ತುಮಕೂರು: ವಿದ್ಯಾರ್ಥಿಗಳು ಜ್ಞಾನವೃದ್ಧಿಗಾಗಿ ವಿಷಯವನ್ನು ಆಯ್ಕೆ ಮಾಡಿಕೊಳ್ಳಬೇಕೆ ಹೊರತು ಕೇವಲ ಕೆಲಸದ ನಿಮಿತ್ತವಾಗಿ ಅಲ್ಲ. ಒಬ್ಬ ವಿದ್ಯಾರ್ಥಿಯು ಜೀವನದಲ್ಲಿ ಉತ್ತಮವಾದ ಯಶಸ್ಸನ್ನು ಸಾಧಿಸುವುದರ ಮೂಲಕ ತನ್ನನ್ನು ತಾನು ಪ್ರತಿನಿಧಿಸಿಕೊಳ್ಳಬೇಕು ಎಂದು ತುಮಕೂರು ವಿಶ್ವವಿದ್ಯಾನಿಲಯದ ಕುಲಪತಿ ಪ್ರೊ. ಎಂ. ವೆಂಕಟೇಶ್ವರಲು ಹೇಳಿದರು.
ತುಮಕೂರು ವಿಶ್ವವಿದ್ಯಾನಿಲಯದ ವಾಣಿಜ್ಯಶಾಸ್ತ್ರ ಅಧ್ಯಯನ ಮತ್ತು ಸಂಶೋಧನಾ ವಿಭಾಗದ ‘ಯಶಸ್ವಿ ವೃತ್ತಿ ಮತ್ತು ಜೀವನಕ್ಕಾಗಿ ಮಾರ್ಗಸೂಚಿ’ ವಿಶೇಷ ಉಪನ್ಯಾಸ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ವಿದ್ಯಾರ್ಥಿಯು ತನ್ನ ನಿತ್ಯ ಜೀವನದ ಪ್ರತಿಕ್ಷಣವೂ ತನಗೆ ಜನ್ಮ ನೀಡಿದ ತಂದೆ ತಾಯಿ ಹಾಗೂ ವಿದ್ಯೆ ಕಲಿಸಿದ ಗುರು ಹಿರಿಯರನ್ನು ನೆನಪಿಸಿಕೊಳ್ಳಬೇಕು. ಅಂತಹ ವಿದ್ಯಾರ್ಥಿಗಳಿಂದ ಮಾತ್ರ ಜೀವನದಲ್ಲಿ ಯಶಸ್ಸು ಪಡೆಯಲು ಸಾಧ್ಯವಾಗುತ್ತದೆ. ಒಂದು ಬಾರಿ ಜೀವನದಲ್ಲಿ ಸಾಧನೆಗೈದರೆ ಅದರಿಂದ ಸಮಾಜದಲ್ಲಿ ಗೌರವ ಸ್ಥಾನಮಾನ ಹೆಚ್ಚಾಗುತ್ತದೆ. ಅಂತಹ ವಿದ್ಯಾರ್ಥಿಗಳ ಪ್ರಗತಿಯನ್ನು ನಮ್ಮ ವಿಶ್ವವಿದ್ಯಾನಿಲಯವು ಸಂಭ್ರಮಿಸುತ್ತದೆ ಎಂದರು.
ಬೆಂಗಳೂರಿನ ಎಂ. ಕ್ಯೂ. ಐ. ಕಾಲೇಜ್ ಆಫ್ ಮ್ಯಾನೇಜ್ಮೆಂಟ್ನ ನಿರ್ದೇಶಕರಾದ ಪ್ರೊ. ವಿ. ಪ್ರಭುದೇವ್ ಮಾತನಾಡಿ ವೃತ್ತಿಗೆ ನಿರ್ದಿಷ್ಟವಾದ ವ್ಯಾಪ್ತಿ ಎಂಬುದು ಇದೆ, ಆದರೆ ಜೀವನಕ್ಕೆ ಯಾವುದೇ ವ್ಯಾಪ್ತಿ ಇರುವುದಿಲ್ಲ. ಆದರೆ ಸುಂದರವಾದ ಜೀವನ ನಡೆಸಲು ನಾವೇ ವ್ಯಾಪ್ತಿಯನ್ನು ಹಾಕಿಕೊಳ್ಳುವುದು ಬಹಳ ಮುಖ್ಯವಾಗಿರುತ್ತದೆ ಎಂದರು.
ಎAತಹ ಸಮಯ ಸಂದರ್ಭದಲ್ಲಿಯೂ ಎದೆಗುಂದದೆ, ಅನಿರೀಕ್ಷಿತವಾಗಿ ಜೀವನದಲ್ಲಿ ಬರುವ ಏರಿಳಿತಗಳನ್ನು ಎದುರಿಸಲು ಯಾವಾಗಲೂ ಸಿದ್ದರಿರಬೇಕು. ಸುಲಭದ ಜೀವನಕ್ಕಿಂತ ಕಠಿಣ ಜೀವನವನ್ನು ಆಯ್ಕೆ ಮಾಡಿಕೊಂಡು ಭ್ರಮೆಯಲ್ಲಿ ಬದುಕದೆ ವಾಸ್ತವವನ್ನು ಅರಿತು ಪ್ರತಿನಿತ್ಯ ಹೊಸ ಹೊಸ ವಿಷಯಗಳ ಕುರಿತು ಅಧ್ಯಯನ ಮಾಡಬೇಕು ಎಂದು ಸಲಹೆ ನೀಡಿದರು.
ಜೀವನದಲ್ಲಿ ಒಬ್ಬ ಉತ್ತಮ ನಾಯಕನಾಗಬೇಕಾದರೆ ವಿಷಯಗಳನ್ನು ಕೇಳುವ ತಾಳ್ಮೆ, ನಿಷ್ಕಲ್ಮಶ ನಗು, ಒಳ್ಳೆಯ ನೋಟ, ದೇಹಭಾಷೆ ಹೊಂದಿರಬೇಕು. ಸಾಮೂಹಿಕ ಚಟುವಟಿಕೆಗಳಲ್ಲಿ ಭಾಗವಹಿಸಿ ಎಲ್ಲರನ್ನೂ ಹುರಿದುಂಬಿಸುವ ವ್ಯಕ್ತಿತ್ವವನ್ನು ಹೊಂದಿರಬೇಕು. ಅಂಕಪಟ್ಟಿಯಲ್ಲಿ ಅತಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಿಂತ ಕಡಿಮೆ ಅಂಕ ಪಡೆದ ವಿದ್ಯಾರ್ಥಿ ಜೀವನದಲ್ಲಿ ಯಶಸ್ಸನ್ನು ಹೊಂದಿರುತ್ತಾನೆ ಎಂದು ಹೇಳಿದರು.
ವಾಣಿಜ್ಯಶಾಸ್ತ್ರ ವಿಭಾಗದ ಅಧ್ಯಕ್ಷ ಪ್ರೊ. ಬಿ. ಶೇಖರ್, ಪ್ರಾಧ್ಯಾಪಕರಾದ ಪ್ರೊ. ಪಿ. ಪರಮಶಿವಯ್ಯ, ಡಾ. ಸುರೇಶ್ ಬಿ. ಕೆ. ಉಪಸ್ಥಿತರಿದ್ದರು.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/KN8LiGgEw492Ijygqm0dVW