ಕೊರಟಗೆರೆ : ತಾಲ್ಲೂಕು ಆಡಳಿತ ಹಾಗೂ ತಾಲ್ಲೂಕು ವಕ್ಕಲಿಗರ ಸಂಘದ ವತಿಯಿಂದ ನಾಡಪ್ರಭು ಕೆಂಪೇಗೌಡರ 515 ನೇ ಜಯಂತೋತ್ಸವ ಆಚರಣೆ ಮಾಡಲಾಯಿತು.
ತಾಲೂಕು ಪಂಚಾಯತಿಯ ಸಮುದಾಯ ಭವನದಲ್ಲಿ ನಾಡಪ್ರಭು ಕೆಂಪೇಗೌಡ ಜಯಂತಿ ಅದ್ದೂರಿಯಾಗಿ ಆಚರಿಸಲಾಯಿತು.
ತಹಶೀಲ್ದಾರ್ ಮಂಜುನಾಥ್ ಕೆ. ಕೆಂಪೇಗೌಡರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿದರು. ಕಾರ್ಯಕ್ರಮದ ಉದ್ಘಾಟನೆಯನ್ನು ತಾಲೂಕು ವಕ್ಕಲಿಗರ ಸಂಘದ ಅಧ್ಯಕ್ಷರು, ಉಪಾಧ್ಯಕ್ಷರು, ಕಾರ್ಯದರ್ಶಿ ಮತ್ತು ನಿರ್ದೇಶಕರು ದೀಪ ಬೆಳಗುವ ಮೂಲಕ ಉದ್ಘಾಟನೆ ಮಾಡಿದರು.
ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ತಹಶೀಲ್ದಾರ್ ಮಂಜುನಾಥ್ ಕೆ., ರಾಜ್ಯ ಸರ್ಕಾರದ ಆದೇಶದಂತೆ ಗೃಹ ಸಚಿವ ಹಾಗೂ ತುಮಕೂರು ಜಿಲ್ಲಾ ಉಸ್ತುವಾರಿ ಸಚಿವರಾದ ಡಾ.ಜಿ ಪರಮೇಶ್ವರ್ ಅವರ ಮಾರ್ಗದರ್ಶನದಂತೆ ಈ ಬಾರಿ ವಿಭಿನ್ನವಾಗಿ ನಾಡಪ್ರಭು ಕೆಂಪೇಗೌಡರ ಜಯಂತಿಯನ್ನು ಆಚರಿಸಿದ್ದೇವೆ. ತಾಲೂಕಿನ ಸರ್ಕಾರಿ ಶಾಲೆಗಳ ಮಕ್ಕಳಿಂದ ವಿವಿಧ ಸ್ಪರ್ಧೆಗಳನ್ನು ಏರ್ಪಡಿಸಿ ಸ್ಪರ್ಧೆಯಲ್ಲಿ ಆಯ್ಕೆಯಾದ ವಿದ್ಯಾರ್ಥಿಗಳಿಗೆ ಪ್ರಥಮ, ದ್ವಿತೀಯ, ತೃತೀಯ ಬಹುಮಾನ ನೀಡಿ,ಸನ್ಮಾನಿಸಿ, ಕೆಂಪೇಗೌಡರ ಆಶಯದಂತೆ ಅವರ ಜೀವನದ ಮೌಲ್ಯದಾರಿತ ಗುಣಗಳನ್ನು ವಿದ್ಯಾರ್ಥಿ ಜೀವನದಲ್ಲಿ ಅಳವಡಿಸಿಕೊಂಡು ಉತ್ತಮ ವಿದ್ಯಾಭ್ಯಾಸ ಮಾಡಿ ದೇಶಕ್ಕೆ ಮಾದರಿಯಾಗಬೇಕು ಎಂದು ತಿಳಿಸಿದರು.
ಕೊರಟಗೆರೆ ಪಟ್ಟಣದ ಸಮೀಪವಿರುವ ಸರ್ಕಾರಿ ಭೂಮಿಗಳನ್ನ ಪರಿಶೀಲನೆ ಮಾಡಿ ಗೃಹ ಸಚಿವರ ಮಾರ್ಗದರ್ಶನದಂತೆ ತಾಲೂಕು ವಕ್ಕಲಿಗರ ಸಂಘಕ್ಕೆ ಎರಡು ಎಕರೆ ಭೂಮಿಯನ್ನು ಶೀಘ್ರವೇ ಮಂಜೂರು ಮಾಡಿ ಕೊಡಲಾಗುವುದು ಎಂದು ಭರವಸೆ ನೀಡಿದರು.
ನಂತರ ಮಾತನಾಡಿದ ಮಾಜಿ ತಾಲೂಕು ಪಂಚಾಯತ್ ಸದಸ್ಯ ಹಾಗೂ ತಾಲೂಕು ಒಕ್ಕಲಿಗರ ಸಂಘದ ನಿರ್ದೇಶಕ ಎಲ್.ವಿ. ಪ್ರಕಾಶ್, ಕೆಂಪೇಗೌಡರು ಈ ನಾಡಿನ ಆಸ್ತಿ, ಬೆಂಗಳೂರಿಗೆ ಅವರ ಕೊಡುಗೆ ಅಪಾರವಾದುದ್ದು. ಅವರು ಒಂದು ಜಾತಿ ಒಂದು ಧರ್ಮಕ್ಕೆ ಮಾತ್ರ ಸೀಮಿತವಲ್ಲ ಅವರ ಮಾರ್ಗದರ್ಶನದಂತೆ ನಾವೆಲ್ಲರೂ ನಡೆಯಬೇಕು ಎಂದರು.
ಈಗಾಗಲೇ ರಾಜ್ಯ ಮತ್ತು ಕೇಂದ್ರ ಸರ್ಕಾರವು ನಮ್ಮ ನಾಡಪ್ರಭು ಕೆಂಪೇಗೌಡರ 108 ಅಡಿ ಉದ್ದದ ಪುತ್ಥಳಿಯನ್ನು ದೇವನಹಳ್ಳಿ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ನಿರ್ಮಿಸಿ ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ನಾಡಪ್ರಭು ಕೆಂಪೇಗೌಡರ ಹೆಸರನ್ನು ನಾಮಕರಣ ಮಾಡಿದೆ ಎಂದರು.
ನಂತರ ಮಾತನಾಡಿದ ವಕ್ಕಲಿಗರ ಸಂಘದ ನಿರ್ದೇಶಕ ಟಿ.ಸಿ.ಲಕ್ಷ್ಮೀಶ್ ಮಾತನಾಡಿ, ಅತ್ಯಂತ ಅದ್ದೂರಿಯಿಂದ ನಾಡಪ್ರಭು ಕೆಂಪೇಗೌಡರ ಜಯಂತಿಯನ್ನು ತಾಲೂಕು ಆಡಳಿತವು ನಡೆಸಿಕೊಟ್ಟಿದೆ . ಕ್ರಿಯಾಶೀಲ ತಹಶೀಲ್ದಾರ್ ಗೆ ನಮ್ಮ ಸಮುದಾಯದ ಪರವಾಗಿ ವಿಶೇಷವಾದ ಅಭಿನಂದನೆಗಳನ್ನು ತಿಳಿಸುತ್ತೇನೆ ಹಾಗೂ ತಾಲ್ಲೂಕು ವಕ್ಕಲಿಗರ ಸಂಘದ ಸರ್ವತೋಮುಖ ಅಭಿವೃದ್ಧಿಗೆ ಕನಿಷ್ಠ 2 ಎಕರೆ ಭೂಮಿಯನ್ನು ಮಂಜೂರು ಮಾಡಿಕೊಡಬೇಕೆಂದು ತಾಲೂಕು ಆಡಳಿತಕ್ಕೆ ಮನವಿ ಮಾಡಿದರು.
ನಂತರ ಮಾತನಾಡಿದ ವಕ್ಕಲಿಗರ ಸಂಘದ ನಿರ್ದೇಶಕಿ ಜಯಮ್ಮ ಪ್ರತಿ ವರ್ಷವೂ ಕೂಡ ನಾಡಪ್ರಭು ಕೆಂಪೇಗೌಡರ ಜಯಂತಿಯನ್ನು ವಿಭಿನ್ನವಾಗಿ ಆಚರಿಸಿಕೊಂಡು ಬಂದಿದ್ದೇವೆ. ನಾಡಪ್ರಭು ಕೆಂಪೇಗೌಡರ ಜಯಂತೋತ್ಸವದ ಕಾರ್ಯಕ್ರಮದಲ್ಲಿ ಮತ್ತು ಪೂರ್ವಭಾವಿ ಸಭೆಗಳಲ್ಲಿ ನಿವೇಶನಕ್ಕಾಗಿ ಹತ್ತಾರು ಮನವಿ ಸಲ್ಲಿಸಿದ್ದರು ಕೂಡ ಇಲ್ಲಿಯವರೆಗೂ ನಿವೇಶನ ಮಂಜೂರಾಗಿಲ್ಲ ಈಗಾಗಲೇ ಗೃಹ ಸಚಿವರ ಗಮನಕ್ಕೆ ತಂದಿದ್ದು ನಿವೇಶನ ಕೊಡಿಸಿಕೊಡಲು ಡಾ ಜಿ ಪರಮೇಶ್ವರ್ ಅವರು ಮುಂದಾಗಿದ್ದಾರೆ ಅವರ ಮಾರ್ಗದರ್ಶನದಂತೆ ಮಾನ್ಯ ತಹಶೀಲ್ದಾರ್ ರವರು ಕನಿಷ್ಠ 2 ಎಕರೆ ಭೂಮಿಯನ್ನು ಮಂಜೂರು ಮಾಡಿ ಕೊಡಬೇಕು ಎಂದರು.
ಈ ಸಂದರ್ಭದಲ್ಲಿ ತಹಶೀಲ್ದಾರ್ ಮಂಜುನಾಥ್ ಕೆ., ಇ ಒ ಅಪೂರ್ವ ಸಿ, ಬಿಇಒ ನಟರಾಜ್, ತಾಲೂಕು ವಕ್ಕಲಿಗರ ಸಂಘದ ಅಧ್ಯಕ್ಷ ರಂಗ ನರಸಪ್ಪ, ಕಾರ್ಯದರ್ಶಿ ನರಸಿಂಹರಾಜು, ವಕ್ಕಲಿಗರ ಸಂಘದ ನಿರ್ದೇಶಕರುಗಳಾದ ಪುಟ್ಟ ನರಸಪ್ಪ, ಜಯಮ್ಮ,ಕೌಶಿಕ್ , ಈಶ್ವರಪ್ಪ, ಕುಮಾರ್ ,ಎಲ್ ವಿ ಪ್ರಕಾಶ್, ರಮೇಶ್, ಟಿ.ಸಿ.ಲಕ್ಷ್ಮೀಶ್, ಕಾಕಿಮಲ್ಲಯ್ಯ, ಕಾರ್ಯ ನಿರತ ಪತ್ರಕರ್ತರ ಸಂಘದ ಅಧ್ಯಕ್ಷರಾದ ಕೆ.ವಿ.ಪುರುಷೋತ್ತಮ್ ಹಾಗೂ ತಾಲೂಕು ಮಟ್ಟದ ಎಲ್ಲಾ ಅಧಿಕಾರಿಗಳು ಮತ್ತು ಕೆಂಪೇಗೌಡರ ಅಭಿಮಾನಿಗಳು ಹಾಜರಿದ್ದರು.
ವರದಿ: ಮಂಜುಸ್ವಾಮಿ ಎಂ.ಎನ್. ಕೊರಟಗೆರೆ