ತೆಲಂಗಾಣ ಮುಖ್ಯಮಂತ್ರಿ ಚಂದ್ರಶೇಖರ್ ರಾವ್ ನೇತೃತ್ವದ ಭಾರತ್ ರಾಷ್ಟ್ರ ಸಮಿತಿ ಸರ್ಕಾರಕ್ಕೆ ಹೊಡೆತ ನೀಡಿದೆ. ರೈತರಿಗೆ ಆರ್ಥಿಕ ನೆರವು ನೀಡುವುದನ್ನು ಮುಂದುವರಿಸಲು ಸರ್ಕಾರ ನೀಡಿದ್ದ ಅನುಮತಿಯನ್ನು ಚುನಾವಣಾ ಆಯೋಗ ಹಿಂಪಡೆದಿದೆ. ರಾವ್ ಅವರ ಸಂಪುಟದಲ್ಲಿರುವ ಹಣಕಾಸು ಸಚಿವರು ಚುನಾವಣಾ ನೀತಿ ಸಂಹಿತೆ ಉಲ್ಲಂಘಿಸಿರುವುದು ಪತ್ತೆಯಾದ ಹಿನ್ನೆಲೆಯಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ.
‘ಋತು ಬಂಧು’ ರಬಿ ರೈತರಿಗೆ ಆರ್ಥಿಕ ನೆರವು ವಿತರಿಸುವ ಯೋಜನೆಯಾಗಿದೆ. ನವೆಂಬರ್ 28 ರ ಮೊದಲು ಯೋಜನೆಯಡಿ ಮೊತ್ತವನ್ನು ವಿತರಿಸಲು ಇಸಿ ರಾಜ್ಯ ಸರ್ಕಾರಕ್ಕೆ ಅನುಮತಿ ನೀಡಿತ್ತು. ನವೆಂಬರ್ 30 ರಂದು ವಿಧಾನಸಭೆ ಚುನಾವಣೆ ನಡೆಯಲಿರುವ ಕಾರಣ ನೀತಿ ಸಂಹಿತೆ ಅವಧಿಯಲ್ಲಿ ಯೋಜನೆ ಮುಂದುವರಿಸಲು ಆಯೋಗ ಷರತ್ತುಗಳನ್ನು ಪ್ರಸ್ತಾಪಿಸಿತ್ತು. ನಿಧಿಯ ವಿತರಣೆಯನ್ನು ಜಾಹೀರಾತು ಮಾಡಬಾರದು ಎಂಬುದು ಷರತ್ತುಗಳಲ್ಲಿ ಪ್ರಮುಖವಾಗಿತ್ತು.
ಆದರೆ ರೈತರಿಗೆ ಆರ್ಥಿಕ ನೆರವು ವಿತರಣೆಗೆ ಸಂಬಂಧಿಸಿದಂತೆ ಹಣಕಾಸು ಸಚಿವರು ಬಹಿರಂಗ ಘೋಷಣೆ ಮಾಡಿದ್ದರು. ಸೋಮವಾರದಿಂದ ಹಣ ವಿತರಣೆ ಆರಂಭವಾಗಲಿದೆ. ಬೆಳಗಿನ ಉಪಾಹಾರ, ಚಹಾ ಮುಗಿಸುವ ಮುನ್ನವೇ ರೈತರ ಖಾತೆಗೆ ಹಣ ತಲುಪಲಿದೆ ಎಂಬುದು ಸಚಿವರ ಪ್ರಕಟಣೆಯಾಗಿದೆ. ನಂತರ ಕಾಂಗ್ರೆಸ್ ಚುನಾವಣಾ ಆಯೋಗದ ಮೊರೆ ಹೋಗಿತ್ತು.
ಚುನಾವಣಾ ಆಯೋಗದ ಅನುಮತಿಯನ್ನು ಬಿಆರ್ ಎಸ್ ನಾಯಕರು ಮತದಾರರ ಮೇಲೆ ಪ್ರಭಾವ ಬೀರುವ ಸಾಧನವಾಗಿ ಬಳಸುತ್ತಿದ್ದಾರೆ ಎಂದು ಸಿಇಸಿ ರಾಜೀವ್ ಕುಮಾರ್ ಗೆ ಬರೆದ ಪತ್ರದಲ್ಲಿ ಕಾಂಗ್ರೆಸ್ ಆರೋಪಿಸಿದೆ. ಈ ಹಿನ್ನೆಲೆಯಲ್ಲಿ ರೈತರಿಗೆ ಧನಸಹಾಯ ವಿತರಣೆಯನ್ನು ಸ್ಥಗಿತಗೊಳಿಸಿ ಚುನಾವಣಾ ಆಯೋಗ ಆದೇಶಿಸಿದೆ.


