ತುಮಕೂರು: ನಗರದ ಅಂತರಸನಹಳ್ಳಿ ತರಕಾರಿ ಮಾರುಕಟ್ಟೆಯ ವಾಹನ ಪಾರ್ಕಿಂಗ್ ಸ್ಥಳದಲ್ಲಿ ಕಸದ ರಾಶಿಯನ್ನು ಕಂಡ ಉಪಲೋಕಾಯುಕ್ತ ನ್ಯಾಯಮೂರ್ತಿ ಬಿ. ವೀರಪ್ಪ ಅವರು ಕೂಡಲೇ ಕಸದ ರಾಶಿಯನ್ನು ತೆರವುಗೊಳಿಸಬೇಕೆಂದು ಸ್ಥಳದಲ್ಲಿದ್ದ ಪಾಲಿಕೆ ಇಂಜಿನಿಯರ್ ಪೂರ್ಣಿಮಾ ಅವರಿಗೆ ಸೂಚನೆ ನೀಡಿದರು.
ಉಪಲೋಕಾಯುಕ್ತ ನ್ಯಾಯಮೂರ್ತಿ ಬಿ. ವೀರಪ್ಪ ಅವರು ಶುಕ್ರವಾರ ಬೆಳ್ಳಂಬೆಳಗ್ಗೆಯೇ ಅಂತರಸನಹಳ್ಳಿ ತರಕಾರಿ ಮಾರುಕಟ್ಟೆಗೆ ಅನಿರೀಕ್ಷಿತ ಭೇಟಿ ನೀಡಿ ಪರಿಶೀಲಿಸಿದಾಗ ವಾಹನ ನಿಲುಗಡೆ ಮಾಡುವ ಸ್ಥಳದಲ್ಲಿ ಕಸದ ರಾಶಿಯನ್ನು ಕಂಡು, ಪಾರ್ಕಿಂಗ್ ಸ್ಥಳದಲ್ಲಿ ವಾಹನ ನಿಲ್ಲಿಸಲು ಅವಕಾಶ ಮಾಡಿಕೊಡಬೇಕೇ ಹೊರತು ಕಸ ಹಾಕಲು ಬಳಸಬಾರದು. ಇದರಿಂದ ವಾಹನ ದಟ್ಟಣೆ ಉಂಟಾಗಿ ಸಂಚಾರ ಅಸ್ತವ್ಯಸ್ತವಾಗುತ್ತದೆ. ಹೂವು—ಹಣ್ಣು–ತರಕಾರಿ ತ್ಯಾಜ್ಯ ಕೊಳೆತು ಜನರ ಆರೋಗ್ಯದ ಮೇಲೆ ದುಷ್ಪರಿಣಾಮ ಉಂಟಾಗುತ್ತದೆ. ಮಾರುಕಟ್ಟೆ ಆವರಣದಲ್ಲಿ ಸಮರ್ಪಕವಾಗಿ ಸ್ವಚ್ಛತೆ ನಿರ್ವಹಣೆ ಮಾಡಬೇಕು ಎಂದು ಕಟ್ಟುನಿಟ್ಟಿನ ಸೂಚನೆ ನೀಡಿದರು.

ಅಂಗಡಿ ಮಾಲೀಕರು, ಅಧಿಕಾರಿಗಳಿಗೆ ತರಾಟೆ:
ನಗರದ ಡಿ.ದೇವರಾಜು ಅರಸು ಬಸ್ ನಿಲ್ದಾಣಕ್ಕೆ ಭೇಟಿ ನೀಡಿ ಪರಿಶೀಲಿಸಿದ ವೇಳೆ ನಿಲ್ದಾಣದ ಆವರಣದಲ್ಲಿರುವ ಎಸ್ ಎಂಎಲ್ ಕಾಂಡಿಮೆಂಟ್ಸ್ ನಲ್ಲಿ ಅವಧಿ ಮೀರಿದ ತಿಂಡಿ–ತಿನಿಸು, ತಂಪು ಪಾನೀಯಗಳನ್ನು ಮಾರಾಟಕ್ಕಿಟ್ಟಿರುವುದು ನೋಡಿದ ಅವರು, ಅವಧಿ ಮೀರಿದ ತಿಂಡಿ–ತಿನಿಸುಗಳನ್ನು ಮಾರಾಟ ಮಾಡಿ ಜನರನ್ನೇಕೆ ಸಾಯಿಸುತ್ತೀರಿ? ನೀವು ಬದುಕಿದರೆ ಸಾಕೇ? ಎಂದು ಅಂಗಡಿ ಮಾಲೀಕರನ್ನು ತರಾಟೆಗೆ ತೆಗೆದುಕೊಂಡರಲ್ಲದೇ ಅವಧಿ ಮೀರಿದ ತಿಂಡಿ–ತಿನಿಸಿನ ಪಾಕೇಟ್, ತಂಪು ಪಾನೀಯ ಬಾಟಲಿಗಳನ್ನು ವಶಕ್ಕೆ ಪಡೆದರು.
ಬಸ್ ನಿಲ್ದಾಣದ ಅಂಗಡಿ ಮಳಿಗೆಗಳಲ್ಲಿ ಅವಧಿ ಮೀರಿದ ತಿಂಡಿ–ತಿನಿಸುಗಳನ್ನು ಜನರಿಗೆ ಮಾರಾಟ ಮಾಡುತ್ತಿದ್ದರೂ ಕೆಎಸ್ ಆರ್ ಟಿಸಿ ಹಾಗೂ ಪಾಲಿಕೆ ಅಧಿಕಾರಿಗಳು ಕಣ್ಣು ಮುಚ್ಚಿ ಕುಳಿತಿದ್ದಾರೆ. ಇಂತಹ ಪ್ರಕರಣಗಳು ಮರು ಕಳಿಸಿದರೆ ಅಧಿಕಾರಿಗಳ ಮೇಲೆ ಶಿಸ್ತು ಕ್ರಮ ಕೈಗೊಳ್ಳಲಾಗುವುದು. ಅಧಿಕಾರಿಗಳು ಕಾಲಕಾಲಕ್ಕೆ ಅಂಗಡಿ ಮಳಿಗೆಗಳಿಗೆ ಭೇಟಿ ನೀಡಿ ಮಾರಾಟ ಪರವಾನಗಿ, ಸ್ವಚ್ಛತೆ, ಆಹಾರ ತಿನಿಸುಗಳನ್ನು ಪರಿಶೀಲಿಸಬೇಕು ಎಂದು ಕಟ್ಟುನಿಟ್ಟಿನ ಸೂಚನೆ ನೀಡಿದರು. ಅವಧಿ ಮೀರಿದ ತಂಪು ಪಾನೀಯವನ್ನು ನೀವು ಕುಡಿದು ತೋರಿಸಿ ಎಂದು ಅಧಿಕಾರಿಗಳಿಗೆ ಸೂಚಿಸಿದ ಪ್ರಸಂಗ ನಡೆಯಿತು.
ತಂಬಾಕು ಉತ್ಪನ್ನ ಮಾರಾಟ ಪತ್ತೆ:
ಶ್ರೀ ಕೃಷ್ಣ ಕಾಂಡಿಮೆಂಟ್ಸ್ ನಲ್ಲಿ ಗುಟ್ಕಾ ಸೇರಿದಂತೆ ವಿವಿಧ ತಂಬಾಕು ಉತ್ಪನ್ನಗಳನ್ನು ಮಾರಾಟ ಮಾಡುತ್ತಿರುವುದನ್ನು ಕಂಡ ಅವರು ಸಾರ್ವಜನಿಕ ಸ್ಥಳಗಳಲ್ಲಿ ತಂಬಾಕು ಉತ್ಪನ್ನಗಳನ್ನು ಮಾರಾಟ ಮಾಡಬಾರದೆಂದು ನಿಯಮವಿದ್ದರೂ ನಿಯಮವನ್ನು ಉಲ್ಲಂಘಿಸಿ ಮಾರಾಟ ಮಾಡುತ್ತಿರುವ ಈ ಅಂಗಡಿ ಮಾಲೀಕರ ಪರವಾನಗಿಯನ್ನು ರದ್ದುಪಡಿಸಲು ಕ್ರಮ ಕೈಗೊಳ್ಳಬೇಕೆಂದು ಕೆಎಸ್ ಆರ್ ಟಿಸಿ ವಿಭಾಗೀಯ ನಿಯಂತ್ರಣಾಧಿಕಾರಿ ಚಂದ್ರಶೇಖರ್ ಅವರಿಗೆ ಸೂಚನೆ ನೀಡಿದರು. ನಂತರ ನಿಲ್ದಾಣದ ಶೌಚಾಲಯ ಬಳಕೆಗಾಗಿ ನಿಗದಿಪಡಿಸಿರುವ ಶುಲ್ಕವನ್ನು ಪಾವತಿಸಲು ಸಾರ್ವಜನಿಕರ ಅನುಕೂಲಕ್ಕೆ ಕ್ಯೂಆರ್ ಕೋಡ್ ಅನ್ನು ಲಗತ್ತಿಸಬೇಕೆಂದು ಸೂಚನೆ ನೀಡಿದರು.
ಹೋಟೆಲ್ ಗೆ ಭೇಟಿ:
ಕೆಎಸ್ ಆರ್ ಟಿಸಿ ಬಸ್ ನಿಲ್ದಾಣದಲ್ಲಿರುವ ಅನ್ನಪೂರ್ಣೇಶ್ವರಿ ಗ್ರಾಂಡ್ ವೆಜ್ ಹೋಟೆಲ್ ಗೆ ಭೇಟಿ ನೀಡಿ ಪರಿಶೀಲಿಸಿದ ವೇಳೆ, ಮೆನು ಚಾರ್ಟ್ನಲ್ಲಿ ಆಹಾರ ಪದಾರ್ಥಗಳ ನಿಗದಿತ ದರಗಳ ವಿವರ ಇಲ್ಲದಿರುವುದನ್ನು ಗಂಭೀರವಾಗಿ ಪರಿಗಣಿಸಿದ ಅವರು, ತಕ್ಷಣವೇ ದರ ಪಟ್ಟಿ ಪ್ರಕಟಿಸುವಂತೆ ಹೋಟೆಲ್ ಮಾಲೀಕರಿಗೆ ಆದೇಶಿಸಿದರಲ್ಲದೆ, ಆಹಾರ ಗುಣಮಟ್ಟ ಹಾಗೂ ರುಚಿ ಬಗ್ಗೆ ಊಟ ಮಾಡುತ್ತಿದ್ದವರನ್ನು ವಿಚಾರಿಸಿದರು.
ನಿಲ್ದಾಣದಲ್ಲಿ ಕಾಲೇಜಿಗೆ ತೆರಳಲು ಬಸ್ಸಿಗೆ ಕಾಯುತ್ತಿದ್ದ ವಿದ್ಯಾರ್ಥಿಗಳು ಗುಂಪಾಗಿ ಬಂದು ಬೆಳಿಗ್ಗೆ 7.30ರ ನಂತರ ಗುಬ್ಬಿ ಸಿಐಟಿ ಕಾಲೇಜಿಗೆ ಬಸ್ ಸೌಕರ್ಯ ಕಲ್ಪಿಸಬೇಕು. ನಗರದ ಶ್ರೀದೇವಿ ಕಾಲೇಜಿನ ಬಳಿ ಬಸ್ ನಿಲುಗಡೆ ವ್ಯವಸ್ಥೆಗೆ ಕ್ರಮ ಕೈಗೊಳ್ಳಲು ನಿಗಮಕ್ಕೆ ಸೂಚನೆ ನೀಡಬೇಕೆಂದು ಉಪಲೋಕಾಯುಕ್ತರಲ್ಲಿ ಮನವಿ ಮಾಡಿದರು.
ಜಿಲ್ಲಾಸ್ಪತ್ರೆಗೆ ಭೇಟಿ:
ಜಿಲ್ಲಾಸ್ಪತ್ರೆಯನ್ನು ಪರಿಶೀಲಿಸಿ ರೋಗಿಗಳ ಅನುಕೂಲಕ್ಕಾಗಿ ಪ್ರತಿ ಕೋಣೆಯ ಹೊರಭಾಗದಲ್ಲಿ ವೈದ್ಯರ ಭೇಟಿ ಸಮಯ, ಸೂಚನಾ ಫಲಕಗಳನ್ನು ಅಳವಡಿಸುವಂತೆ ಸೂಚಿಸಿದರು. ಪ್ರತಿ ಮಹಡಿಯಲ್ಲಿ ಶುದ್ಧ ಕುಡಿಯುವ ನೀರಿನ ವ್ಯವಸ್ಥೆ ಮಾಡಬೇಕು ಎಂದು ಹೇಳಿದರಲ್ಲದೆ, ಯಾವುದೇ ಸಂದರ್ಭದಲ್ಲೂ ಆಸ್ಪತ್ರೆಗೆ ಬರುವ ರೋಗಿಗಳಿಗೆ ಹೊರಗಡೆ ಔಷಧ ಬರೆಯಬಾರದು ಎಂದು ಸ್ಪಷ್ಟ ಸೂಚನೆ ನೀಡಿದರು. ಔಷಧಿಗಳ ಅವಧಿ ದಿನಾಂಕವನ್ನು ಕಾಲಕಾಲಕ್ಕೆ ಪರಿಶೀಲಿಸುವುದು ಎಲ್ಲ ಸಿಬ್ಬಂದಿಗಳ ಜವಾಬ್ದಾರಿಯಾಗಿದೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಕರ್ನಾಟಕ ಲೋಕಾಯುಕ್ತ ಉಪನಿಬಂಧಕ ಅರವಿಂದ ಎನ್.ವಿ., ಅಪರ ಜಿಲ್ಲಾಧಿಕಾರಿ ಡಾ: ಎನ್. ತಿಪ್ಪೇಸ್ವಾಮಿ, ತಹಶೀಲ್ದಾರ್ ರಾಜೇಶ್ವರಿ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಚಂದ್ರಶೇಖರ್, ಜಿಲ್ಲಾ ಶಸ್ತ್ರ ಚಿಕಿತ್ಸಕ ಡಾ. ಅಸ್ಗರ್ ಬೇಗ್, ತುಮಕೂರು ಲೋಕಾಯುಕ್ತ ಪೊಲೀಸ್ ಅಧೀಕ್ಷಕ ಲಕ್ಷ್ಮೀ ನಾರಾಯಣ ಸೇರಿದಂತೆ ಮತ್ತಿತರೆ ಅಧಿಕಾರಿಗಳು ಉಪಸ್ಥಿತರಿದ್ದರು.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/ISmeQjik4LbG9KvWhKlbCC


