ತುಮಕೂರು: ಮಧುಗಿರಿ ಅಬಕಾರಿ ವಲಯಕ್ಕೆ ಸಂಬಂಧಿಸಿದಂತೆ 29ನೇ ತಾರೀಕು ದೂರು ದಾಖಲಾಗಿದ್ದು, ಮಧುಗಿರಿ ವಲಯ ಅಬಕಾರಿ ನಿರೀಕ್ಷಕರ ಕಚೇರಿಯಲ್ಲಿ ಕಂಪ್ಯೂಟರ್ ಆಪರೇಟರ್ ಆಗಿ ಕಾರ್ಯ ನಿರ್ವಹಿಸುತ್ತಿರುವ ಪದ್ಮ ಎಂಬ ಮಹಿಳೆಯನ್ನು ಕಳೆದ 4 ವರ್ಷದಿಂದ ಅನಧಿಕೃತವಾಗಿ ಕೆಲಸಕ್ಕೆ ನೇಮಿಸಿಕೊಂಡು ಸರ್ಕಾರಿ ನಿಯಮಗಳನ್ನು ಗಾಳಿಗೆ ತೂರಿ ಕರ್ತವ್ಯ ಲೋಪ ಎಸಗಲಾಗಿದೆ ಎಂದು ದೂರಿನಲ್ಲಿ ತಿಳಿಸಲಾಗಿದೆ.
ಸಾಮಾಜಿಕ ಹೋರಾಟಗಾರ ಮಹೇಶ್ ಅವರು ಈ ದೂರನ್ನು ನೀಡಿದ್ದಾರೆ. 25–09–24 ರಂದು ಬೆಂಗಳೂರು ಅಬಕಾರಿ ಕಛೇರಿಗಳಲ್ಲಿ ಲೋಕಾಯುಕ್ತ ನ್ಯಾಯಮೂರ್ತಿ ಬಿ.ಎಸ್. ಪಟೇಲ್ ಮತ್ತು ಉಪಲೋಕಯುಕ್ತ ಬಿ.ವೀರಪ್ಪ ರವರು ನಡೆಸಿದ ಕಾರ್ಯಾಚರಣೆ ವೇಳೆ ಅಬಕಾರಿ ನಿರೀಕ್ಷಕರು ಅನಧಿಕೃತವಾಗಿ ಖಾಸಗಿ ವ್ಯಕ್ತಿಗಳನ್ನು ನೇಮಿಸಿಕೊಂಡು ವೇತನ ನೀಡುತ್ತಿರುವುದು ಬೆಳಕಿಗೆ ಬಂದಿದೆ. ಇದೇ ರೀತಿಯಲ್ಲಿಯೇ ಮಧುಗಿರಿ ಅಬಕಾರಿ ಕಛೇರಿಯಲ್ಲಿ ನಡೆದಿರುತ್ತದೆ ಎಂದು ತುಮಕೂರು ಅಬಕಾರಿ ಉಪ ಆಯುಕ್ತರಿಗೆ ನೀಡಿರುವ ದೂರಿನಲ್ಲಿ ಅವರು ತಿಳಿಸಿದ್ದು, ಈ ಸಂಬಂಧ ಸರ್ಕಾರಿ ನಿಯಮಗಳನ್ನು ಗಾಳಿಗೆ ತೂರಿ ಕರ್ತವ್ಯ ನಿರ್ವಹಿಸುತ್ತಿರುವ ಅಧಿಕಾರಿಗಳ ವಿರುದ್ಧ ಕಾನೂನು ಕ್ರಮಜರುಗಿಸಿ ಅಮಾನತು ಮಾಡುವಂತೆ ಅವರು ಒತ್ತಾಯಿಸಿದ್ದಾರೆ.
ಈ ಘಟನೆ ಸಂಬಂಧ ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ವಕೀಲರು ಹಾಗೂ ಕಾಳಜಿ ಫೌಂಡೇಶನ್ ನ ಶಿವಕುಮಾರ ಮೇಷ್ಟ್ರುಮನೆ, ಮಧುಗಿರಿಯಲ್ಲಿರುವ ಅಬಕಾರಿ ಡಿವೈಎಸ್ ಪಿ ಅವರು ಕಚೇರಿಗೆ ಬಾರದೇ, 15 ದಿನಕ್ಕೊಮ್ಮೆ ಬಂದು ಸಹಿ ಹಾಕಿ, ಸಂಬಳ ತೆಗೆದುಕೊಳ್ಳುತ್ತಿದ್ದರು. ಜೊತೆಗೆ ಸಚಿವರ ಉಪಸ್ಥಿತಿಯಲ್ಲಿ ನಡೆಯುವ ಕೆಡಿಪಿ ಸಭೆಗೆ ಕೂಡ ಅವರು ಹೋಗಿಲ್ಲ. ಈ ಬಗ್ಗೆ ಸ್ವತಃ ಸಚಿವರೇ, ಸರ್ಕಾರಕ್ಕೆ ಲೆಟರ್ ಬರೆದು, ಅವರನ್ನು ಅಮಾನತು ಮಾಡುವಂತೆ ಸೂಚನೆ ನೀಡಿದ್ದರು. ಆದ್ರೆ ಇವರ ವಿರುದ್ಧ ಇದುವರೆಗೂ ಕ್ರಮಕೈಗೊಂಡಿಲ್ಲ. ಎಂದರು.
ಸಾರ್ವಜನಿಕ ತೆರಿಗೆ ಹಣದಿಂದ ವಾಹನ ನೀಡಿದ್ದರೆ, ಆ ವಾಹನವನ್ನು ಬೆಂಗಳೂರಿನಲ್ಲಿ ಮನೆಯಲ್ಲಿ ನಿಲ್ಲಿಸಿಕೊಂಡು, ಅವರ ಸ್ವಂತ ಕಾರ್ಯಗಳಿಗೆ ಬಳಸಿಕೊಳ್ಳುತ್ತಿದ್ದಾರೆ. ಸಾರ್ವಜನಿಕರ ಹಣವನ್ನು ಪೋಲು ಮಾಡುತ್ತಿದ್ದಾರೆ. ಇವರ ವಿರುದ್ಧ ಕ್ರಮ ಕೈಗೊಳ್ಳಲು ಸಚಿವರೇ ಖುದ್ದಾಗಿ ಲೆಟರ್ ಕೊಟ್ಟರೂ ಇದುವರೆಗೂ ಕ್ರಮಕೈಗೊಂಡಿಲ್ಲ. ಈ ಬಗ್ಗೆ ಸಾಮಾಜಿಕ ಹೋರಾಟಗಾರರಾದ ಮಹೇಶ್ ಅವರು ಸರ್ಕಾರಕ್ಕೆ ದೂರು ಕೊಟ್ಟಿದ್ದಾರೆ. ಆದರೂ ಇದುವರೆಗೂ ಕ್ರಮ ತೆಗೆದುಕೊಂಡಿಲ್ಲ ಎಂದು ಅವರು ಹೇಳಿದರು.
ಅಬಕಾರಿ ಡಿವೈಎಸ್ ಪಿ ವಿರುದ್ಧ ಸೂಕ್ತ ಕ್ರಮತೆಗೆದುಕೊಳ್ಳಬೇಕು. ನಿಯಮ ಮೀರಿ ಅವರು ವಾಹನವನ್ನು ತೆಗೆದುಕೊಂಡು ಹೋಗಿದ್ದಾರೆ. ಅದರ ಖರ್ಚು ಅವರಿಂದಲೇ ಭರಿಸಬೇಕು ಎಂದು ಅವರು ಒತ್ತಾಯ ಮಾಡಿದರು.
ಸರ್ಕಾರದ ನಿಯಮಗಳನ್ನು ಗಾಳಿಗೆ ತೂರಿ, ಅಕ್ರಮವಾಗಿ ಖಾಸಗಿ ವ್ಯಕ್ತಿಯನ್ನು ಸರ್ಕಾರಿ ಕಚೇರಿಯಲ್ಲಿ ನೇಮಕ ಮಾಡಿಕೊಂಡಿದ್ದಾರೆ. ಯಾವುದಾದರೂ ದಾಖಲೆಗಳು ಕಳವಾದರೆ, ಯಾರು ಹೊಣೆ? ಎಂದು ಪ್ರಶ್ನಿಸಿದ ಅವರು, ಈ ಬಗ್ಗೆ ತಕ್ಷಣ ಶಿಸ್ತು ಕ್ರಮ ತೆಗೆದುಕೊಂಡು ಸಾರ್ವಜನಿಕ ಹಣ, ಸಾರ್ವಜನಿಕ ಆಸ್ತಿ, ದಾಖಲೆಗಳನ್ನು ರಕ್ಷಿಸಬೇಕು ಎಂದು ಸರ್ಕಾರಕ್ಕೆ ಒತ್ತಾಯ ಮಾಡಿದರು.
ಅಧಿಕಾರಿಗಳ ಪ್ರತಿಕ್ರಿಯೆ:
ಕೆಡಿಪಿ ಸಭೆಗೆ ಹಾಜರಾಗಿಲ್ಲ, ಇವರ ವಿರುದ್ಧ ಕ್ರಮಕೈಗೊಂಡು ಸಸ್ಪೆಂಡ್ ಮಾಡಿ ಎಂದು ಸರ್ಕಾರಕ್ಕೆ ಸಚಿವ ಕೆ.ಎನ್.ರಾಜಣ್ಣ ಲೆಟರ್ ಕೊಟ್ಟಿದ್ದಾರೆ. ನಮ್ಮ ಮಿನಿಸ್ಟರ್ ತಿಮ್ಮಪ್ಪ ಸರ್ ಆ ಲೆಟರ್ ಮೇಲೆ ಯಾಕೆ ಕ್ರಮಕೈಗೊಂಡಿಲ್ಲ ಎಂದು ಕಮಿಷನರ್ ಗೆ ರಿಪೋರ್ಟ್ ಕೇಳಿದ್ದರು. ಕಮಿಷನರ್ ಅವರು ನಮಗೆ ರಿಪೋರ್ಟ್ ಕೇಳಿದ್ದಾರೆ. ನಾನು ಅವರಿಗೆ ನೋಟಿಸ್ ನೀಡಿದ್ದೇನೆ. ಅವರು ಅದಕ್ಕೆ ನೀಡಿದ ಪ್ರತಿಕ್ರಿಯೆಯಲ್ಲಿ, 3 ತಿಂಗಳಿಗೊಮ್ಮೆ ಕೆಡಿಪಿ ಮೀಟಿಂಗ್ ಆಗುತ್ತದೆ. ನನಗೆ ಯಾವುದೇ ಮೀಟಿಂಗ್ ನೋಟಿಸ್ ಬಂದಿಲ್ಲ, ಬಂದಿರೋದು ಮಧುಗಿರಿ ರೆವಿನ್ಯೂ ಇನ್ಸ್ ಪೆಕ್ಟರ್ ಗೆ ಮಾತ್ರ. ಹಾಗಾಗಿ ನಾನು ಅಟೆಂಡ್ ಆಗಿಲ್ಲ. ಆ ದಿನ ನಾನು ಇನ್ನೊಂದು ಮೀಟಿಂಗ್ ಅಟೆಂಡ್ ಆಗಿದ್ದೆ ಎಂದು ಫೋಟೋಸ್ ಕಳುಹಿಸಿದ್ದಾರೆ. ಹಾಗಾಗಿ ಅದನ್ನೇ ನಾವು ಕಮಿಷನರ್ ಆಫೀಸ್ ಗೆ ಫಾರ್ವರ್ಡ್ ಮಾಡಿದ್ದೇವೆ.
ಕಚೇರಿಗೆ ಅಡೆಂಡ್ ಆಗದೇ ಹಾಜರಾತಿ ಹಾಕುತ್ತಿರುವ ಬಗ್ಗೆ ಪ್ರತಿಕ್ರಿಯಿಸಿದ ಅವರು, ನನ್ನ ಗಮನಕ್ಕೆ ಬಂದಿಲ್ಲ, ಅದರ ಬಗ್ಗೆ ಕಂಪ್ಲೈಂಟ್ ಬಂದಿದೆ. ಅದನ್ನು ನಾನು ಸೂಪರಿಡೆಂಟ್ ಗೆ ಹಾಕಿದ್ದೀನಿ, ರಿಪೋರ್ಟ್ ನಲ್ಲಿ ಅಂತಹದ್ದೇನಾದ್ರೂ ಕಂಡು ಬಂದಲ್ಲಿ ನಾವು ಅವರ ವಿರುದ್ಧ ಕ್ರಮಕೈಗೊಳ್ಳುತ್ತೇವೆ ಎಂದಿದ್ದಾರೆ.
ಇನ್ನೂ ಖಾಸಗಿ ವ್ಯಕ್ತಿಯನ್ನು ನೇಮಕ ಮಾಡಿರುವ ಬಗ್ಗೆ ಪ್ರತಿಕ್ರಿಯೆ ನೀಡಿದ ಅವರು, ಈ ಬಗ್ಗೆ ನಮ್ಮ ಗಮನಕ್ಕೆ ಬಂದಿಲ್ಲ, ಕಂಪ್ಲೈಂಟ್ ಬಂದಿದೆ. ವರದಿ ಪಡೆದು, ಅಂತಹದ್ದೇನಾದ್ರೂ ಕಂಡು ಬಂದಲ್ಲಿ, ಕ್ರಮಕೈಗೊಳ್ಳುತ್ತೇವೆ ಎಂದು ತಿಳಿಸಿದ್ದಾರೆ.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Gp0Feftn1c40sYuKY8HX2Q