ಕೊರಟಗೆರೆ: ಪಟ್ಟಣದ ತಾಲ್ಲೂಕು ಆಡಳಿತ ಕಛೇರಿ ಪಕ್ಕದಲ್ಲಿ ಇರುವ ಇಂದಿರಾ ಕ್ಯಾಂಟೀನ್ ಸಿಬ್ಬಂದಿಗೆ ಸುಮಾರು 4 ತಿಂಗಳಿನಿಂದ ವೇತನ ನೀಡಿಲ್ಲ, ಮಾತ್ರವಲ್ಲದೇ ಆಹಾರ ಸಾಮಗ್ರಿ ಕೂಡ ಸರಬರಾಜು ಮಾಡುತ್ತಿಲ್ಲವೆಂದು ಸಿಬ್ಬಂದಿ ವರ್ಗ ಕ್ಯಾಂಟೀನ್ ಮುಂದೆ ಧರಣಿ ಸತ್ಯಾಗ್ರಹ ನಡೆಸಿದರು.
5 ವರ್ಷಗಳ ಹಿಂದೆ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೇಸ್ ಸರ್ಕಾರದಲ್ಲಿ ಇದ್ದಾಗ ಆರಂಭವಾದ ಇಂದಿರಾ ಕ್ಯಾಂಟೀನ್ ಗಳು, ಕಡಿಮೆ ಬೆಲೆಯಲ್ಲಿ ಸಾರ್ವಜನಿಕರ ಹಸಿವು ನೀಗಿಸುತ್ತಿತ್ತು. ಕ್ಯಾಂಟೀನ್ ಮುಂದೆ ಜನರ ಉದ್ದುದ್ದ ಸಾಲುಗಳಿದ್ದವು. ಅಪಾರ ಸಂಖ್ಯೆಯಲ್ಲಿ ಜನರು ಇದರ ಸದುಪಯೋಗ ಪಡೆಯುತ್ತಿದ್ದರು. ರೈತರು, ಶಾಲಾ ಮಕ್ಕಳು, ಆಟೋ ಚಾಲಕರು ಸೇರಿದಂತೆ ಸಾರ್ವಜನಿಕರಿಗೆ ಕ್ಯಾಂಟಿನ್ ಸಹಕಾರಿಯಾಗಿತ್ತು. ಆದರೆ ಇತ್ತೀಚೆಗೆ ಇಂದಿರಾ ಕ್ಯಾಂಟೀನ್ ಚಿತ್ರಣ ಬದಲಾಗಿದೆ ಎಂದು ಧರಣಿ ನಿರತರು ಬೇಸರ ವ್ಯಕ್ತಪಡಿಸಿದರು.
ಕೊರಟಗೆರೆ ಪಟ್ಟಣದ ತಾಲೂಕು ಕಛೇರಿಯ ಬಳಿಯಲ್ಲಿರುವ ಇಂದಿರಾ ಕ್ಯಾಂಟೀನ್ ನಡೆಸಲು ಗುತ್ತಿಗೆ ಪಡೆದ ಬೆಂಗಳೂರು ಮೂಲಕ ಗುತ್ತಿಗೆದಾರ ಇಂದಿರಾ ಕೊರಟಗೆರೆ ಪಟ್ಟಣದ ಕ್ಯಾಂಟೀನ್ ಗೆ ಕಳೆದ 8 ತಿಂಗಳಿನಿಂದ ಸಮರ್ಪಕವಾಗಿ ಆಹಾರ ಸಾಮಗ್ರಿಗಳನ್ನು, ತರಕಾರಿಗಳನ್ನು ಸರಬರಾಜು ಮಾಡದೆ ಸಿಬ್ಬಂದಿಗಳಿಗೆ 4 ತಿಂಗಳಿನಿಂದ ವೇತನ ನೀಡದೆ, ಸಿಬ್ಬಂದಿ ಸ್ಥಳೀಯ ಅಂಗಡಿ ಮಾಲೀಕರಿಂದ ಖರೀದಿಸಿದ ಸಾಮಗ್ರಿಗಳ ಹಣ ನೀಡದೆ ಕಣ್ಮರೆಯಾಗಿದ್ದಾರೆಂದು ಧರಣಿ ನಿರತ ಸಿಬ್ಬಂದಿ ದೂರಿದರು.
ವೇತನವಿಲ್ಲದೆ ನಾವು ಕಷ್ಟಕ್ಕೆ ಸಿಲುಕಿದ್ದು, ವೇತನಕ್ಕಾಗಿ ಗುತ್ತಿಗೆದಾರರಿಗೆ ಕರೆ ಮಾಡಿದರೆ ಗುತ್ತಿಗೆದಾರರ ಕರೆ ಸ್ಥಗಿತಗೊಳಿಸಿಕೊಳ್ಳುತ್ತಾರೆ ಎಂದು ಥರಣಿ ನಿರತ ಸಿಬ್ಬಂದಿ ದೂರಿದ್ದು ,ಬಾಕಿ ವೇತನ ನೀಡುವವರೆಗೂ ಧರಣಿ ನಡೆಸುವುದಾಗಿ ಆಕ್ರೋಶ ವ್ಯಕ್ತಪಡಿಸಿದರು.
ಕೊರಟಗೆರೆ ಇಂದಿರಾ ಕ್ಯಾಂಟೀನ್ ನಲ್ಲಿ 8 ಮಂದಿ ಸಿಬ್ಬಂದಿ ಕೆಲಸ ಮಾಡ ಬೇಕಾಗಿದ್ದು, ಆದರೆ ಗುತಿಗೆದಾರರು ಕೇವಲ 4 ಮಂದಿಯನ್ನು ನೇಮಕ ಮಾಡಿಕೊಂಡಿದ್ದಾರೆ. 8 ಮಂದಿ ಸಿಬ್ಬಂದಿಗಳ ಕೆಲಸ ಕೇವಲ 8ಮಂದಿ ಮಾಡುತ್ತಿದ್ದು ಕಳೆದ 5 ವರ್ಷಗಳಿಂದ ಇದೇ ರೀತಿ ನಡೆಯುತ್ತಿದೆ. ಪ್ರತಿ ತಿಂಗಳು ಸರ್ಕಾರದಿಂದ 8 ಮಂದಿ ಸಿಬ್ಬಂದಿಗೆ ವೇತನ ಬಿಲ್ ಮಾಡುತ್ತಿದ್ದಾರೆ ಎಂದು ಮಾಹಿತಿ ನೀಡಿದ್ದು ಈ ಬಗ್ಗೆ ಜಿಲ್ಲಾಧಿಕಾರಿಗಳು ಗಮನ ಹರಿಸಿ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದ್ದಾರೆ.
ತಹಶೀಲ್ದಾರ್ ನಹೀದ ಜಂ ಜಂ ಮಾತನಾಡಿ, ವಿಷಯ ತಿಳಿದ ತಕ್ಷಣ ನಾನು ಖುದ್ದು ಭೇಟಿ ನೀಡಿ ಎಲ್ಲವನ್ನು ಸೂಕ್ಷ್ಮವಾಗಿ ಪರಿಶೀಲಿಸಿದ್ದು, ಕಾಂಟ್ರಾಕ್ಟರ್ ನಿಖಿಲ್ ರವರಿಗೆ ದೂರವಾಣಿ ಮೂಲಕ ಕರೆ ಮಾಡಿ ಒಂದು ವಾರದೊಳಗೆ ಸಿಬ್ಬಂದಿಗಳಿಗೆ ವೇತನವನ್ನು ನೀಡಬೇಕೆಂದು ತಿಳಿಸಿದ್ದೇನೆ. ಇನ್ನು ಮುಂದೆ ಇಂದಿರಾ ಕ್ಯಾಂಟೀನ್ ಗೆ ಬರುವ ಪ್ರತಿಯೊಬ್ಬರಿಗೂ ಗುಣಮಟ್ಟದ ಆಹಾರವನ್ನು ನೀಡಬೇಕೆಂದು ತಿಳಿಸಿದ್ದೇನೆ ಮತ್ತು ಕಂಟ್ರಾಕ್ಟರ್ ನಿಖಿಲ್ ಗೆ ನೋಟಿಸ್ ನೀಡುವಂತೆ ಈಗಾಗಲೇ ಆದೇಶಿಸಿದ್ದೇನೆ ಎಂದು ತಿಳಿಸಿದರು.
ದಲಿತ ಮುಖಂಡ ಜೆಟ್ಟಿ ಅಗ್ರಹಾರ ನಾಗರಾಜು ಮಾತನಾಡಿ, ತಾಲೂಕಿನ ಬಡ ಜನತೆಯ ಹಸಿವು ನೀಗಿಸುತ್ತಿದ್ದ ಇಂಧಿರಾ ಕ್ಯಾಂಟೀನ್ ಗೆ ಗುತ್ತಿಗೆದಾರ ಸಮರ್ಪಕವಾಗಿ ಆಹಾರ ಸಾಮಗ್ರಿಗಳನ್ನು ಸರಬರಾಜು ಮಾಡದೆ ಹಾಗೂ ಸಿಬ್ಬಂದಿಗೆ ವೇತನ ನೀಡದೆ ಪ.ಪಂ.ಯಿಂದ ಸಂಪೂರ್ಣ ಬಿಲ್ ಪಡೆದಿದ್ದು, ಸಂಬಂದಿಸಿದ ಅಧಿಕಾರಿಗಳು ತಕ್ಷಣ ಗುತ್ತಿಗೆದಾರರ ಮೇಲೆ ಕ್ರಮ ಕೈಗೊಂಡು ಸಿಬ್ಬಂದಿಗೆ ವೇತನ ಕೊಡಿಸಬೇಕು. ಮತ್ತು ಕ್ಯಾಂಟೀನ್ ಪ್ರಾರಂಭಿಸುವಂತೆ ಅವರು ಆಗ್ರಹಿಸಿದರಲ್ಲದೇ ಗುತ್ತಿಗೆದಾರ ಮಾತಿಗೆ ತಪ್ಪಿದರೆ ಸಿಬ್ಬಂದಿಯೊಂದಿಗೆ ಉಗ್ರಹೋರಾಟ ಮಾಡುವುದಾಗಿ ಎಚ್ಚರಿಸಿದರು.
ಪ.ಪಂ.ಅಧ್ಯಕ್ಷೆ ಕಾವ್ಯರಮೇಶ್ ಸ್ಥಳಕ್ಕೆ ಭೇಟಿ ನೀಡಿ ಮಾತನಾಡಿ, ಪಟ್ಟಣ ಪಂಚಾಯಿತಿ ವತಿಯಿಂದ ಗುತ್ತಿಗೆದಾರರಿಗೆ ಯಾವುದೇ ಬಿಲ್ ಬಾಕಿ ಇಲ್ಲ. ಇಂದಿರಾ ಕ್ಯಾಂಟೀನ್ ನಿಂದ ಸಾರ್ವಜನಿಕರಿಗೆ ತೋಂದರೆಯಾಗಬಾರುದು ಎಂಬ ದೃಷ್ಟಿಯಿಂದ ಕಾಲ ಕಾಲಕ್ಕೆ ಸರಿಯಾಗಿ ಬಿಲ್ ಪಾವತಿಸಲಾಗಿದೆ. ಸಿಬ್ಬಂದಿಗೆ ವೇತನ ನೀಡಿಲ್ಲ ಎಂಬ ವಿಷಯ ತಿಳಿದು ಗುತ್ತಿಗೆದಾರರಿಗೆ ದೂರವಾಣಿ ಮಾಡಿದರೆ ಗುತ್ತಿಗೆದಾರ ದೂರವಾಣಿ ಸ್ವೀಕರಿಸುತ್ತಿಲ್ಲ. ಈ ಬಗ್ಗೆ ಜಿಲ್ಲಾಧಿಕಾರಿಗಳಿಗೆ ವರದಿ ಮಾಡಿ ತಕ್ಷಣ ಕ್ರಮ ಕೈಗೊಳ್ಳುವಂತೆ ಒತ್ತಾಯಿಸುವುದಾಗಿ ತಿಳಿಸಿದರು.
ವರದಿ: ಮಂಜುಸ್ವಾಮಿ.ಎಂ.ಎನ್., ಕೊರಟಗೆರೆ.
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/L4EDpegaxhmLTkOnd50sAy