ಕೊರಟಗೆರೆ : ಕೊರಟಗೆರೆ ಪಟ್ಟಣದಲ್ಲಿ ಹುಚ್ಚು ನಾಯಿಯ ದಾಳಿಗೆ ಸಾರ್ವಜನಿಕರು ತತ್ತರಿಸಿದ ಘಟನೆ ನಡೆದಿದ್ದು, ಕೇವಲ ಅರ್ಧ ಗಂಟೆಯಲ್ಲಿ ಹುಚ್ಚುನಾಯಿ 15ಕ್ಕೂ ಹೆಚ್ಚು ಜನರ ಮೇಲೆ ದಾಳಿ ನಡೆಸಿದೆ.
ಎದುರು ಸಿಕ್ಕಸಿಕ್ಕವರ ಮೇಲೆ ಹುಚ್ಚುನಾಯಿ ದಾಳಿ ಮಾಡುತ್ತಿದ್ದು, ಹಲವರ ಮೇಲೆ ಮಾರಣಾಂತಿಕವಾಗಿ ದಾಳಿ ಮಾಡಿದೆ. ಹುಚ್ಚನಾಯಿ ಕಡಿತಕ್ಕೆ ಒಳಗಾದವರಿಗೆ ಕೊರಟಗೆರೆ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಮಾರಣಾಂತಿಕ ಗಾಯಗಳಾಗಿರುವವರನ್ನು ತುಮಕೂರಿನ ಆಸ್ಪತ್ರೆಗೆ ರವಾನಿಸಲಾಗಿದೆ.
ಪಟ್ಟಣದ ತುಂಬಾ ಓಡಾಡಿದ ಹುಚ್ಚುನಾಯಿ, ಪಟ್ಟಣದ ಜನರಲ್ಲಿ ಭಯಸೃಷ್ಟಿಸಿದೆ. ಪ್ರತಿ ಬೀದಿಗಳಲ್ಲೂ ನಾಯಿಯ ಹಾವಳಿಯಿಂದ ಸಾರ್ವಜನಿಕರು ಬೆಚ್ಚಿಬಿದ್ದಿದ್ದಾರೆ. ಹುಚ್ಚುನಾಯಿ ಕಚ್ಚಿದ ಪರಿಣಾಮ ಅಜ್ಜಿಯೊಬ್ಬರ ಹಣೆಗೆ ಗಂಭೀರವಾಗಿ ಗಾಯವಾಗಿದೆ.
ಒಂದೆಡೆ ಸಾರ್ವಜನಿಕರು ನಾಯಿಯ ಕಡಿತದಿಂದ ಕಂಗಾಲಾಗಿದ್ದರೆ, ತುರ್ತು ಸಮಯದಲ್ಲಿ ಬರಬೇಕಿದ್ದ 108 ತುರ್ತು ಆಂಬುಲೆನ್ಸ್ ಸಿಬ್ಬಂದಿ ತೀವ್ರ ನಿರ್ಲಕ್ಷ್ಯ ತೋರಿರುವ ಬಗ್ಗೆ ಆಕ್ರೋಶ ವ್ಯಕ್ತವಾಗಿದೆ
ಸುಮಾರು 15 ನಿಮಿಷಗಳ ಕಾಲ 108 ಸಿಬ್ಬಂದಿ ಸಾರ್ವಜನಿಕರ ಕರೆಯನ್ನು ಹೋಲ್ಡ್ ಇಲ್ಲಿ ಇರಿಸಿದ್ದಾರಲ್ಲದೇ, ಆ್ಯಂಬುಲೆನ್ಸ್ ನ ಅವಶ್ಯಕತೆ ಇದೆ ಎಂದು ಕರೆ ಮಾಡಿದವರ ಬಳಿ ಉಡಾಫೆಯಿಂದ ಮಾತನಾಡಿದ್ದಾರೆ ಎಂದು ಆಕ್ರೋಶ ಕೇಳಿ ಬಂದಿದೆ.
ತುರ್ತು ಪರಿಸ್ಥಿತಿಯಲ್ಲಿ ಇಂತಹ ವರ್ತನೆ ತೋರಿದರೆ, ಇಂತಹದ್ದೊಂದು ತುರ್ತು ವ್ಯವಸ್ಥೆ ಇದ್ದೇನು ಪ್ರಯೋಜನ, ಸರ್ಕಾರ, ಆರೋಗ್ಯ ಇಲಾಖೆ ಈ ಬಗ್ಗೆ ಗಮನಹರಿಸಬೇಕು, ಉದ್ಧಟತನ ಪ್ರದರ್ಶಿಸುವ ಸಿಬ್ಬಂದಿ ವಿರುದ್ಧ ಕ್ರಮಕೈಗೊಳ್ಳಬೇಕು ಎಂದು ಸಾರ್ವಜನಿಕರು ಒತ್ತಾಯಿಸಿದರು.
ವರದಿ: ಮಂಜುಸ್ವಾಮಿ ಎಂ.ಎನ್. ಕೊರಟಗೆರೆ
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/G7IPvItJj7JHrybOIW3296