ತುಮಕೂರು: ಷೇರು ಮಾರುಕಟ್ಟೆಯಲ್ಲಿ ಹೂಡಿಕೆ ಮಾಡಿ ಹೆಚ್ಚಿನ ಲಾಭ ಗಳಿಸಬಹುದು ಎಂಬ ಅಮಿಷಕ್ಕೆ ಒಳಗಾಗಿ ನಗರದ ಸಿದ್ಧಗಂಗಾ ಬಡಾವಣೆ ನಿವಾಸಿ, ಖಾಸಗಿ ಕಂಪನಿಯೊಂದರ ನಿರ್ವಾಹಕ ಶರತ್ ಬಾಬು ಎಂಬುವರು 15.31 ಲಕ್ಷ ಕಳೆದುಕೊಂಡಿದ್ದಾರೆ.
ಫೇಸ್ ಬುಕ್ ನಲ್ಲಿ ಷೇರು ಮಾರುಕಟ್ಟೆ ಜಾಹೀರಾತು ವೀಕ್ಷಿಸಿ ಅದರಲ್ಲಿನ ಲಿಂಕ್ ಕ್ಲಿಕ್ ಮಾಡಿದ್ದಾರೆ. ಆರೋಪಿಗಳು ಫೇಸ್ ಬುಕ್ ನಲ್ಲಿ ವಾಟ್ಸಾಪ್ ಗ್ರೂಪ್ ಲಿಂಕ್ ಕಳುಹಿಸಿ, ‘ಪ್ಯೂ ಫೋಕಸ್”, ‘ವಿಐಪಿ ಸರ್ವೀಸ್ 359 ಗ್ರೂಪ್ ಗಳಿಗೆ ಶರತ್ ಅವರನ್ನು ಸೇರ್ಪಡೆ ಮಾಡಿದ್ದಾರೆ. ಇದಾದ ಬಳಿಕ ಶರತ್ ‘ಯು ಪ್ರೊ’ ಆ್ಯಪ್ ಇನ್ ಸ್ಟಾಲ್ ಮಾಡಿಕೊಂಡಿದ್ದಾರೆ.
ನಾವು ಹೇಳಿದಂತೆ ಹಣ ವರ್ಗಾಯಿಸಿದರೆ ಅದನ್ನು ನಾವು ಷೇರು ಮಾರುಕಟ್ಟೆಯಲ್ಲಿ ಹೂಡಿಕೆ ಮಾಡಿ ನಿಮಗೆ ಲಾಭ ನೀಡಲಾಗುವುದು ಎಂದು ನಂಬಿಸಿದ್ದಾರೆ. ಇದನ್ನು ನಂಬಿದ ಶರತ್, ಮೊದಲ ಹಂತದಲ್ಲಿ 4.70 ಲಕ್ಷ ವರ್ಗಾಯಿಸಿದ್ದಾರೆ. ವಾಪಸ್ ಕೇಳಿದಾಗ ನೀವು ಇದುವರೆಗೆ ಹೂಡಿಕೆ ಮಾಡಿದ ಹಣಕ್ಕೆ ಶೇ.200ರಷ್ಟು ಲಾಭ ಬಂದಿದೆ. ಸದರಿ ಹಣ ಪಡೆಯಲು 8.60 ಲಕ್ಷ ಸೇವಾ ಶುಲ್ಕ ನೀಡಬೇಕು ಎಂದಿದ್ದಾರೆ. ಶರತ್ ಅಷ್ಟೂ ಹಣ ವರ್ಗಾವಣೆ ಮಾಡಿದ್ದಾರೆ.
ಮತ್ತೊಮ್ಮೆ ಹೂಡಿಕೆ ಮಾಡಿದ ಹಣ ಕೇಳಿದಾಗ ಇನ್ನೂ 3 ಲಕ್ಷ ನೀಡಿದರೆ ಪೂರ್ತಿ ಹಣ ನೀಡಲಾಗುವುದು ಎಂದು ಹೇಳಿದ್ದಾರೆ. ಇದರಿಂದ ಅನುಮಾನ ಬಂದು ಸ್ನೇಹಿತರ ಬಳಿ ವಿಚಾರಿಸಿದಾಗ ಮೋಸ ಹೋದ ವಿಷಯ ಗೊತ್ತಾಗಿದೆ. ಲಾಭದ ಹೆಸರಿನಲ್ಲಿ ವಂಚಿಸಿದವರ ವಿರುದ್ಧ ಕ್ರಮಕೈಗೊಳ್ಳುವಂತೆ ಸೈಬರ್ ಠಾಣೆಗೆ ದೂರು ನೀಡಿದ್ದು ಪ್ರಕರಣ ದಾಖಲಾಗಿದೆ.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/ISmeQjik4LbG9KvWhKlbCC