ತುಮಕೂರು: ಕೇಂದ್ರ ಸರ್ಕಾರ ಸರಕು ಹಾಗೂ ಸೇವಾ ತೆರಿಗೆ (ಜಿಎಸ್ ಟಿ) ದರ ಪರಿಷ್ಕರಣೆ ಮಾಡುವ ಮೂಲಕ ಜನಸಾಮಾನ್ಯರ ಮೇಲಿನ ತೆರಿಗೆ ಭಾರ ಇಳಿಸಿದೆ ಎಂದು ಕೇಂದ್ರ ಜಲಶಕ್ತಿ ಹಾಗೂ ರೈಲ್ವೆ ಖಾತೆ ರಾಜ್ಯ ಸಚಿವ ವಿ.ಸೋಮಣ್ಣ ಹೇಳಿದರು.
ನಗರದಲ್ಲಿ ಬುಧವಾರ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆ ಏರ್ಪಡಿಸಿದ್ದ ‘ಜಿಎಸ್ ಟಿ–2.0 ಸುಧಾರಣೆಗಳು–2025’ ಕುರಿತು ಮಾಹಿತಿ ನೀಡುವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಹೊಸ ತೆರಿಗೆ ಪದ್ಧತಿ ಸೆ.22ರಿಂದ ದೇಶದಾದ್ಯಂತ ಜಾರಿಗೆ ಬರಲಿದೆ. ಇದರಿಂದ ಜನಸಾಮಾನ್ಯರ ಬದುಕಿನ ಹೊರೆ ತಗ್ಗಲಿದೆ. ಜನರು ಪ್ರತಿನಿತ್ಯ ಬಳಸುವ ಎಲ್ಲ ಉತ್ಪನ್ನಗಳ ಮೇಲೆ ಜಿಎಸ್ ಟಿ ಸುಧಾರಣೆಗಳ ಪರಿಣಾಮ ಕಾಣಬಹುದಾಗಿದೆ. ಅದೇ ರೀತಿ ವ್ಯಾಪಾರಸ್ಥರ ಕಾರ್ಯವಿಧಾನವನ್ನು ಸರಳಗೊಳಿಸಲಾಗಿದೆ ಎಂದು ಹೇಳಿದರು.
ಜಿಎಸ್ ಟಿ ಮಂಡಳಿಯು 350ಕ್ಕೂ ಹೆಚ್ಚು ಉತ್ಪನ್ನಗಳ ತೆರಿಗೆ ದರಗಳನ್ನು ಪರಿಷ್ಕರಣೆ ಮಾಡಿದೆ. ಪ್ರಸ್ತುತ ಶೇ 5 ಹಾಗೂ ಶೇ 18ರ ಪ್ರಮಾಣದ ಎರಡು ಹಂತದ ಜಿಎಸ್ ಟಿ ವ್ಯವಸ್ಥೆ ಜಾರಿಗೊಳಿಸಿದೆ ಎಂದರು.
ಶಾಸಕ ಬಿ.ಸುರೇಶ್ಗೌಡ, ‘ಯಾವುದೇ ದೇಶ ಬಲಿಷ್ಠ, ಪ್ರಗತಿ ಹೊಂದಬೇಕಾದರೆ ಸದೃಢವಾದ, ಸಾಮಾನ್ಯರಿಗೆ ನಿಲುಕುವಂತಹ ತೆರಿಗೆ ಪದ್ಧತಿ ಇರಬೇಕಾಗುತ್ತದೆ’ ಎಂದು ತಿಳಿಸಿದರು.
ಸಂಸ್ಥೆ ಅಧ್ಯಕ್ಷ ಪಾಂಡುರಂಗ ಕರಂದವಾಡ, ಉಪಾಧ್ಯಕ್ಷ ಸಂಜಯ್, ಪ್ರಧಾನ ಕಾರ್ಯದರ್ಶಿ ಶ್ರೀಕಂಠಸ್ವಾಮಿ, ಖಜಾಂಚಿ ರವಿಶಂಕರ್, ಪ್ರಮುಖರಾದ ಟಿ.ಜೆ.ಗಿರೀಶ್, ಸುಜ್ಞಾನ್ ಹಿರೇಮರ್, ಅಶೆದ್, ಟಿ.ಆರ್.ಆನಂದ್ ಉಪಸ್ಥಿತರಿದ್ದರು.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/ISmeQjik4LbG9KvWhKlbCC