ನಮ್ಮತುಮಕೂರು/ಗುಬ್ಬಿ: ಇತ್ತೀಚೆಗಷ್ಟೇ ತುಮಕೂರು ತಾಲೂಕು ಮಲ್ಲೇನಹಳ್ಳಿಯಲ್ಲಿ ಊರಿನ ಹೊರಗಡೆ ಇಡಲಾಗಿದ್ದ ಬಾಣಂತಿಯ ಮಗು ಅನಾರೋಗ್ಯ ಪೀಡಿತವಾಗಿ ಸಾವನ್ನಪ್ಪಿದ ಘಟನೆ ನಡೆದಿದ್ದರೂ ಇನ್ನೂ ಕೂಡ ಗೊಲ್ಲ ಸಮುದಾಯದಲ್ಲಿ ಜಾಗೃತಿ ಮೂಡಿಲ್ಲ, ಇದೀಗ ಇಂತಹದ್ದೇ ಮತ್ತೊಂದು ಪ್ರಕರಣ ಬಯಲಿಗೆ ಬಂದಿದೆ.
ಗುಬ್ಬಿಯಿಂದ ಸುಮಾರು 6 ಕಿ.ಮೀ. ದೂರದಲ್ಲಿರುವ ವರದೇವನಹಳ್ಳಿ ಹಟ್ಟಿ ಗ್ರಾಮದಲ್ಲಿ ಬಾಣಂತಿ ಮತ್ತು ಮಗುವನ್ನು ಗ್ರಾಮದ ಹೊರಗೆ ಗುಡಿಸಲಿನಲ್ಲಿ ಅಮಾನವೀಯ ಸ್ಥಿತಿಯಲ್ಲಿ ಯಾವುದೇ ಮೂಲಭೂತ ಸೌಕರ್ಯವಿಲ್ಲದ ಗೂಡಿನಂತಹ ಗುಡಿಸಲಿನಲ್ಲಿಟ್ಟ ಘಟನೆ ನಡೆದಿದೆ.
ಈ ಬಗ್ಗೆ ಬಂದ ಖಚಿತ ಮಾಹಿತಿಯನ್ನಾಧರಿಸಿ ಗುಬ್ಬಿಯ ಹಿರಿಯ ಸಿವಿಲ್ ನ್ಯಾಯಾಧೀಶರಾದ ಉಂಡಿ ಮಂಜುಳ ಶಿವಪ್ಪ ಹಾಗೂ ನ್ಯಾಯಾಲಯದ ಸಿಬ್ಬಂದಿ, ಆರಕ್ಷಕರು, ವಕೀಲರುಗಳ ಸಹಯೋಗದೊಂದಿಗೆ ಸ್ಥಳಕ್ಕೆ ತೆರಳಿ ಮಗು ಮತ್ತು ಬಾಣಂತಿಯನ್ನು ಸುರಕ್ಷಿತವಾಗಿ ಅವರ ಮನೆಗೆ ಕರೆತಂದು ಬಿಟ್ಟು ಅನಿಷ್ಠ ಪದ್ಧತಿ ಬಗ್ಗೆ ಜಾಗೃತಿ ಮೂಡಿಸಲಾಯಿತು.
ಇನ್ನು ಯಾರು ಕೂಡ ಈ ತರಹದ ಅನಿಷ್ಠ ಪದ್ಧತಿಯನ್ನು ಆಚರಿಸದಂತೆ ತಿಳಿಹೇಳಿದ ನ್ಯಾಯಾಧೀಶರು, ಸಂವಿಧಾನಾತ್ಮಕವಾಗಿ ಮಗು ಹಾಗೂ ಬಾಣಂತಿ ಬದುಕಬೇಕು ಎಂದು ಗ್ರಾಮಸ್ಥರಿಗೆ ಜಾಗೃತಿ ಮೂಡಿಸಿದರಲ್ಲದೇ, ಮತ್ತೆ ಇದೇ ಇಂತಹದ್ದೇ ಘಟನೆಗಳಾದರೆ ಕಾನೂನು ಕ್ರಮ ಕೈಗೊಳ್ಳುವುದಾಗಿ ಎಚ್ಚರಿಸಿದರು.
ಈ ವೇಳೆ ಗುಬ್ಬಿ ತಾಲೂಕು ವಕೀಲರ ಸಂಘದ ಜಂಟಿ ಕಾರ್ಯದರ್ಶಿಗಳಾದ ನಂದೀಶ್ ಬಿ.ವಿ., ವಕೀಲರಾದ ಎಂ.ಪಿ.ರವೀಶ್, ಸಿದ್ದಲಿಂಗಯ್ಯ ಮತ್ತು ನ್ಯಾಯಾಲಯದ ಸಿಬ್ಬಂದಿ ಹಾಗೂ ಪೊಲೀಸ್ ಸಿಬ್ಬಂದಿ ವರ್ಗ ಹಾಜರಿದ್ದರು.
ವರದಿ: ಗಣೇಶ್ ಮಾರನಹಳ್ಳಿ