ತುಮಕೂರು: ದಸರಾ ಪ್ರಯುಕ್ತ ನಗರದ ಸರ್ಕಾರಿ ಪದವಿ ಪೂರ್ವ ಕಾಲೇಜು ಮೈದಾನದಲ್ಲಿ ಪ್ರತಿಷ್ಠಾಪಿಸಿರುವ ಚಾಮುಂಡೇಶ್ವರಿ ದೇವಿಯ ಆರನೇ ದಿನದ ಕಾತ್ಯಾಯಿನಿ(ಅನ್ನಪೂರ್ಣ) ದೇವಿಗೆ ಶ್ರದ್ಧಾ–ಭಕ್ತಿಯಿಂದ ಜಿಲ್ಲಾಧಿಕಾರಿ ಶುಭ ಕಲ್ಯಾಣ್ ಇಂದು ಪೂಜೆ ಸಲ್ಲಿಸಿದರು.
ಇಂದು ಬೆಳಿಗ್ಗೆ ಸಂಕಲ್ಪದೊಂದಿಗೆ ದೇವಿಯ ಪೂಜೆ ಪ್ರಾರಂಭಿಸಿದ ಅವರು ಪುಣ್ಯಾಹ, ಗಣಪತಿ ಪೂಜೆ, ಪ್ರಧಾನ ಕಳಶಾರಾಧನೆ, ದೇವಿಗೆ ಪಂಚಾಮೃತ ಅಭಿಷೇಕ, ಅಗ್ನಿ ಪ್ರತಿಷ್ಠಾಪನೆಯೊಂದಿಗೆ “ಶ್ರೀ ಮಹಾಲಕ್ಷ್ಮೀ ಹೋಮ”ದಲ್ಲಿ ಪಾಲ್ಗೊಂಡು ಲಘು ಪೂರ್ಣಾಹುತಿ ಸಮರ್ಪಣೆ ಮಾಡಿದರು.
ಜಿಲ್ಲಾ ಪಂಚಾಯತ್ ಮಾಜಿ ಅಧ್ಯಕ್ಷೆ ಶಾಂತಲಾ ರಾಜಣ್ಣ, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಜಿ.ಪ್ರಭು, ಪಾಲಿಕೆ ಆಯುಕ್ತ ಬಿ.ವಿ.ಅಶ್ವಿಜ, ತಹಶೀಲ್ದಾರ್ ರಾಜೇಶ್ವರಿ, ಮುಜರಾಯಿ ತಹಸೀಲ್ದಾರ್ ಸವಿತಾ, ಜಿಲ್ಲಾ ಉಸ್ತುವಾರಿ ಸಚಿವರ ವಿಶೇಷ ಕರ್ತವ್ಯಾಧಿಕಾರಿ ಡಾ.ಕೆ.ನಾಗಣ್ಣ, ಮತ್ತಿತರರು ಪಾಲ್ಗೊಂಡು ಸಾಮೂಹಿಕವಾಗಿ ಪೂಜೆ ಸಲ್ಲಿಸಿದರು.
ನವರಾತ್ರಿಯಲ್ಲಿ ಷಷ್ಠಿಯಂದು ಕಾತ್ಯಾಯಿನಿ ದೇವಿಯನ್ನು ಪೂಜಿಸಲಾಗುವುದು. ಸಿಂಹದ ಮೇಲೆ ಸವಾರಿ ಮಾಡುವ, ಕಮಲದ ಹೂ, ಖಡ್ಗ ಮತ್ತು ಶಿವನ ತ್ರಿಶೂಲ ಸೇರಿದಂತೆ ಬಹು ಆಯುಧಗಳನ್ನು ತನ್ನ ಕೈಗಳಲ್ಲಿ ಹಿಡಿದಿರುವ ಕಾತ್ಯಾಯಿನಿ ದೇವಿಯನ್ನು ಗುರುವಿನ ಅನುಗ್ರಹಕ್ಕಾಗಿಯೂ ಪೂಜಿಸುವುದು ನಂಬಿಕೆ. ಈ ದೇವಿಯನ್ನು ಪೂಜಿಸುವುದರಿಂದ ಅಪಾರ ಸುಖ, ಸಮೃದ್ಧಿ, ಯಶಸ್ಸು ದೊರೆಯಲಿದೆ. ಶೀಘ್ರ ವಿವಾಹಕ್ಕಾಗಿ ಕಾತ್ಯಾಯಿನಿ ವ್ರತ ಮಾಡಿದಲ್ಲಿ ನಿಶ್ಚಿತವಾಗಿ ದೇವಿ ಅನುಗ್ರಹಿಸುತ್ತಾಳೆ ಎಂದು ಶಾಸ್ತ್ರ ಪುರಾಣಗಳು ಹೇಳುತ್ತವೆ.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/G7IPvItJj7JHrybOIW3296