ಪಾವಗಡ: ತಾಲ್ಲೂಕಿನ ರೈತರ ಸಮಸ್ಯೆಗಳನ್ನು ಬಗೆಹರಿಸುವಂತೆ ಆಗ್ರಹಿಸಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ನೇತೃತ್ವದಲ್ಲಿ ರೈತರು ಪ್ರತಿಭಟಿಸಿದರು.
ಪಟ್ಟಣದ ಪ್ರಮುಖ ರಸ್ತೆಗಳಲ್ಲಿ ಪ್ರತಿಭಟನೆ ನಿರತ ರೈತರು ಟೋಲ್ ಗೇಟ್, ಅಂಬೇಡ್ಕರ್ ವೃತ್ತದ ಬಳಿ ಘೋಷಣೆ ಕೂಗುತ್ತಾ ಗಮನಸೆಳೆದರು.
ಈ ವೇಳೆ ರಾಜ್ಯಾಧ್ಯಕ್ಷ ಬಸವರಾಜಪ್ಪ ಮಾತನಾಡಿ, ತಾಲ್ಲೂಕಿನ ರೈತರಿಗೆ ಆಗುತ್ತಿರುವ ಕೊರತೆಗಳನ್ನು ನೀಗಿಸಬೇಕು…ಬಗರ್ ಹುಕುಂ ಅಡಿ ಅರ್ಜಿ ಸಲ್ಲಿಸಿರುವ ರೈತರಿಗೆ ಶೀಘ್ರ ಸಾಗುವಳಿ ಚೀಟಿ ನೀಡಬೇಕು ಪಹಣಿ ಮಾಡಿಸಿಕೊಡಬೇಕು ಎಂದು ಆಗ್ರಹಪಡಿಸಿದರು.
ಕಂದಾಯ ಇಲಾಖೆಯಿಂದ ಪಹಣಿ ಮಾಡಿಸಿಕೊಂಡ ಜಾಗದಲ್ಲಿ ಅರಣ್ಯ ಇಲಾಖೆಯವರು ಸಸಿಗಳನ್ನು ನೆಟ್ಟು ಅನ್ಯಾಯ ಮಾಡುತ್ತಿದ್ದಾರೆ ಎಂದು ಇದೇ ವೇಳೆ ಅವರು ಆರೋಪಿಸಿದರು.
ನೂತನವಾಗಿ ಆಯ್ಕೆಯಾದ ರೈತ ಸಂಘ ಹಾಗೂ ಹಸಿರು ಸೇನೆ ಜಿಲ್ಲಾಧ್ಯಕ್ಷ ಪೂಜಾರಪ್ಪ ಮಾತನಾಡಿ, ಈ ಹಿಂದೆ ಹಿಂದೆ 25 ಸಾವಿರ ಕೊಟ್ಟರೆ ವಿದ್ಯುತ್ ಸಂಪರ್ಕ ಕಲ್ಪಿಸಿ ಅನುಕೂಲ ಮಾಡುತ್ತಿದ್ದರು. ಆದರೆ ಈಗ 2 ರಿಂದ 6 ಲಕ್ಷದವರೆಗೂ ಹಣ ಕೊಡುವ ಪರಿಸ್ಥಿತಿ ನಿರ್ಮಾಣವಾಗಿದೆ. ಇದರಿಂದ ರೈತರಿಗೆ ಸಂಕಷ್ಟವಾಗಿದೆ. ಕೆರೆ ಕುಂಟೆಗಳ ಕಟ್ಟೆ ಹೊಡೆದೋಗಿ ವರ್ಷ ಉರುಳಿದರು. ಇಲ್ಲಿಯವರೆಗೂ ದುರಸ್ತಿಗೊಳಿಸುವ ಕಾರ್ಯ ನಡೆದಿಲ್ಲ,ನಾಲ್ಕು ಹೋಬಳಿಗಳಲ್ಲೂ ರೈತರಿಗೆ ಬೆಳೆವಿಮೆ ಸಿಕ್ಕಿಲ್ಲ. ತಕ್ಷಣ ಬೆಳೆ ವಿಮೆ ಬಿಡುಗಡೆಗೊಳಿಸಬೇಕು ಎಂದರಲ್ಲದೇ ಕೋರ್ಟ್ ಆದೇಶವಿದ್ದರೂ ರೈತರ ಜಮೀನುಗಳಿಗೆ ಸಾಗಲು ಕೆಲವರು ದಾರಿ ಬಿಡುತ್ತಿಲ್ಲ ಅಧಿಕಾರಿಗಳು ಬಿಡಿಸಬೇಕು ಎಂದು ಒತ್ತಾಯಿಸಿದರು.
ಕಾರ್ಯಾಧ್ಯಕ್ಷ ಶಿವಪ್ಪ, ಪ್ರಧಾನ ಕಾರ್ಯದರ್ಶಿ ಯತಿಕುಮಾರ್, ಪೂಜಾರ್ ಚಿತ್ತಯ್ಯ, ದಯಾನಂದ , ಹನುಮಂತರಾಯಪ್ಪ, ಗುಡುಪಲ್ಲಪ್ಪ, ಯುವ ಘಟಕದ ಬ್ಯಾಡನೂರು ಶಿವು, ನರಸಣ್ಣ, ರಾಮಾಂಜಿ, ನಲಿಗಾನಹಳ್ಳಿ ಮಂಜುನಾಥ್ ಸೇರಿದಂತೆ ಹಲವರು ಇದ್ದರು.
ವರದಿ: ನಂದೀಶ್ ನಾಯ್ಕ, ಪಾವಗಡ
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/G7IPvItJj7JHrybOIW3296
ಯೂಟ್ಯೂಬ್ ಗೆ ಸಬ್ಸ್ ಕ್ರೈಬ್ ಆಗಿ: https://www.youtube.com/channel/UCtrQuDOToxHu8dzMaHjoYXA