ತುಮಕೂರು: ಬಿಜೆಪಿ ಪಕ್ಷಕ್ಕೆ ಪುನರ್ ಸೇರ್ಪಡೆಗೊಂಡಿರುವ ಬಿಜೆಪಿ ಮುಖಂಡ ಜಗದೀಶ್ ಶೆಟ್ಟರ್ ಅವರು ಇಂದು ತುಮಕೂರಿನ ಸಿದ್ದಗಂಗಾ ಮಠಕ್ಕೆ ಭೇಟಿ ನೀಡಿ ಶ್ರೀ ಶಿವಕುಮಾರ ಸ್ವಾಮೀಜಿಯವರ ಗದ್ದುಗೆ ದರ್ಶನ ಪಡೆದರು. ಅಲ್ಲದೆ ವಿಶೇಷ ಪೂಜೆಯನ್ನು ಕೂಡ ಸಲ್ಲಿಸಿದರು.
ಇದೇ ವೇಳೆ ಪತ್ರಕರ್ತರೊಂದಿಗೆ ಮಾತನಾಡಿದ ಅವರು, ಈಗಾಗಲೇ ಬಿಜೆಪಿ ಪುನರ್ ಸೇರ್ಪಡೆ ಆಗಿದ್ದೇನೆ, ಅಲ್ಲದೆ ನೆನ್ನೆ ನಡೆದ ರಾಜ್ಯ ಕಾರ್ಯಕಾರಣಿ ಸಭೆಯಲ್ಲಿಯೂ ಕೂಡ ನಾನು ಭಾಗವಹಿಸಿದ್ದೇನೆ. ಸಿದ್ದಗಂಗಾ ಮಠಕ್ಕೆ ಭೇಟಿ ನೀಡಿ ಸ್ವಾಮೀಜಿಗಳ ಆಶೀರ್ವಾದವನ್ನು ಪಡೆಯಲು ಬಂದಿದ್ದೇನೆ ಎಂದು ತಿಳಿಸಿದರು.
ರಾಜ್ಯದ ಎಲ್ಲಾ ಬಿಜೆಪಿ ಕಾರ್ಯಕರ್ತರು ಹಾಗೂ ಮುಖಂಡರು ನಾನು ಬಿಜೆಪಿ ಪುನರ್ ಸೇರ್ಪಡೆ ನಿರ್ಧಾರದ ಕುರಿತು ಆತ್ಮೀಯವಾಗಿ ಹಾಗೂ ಗೌರವಯುತವಾಗಿ ಬರಮಾಡಿಕೊಂಡಿದ್ದಾರೆ ಎಂದು ಹೇಳಿದರು.
ನಾನು ಈ ಹಿಂದೆ ಬಿಜೆಪಿಯನ್ನು ಬಿಟ್ಟು ಹೊರ ಹೋಗಿದ್ದೆ ಆದರೆ ನಂತರ ದಿನಗಳಲ್ಲಿ ನಾನು ಯಾವುದೇ ಜಿಲ್ಲೆಗೆ ಹೋದರು ಕೂಡ ಬಿಜೆಪಿ ಕಾರ್ಯಕರ್ತರು ಹಾಗೂ ಮುಖಂಡರು ನೀವು ಪುನಃ ಬಿಜೆಪಿಗೆ ವಾಪಸ್ ಬರಬೇಕೆಂಬ ಆಶಯವನ್ನು ವ್ಯಕ್ತಪಡಿಸುತ್ತಿದ್ದರು ಎಂದು ಹೇಳಿದರು.
ಇದಕ್ಕೆ ರಾಜ್ಯ ನಾಯಕರು ಕೂಡ ಒತ್ತು ಕೊಟ್ಟಿದ್ದರು, ಅಲ್ಲದೆ ರಾಷ್ಟ್ರೀಯ ನಾಯಕರು ಕೂಡ ಇದಕ್ಕೆ ಕರೆಕೊಟ್ಟಿದ್ದರು. ಅವರೊಂದಿಗೆ ಸುಧೀರ್ಘ ಸಮಾಲೋಚನೆ ನಡೆಸಿ ನಾನು ಬಿಜೆಪಿ ಪಕ್ಷಕ್ಕೆ ಪುನರ್ ಸೇರ್ಪಡೆಗೊಂಡಿದ್ದೇನೆ ಎಂದು ಹೇಳಿದರು.
ಪಕ್ಷ ಸೇರ್ಪಡೆ ಸಂದರ್ಭದಲ್ಲಿ ನಾನು ಯಾವುದೇ ರೀತಿಯ ಬೇಡಿಕೆಯನ್ನು ಇರಿಸಿಲ್ಲ ಆದರೆ ರಾಷ್ಟ್ರೀಯ ನಾಯಕರು ನಿಮ್ಮನ್ನು ಗೌರವಯುತವಾಗಿ ನಿಮಗೆ ಸಿಗಬೇಕಾದ ಸ್ಥಾನವನ್ನು ನೀಡುತ್ತೇವೆ ಎಂಬ ಭರವಸೆಯನ್ನು ನೀಡಿದ್ದಾರೆ ಎಂದು ತಿಳಿಸಿದರು.
ನಾನು ಕಾಂಗ್ರೆಸ್ ನವರ ಮೇಲೆ ಯಾವುದೇ ಆರೋಪಗಳನ್ನು ಮಾಡುವುದಿಲ್ಲ. ನಾನು ನನ್ನ ಮನೆಗೆ ವಾಪಸ್ ಬಂದಿದ್ದೇನೆ ಎಂದು ಹೇಳಿದರು.
ಕಾಂಗ್ರೆಸ್ನವರ ಮೇಲೆ ಯಾವುದೇ ರೀತಿಯ ಆರೋಪಗಳನ್ನು ಮಾಡಿ ನಾನು ಬಂದಿಲ್ಲ ಅವರು ಗೌರವ ಸ್ಥಾನಮಾನಗಳನ್ನು ನೀಡಿಲ್ಲ ಎಂದು ಕೂಡ ಹೇಳುವುದಿಲ್ಲ. ಅವರಿಗೆ ಧನ್ಯವಾದಗಳು ಹೇಳಿಯೇ ಬಂದಿದ್ದೇನೆ ಎಂದು ಹೇಳಿದರು.
ಕಳೆದ 35ರಿಂದ 40 ವರ್ಷಗಳಿಂದ ಬಿಜೆಪಿ ಪಕ್ಷವನ್ನು ಸಂಘಟನೆ ಮೂಲಕ ಕಟ್ಟಿದ್ದೇನೆ ಎರಡು ಬಾರಿ ವಿಧಾನಸಭೆ ವಿರೋಧ ಪಕ್ಷದ ನಾಯಕನಾಗಿ 10 ವರ್ಷಗಳ ಕಾಲ ರಾಜ್ಯವನ್ನು ಸುತ್ತಿದ್ದೇನೆ. ಹೀಗಾಗಿ ಪಕ್ಷದ ಕಾರ್ಯಕರ್ತರ ಆಶಯಗಳಿಗೆ ಸ್ಪಂದಿಸಿ ಪುನಃ ಪಕ್ಷವನ್ನು ಸೇರ್ಪಡೆಗೊಂಡಿದ್ದೇನೆ ಎಂದು ಹೇಳಿದರು.
ನಾನು ಪಕ್ಷ ಸೇರ್ಪಡೆಗೊಳ್ಳುವ ಕುರಿತು ಸಮಾಲೋಚನೆ ನಡೆಸುವ ಸಂದರ್ಭದಲ್ಲಿ ತುರ್ತಾಗಿ ರಾಷ್ಟ್ರೀಯ ನಾಯಕರು ಪಕ್ಷಕ್ಕೆ ಸೇರ್ಪಡೆಗೊಳಿಸಿಕೊಂಡಿದ್ದಾರೆ. ಸಚಿವ ಪ್ರಹ್ಲಾದ ಜೋಶಿ ಅವರು ಇಂದು ಈ ಕುರಿತಂತೆ ವಿಷಯವನ್ನು ಪ್ರಸ್ತಾಪಿಸಿದ್ದಾರೆ ಯಾವುದೇ ರೀತಿಯ ಮುನಿಸಿಲ್ಲ ಎಂದು ತಿಳಿಸಿದರು.
ಲಕ್ಷ್ಮಣ ಸವದಿ ಅವರ ಜೊತೆ ಯಾವುದೇ ರೀತಿಯ ಸಂಪರ್ಕ ಹೊಂದಿಲ್ಲ ಅವರು ಬಿಜೆಪಿ ಪಕ್ಷಕ್ಕೆ ಬರುವಂತಹ ಕುರಿತು ಮಾಹಿತಿ ಇಲ್ಲ ಎಂದು ಹೇಳಿದರು.
ಪ್ರಧಾನಿ ಮೋದಿ ಅವರು ಮತ್ತೊಮ್ಮೆ ಪ್ರಧಾನಿಯಾಗಿ ಅಧಿಕಾರಕ್ಕೆ ಏರಬೇಕೆಂಬ ಉದ್ದೇಶದಿಂದ ಬಿಜೆಪಿ ಪಕ್ಷಕ್ಕೆ ಬಂದಿದ್ದೇನೆ. ಅಲ್ಲದೆ ಅಕಸ್ಮಾತ್ ನನ್ನ ಮೇಲೆ ಐಟಿ ದಾಳಿ ಆಗಬೇಕಿದ್ದಿದ್ದರೆ ಕಾಂಗ್ರೆಸ್ ಪಕ್ಷದಲ್ಲಿ ಇದ್ದಾಗಲೇ ಆಗಬೇಕಿತ್ತು ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.