ಕೊರಟಗೆರೆ : ಬಹುನಿರೀಕ್ಷಿತ ಶಾಶ್ವತ ನೀರಾವರಿ ಯೋಜನೆ ಎತ್ತಿನಹೊಳೆ ಅಂತೂ ಇಂತೂ ಕೊರಟಗೆರೆ ತಾಲೂಕಿನಲ್ಲಿಯೇ ನೆಲೆಗೊಳ್ಳುವ ಎಲ್ಲಾ ಸಾಧ್ಯತೆಗಳು ಕಂಡು ಬರುತ್ತಿದ್ದು, ಭೂಸ್ವಾಧೀನ ಪ್ರಕ್ರಿಯೆಯ ಗೊಂದಲದ ನಡುವೆ 5.78 ಟಿಎಂಸಿ ಯಿಂದ 2ಟಿಎಂಸಿ ಸಾಮರ್ಥ್ಯದ ಬಫರ್ ಡ್ಯಾಂಗೆ ಪರಿಷ್ಕೃತ ಪ್ರಸ್ತಾವನೆ ರಾಜ್ಯ ಸರ್ಕಾರ ಸಿದ್ಧಪಡಿಸಿದೆ ಎನ್ನಲಾಗಿದೆ.
ತಾಲ್ಲೂಕಿನ ಬೈರಗೊಂಡ್ಲು ಬಳಿ ನಿರ್ಮಿಸಲು ಉದ್ದೇಶಿಸಲಾಗಿದ್ದ ಬಫರ್ ಡ್ಯಾಮ್ ನಿರ್ಮಾಣಕ್ಕೆ ಭೂ ಸ್ವಾಧೀನ ಪ್ರಕ್ರಿಯೆ ಎರಡೂ ತಾಲೂಕಿನ ಸಬ್ ರಿಜಿಸ್ಟರ್ ರೇಟ್ ವ್ಯತ್ಯಾಸದಿಂದ ಸೃಷ್ಠಿಯಾದ ಗೊಂದಲ ಕೊರಟಗೆರೆ ತಾಲೂಕಿನ ಜನತೆ ಭೂಸ್ವಾಧೀನ ಪ್ರಕ್ರಿಯೆಗೆ ವಿರೋಧ ವ್ಯಕ್ತಪಡಿಸಿದ ಹಿನ್ನೆಲೆಯಲ್ಲಿ ಸರ್ಕಾರ 5.78 ಟಿ ಎಂ ಸಿ ಸಾಮರ್ಥ್ಯವನ್ನು ಹೊಸ ಪರಿಷ್ಕೃತ 2.78 ಟಿಎಂಸಿ ನೀರು ತಗ್ಗಿಸುವ ಮುಖೇನಾ 2 ಟಿಎಂಸಿ ಸಾಮರ್ಥ್ಯದ ನಿರ್ಮಾಣಕ್ಕೆ ಹೊಸ ಪ್ರಸ್ತುತ ಪ್ರಸ್ತಾವನೆ ಸರ್ಕಾರದಿಂದ ಸಿದ್ದಗೊಂಡಿದೆ.
ಮಾಜಿ ಉಪಮುಖ್ಯಮಂತ್ರಿಗಳು ಹಾಗೂ ಹಾಲಿ ಶಾಸಕರಾದ ಡಾ ಜಿ ಪರಮೇಶ್ವರ್ ಸ್ವಕ್ಷೇತ್ರ ಕೊರಟಗೆರೆಯಲ್ಲಿ ಎತ್ತಿನಹೊಳೆ ಯೋಜನೆಯ ಗೊಂದಲ ನಿವಾರಣೆ ಹಾಗೂ ಸರ್ಕಾರದ ನಿಲುವಿನ ಬಗ್ಗೆ ಅಧಿವೇಶನದ ಪ್ರಶ್ನೋತ್ತರ ವೇಳೆ ಡಾ. ಜಿ ಪರಮೇಶ್ವರ್ ಜಲಸಂಪನ್ಮೂಲ ಸಚಿವ ಗೋವಿಂದ ಕಾರಜೋಳಗೆ ಕೇಳಿದ ಪ್ರಶ್ನೆಯಿಂದ ದೊರೆತ ಉತ್ತರದಲ್ಲಿ ನಿಗದಿತ ಸ್ಥಳದಲ್ಲಿಯೇ 5.78 ಟಿ ಎಂ ಸಿ ಪ್ರಸ್ತಾವನೆಯಿಂದ 2 ಟಿಎಂಸಿಗೆ ನಿಲ್ಲಿಸಲಾಗಿ ಎರಡು ತಾಲೂಕಿನ ರೈತರ ಭೂಸ್ವಾಧೀನ ಪ್ರಕ್ರಿಯೆಯ ವ್ಯತ್ಯಾಸದಿಂದ 2.78 ಟಿಎಂಸಿ ನೀರಿನ್ನು ಕುಗ್ಗಿಸಿ ರಾಜ್ಯ ಸರ್ಕಾರ ಅಧಿಕೃತ ಪರಿಷ್ಕೃತ ಪಟ್ಟಿಯನ್ನು ಸಿದ್ಧಪಡಿಸಿರುವುದರ ಬಗ್ಗೆ ಪೂರ್ಣ ಮಾಹಿತಿ ಅಧಿವೇಶನದಲ್ಲಿ ನೀಡಲಾಗಿದೆ ಎನ್ನಲಾಗಿದೆ.
ಈ ಹಿಂದೆ ಕಾಂಗ್ರೆಸ್ ಸರ್ಕಾರ ಇದ್ದಂತಹ ಸಂದರ್ಭದಲ್ಲಿ ಅಂದಿನ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಶಾಶ್ವತ ನೀರಾವರಿ ಯೋಜನೆಯ ಕನಸೊತ್ತು ಬರಗಾಲ ಪೀಡಿತ ಪ್ರದೇಶಗಳಾದ ತುಮಕೂರು, ಚಿಕ್ಕಬಳ್ಳಾಪುರ,ಕೋಲಾರ , ಬೆಂಗಳೂರು ಜಿಲ್ಲೆಗಳಿಗೆ ಶಾಶ್ವತ ಕುಡಿಯುವ ನೀರಿನ ಯೋಜನೆಯನ್ನು ಅನುಷ್ಠಾನಗೊಳಿಸಲು ಕರಾವಳಿ ಪ್ರದೇಶಗಳ ವಿರೋಧದ ನಡುವೆಯೂ, ಹಲವು ಸಮಸ್ಯೆಗಳನ್ನು ಮೆಟ್ಟು ನಿಂತು ಅಂದಿನ ಸರ್ಕಾರ ಶಾಶ್ವತ ನೀರಾವರಿಗೆ ಒಂದು ಉತ್ತಮ ಯೋಜನೆಯನ್ನು ಜನರಿಗೆ ಕೊಡುಗೆಯಾಗಿ ನೀಡಿ ಅದರಲ್ಲೂ ಕೊರಟಗೆರೆ ತಾಲ್ಲೂಕಿನಲ್ಲಿ 5.78 ಟಿಎಂಸಿ ನೀರು ಶೇಖರಣೆಯ ಬಫರ್ ಡ್ಯಾಮ್ ಗೆ ಯೋಜನೆ ರೂಪಿಸಿ ಈ ಯೋಜನೆಯ ಅನುಷ್ಠಾನಕ್ಕೆ ಅಂದಿನ ಬಜೆಟ್ ನಲ್ಲಿ ನೂರಾರು ಕೋಟಿ ರೂ ಮೀಸಲಿಟ್ಟು ಅನುಷ್ಠಾನದ ತೀವ್ರತೆಯನ್ನು ಹೆಚ್ಚಿಸಿ ರೈತರ ಅಶೋತ್ತರಕ್ಕೆ ಸ್ಪಂದಿಸಿದ್ದರು.
ಎತ್ತಿನಹೊಳೆ ಯೋಜನೆಯ ಅನುಷ್ಠಾನಕ್ಕೆ ಪ್ರಾರಂಭದಲ್ಲಿ ಭೂ ಸ್ವಾಧೀನ ಪ್ರಕ್ರಿಯೆಯ ಅಡಚಣೆಯಾಗಿ, ನಂತರ ದಿನಗಳಲ್ಲಿ ರೈತರನ್ನು ಒಲೈಸಿ ಟೆಂಡರ್ ದಾರರು ದೊಡ್ಡಮಟ್ಟದ ಟ್ರಂಚ್ ಮೂಲಕ ಪೈಪ್ ಲೈನ್ ಕಾಮಗಾರಿಯ ವೇಗ ನೋಡಿ ಇಲ್ಲಿನ ರೈತರು ಇನ್ನು 2-3 ವರ್ಷಗಳಲ್ಲಿ ಎತ್ತಿನ ಹೊಳೆ ಯೋಜನೆ ಪೂರ್ಣಗೊಳ್ಳಲಿದೆ ಎಂಬ ಭರವಸೆ ಹುಸಿಕೊಂಡು, ರಾಜ್ಯ ಸರ್ಕಾರ ಆಯವ್ಯಯದಲ್ಲಿ ನಿರೀಕ್ಷಿತ ಹಣಕಾಸಿನ ಕೊರತೆಯಿಂದ ಎತ್ತಿನ ಹೊಳೆ ಯೋಜನೆ ಕಾಮಗಾರಿ ವೇಗ ಕುಂಠಿತಗೊಂಡು ರೈತರ ನೀರಾವರಿ ಯೋಜನೆಯ ಕನಸು ಭಗ್ನಗೊಂಡು ನಿರಾಸೆ ಮೂಡಿಸಿದನ್ನು ನೆನಪಿಸಿಕೊಳ್ಳಬಹುದು.
ಎತ್ತಿನಹೊಳೆ ಯೋಜನೆ ಕೊರಟಗೆರೆ ತಾಲೂಕಿನಲ್ಲಿ ಕಾಲಿಟ್ಟು, ಬೈರಗೊಂಡ್ಲು ಬಳಿ 5.78 ಟಿಎಂಸಿ ಸಾಮರ್ಥ್ಯದ ಬಫರ್ ಡ್ಯಾಮ್ ನಿರ್ಮಾಣವಾಗಲಿದೆ ಇದರಿಂದ ಕೋಳಾಲ ಭಾಗದ 8-10 ಗ್ರಾಮಗಳು ನೀರಿನಲ್ಲಿ ಮುಳುಗಡೆಯಾಗಲಿವೆ. ಎಂಬ ಆಘಾತಕಾರಿ ಸುದ್ದಿಯಿಂದ ಇಲ್ಲಿನ ಜನರು ತಮ್ಮ ಊರು, ನೂರಾರು ವರ್ಷಗಳು ನೆಲದೊಂದಿಗೆ ಇದ್ದಂತಹ ಸಂಬಂಧ ಇಲ್ಲಿನ ಜನ ಕಳೆದುಕೊಳ್ಳದ ಮನಸ್ಥಿತಿಯಲ್ಲಿ ಇಲ್ಲದೆ ಕಾರಣ ಭೂಸ್ವಾಧೀನ ಪ್ರಕ್ರಿಯೆಗೆ ನಮ್ಮ ಜಮೀನನ್ನು ನೀಡೋದಿಲ್ಲ ಎಂದು ಹಲವು ಬಾರಿ ಪ್ರತಿಭಟನೆ ನಡೆಸಿ ಜಿಲ್ಲಾಧಿಕಾರಿಗಳು ಸೇರಿದಂತೆ ರಾಜ್ಯಮಟ್ಟದ ಅಧಿಕಾರಿಗಳು ಸಂಧಾನ ಕೈಗೊಂಡು ಜನರ ಮನಸ್ಸನ್ನು ಒಂದು ಹಂತಕ್ಕೆ ಭೂಸ್ವಾಧೀನಕ್ಕೆ ಸಂಧಾನ ಕಾರ್ಯ ನಡೆಯುತ್ತಾದ್ರೂ ಕೊನೆಯ ಹಂತದಲ್ಲಿ ಹಣದ ವ್ಯತ್ಯಾಸಗಳಿಂದ ಸಮರ್ಪಕ ಭೂ ಸ್ವಾಧೀನ ಪ್ರಕ್ರಿಯೆಗೆ ಜನ ಸ್ಪಂದಿಸಲಿಲ್ಲ.
ಎತ್ತಿನಹೊಳೆ ಪ್ರಾರಂಭ ಹಂತದಲ್ಲಿ ರೈತರಿಗೆ ಮಾಹಿತಿ ಕೊರತೆ ಹಾಗೂ ಬಫರ್ ಡ್ಯಾಮ್ ನಿರ್ಮಾಣದ ಪ್ರದೇಶ ಎರಡು ತಾಲೂಕಿನ ಗಡಿಗಳಿಗೆ ಹೊಂದಿಕೊಂಡಂತಿದ್ದು, ದೊಡ್ಡಬಳ್ಳಾಪುರ ಹಾಗೂ ಕೊರಟಗೆರೆ ತಾಲೂಕಿನ ಗಡಿಯಾದರಿಂದ ಎರಡು ವಿಭಾಗವಾಗಿ ಭೂಸ್ವಾದಿನ ಪ್ರಕ್ರಿಯೆಯಲ್ಲಿ ದೊಡ್ಡಬಳ್ಳಾಪುರ ಗ್ರಾಮದವರಿಗೆ 38 ಲಕ್ಷ ಹಾಗೂ ಕೊರಟಗೆರೆ ಭಾಗದ ಜಮೀನುಗಳಿಗೆ 18 ಲಕ್ಷ ನಿಗದಿ ಪಡಿಸಿದ್ದರಿಂದ ರೈತರಲ್ಲಿ ಆಕ್ರೋಶ ಕಂಡು ಬಂದು ಒಂದೇ ಬಫರ್ ಡ್ಯಾಮಿಗೆ ಎರಡೆರಡು ತರದ ದರ ಪಟ್ಟಿ ನೀಡಿ ವ್ಯತ್ಯಾಸ ಹಣ ನೀಡಿದರೆ ನಾವು ಜಮೀನು ಬಿಟ್ಟುಕೊಳ್ಳುವುದಿಲ್ಲ, ದೊಡ್ಡಬಳ್ಳಾಪುರ ಮಾದರಿಯಲ್ಲಿಯೇ ನಮಗೂ ಹಣ ಸಂಧಾಯವಾಗಬೇಕು ಎಂದು ಪಟ್ಟು ಬಿಡದ ಕೋಳಾಲ ವ್ಯಾಪ್ತಿಯ ರೈತರು ಪಟ್ಟು ಸಡಿಲಿಸದ ಕಾರಣ ಸರ್ಕಾರ ಅನಿವಾರ್ಯವಾಗಿ ಬೇರೆಡೆಗೆ ವರ್ಗಾಯಿಸುವ ಅಥವಾ ಬಫರ್ ಡ್ಯಾಮ್ ತಗ್ಗಿಸುವ ತೀರ್ಮಾನಕ್ಕೆ ಬಂದಿದೆ ಎನ್ನಲಾಗಿದೆ.
ಕೊರಟಗೆರೆ ತಾಲ್ಲೂಕಿನ ಜನತೆಗೆ ಬಫರ್ ಡ್ಯಾಮ್ ನ ಸ್ಪಷ್ಟ ಚಿತ್ರಣ ನೀಡಿ ಎಂದು ಇತ್ತೀಚಿಗೆ ಅಧಿವೇಶನದಲ್ಲಿ ಮಾಜಿ ಉಪಮುಖ್ಯಮಂತ್ರಿ ಹಾಗೂ ಹಾಲಿ ಶಾಸಕ ಡಾ. ಜಿ ಪರಮೇಶ್ವರ್ ಪ್ರಶ್ನೆಗೆ ಜಲ ಸಂಪನ್ಮೂಲ ಸಚಿವ ಗೋವಿಂದ ಕಾರಜೋಳ ಉತ್ತರಿಸಿ ಈ ಹಿಂದಿನ 5.78 ಟಿಎಂಸಿ ಸಾಮರ್ಥ್ಯದ ಬಫರ್ ಡ್ಯಾಮ್ ಅನ್ನು 2.78 ಟಿಎಂಸಿ ತಗ್ಗಿಸಿ 2 ಟಿಎಂಸಿ ನೀರು ಹಿಡಿಯುವಷ್ಟು ಸಾಮರ್ಥ್ಯದ ಬಫರ್ ಡ್ಯಾಮ್ ಗೆ ಹಸಿರು ನಿಶಾನೆ ತೋರಿಸಿದ್ದು ಕೊರಟಗೆರೆ ತಾಲ್ಲೂಕಿನ ಪ್ರಸಕ್ತ ಪಟ್ಟಿಯಲ್ಲಿರುವ ಎಲ್ಲಾ ಕೆರೆಗಳಿಗೂ ನೀರು ಹಾಯಿಸುವ ಭರವಸೆಯನ್ನ ನೀಡಿದ್ದಾರೆ.
ಒಟ್ಟಾರೆ ಶಾಶ್ವತ ನೀರಾವರಿ ಯೋಜನೆ ಎತ್ತಿನ ಹೊಳೆ ಕೊರಟಗೆರೆ ತಾಲೂಕಿನಲ್ಲಿ ನೆಲೆಗೊಳ್ಳುವ ಎಲ್ಲಾ ಸಾಧ್ಯತೆಗಳು ಕಂಡುಬರುತ್ತಿದ್ದು, ಪ್ರಸಕ್ತ ಈ ಹಿಂದೆ ಗುರುತಿಸಲಾದ ಬೈರಗೂಂಡ್ಲು ಪ್ರದೇಶದಲ್ಲಿಯೇ ಸಾಮರ್ಥ್ಯ ಕುಗ್ಗಿಸಿ ರೈತರಿಗೂ ಸಮಸ್ಯೆ ಆಗದ ರೀತಿಯಲ್ಲಿ ಬಫರ್ ಡ್ಯಾಮ್ ನಿರ್ಮಾಣಗೊಳ್ಳುವ ಜೊತೆಗೆ ತಾಲೂಕಿನ ನಿಗದಿತ ಬಹುತೇಕ ಕೆರೆಗಳಿಗೆ ನೀರು ತುಂಬಿಸುವಂತಹ ಕಾರ್ಯ ನಡೆದಿದ್ದು ರೈತರು ನೆಮ್ಮದಿಯ ನಿಟ್ಟುಸಿರು ಬಿಟ್ಟಂತಾಗಿದೆ.
ಶಾಶ್ವತ ನೀರಾವರಿ ಯೋಜನೆ ವಿಚಾರದಲ್ಲಿ ನಾನು ಮೊದಲಿನಿಂದಲೂ ಆಸಕ್ತಿ ವಹಿಸುತ್ತಿದ್ದು, ರೈತರ ಪರ ನಿರ್ಧಾರಗಳ ಜೊತೆಗೆ ಅಂತರ್ಜಲ ಮಟ್ಟ ಹೆಚ್ಚಿಸುವಂತಹ ವಿಚಾರದಲ್ಲಿ ಬಫರ್ ಡ್ಯಾಮ್ ಇಲ್ಲಿಯೇ ಉಳಿಸಿಕೊಳ್ಳುವ ನಿಟ್ಟಿನಲ್ಲಿ ಸರ್ಕಾರದೊಂದಿಗೆ ಮಾತುಕತೆ ನಡೆಸಿದ್ದು, ರೈತರ ಭೂ ಸ್ವಾಧೀನ ಪ್ರಕ್ರಿಯೆ ವಿಚಾರದಲ್ಲಿ ದೊಡ್ಡಬಳ್ಳಾಪುರ ಹಾಗೂ ಕೊರಟಗೆರೆ ಭಾಗಗಳಲ್ಲಿ ಸಬ್ ರಿಜಿಸ್ಟ್ರಾರ್ ರೇಟ್ ವ್ಯತ್ಯಾಸಗಳಿಂದ ರೈತರು ಆ ಭಾಗದ ರೈತರ ಹಣಕ್ಕಿಂತ ಕಡಿಮೆ ಹಣವನ್ನು ನಾವು ತೆಗೆದುಕೊಳ್ಳಬಾರದು ಎಂದು ಮನಸ್ಥಿತಿಯಲ್ಲಿದ್ದ ರೈತರಿಗೆ ಬಫರ್ ಡ್ಯಾಮ್ ಸಾಮರ್ಥ್ಯ ಮಟ್ಟ ಕುಗ್ಗಿಸಿ ನಿಯೋಜಿತ ಸ್ಥಳದಲ್ಲಿಯೇ ಕಾಮಗಾರಿ ಪ್ರಾರಂಭಿಸಲು ಸರ್ಕಾರ ನಿರ್ಧಾರ ತೆಗೆದುಕೊಂಡಿರುವುದು ಸ್ವಾಗತಾರ್ಹ ಎಂದು ಉಪಮುಖ್ಯಮಂತ್ರಿಗಳು ಹಾಗೂ ಶಾಸಕರಾದ ಡಾ.ಜಿ. ಪರಮೇಶ್ವರ ತಿಳಿಸಿದ್ದಾರೆ.
ರೈತರ ಜೀವನಾಡಿಗಳಾದ ಶಾಶ್ವತ ನೀರಾವರಿ ಯೋಜನೆಗಳ ಅನುಷ್ಠಾನಗಳ ವಿಚಾರದಲ್ಲಿ ಸರ್ಕಾರಗಳಿಗೆ ಬದ್ಧತೆ ಇರಬೇಕು, ಇಲ್ಲಿನ ರೈತರಿಗೆ ಭೂ ಸ್ವಾಧೀನ ಪ್ರಕ್ರಿಯೆ ವಿಚಾರದಲ್ಲಿ ಉತ್ತಮವಾಗಿ ಸ್ಪಂದಿಸಿದ್ದರೆ ರೈತರು ಯಾವುದೇ ವಿರೋಧ ವ್ಯಕ್ತಪಡಿಸುತ್ತಿರಲಿಲ್ಲ, ಒಂದೇ ಸ್ಥಳಕ್ಕೆ ಎರಡೆರಡು ದರ ನಿಗದಿ ಮಾಡಿದರೆ ಯಾವ ನ್ಯಾಯ? ಅನಾವಶ್ಯಕ ವೆಚ್ಚಗಳಿಗೆ ಸರ್ಕಾರ ಕಡಿವಾಣ ಹಾಕಿ ಇಂತಹ ಉತ್ತಮ ನೀರಾವರಿ ಯೋಜನೆಗಳಿಗೆ ಸರ್ಕಾರ ಹಣ ಬಿಡುಗಡೆ ಮಾಡದಿರುವುದು ದುರದೃಷ್ಟಕರ, ಆದರೂ ಕೊರಟಗೆರೆ ತಾಲೂಕಿನಲ್ಲಿ ರೈತರಲ್ಲಿ ಸ್ವಲ್ಪಮಟ್ಟಿನ ತೃಪ್ತಿ ತಂದಿದ್ದು ತಾಲೂಕಿನ ಎಲ್ಲಾ ಕೆರೆಗಳು ನೀರು ಹಾಯಿಸುವಂತ ಕೆಲಸವಾಗಬೇಕು ಎಂದು ತಾಲ್ಲೂಕು ರೈತ ಸಂಘದ ಅಧ್ಯಕ್ಷ ಸಿದ್ಧರಾಜು ತಿಳಿಸಿದರು.
ವರದಿ: ಮಂಜುಸ್ವಾಮಿ.ಎಂ.ಎನ್., ಕೊರಟಗೆರೆ.
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/L4EDpegaxhmLTkOnd50sAy