ವಿಜಯದಶಮಿ ಹಿನ್ನೆಲೆಯಲ್ಲಿ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅರುಣಾಚಲ ಪ್ರದೇಶದ ತವಾಂಗ್ ಸೆಕ್ಟರ್ ನಲ್ಲಿ ಶಸ್ತ್ರಾಸ್ತ್ರಗಳಿಗೆ ಪೂಜೆ ನೆರವೇರಿಸುವ ಮೂಲಕ ಸೈನಿಕರೊಂದಿಗೆ ಹಬ್ಬವನ್ನು ಆಚರಿಸಿದರು.
ಈ ವೇಳೆ ಮಾತನಾಡಿದ ರಾಜನಾಥ್ ಸಿಂಗ್, 4 ವರ್ಷಗಳ ಹಿಂದೆ ಸೈನಿಕರೊಂದಿಗೆ ವಿಜಯದಶಮಿ ಆಚರಿಸಲು ಯೋಜನೆ ಹಾಕಿಕೊಂಡಿದ್ದೆ ಅದರಂತೆ ಇಂದು ನಿಮ್ಮೊಡನೆ ಹಬ್ಬ ಆಚರಿಸುತ್ತಿರುವುದಕ್ಕೆ ತುಂಬಾ ಖುಷಿಯಿದೆ. ಕಷ್ಟದ ಸಂದರ್ಭಗಳಲ್ಲಿ ದೇಶದ ಭದ್ರತೆಯ ಬಗ್ಗೆ ನೀವು ವಹಿಸುವ ಜವಾಬ್ದಾರಿ ಬಗ್ಗೆ ನನಗೆ ಹೆಮ್ಮೆ ಇದೆ ಎಂದರು.
ಅಂತರಾಷ್ಟ್ರೀಯ ಮಟ್ಟದಲ್ಲಿ ಭಾರತದ ಪ್ರತಿಷ್ಠೆ ಹೆಚ್ಚುತ್ತಿದೆ. ಸೈನಿಕರು ದೇಶದ ಗಡಿಯನ್ನು ಸುರಕ್ಷಿತವಾಗಿ ಇಡದಿದ್ದರೆ ಭಾರತ ವಿಶ್ವದಲ್ಲಿ ಇಂದು ಈ ಮಟ್ಟಕ್ಕೆ ಬರುತ್ತಿರಲಿಲ್ಲ ಎಂಬ ಮಾತನ್ನು ಈ ಸಂದರ್ಭದಲ್ಲಿ ಹೇಳಿದರು. ಹಿಂದಿನ ಭಾರತ ಹಲವು ದೇಶಗಳಿಂದ ಶಸ್ತ್ರಾಸ್ತ್ರಗಳನ್ನು ಖರೀದಿಸುತ್ತಿದ್ದರು…ಆದರೆ ಇಂದು 20 ಸಾವಿರ ಕೋಟಿಗೂ ರೂ. ಹೆಚ್ಚು ಮೌಲ್ಯದ ಶಸ್ತ್ರಾಸ್ತ್ರಗಳನ್ನು ರಫ್ತು ಮಾಡುತ್ತಿರುವುದಾಗಿ ತಿಳಿಸಿದರು.
ತವಾಂಗ್ ತಲುಪುವ ಮುನ್ನ ರಕ್ಷಣಾ ಸಚಿವರು ಅಸ್ಸಾಂನ ತೇಜ್ ಪುರದಲ್ಲಿ ಸೈನಿಕರೊಂದಿಗೆ ಸಂವಾದ ನಡೆಸಿದರು. ಎಲ್ಲಾ ಶ್ರೇಣಿಯ ಸೈನಿಕರು ಕುಟುಂಬ ಸದಸ್ಯರಂತೆ ಒಟ್ಟಿಗೆ ಊಟ ಮಾಡುವ ಪರಿಕಲ್ಪನೆಯನ್ನು ಮೆಚ್ಚಿದರು. ವಿವಿಧ ರಾಜ್ಯಗಳು ಮತ್ತು ಧರ್ಮಗಳಿಂದ ಬಂದಿದ್ದರೂ, ಒಂದೇ ಬ್ಯಾರಕ್ ಗಳು ಮತ್ತು ಘಟಕಗಳಲ್ಲಿ ಒಟ್ಟಿಗೆ ಕೆಲಸ ಮಾಡುವುದು… ಭಾರತೀಯ ಸೇನೆಯ ಏಕತೆ ಮತ್ತು ಸಹೋದರತ್ವಕ್ಕೆ ನಿಜವಾದ ಉದಾಹರಣೆಯಾಗಿದೆ ಎಂದು ಒತ್ತಿ ಹೇಳಿದರು.


