ತುರುವೇಕೆರೆ: ತಾಲ್ಲೂಕು ಆಡಳಿತ, ತಾಲ್ಲೂಕು ಒಕ್ಕಲಿಗರ ಸಂಘ, ಒಕ್ಕಲಿಗ ನೌಕರರ ಸಂಘ, ಶ್ರೀ ಕಾಲಭೈರವೇಶ್ವರ ಮಹಿಳಾ ಒಕ್ಕಲಿಗರ ಸಂಘ, ಕೆಂಪೇಗೌಡ ಯುವ ಸೇನೆ ಮತ್ತು ನೇಗಿಲ ಯೋಗಿ ಸೇವಾ ಸಮಾಜದ ವತಿಯಿಂದ ನಾಡಪ್ರಭು ಕೆಂಪೇಗೌಡರ 517ನೇ ಜಯಂತ್ಯುತ್ಸವವನ್ನು ಜೂನ್ 27ರಂದು ಶನಿವಾರ ಬೆಳಗ್ಗೆ ಹಮ್ಮಿಕೊಳ್ಳಲಾಗಿದೆ ಎಂದು ಒಕ್ಕಲಿಗರ ಸಂಘದ ತಾಲ್ಲೂಕು ಅಧ್ಯಕ್ಷ ಬಡಗರಹಳ್ಳಿ ತ್ಯಾಗರಾಜು ತಿಳಿಸಿದರು.
ಅವರು ಪಟ್ಟಣದ ಪ್ರವಾಸಿ ಮಂದಿರದ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಜೂ.27ರ ಶನಿವಾರ ಬೆಳಗ್ಗೆ 10 ಘಂಟೆಗೆ ತಾಲ್ಲೂಕು ಕಚೇರಿ ಬಳಿ ದೇವೇಗೌಡರ ಪ್ರತಿಮೆ ಮುಂಭಾಗದಿಂದ ಕೆಂಪೇಗೌಡರ ಭಾವಚಿತ್ರವನ್ನು ವಿವಿಧ ಜಾನಪದ ಕಲಾತಂಡಗಳೊಂದಿಗೆ, ಸೋಮನ ಕುಣಿತ, ರಂಗ ಕುಣಿತ, ಕೋಲಾಟ, ಸಿಡಿಮದ್ದಿನ ಚಮತ್ಕಾರ ಮತ್ತು ನಗಾರಿ ಸಮೇತ ಮೆರವಣಿಗೆ ನಡೆಸಲಾಗುವುದು. ಅಲ್ಲದೆ 9:30 ಘಂಟೆಗೆ ಪಟ್ಟಣದಲ್ಲಿ ಬೈಕ್ ರ್ಯಾಲಿ ನಡೆಯಲಿದೆ.
ಪಟ್ಟಣದ ಒಕ್ಕಲಿಗರ ಸಮುದಾಯ ಭವನದಲ್ಲಿನ ವೇದಿಕೆ ಕಾರ್ಯಕ್ರಮದಲ್ಲಿ ಆದಿಚುಂಚನಗಿರಿ ಮಠದ ಪೀಠಾಧ್ಯಕ್ಷ ಶ್ರೀ ಶ್ರೀ ಶ್ರೀ ಡಾ.ನಿರ್ಮಲಾನಂದನಾಥ ಮಹಾಸ್ವಾಮೀಜಿ ಕೃಪಾಸಿರ್ವಾದದೊಂದಿಗೆ ಮಠದ ಕಾರ್ಯದರ್ಶಿ ಶ್ರೀ ಪ್ರಸನ್ನನಾಥ ಸ್ವಾಮೀಜಿಯವರು, ಪಟ್ಟನಾಯಕನಹಳ್ಳಿ ಶ್ರೀ ನಂಜಾವಧೂತ ಸ್ವಾಮೀಜಿ ಹಾಗೂ ಬೆಟ್ಟಗೊಂಡನಹಳ್ಳಿ ಮಠದ ಶ್ರೀ ಬಾಲಕೃಷ್ಣಾನಂದ ಸ್ವಾಮೀಜಿಗಳು ದಿವ್ಯ ಸಾನ್ನಿಧ್ಯ ವಹಿಸಲಿದ್ದಾರೆ.
ಶಾಸಕ ಎಂ.ಟಿ.ಕೃಷ್ಣಪ್ಪನವರು ಕಾರ್ಯಕ್ರಮ ಉದ್ಘಾಟಿಸಲಿದ್ದು, ವಿಶೇಷ ಅತಿಥಿಗಳಾಗಿ 20 ಲಕ್ಷ ಪುಸ್ತಕಗಳ ಸಂಗ್ರಹಣೆ ಮೂಲಕ ವಿಶ್ವ ದಾಖಲೆ ಮಾಡಿರುವ ಪದ್ಮಶ್ರೀ ಪುರಸ್ಕೃತರಾದ ಪಾಂಡವಪುರ ಅಂಕೇಗೌಡ್ರು, ಮುಖ್ಯ ಭಾಷಣಕಾರರಾಗಿ ಉಪನ್ಯಾಸಕ ಎಸ್.ಎಲ್.ವಿಜಯ್ ಕುಮಾರ್ ಆಗಮಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಜಲಶಕ್ತಿ ಮತ್ತು ರೈಲ್ವೆ ಸಚಿವರಾದ ವಿ.ಸೋಮಣ್ಣ, ರಾಜ್ಯಸಭಾ ಸದಸ್ಯ ಹಾಗೂ ಚಲನಚಿತ್ರ ನಟ ಜಗ್ಗೇಶ್, ಎಂ.ಎಲ್.ಸಿ ಚಿದಾನಂದ ಗೌಡ, ಆರ್.ರಾಜೇಂದ್ರ, ಶ್ರೀನಿವಾಸ್ ಸೇರಿದಂತೆ ಹಲವು ಗಣ್ಯರು ಆಗಮಿಸಲಿದ್ದಾರೆ.
ಇದೇ ವೇಳೆ ವಿವಿಧ ಕ್ಷೇತ್ರದ ಸಾಧಕರನ್ನು ಗುರುತಿಸಿ ನಾಡಪ್ರಭು ಶ್ರೀ ಕೆಂಪೇಗೌಡ ಪ್ರಶಸ್ತಿ ನೀಡಿ ಸನ್ಮಾನಿಸಲಾಗುವುದು. 2025-26ನೇ ಸಾಲಿನ ಎಸ್.ಎಸ್.ಎಲ್.ಸಿ. ಹಾಗೂ ಪಿ.ಯು.ಸಿ. ಪರೀಕ್ಷೆಯಲ್ಲಿ ಶೇ.97 ಅಂಕ ಪಡೆದ ಒಕ್ಕಲಿಗ ಸಮುದಾಯದ ಮಕ್ಕಳಿಗೆ ಪ್ರತಿಭಾ ಪುರಸ್ಕಾರ ನೀಡಲಿದ್ದು, ಕಾರ್ಯಕ್ರಮಕ್ಕೆ ತಾಲ್ಲೂಕಿನ ಎಲ್ಲಾ ಸಂಘ ಸಂಸ್ಥೆಗಳ ಪದಾಧಿಕಾರಿಗಳು, ಗಣ್ಯರು, ವಿದ್ವಾಂಸರು, ಅಧಿಕಾರಿಗಳು, ಕಲಾಶಕ್ತರು ಸೇರಿದಂತೆ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಕಾರ್ಯಕ್ರಮ ಯಶಸ್ವಿಗೊಳಿಸಬೇಕೆಂದು ತಾಲ್ಲೂಕು ಅಧ್ಯಕ್ಷ ತ್ಯಾಗರಾಜು ಈ ಮೂಲಕ ಮನವಿ ಮಾಡಿದ್ದಾರೆ.
ಸುದ್ದಿ ಗೋಷ್ಠಿಯಲ್ಲಿ ಜನಪ್ರತಿನಿಧಿಗಳು ಹಾಗೂ ತಾಲ್ಲೂಕಿನ ವಿವಿಧ ಸಂಘ ಸಂಸ್ಥೆಗಳ ಪದಾಧಿಕಾರಿಗಳಾದ ಎ.ಬಿ.ಜಗದೀಶ್, ಡಾ.ನವೀನ್, ಡಾ.ಚೊದ್ರಿ ನಾಗೇಶ್, ಜಿ.ಪ್ರಸನ್ನಕುಮಾರ್, ಬಸವರಾಜು, ಪಾಪಣ್ಣ, ಪ್ರಹ್ಲಾದ್, ವಿಜಯ್ ಕುಮಾರ್, ಶಂಕರಪ್ಪ ಸೇರಿದಂತೆ ಸಮಾಜ ಬಾಂಧವರು ಮತ್ತಿತರರು ಇದ್ದರು.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/ISmeQjik4LbG9KvWhKlbCC




