ರಾಯಚೂರು: ಅಪ್ರಾಪ್ತೆಯೊಬ್ಬಳ ಪ್ರೀತಿಗೆ ಪೋಷಕರು ವಿರೋಧ ವ್ಯಕ್ತಪಡಿಸಿದರೆಂದು ಮನನೊಂದು ಆತ್ಮಹತ್ಯೆಗೆ ಶರಣಾದ ಘಟನೆ ರಾಯಚೂರಿನಲ್ಲಿ ನಡೆದಿದೆ. ಸಂಗೀತಾ(17) ಆತ್ಮಹತ್ಯೆ ಮಾಡಿಕೊಂಡ ಅಪ್ರಾಪ್ತೆ. ರಾಯಚೂರು ಜಿಲ್ಲೆ ಮಾನ್ವಿ ಪಟ್ಟಣದಲ್ಲಿ ಈ ಘಟನೆ ನಡೆದಿದೆ.
ಕಾರ್ ಡ್ರೈವರ್ ಕೃಷ್ಣ ಎಂಬಾತನ ಜೊತೆಗೆ ಪ್ರಣಯದಲ್ಲಿದ್ದ ಸಂಗೀತಾ, ಎರಡು ಬಾರಿ ಪ್ರಿಯಕರನಾದ ಕೃಷ್ಣನ ಜೊತೆಗೆ ಮನೆಬಿಟ್ಟು ಹೋಗಿದ್ದಳು. ಆಗ ಹೆತ್ತವರು ಬುದ್ದಿವಾದ ಹೇಳಿ ಮನೆಗೆ ಕರೆತಂದಿದ್ದರು. ಕೊನೆಗೆ ಮನನೊಂದು ಮನೆಯಲ್ಲಿಯೇ ಸಂಗೀತಾ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.
ಮನೆಯಲ್ಲಿದ್ದ ಸೀರೆಯಿಂದ ನೇಣುಬಿಗಿದುಕೊಂಡು ಸಂಗೀತಾ ಸಾವಿಗೆ ಶರಣಾಗಿದ್ದಾಳೆ. ಈಕೆಯ ಮೃತದೇಹವನ್ನು ಮಾನ್ವಿ ಆಸ್ಪತ್ರೆಗೆ ರವಾನೆ ಮಾಡಲಾಗಿದೆ. ಅಪ್ರಾಪ್ತೆಯ ಅತ್ಯಾಚಾರ ಆರೋಪದ ಪ್ರಕರಣದಲ್ಲಿ ಆರೋಪಿ ಕೃಷ್ಣನನ್ನು ಪೊಲೀಸರು ಬಂಧಿಸಿದ್ದಾರೆ. ಈ ಸಂಬಂಧ ಮಾನ್ವಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.


