ತುಮಕೂರು: ತುಮಕೂರು ಸಹಕಾರಿ ಹಾಲು ಉತ್ಪಾದಕರ ಸಂಘಗಳ ಒಕ್ಕೂಟದ (ತುಮುಲ್) ಹಣಕಾಸು ವಿಭಾಗದ ಆಡಳಿತ ಅಧೀಕ್ಷಕ ಆರ್.ಎಸ್.ವಿನಯ್ ಕೆಲವು ದಿನಗಳಿಂದ ಕಚೇರಿಯಲ್ಲಿ ನೆಲದ ಮೇಲೆ ಕುಳಿತು ಕೆಲಸ ಮಾಡುತ್ತಿದ್ದಾರೆ.
ನಾನು ದಲಿತ ಎಂಬ ಕಾರಣಕ್ಕೆ ಕಚೇರಿಯಲ್ಲಿ ಕುರ್ಚಿ, ಟೇಬಲ್ ಕೊಡುತ್ತಿಲ್ಲ. ಡೇರಿ ಮೇಲ್ವಿಚಾರಕ ಎಸ್.ಉಮೇಶ್, ಆಡಳಿತ ವಿಭಾಗದ ವ್ಯವಸ್ಥಾಪಕ ಮಂಜುನಾಥ್ ನಾಯಕ ಎಂಬುವರು ಕಿರುಕುಳ ನೀಡುತ್ತಿದ್ದಾರೆ ಎಂದು ಅವರು ಆರೋಪಿಸಿದ್ದಾರೆ.
ತಿಂಗಳ ಹಿಂದೆ ಆಡಳಿತ ವಿಭಾಗದಿಂದ ಹಣಕಾಸು ವಿಭಾಗಕ್ಕೆ ವರ್ಗಾವಣೆಯಾಗಿದ್ದು, ವಿಭಾಗದಲ್ಲಿ ಕೂಡಲು ಸ್ಥಳ ಕೊಡದೆ ಅವಮಾನಿಸಿದ್ದರು. ಬಳಿಕ ಹಣಕಾಸು ವಿಭಾಗದ ವ್ಯವಸ್ಥಾಪಕರು ಕಚೇರಿ ಮೂಲೆಯಲ್ಲಿದ್ದ ಕಿರಿದಾದ ಕಂಪ್ಯೂಟರ್, ಫೈಲ್ ತುಂಬಿದ್ದ ಕೊಠಡಿಯಲ್ಲಿ ಕೆಲಸ ಮಾಡಲು ಅವಕಾಶ ಕಲ್ಪಿಸಿದ್ದರು ಎಂದಿದ್ದಾರೆ.
ಕಿರಿದಾದ ಕೊಠಡಿ ಸ್ವಚ್ಛಗೊಳಿಸಿ ಕೆಲಸ ಮಾಡುತ್ತಿದ್ದೆ. ಬಳಿಕ ಕೊಠಡಿ ಖಾಲಿ ಮಾಡಿಸಿದರು. ಇದರಿಂದ ಬೇಸತ್ತು ನೆಲದ ಮೇಲೆ ಕುಳಿತು ಕೆಲಸ ಮಾಡುತ್ತಿದ್ದೇನೆ. ಪರಿಶಿಷ್ಟ ಜಾತಿಗೆ ಸೇರಿದವನು ಎಂಬ ಕಾರಣಕ್ಕೆ ಈ ರೀತಿ ಕಿರುಕುಳ ನೀಡುತ್ತಿದ್ದಾರೆ ಎಂದು ಹೇಳಿದ್ದಾರೆ.
ಕಿರುಕುಳ ನೀಡುತ್ತಿರುವ ಎಸ್.ಉಮೇಶ್ ವಿರುದ್ಧ ಪರಿಶಿಷ್ಟ ಜಾತಿ, ಪಂಗಡದ ಮೇಲಿನ ದೌರ್ಜನ್ಯ ತಡೆ ಕಾಯ್ದೆಯಡಿ ಕ್ರಮಕೈಗೊಳ್ಳುವಂತೆ ಪೊಲೀಸ್ ಮಹಾನಿರ್ದೇಶಕರಿಗೆ ಅವರು ದೂರು ಸಲ್ಲಿಸಿದ್ದಾರೆ.
8 ವರ್ಷಗಳಿಂದ ಒಕ್ಕೂಟದಲ್ಲಿ ಕೆಲಸ ಮಾಡುತ್ತಿದ್ದೇನೆ. ಉಮೇಶ್ ವಿರುದ್ಧ ಗ್ರಾಮಾಂತರ ಠಾಣೆಗೆ ದೂರು ನೀಡಿದರೂ ಗಂಭೀರವಾಗಿ ಪರಿಗಣಿಸಿಲ್ಲ ಎಂದು ದೂರಿನಲ್ಲಿ ತಿಳಿಸಿದ್ದಾರೆ.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/ISmeQjik4LbG9KvWhKlbCC