವೋಲ್ವೇಜು ವಿದ್ಯುತ್ ಮಾರ್ಗಗಳ ಸಮೀಪ/ಕೆಳಗೆ ಕಟ್ಟಡಗಳ ನಿರ್ಮಾಣ ಮಾಡುವ ಹಂತದಲ್ಲಿಯೇ ಕಾರಿಡಾರ್ ಅಗಲವನ್ನು ಕಡ್ಡಾಯವಾಗಿ ಕಾಯ್ದಿರಿಸುವುದು. 66 ಕೆವಿ ಮಾರ್ಗಗಳಿಗೆ ಸಂಬಂಧಿಸಿದಂತೆ 18ಮೀ., ಗಳ ಅಂತರ, 220 ಕೆವಿ ಮಾರ್ಗಗಳಿಗೆ ಸಂಬಂಧಿಸಿದಂತೆ 35 ಮೀ. ಗಳ ಅಂತರ ಮತ್ತು 400 ಕೆವಿ ಮಾರ್ಗಗಳಿಗೆ ಸಂಬಂಧಿಸಿದಂತೆ 52ಮೀ. ಗಳು ಅಂತರವನ್ನು ಪಾಲಿಸಬೇಕು,
ವಿಶೇಷಾಧಿಕ ವೋಲ್ವೇಜು ವಿದ್ಯುತ್ ಮಾರ್ಗಗಳ ಸಮೀಪ/ಕೆಳಗೆ ಕಟ್ಟಡ ನಿರ್ಮಾಣ ಅಥವಾ ಬೇರೆ ಚಟುವಟಿಕೆಗಳ ಸಂಬಂಧ ಭಾರತೀಯ ವಿದ್ಯುತ್ ಕಾಯ್ದೆಯ ಸುರಕ್ಷತಾ ಮಾರ್ಗಸೂಚಿಗಳನ್ನು ಉಲ್ಲಂಘನೆ ಮಾಡಿರುವುದು ಕಂಡುಬಂದಲ್ಲಿ ಸೂಕ್ತ ಕಾನೂನು ಕ್ರಮ ಜರುಗಿಸಲಾಗುವುದು ಎಂದರು.
ಕಾರ್ಯಕ್ರಮದಲ್ಲಿ ಕೆಪಿಟಿಸಿಎಲ್ ನ ಅಲ್ಲಾಭಕಾಶ್, ಪ್ರಶಾಂತ್ ಮೂರ್ತಿ, ಶೈಲೇಂದ್ರ ಸೇರಿದಂತೆ ಕೆಪಿಟಿಸಿಎಲ್ ಸಿಬ್ಬಂದಿ ಹಾಜರಿದ್ದರು
ವರದಿ: ಎ.ಎನ್. ಪೀರ್ , ತುಮಕೂರು
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/Co3qCxRDyz3FBQg7y8GfBB