ಮಧುಗಿರಿ: ಎಷ್ಟೇ ಬರಗಾಲ ಬಂದರೂ ಮಾಜಿ ಸಿಎಂ ಸಿದ್ದರಾಮಯ್ಯನವರ ಅನ್ನಭಾಗ್ಯ ಯೋಜನೆಯಿಂದಾಗಿ ಊಟಕ್ಕೆ ಯಾವುದೇ ಸಮಸ್ಯೆಯಾಗುವುದಿಲ್ಲ ಎಂದು ಮಾಜಿ ಸಚಿವ ಶಾಸಕ ಕೆ.ಎನ್. ರಾಜಣ್ಣ ವಿಶ್ವಾಸ ವ್ಯಕ್ತಪಡಿಸಿದರು.
ಅವರು ಎಂ.ಎನ್.ಕೆ ಸಮುದಾಯ ಭವನದಲ್ಲಿ ಬುಧವಾರ ಮಧುಗಿರಿ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಕೆಪಿಸಿಸಿ ವತಿಯಿಂದ ಹಮ್ಮಿಕೊಂಡಿದ್ದ ಸಂಘಟನ್ ಸೃಜನ್ ಅಭಿಯಾನದಲ್ಲಿ ಮಾತನಾಡಿದರು.
ಕ್ಷೇತ್ರದಲ್ಲಿ ಎಸ್ ಐ ಆರ್ ಮತದಾರರ ಪಟ್ಟಿ ಪರಿಷ್ಕರಣೆ ಶೇ. 80 ರಷ್ಟು ಪೂರ್ಣಗೊಂಡಿದೆ. ಬೇರೆ ಕಡೆಯಿಂದ ಮದುವೆಯಾಗಿ ಬಂದಿರುವವರು 2002ರ ಮತದಾರರ ಪಟ್ಟಿಯಲ್ಲಿ ಹೆಸರು ಇರಬೇಕು ಎಂಬ ನಿಯಮವಿದ್ದು, ಅವರ ಮಾವನ ಮತದಾರರ ಪಟ್ಟಿ ಆಧಾರದ ಮೇಲೆ ಎಸ್ ಐ ಆರ್ ಗೆ ಸೇರಿಸಬೇಕು ಎಂದು ಒತ್ತಾಯಿಸಿದ ಅವರು, ಒಂದೊಂದು ಮತವೂ ಅಮೂಲ್ಯ. ಬಾಕಿ ಪ್ರಕ್ರಿಯೆಯನ್ನೂ ಪೂರ್ಣಗೊಳಿಸಿ. ಯಾರೂ ಎಸ್ ಐ ಆರ್ ಪ್ರಕ್ರಿಯೆಯಲ್ಲಿ ಇನ್ನೂ ನೋಂದಣಿ ಮಾಡಿಕೊಂಡಿರುವುದಿಲ್ಲ ಅಂತಹವರ ಮನವೊಲಿಸಿ ಮತ ನಷ್ಟವಾಗದ ರೀತಿ ಕ್ರಮ ವಹಿಸಿ. ಮುಂದೆ ಪುರಸಭೆ, ಗ್ರಾ.ಪಂ, ಜಿಪಂ ಚುನಾವಣೆ ಬರಲಿದ್ದು, ಎಲ್ಲಾ ಮುಖಂಡರು, ಕಾರ್ಯಕರ್ತರು ಚುನಾವಣೆಗೆ ಸನ್ನದ್ಧರಾಗಬೇಕು.
ಈ ವರ್ಷ ಬರಗಾಲದ ಮುನ್ಸೂಚನೆ ಕಂಡು ಬರುತ್ತಿದ್ದು, ಎಷ್ಟೇ ಬರಗಾಲ ಬಂದರೂ ಊಟಕ್ಕೆ ಯಾವುದೇ ತೊಂದರೆಯಾಗದಂತೆ ಸಿದ್ದರಾಮಯ್ಯನವರ ಅನ್ನಭಾಗ್ಯ ನೆರವಿಗೆ ಬರುತ್ತಿದೆ. ಕ್ಷೇತ್ರದಲ್ಲಿ ಕುಡಿಯುವ ನೀರಿಗೆ ಸಮಸ್ಯೆಯಾಗದಂತೆ ಕ್ರಮ ಕೈಗೊಳ್ಳಲಾಗಿದೆ. ರೈತರಿಗೆ, ಕೂಲಿ ಕಾರ್ಮಿಕರಿಗೆ ಅನುಕೂಲವಾಗದಂತೆ, ಜಾನುವಾರುಗಳಿಗೆ ಮೇವಿನ ಕೊರತೆಯಾಗದಂತೆ ಕ್ರಮ ವಹಿಸಲು ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ. ರೈತರಿಗೆ ಏನು ಮಾಡಿದರೂ ಕಡಿಮೆಯೆ. ಬರ ಪರಿಸ್ಥಿತಿ ಹೀಗೆಯೆ ಮುಂದುವರಿದಲ್ಲಿ ಮುಂದಿನ ದಿನಗಳಲ್ಲಿ ಗೋಶಾಲೆ ತೆರೆದು ಗೋಪಾಲಕರಿಗೆ ಊಟದ ವ್ಯವಸ್ಥೆ ಜೊತೆಗೆ ಅಗತ್ಯ ಬಿದ್ದರೆ ರಾತ್ರಿ ಗೋಶಾಲೆಯಲ್ಲೇ ಉಳಿದುಕೊಳ್ಳುವ ವ್ಯವಸ್ಥೆ ಮಾಡಲು ಕ್ರಮ ಕೈಗೊಳ್ಳಲಾಗುವುದು.
— ಕೆ.ಎನ್.ರಾಜಣ್ಣ, ಶಾಸಕರು.
ಮಕ್ಕಳ ಶಿಕ್ಷಣಕ್ಕೆ ಅನುಕೂಲ ಮಾಡಿಕೊಡುವ ಉದ್ದೇಶದಿಂದ ದೊಡ್ಡೇರಿ ಹೋಬಳಿಯ ಬಡವನಹಳ್ಳಿ ಗ್ರಾಮದ ಮೊರಾರ್ಜಿ ವಸತಿ ಶಾಲೆಗೆ ಸೈನ್ಸ್ ಪಿಯು ಕಾಲೇಜು ಮಂಜೂರಾಗಿದ್ದು, ಜಿಲ್ಲೆಯಲ್ಲಿ ಎಲ್ಲೂ ಸಹ ಸೈನ್ಸ್ ಪಿಯು ಕಾಲೇಜು ಈಗ ಮಂಜೂರಾಗಿಲ್ಲ. 74 ಕೋಟಿ ರೂ. ವೆಚ್ಚದಲ್ಲಿ ಜಿಟಿಟಿಸಿ ಕಾಲೇಜು ಮಂಜೂರು ಮಾಡಲಾಗಿದ್ದು, ಕಾಮಗಾರಿ ನಡೆಯುತ್ತಿದೆ. ಯೂನಿಟ್ ಕಾಸ್ಟ್ ಕಡಿಮೆ ಇದೆ ಎಂದು ಯಾರೂ ಸಹ ಮನೆ ಕಟ್ಟಲು ಮುಂದೆ ಬರುತ್ತಿಲ್ಲ. ಯೂನಿಟ್ ಕಾಸ್ಟ್ ಹೆಚ್ಚಿಸುವ ಬಗ್ಗೆ ಸರ್ಕಾರದ ಮಟ್ಟದಲ್ಲಿ ಚಿಂತನೆ ನಡೆದಿದೆ ಎಂದರು.
ಹಳ್ಳಿಗಳಲ್ಲಿ ಪವತಿ ಖಾತೆ, ಪಿಂಚಣಿ ಸೌಲಭ್ಯ ಸೇರಿದಂತೆ ಬಡವರ ಸಮಸ್ಯೆಗಳು ಬಹಳಷ್ಟಿದ್ದು, ಅವರ ಸಮಸ್ಯೆಗೆ ಸ್ಪಂದಿಸಿ, ಯಾರು ಜನರ ಸೇವೆ ಮಾಡಿ ಅವರ ಪ್ರೀತಿ ವಿಶ್ವಾಸ ಗಳಿಸುತ್ತಾರೋ ಅವರಿಗೆ ಜನ ಬೆಂಬಲವೂ ಹೆಚ್ಚಾಗಿರುತ್ತದೆ. ಈ ಹಿಂದೆ ಮಾಜಿ ಪ್ರಧಾನಿ ಇಂದಿರಾ ಗಾಂಧಿಯವರ ಅವಧಿಯಲ್ಲಿ ಅವರ ಹೆಸರೇಳಿಕೊಂಡು ನಾಯಕರು ಗೆಲ್ಲುತ್ತಿದ್ದರು. ಆದರೆ ಇಂದು ಅಂತಹ ಪರಿಸ್ಥಿತಿ ಇಲ್ಲ. ಯಾರು ಜನರ ಪ್ರೀತಿ ವಿಶ್ವಾಸ ಗಳಿಸುತ್ತಾರೋ, ಅವರಿಗೆ ಜನ ಬೆಂಬಲ ಇರುತ್ತದೆ. ರಾಜಕಾರಣದಲ್ಲಿ ಅನುಭವದಿಂದ ಹೆಚ್ಚು ಪಾಠ ಕಲಿಯಬಹುದು. ನಿಮ್ಮಲ್ಲಿ ನಾವು ಎಂಬ ಮನೋಭಾವ ರಾಜಕಾರಣದಲ್ಲಿ ಬಂದಾಗ ಯಶಸ್ಸು ಸಾಧ್ಯ ಎಂದು ಮುಖಂಡರಿಗೆ, ಕಾರ್ಯಕರ್ತರಿಗೆ ಕಿವಿಮಾತು ಹೇಳಿದರು.
ಕಾರ್ಯಕ್ರಮದಲ್ಲಿ ಕೆಪಿಸಿಸಿ ವೀಕ್ಷಕ ಎಂ.ಸಿ. ವೇಣುಗೋಪಾಲ್, ಜಿ.ಪಂ ಮಾಜಿ ಅಧ್ಯಕ್ಷ ಕೆ.ಜಿ. ರಾಜಣ್ಣ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರುಗಳಾದ ಗೋಪಾಲಯ್ಯ, ಆದಿ ನಾರಾಯಣರೆಡ್ಡಿ, ಪುರಸಭೆ ಮಾಜಿ ಅಧ್ಯಕ್ಷರುಗಳಾದವ ಮಹಮ್ಮದ್ ಆಯೂಬ್, ಎಂ.ಕೆ. ನಂಜುಂಡಯ್ಯ, ಜಿ.ಪಂ. ಮಾಜಿ ಸದಸ್ಯರಾದ ಚೌಡಪ್ಪ, ಚಿನ್ನಪ್ಪ, ಮುಖಂಡರಾದ ತುಂಗೋಟಿ ರಾಮಣ್ಣ, ನಿಖಿತ್ ರಾಜ್ ಮಾರ್ಯ, ಸಿದ್ದಗಂಗಪ್ಪ, ಪ್ರಮೀಳಮ್ಮ, ಡಿಸಿಸಿ ಬ್ಯಾಂಕ್ ನಿರ್ದೇಶಕ ಬಿ.ನಾಗೇಶ್ ಬಾಬು, ತಾ.ಪಂ. ಮಾಜಿ ಅಧ್ಯಕ್ಷೆ ಇಂದಿರಾ ದೇಣಾ ನಾಯ್ಕ, ಮಾಜಿ ಸದಸ್ಯೆ ಸುವರ್ಣಮ್ಮ ಇತರರಿದ್ದರು.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/ISmeQjik4LbG9KvWhKlbCC
