ಕೊರಟಗೆರೆ: ಅಗ್ರಹಾರದ ಕೆರೆ ಏರಿ ಬಿರುಕು ಬಂದಿದ್ದು ಜನರಲ್ಲಿ ಆತಂಕದ ವಾತಾವರಣವನ್ನು ಸೃಷ್ಟಿಸಿದೆ. ಅಗ್ರಹಾರ ಜಂಪೇನಹಳ್ಳಿ ಸೇರಿದಂತೆ ಕೊರಟಗೆರೆ ಪಟ್ಟಣದ ಜನತೆಗೆ ಭಾರೀ ಗಂಡಾತರ ಕಾದಿದೆ. ಅಗ್ರಹಾರ ಜಂಪೇನಹಳ್ಳಿ ಭಾಗದ ರೈತರಿಗೆ ಸೇರಿದ ತೋಟಗಳೆಲ್ಲ ಸಂಪೂರ್ಣ ನಾಶವಾಗುವ ಭೀತಿಯಲ್ಲಿ ಜನರು ಗಾಬರಿಗೊಂಡಿದ್ದಾರೆ.
ಕೊರಟಗೆರೆ ಪಟ್ಟಣದ ಶೇ.90 ಭಾಗದಷ್ಟು ಜನರಿಗೆ ಕುಡಿಯುವ ನೀರಿನ ಮೂಲ ಮಾರ್ಗ ಅಗ್ರಹಾರದ ಕೆರೆ ಆಗಿದೆ. ಆದರೆ ಈ ಕೆರೆ ಏರಿ ಬಿರುಕು ಮೂಡಿರುವುದು ಜನರಲ್ಲಿ ಆತಂಕವನ್ನು ಸೃಷ್ಟಿಸಿದೆ. ಕೆರೆಗಳ ಜವಾಬ್ದಾರಿ ಹೊತ್ತಿರುವ ಸಣ್ಣ ನೀರಾವರಿ ಇಲಾಖೆ ಇಂಜಿನಿಯರ್ ಗಳ ನಿರ್ಲಕ್ಷತನ ಇದಕ್ಕೆ ಕಾರಣವಾಗಿದೆ ಎಂದು ಸ್ಥಳೀಯರು ಆರೋಪಿಸಿದ್ದಾರೆ.
ಕೆರೆ ಏರಿ ಬಿರುಕು ಸುತ್ತಲೂ ಬೆಳೆದಿರುವ ದಟ್ಟ ಅರಣ್ಯದಿಂದಾಗಿ, ಗಿಡ ಮರಗಳಿಂದ ತುಂಬಿರುವ ಕೆರೆ ಏರಿ ಗಿಡ ಮರಗಳ ಬೇರಿನಿಂದ ಕೆರೆಯ ಏರಿ ಬಿರುಕು ಬಿಟ್ಟಿದೆ. ಇದನ್ನು ಕಂಡೂ ಕಾಣದಂತೆ ಇರುವ ಎಂಜಿನಿಯರ್ಗಳ ನಿರ್ಲಕ್ಷತನ ಎಷ್ಟರ ಮಟ್ಟಿಗೆ ಸರಿ ಎಂದು ಸ್ಥಳೀಯ ಜನರು ಹಾಗೂ ರೈತರು ಆಕ್ರೋಶ ಭರಿತರಾಗಿದ್ದಾರೆ. ಎಷ್ಟು ಬಾರಿ ಸ್ಥಳೀಯರು ಅಧಿಕಾರಿಗಳಿಗೆ ದೂರು ಕೊಟ್ಟರು ಕೆರೆ ಬಗ್ಗೆ ತಲೆಕೆಡಿಸಿಕೊಳ್ಳದ ಪರಿಣಾಮ ಇಂದು ಕೆರೆಯ ಏರಿ ಬಿರುಕು ಬಿಟ್ಟು ಸಮಸ್ಯೆಗೆ ಕಾರಣವಾಗಿದೆ.
ಇನ್ನೂ ಇಂಜಿನಿಯರ್ ಗಳು ಯಾವುದೇ ಅಧಿಕಾರಿಗಳ ಮಾತಿಗೂ ಬೆಲೆಕೊಡದೆ, ಸ್ಥಳೀಯರ ಮನವಿಗೂ ಮಣಿಯದೇ ಇರುವುದೇ ಈ ಘಟನೆಗೆ ಕಾರಣವಾಗಿದೆ. ಕೆರೆ ಏರಿ ಒಡೆದರೆ 4 ರಿಂದ 5 ಗ್ರಾಮಗಳು ಸೇರಿದಂತೆ ಜನ ಜಾನುವಾರುಗಳು ಸಂಪೂರ್ಣ ನಾಶವಾಗುತ್ತವೆ. ಇದಕ್ಕೆಲ್ಲ ನೇರ ಹೊಣೆ ಸಣ್ಣ ನೀರಾವರಿ ಇಲಾಖೆಯ ಇಂಜಿನಿಯರ್ ಗಳೇ ಆಗಿದ್ದಾರೆ. ತುಕ್ಕು ಹಿಡಿದಂತೆ ಕುಳಿತಿರುವ ಇಂಜಿನಿಯರುಗಳು ಎಷ್ಟು ಬಾರಿ ಮನವಿ ಕೊಟ್ಟರೂ, ಮೇಲಧಿಕಾರಿಗಳು ತಿಳಿಸಿದರು ಸ್ಥಳಕ್ಕೆ ಬಂದು ಪರಿಶೀಲನೆ ನಡೆಸದೇ ಇರುವುದು ಅವರ ಕರ್ತವ್ಯ ನಿಷ್ಠೆಯ ಬಗ್ಗೆ ತಿಳಿಸುತ್ತದೆ ಎನ್ನುವ ಆಕ್ರೋಶ ಗಳು ಕೇಳಿ ಬಂದಿವೆ.
ಕೊರಟಗೆರೆ ತಾಲ್ಲೂಕು ತಹಶೀಲ್ದಾರ್ ನಹೀದಾ ಜಮ್ ಜಮ್ ಸ್ಥಳಕ್ಕೆ ಭೇಟಿ ಕೊಟ್ಟು ವರದಿ ಸಲ್ಲಿಸಿದರೂ ಸ್ಥಳಕ್ಕೆ ಬರದ ಇಂಜಿನಿಯರ್ಗಳು ಈಗಲಾದರೂ ಎಚ್ಚೆತ್ತುಕೊಂಡು ಕಾರ್ಯಪ್ರವೃತ್ತರಾಗುತ್ತಾರಾ ಕಾದು ನೋಡಬೇಕಾಗಿದೆ.
ಅಗ್ರಹಾರ ಸ್ಥಳೀಯ ಸುರೇಂದ್ರಬಾಬು ಮಾತನಾಡಿ, 2009 ರಲ್ಲಿ ಈ ಕೆರೆಯನ್ನು ಸಣ್ಣ ನೀರಾವರಿ ಇಲಾಖೆ ಹಾಗೂ ಪಟ್ಟಣ ಪಂಚಾಯಿತಿ ಅಧಿಕಾರಿಗಳು ಕುಡಿಯುವ ನೀರಿಗಾಗಿ ಉಸ್ತುವಾರಿ ವಹಿಸಿಕೊಂಡರು. ಪ್ರಸ್ತುತ ಕೆರೆ ಏರಿ 10ರಿಂದ 15ಕಡೆ ಬಿರುಕು ಬಿಟ್ಟಿದೆ. ಹಾಗೂ ಕಾಡು ಪ್ರಾಣಿಗಳ ವಾಸಸ್ಥಳವಾಗಿದೆ. ಗಿಡ ಮರಗಳು ಬೆಳೆದು ನಿಂತು ದೊಡ್ಡ ಕಾಡಾಗಿ ಮಾರ್ಪಟ್ಟಿದೆ. ಈ ಕೆರೆ ಒಡೆದರೆ 1,200ಎಕರೆ ಜಮೀನು, 150 ಎಕರೆ ಅಡಕೆ ತೋಟ ಸಂಪೂರ್ಣ ನೀರು ಪಾಲಾಗುತ್ತೆ. ಅಲ್ಲದೇ 4 ರಿಂದ 5 ಊರಿನ ಗ್ರಾಮಸ್ಥರು ಹಾಗೂ ಜಾನುವಾರುಗಳು ನಿರಾಶ್ರಿತರಾಗುತ್ತಾರೆ. 25ಲಕ್ಷ ಟೆಂಡರ್ ಆಗಿದೆ ಎಂದರು.
ಇವರು ಕೆಲಸ ಮಾಡಿಸುವುದು ಯಾವಾಗ ಎಂದರೆ, ಈ ಕೆರೆ ಒಡೆದು ಸುತ್ತ ಮುತ್ತಲಿನ ಪ್ರದೇಶವೆಲ್ಲಾ ಕೊಚ್ಚಿ ಹೋದ ಮೇಲೆ. ಆಮೇಲೆ ರೈತರು ಬಂದು ನಮ್ಮ ಜಾಗವನ್ನು ಹುಡುಕಲು 3 ರಿಂದ 4 ವರ್ಷ ಆಗತ್ತೆ. ಅಧಿಕಾರಿಗಳಲ್ಲಿ ಮತ್ತೊಮ್ಮೆ ಬೇಡಿಕೊಳ್ಳುತ್ತೇನೆ. ಈ ಕೆರೆ ಯಾವ ಇಲಾಖೆಗೆ ಬರತ್ತೋ ಅದು ನಮಗೆ ಗೊತ್ತಿಲ್ಲಾ. ಈಗಲಾದರೂ ಎಚ್ಚೆತ್ತು ರೈತರ ಜೀವನ ಹಾಳಾಗುವುದಕ್ಕಿಂತ ಮುಂಚೆ ಸರಿಯಾಗಿ ಕಾರ್ಯ ನಿರ್ವಹಿಸಿ. ಎಷ್ಟು ಮನವಿ ಸಲ್ಲಿಸಿದರು ಇಲ್ಲಿಗೆ ಯಾವ ಅಧಿಕಾರಿಯು ಬಂದಿಲ್ಲ. ತಹಶೀಲ್ದಾರ್ ಒಬ್ಬರು ಬಂದು ಹೋದರು ಅಷ್ಟೆ, ಇವರು ರೈತರೆಲ್ಲ ಸತ್ತ ಮೇಲೆ ಬರುತ್ತಾರೋ ಗೊತ್ತಿಲ್ಲಾ ಎಂದರು.
ಮಾಜಿ ಗ್ರಾಮ ಪಂಚಾಯಿತಿ ಅಧ್ಯಕ್ಷ ನಂದೀಶ್ ಅಗ್ರಹಾರ ಮಾತನಾಡಿ, 2008-09ರಲ್ಲಿ ಆಗಿನ ಶಾಸಕರಾಗಿದ್ದ ಡಾ.ಜಿ.ಪರಮೇಶ್ವರ್ ಅವರು ಕುಡಿಯುವ ನೀರಿನ ಉದ್ದೇಶದಿಂದ ಆಯ್ಕೆ ಮಾಡಿಕೊಂಡರು. ಆದರೆ ಇತ್ತೀಚಿನ ದಿನಗಳಲ್ಲಿ ಎಲ್ಲಾ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ನಮ್ಮ ಕಣ್ಣಿಗೆ ಮಣ್ಣೆರಚಿ ನಮಗೆ ಮೋಸ ಮಾಡಿದ್ದಾರೆ. ಆವತ್ತಿನ ಕಾಲಕ್ಕೆ ನಾವು 5 ಸಾವಿರ ಕ್ವಿಂಟಾಲ್ನಿಂದ 8 ಸಾವಿರ ಕ್ವಿಂಟಾಲ್ ವರೆಗೂ ರಾಜ್ಯ ಸರ್ಕಾರದ ಬಿತ್ತನೆ ಬೀಜ ನಿಗಮಕ್ಕೆ ಕೊಡುತ್ತಾ ಬಂದಿದ್ದೇವೆ. ಇವತ್ತು ಸರ್ಕಾರ ಕೊಡುವ 2-3 ಕೆ.ಜಿ. ಅಕ್ಕಿಗೋಸ್ಕರ ಕಾಯುತ್ತಾ ಕುಳಿತುಕೊಳ್ಳುವ ಪರಿಸ್ಥಿತಿ ಬಂದಿದೆ. 2008 ರಿಂದ ಇವತ್ತಿನ ವರೆಗೂ ಯಾರೊಬ್ಬ ಅಧಿಕಾರಿಯೂ ಕೂಡಾ ಕೆರೆಯ ಏರಿ ಮೇಲೆ ಬಂದೇ ಇಲ್ಲ ಎಂದರು.
ವಿನಯ್ ಕುಮಾರ್ ಅಗ್ರಹಾರ ಗ್ರಾಮಸ್ಥ ಮಾತನಾಡಿ, ಇದು ಅಗ್ರಹಾರದ ಕೆರೆ ಎಂತ ಮಾತ್ರ ಹೆಸರುವಾಸಿ, ಆದರೆ ಇದರಿಂದ ಯಾವುದೇ ಅನುಕೂಲವನ್ನು ನಾವು ಪಡೆದುಕೊಂಡಿಲ್ಲ. ಆದರೆ ಈಗ ಈ ಕೆರೆಯಿಂದ ಅನಾನುಕೂಲವಾಗುವ ಭಯ ಆಗ್ತಾ ಇದೆ. ಕೆರೆ ಒಡೆದರೆ ಕೆಳ ಭಾಗದಲ್ಲಿರುವ ಎಲ್ಲಾ ಜನರು, ರೈತರ ಜಮೀನುಗಳು ಹಾಗು ಜಾನುವಾರುಗಳಿಗೆ ಬಹುಡೊಡ್ಡ ಅನಾಹುತವಾಗಲಿದೆ. ತಕ್ಷಣ ಸಂಬಂಧಪಟ್ಟ ಇಂಜಿನಿಯರ್ ಗಳು ಕ್ರಮ ಕೈಗೊಳ್ಳಬೇಕು ಎಂದರು.
ತಹಶೀಲ್ದಾರ್ ಮಾತನಾಡಿ, ಕೆರೆ ಸಮಸ್ಯೆ ಬಗ್ಗೆ ಇದೇ ತಿಂಗಳು 8ನೇ ತಾರೀಖು ನಮಗೆ ಸಾರ್ವಜನಿಕರಿಂದ ದೂರು ಬರತ್ತೆ, ಅದೇ ದಿನ ಸಂಜೆ ನಮ್ಮ ಕಂದಾಯ ಅಧಿಕಾರಿಗಳೊಂದಿಗೆ ಹೋಗಿ ಸ್ಥಲ ಪರಿಶೀಲನೆ ನಡೆಸಿದಾಗ ಬಿರುಕು ಬಿಟ್ಟಿರುವುದು ಕಂಡು ಬಂದಿರುತ್ತದೆ. ತಕ್ಷಣ ನಾನು ಎಂಐಇಡಬ್ಲ್ಯೂ ಮಾಹಿತಿ ಕಳಿಸಿದ್ದೆ. ಮಾರನೇ ದಿನ ಅವರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಆದರೆ ಇದು ಸಾರ್ವಜನಿಕರಿಗೆ ತಿಳಿದಿಲ್ಲ. ಈ ವಾರದಲ್ಲೇ ಒಂದು ಸಭೆಯನ್ನು ನಡೆಸಿ ಕ್ರಮ ಕೈಗೊಳ್ಳುತ್ತೇವೆಎಂದು ತಿಳಿಸಿದರು.
ಅದೇನೇ ಆಗಲಿ ಪ್ರಿಯ ವೀಕ್ಷಕರೇ ಜಾನುವಾರುಗಳಿಗೆ ಜೀವ ನದಿಯಾಗಿರುವ ಈ ಅಗ್ರಹಾರ ಕೆರೆಯನ್ನು ಉಳಿಯುವಂತೆ ಮಾಡುವ ಕೆಲಸ ಅಧಿಕಾರಿಗಳು ಮಾಡುವಂತಾಗಲಿ ಎಂಬುದೇ ನಮ್ಮ ಆಶಯ.
ವರದಿ: ಮಂಜುಸ್ವಾಮಿ.ಎಂ.ಎನ್., ಕೊರಟಗೆರೆ .
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/L4EDpegaxhmLTkOnd50sAy