ಕೊರಟಗೆರೆ : ಹೊಸದಾಗಿ ನಿರ್ಮಿಸಿರುವ ಕಟ್ಟಡ ಎಷ್ಟು ಸುಂದರವಾಗಿದಿಯೋ ಅಷ್ಟೇ ಸುಂದರವಾಗಿ ಇಲ್ಲಿನ ಅಧಿಕಾರಿಗಳು ಕೆಲಸ ಮಾಡಬೇಕು ಎಂದು ಮಾಜಿ ಉಪಮುಖ್ಯಮಂತ್ರಿ ಹಾಗೂ ಶಾಸಕ ಡಾ.ಜಿ. ಪರಮೇಶ್ವರ್ ಹೇಳಿದರು.
ಅವರು ತಾಲ್ಲೂಕಿನ ಅಕ್ಕಿರಾಂಪುರ ಗ್ರಾಮದಲ್ಲಿ ನೂತನ ಗ್ರಾಮ ಪಂಚಾಯತ್ ಕಟ್ಟಡವನ್ನು ಉದ್ಘಾಟಿಸಿ ಮಾತನಾಡಿ ಇಲ್ಲಿ ಯಾವುದೇ ರೀತಿಯ ಭ್ರಷ್ಟಾಚಾರ ನಡೆಯಬಾರದು, ಗ್ರಾಮಸ್ಥರಿಗೆ ಮನೆ ಮುಂಜೂರು ಮಾಡುವಾಗ ಹಣ ತೆಗೆದುಕೊಳ್ಳಬಾರದು ಕಷ್ಟ ಎಂದು ನಿಮ್ಮ ಬಳಿ ಬಂದಾಗ ಅವರಿಗೆ ಸರಿಯಾದ ರೀತಿಯಲ್ಲಿ ಕೆಲಸ ಮಾಡಿಕೊಡುವುದು ನಿಮ್ಮ ಜವಾಬ್ದಾರಿಯಾಗಿದೆ.
ಕಳೆದ 5 ವರ್ಷಗಳಲ್ಲಿ ಅಕ್ಕಿರಾಂಪುರ ಗ್ರಾಮ ಪಂಚಾಯತ್ ನಲ್ಲಿ 6 ಕೋಟಿ 42 ಲಕ್ಷದ ಕಾಮಗಾರಿಗಳನ್ನು ಮಾಡಿದ್ದೇವೆ. ಮುಖ್ಯಮಂತ್ರಿಯವರ ಬಳಿ ಮಾತನಾಡಿ ವಿಶೇಷವಾಗಿ ಕೊರಟಗೆರೆ ಕ್ಷೇತ್ರಕ್ಕೆ 30 ಕೋಟಿ ಹಣವನ್ನು ತಂದು ಯಾವುದೇ ಪಕ್ಷ ಭೇದವಿಲ್ಲದೆ 36 ಪಂಚಾಯಿತಿಗಳಿಗೂ ಭೇಟಿ ಕೊಟ್ಟು ಪ್ರತ್ಯೇಕವಾಗಿ 50 ರಿಂದ 60 ಲಕ್ಷ ಹಣವನ್ನು ಕೊಟ್ಟಿದ್ದೇವೆ.
ಕೊರಟಗೆರೆ ತಾಲ್ಲೂಕಿನ ಸಮಗ್ರ ಅಭಿವೃದ್ಧಿಗಾಗಿ ಸುಮಾರು 2500 ಕೋಟಿ ಹಣವನ್ನು ಖರ್ಚು ಮಾಡಿದ್ದೇವೆ ಯಾವ ಯಾವ ಗ್ರಾಮಗಳಲ್ಲಿ ಕೆಲಸ ಮಾಡಿದ್ದೇನೆ ಎಂದು ಲೆಕ್ಕ ಕೊಡಲು ಪುಸ್ತಕವನ್ನು ನಿಮ್ಮ ಮನೆ ಮನೆಗೆ ತಲುಪಿಸುತ್ತೇನೆ ಎಂದರು.
ಗ್ರಾಮೀಣಭಿವೃದ್ಧಿ ಹಾಗೂ ಪಂಚಾಯತ್ ರಾಜ್ ಇಲಾಖೆಯ ಸರ್ಕಾರದ ಮುಖ್ಯ ಕಾರ್ಯದರ್ಶಿ ಎಲ್ ಕೆ ಅತಿಕ್ ಮಾತನಾಡಿ ಅಕ್ಕಿರಾಂಪುರ ಸ್ವಗ್ರಾಮದಲ್ಲಿ ಬೆಳೆದು ಇಲ್ಲೇ ವಿದ್ಯಾಭ್ಯಾಸ ಮಾಡಿ ಇಂದು ಸರ್ಕಾರದಲ್ಲಿ ಕೆಲಸ ಮಾಡುತ್ತಿದ್ದೇನೆ ಸುಮಾರು 2 ವರ್ಷಗಳ ಹಿಂದೆ ನಾನು ಇಲ್ಲಿಗೆ ಬಂದಾಗ ನಮ್ಮ ಪಂಚಾಯಿತಿ ಶಿಥಿಲವಾಗಿದ್ದನ್ನು ಗಮನಿಸಿದ್ದೆ, ಇಲ್ಲಿನ ಗ್ರಾಮಸ್ಥರ ಬೇಡಿಕೆಯಂತೆ ನಮ್ಮ ಗ್ರಾಮಕ್ಕೆ ನಾನು ಏನಾದರೂ ಮಾಡಲೇಬೇಕು ಎನ್ನುವ ಹಂಬಲದಿಂದ ನಾನು ಪ್ರಾಮಾಣಿಕವಾಗಿ ಪ್ರಯತ್ನ ಮಾಡಿದ್ದೇನೆ ಇಂದು ನಾನು ಸರ್ಕಾರದ ದೊಡ್ಡ ಹುದ್ದೆಯಲ್ಲಿದ್ದರು ಸಹ ಕೂಲಿ ಕಾರ್ಮಿಕರು ಕೆಲಸ ಮಾಡುವುದನ್ನು ನಾನು ಹತ್ತಿರದಿಂದ ಗಮನಿಸಿದ್ದೇನೆ ಹೀಗಾಗಿ ಇಲ್ಲಿನ ಎಲ್ಲಾ ಅಧಿಕಾರಿಗಳು, ಅಧ್ಯಕ್ಷರು, ಸದಸ್ಯರುಗಳು ಪಾರದರ್ಶಕತೆಯಿಂದ ಕೆಲಸ ಮಾಡಬೇಕು. ಇಲ್ಲಿನ ಗ್ರಾಮಸ್ಥರು ಈ ಗ್ರಾಮದ ಅಭಿವೃದ್ಧಿಗೆ ಕೈ ಜೋಡಿಸಬೇಕು ಎಂದು ಹೇಳಿದರು.
ಸೇತುವೆ ನಿರ್ಮಾಣಕ್ಕಾಗಿ ಕೇಂದ್ರ ಸರ್ಕಾರದಿಂದ 50 ಕೋಟಿ 48 ಲಕ್ಷ ಹಣ ಬಿಡುಗಡೆ:-
ಈ ತಾಲ್ಲೂಕಿನಲ್ಲಿ ಅತೀ ಹೆಚ್ಚು ಮಳೆಯಾಗಿ ಹೊಲ ಗದ್ದೆಗಳಲ್ಲಿ ನೀರು ನಿಂತು ಬೆಳೆಗಳೆಲ್ಲ ಹಾಳಾಗಿದ್ದವು ಜೊತೆಗೆ ಸುಮಾರು ಕಡೆ ಸೇತುವೆಗಳು ಕುಸಿದಿದ್ದವು. ಈ ವಿಚಾರವಾಗಿ ಕೇಂದ್ರ ಸರ್ಕಾರಕ್ಕೆ ಪ್ರಸ್ತಾವನೆಯನ್ನು ಸಲ್ಲಿಸಿದ್ದೆ ಆದ ಕಾರಣ ಸರ್ಕಾರ ನನ್ನ ಮನವಿಗೆ ಸ್ಪಂದಿಸಿ 50 ಕೋಟಿ 48 ಲಕ್ಷ ಹಣವನ್ನು ಬಿಡುಗಡೆ ಮಾಡಿದೆ. ಆದಷ್ಟು ಬೇಗ ಸೇತುವೆ ನಿರ್ಮಾಣ ಕಾಮಗಾರಿಗಳನ್ನು ಶುರು ಮಾಡುತ್ತೇವೆ.
ಡಾ ಜಿ ಪರಮೇಶ್ವರ್, ಮಾಜಿ ಉಪಮುಖ್ಯಮಂತ್ರಿ ಹಾಗೂ ಶಾಸಕ.ನೂತನ ಉದ್ಘಾಟನ ಕಾರ್ಯಕ್ರಮದಲ್ಲಿ ಜಿ. ಪಂ ನ ಮುಖ್ಯ ಕಾರ್ಯ ನಿರ್ವಾಹಕ ಅಧಿಕಾರಿ ಕೆ. ವಿದ್ಯಾಕುಮಾರಿ, ಉಪಕಾರ್ಯದರ್ಶಿ ಅತಿಕ್ ಪಾಷಾ, ತಾಲ್ಲೂಕು ಕಾರ್ಯ ನಿರ್ವಾಹಕ ಅಧಿಕಾರಿ ಡಾ. ಡಿ ದೊಡ್ಡ ಸಿದ್ದಯ್ಯ, ಕೃಷಿ ಇಲಾಖೆ ನಾಗರಾಜು, ಪಿ ಆರ್ ಇ ಡಿ ಕಾರ್ಯ ಪಾಲಕ ಅಭಿಯಂತರ ದಯಾನಂದ ಆರ್, ಸಹಾಯಕ ಕಾರ್ಯ ಪಾಲಕ ರವಿಕುಮಾರ್, ಗ್ರಾ, ಕು. ನೀ ವಿಭಾಗದ ಇಂಜಿನಿಯರ್ ಕೀರ್ತಿನಾಯಕ್, ಗ್ರಾ. ಪಂ ಅಧಿಕಾರಿ ಪೃಥ್ವಿಭ, ಗ್ರಾ ಪಂ ಅಧ್ಯಕ್ಷೆ ಅಂಜಿನಮ್ಮ, ಉಪಾಧ್ಯಕ್ಷೆ ಸುಶೀಲಮ್ಮ, ಡಿಸಿಸಿ ಬ್ಯಾಂಕ್ ನಿರ್ದೇಶಕ ಹನುಮಾನ್, ಪ ಪಂ ಸದಸ್ಯ ಎ ಡಿ ಬಲರಾಮಯ್ಯ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಅಶ್ವಥ್ ನಾರಾಯಣ ಸೇರಿದಂತೆ ಇತರರು ಹಾಜರಿದ್ದರು.
ವರದಿ: ಮಂಜುಸ್ವಾಮಿ ಎಂ ಎನ್., ಕೊರಟಗೆರೆ
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/DsJTbZnfQe5FbEJqOlbyUL
ಯೂಟ್ಯೂಬ್ ಚಾನೆಲ್ ಸಬ್ಸ್ ಕ್ರೈಬ್ ಆಗಿ: https://www.youtube.com/channel/UCtrQuDOToxHu8dzMaHjoYXA