ಬೆಳಗಾವಿ: ಜಿಲ್ಲೆಯ ಅನಗೋಳದ ಬಾಬಲೇ ಗಲ್ಲಿಯಲ್ಲಿ ಅನೈತಿಕ ಸಂಬಂಧದ ಹಿನ್ನೆಲೆಯಲ್ಲಿ ಪತ್ನಿಯೇ ತನ್ನ ಪ್ರಿಯಕರನೊಂದಿಗೆ ಸೇರಿ ಪತಿಯನ್ನು ಬರ್ಬರವಾಗಿ ಕೊಲೆ ಮಾಡಿರುವ ಆಘಾತಕಾರಿ ಘಟನೆ ನಡೆದಿದೆ. ಖಾಸಗಿ ಆಯುರ್ವೇದಿಕ್ ಕಾಲೇಜಿನ ಥೆರಪಿಸ್ಟ್ ಆಗಿದ್ದ ಅವಿನಾಶ್ ಸೂಪ್ಪಣ್ಣವರ (40) ಕೊಲೆಯಾದ ದುರ್ದೈವಿ. ಘಟನೆಗೆ ಸಂಬಂಧಿಸಿದಂತೆ ಪತ್ನಿ ಲಕ್ಷ್ಮೀ ಸೂಪ್ಪಣ್ಣವರ ಮತ್ತು ಆಕೆಯ ಪ್ರಿಯಕರ ಕೈಲಾಶ್ ಅಚ್ಚಿತಾಲ್ ಎಂಬವರನ್ನು ಪೊಲೀಸರು ಬಂಧಿಸಿದ್ದಾರೆ.
ಕಳೆದ ಎರಡು ವರ್ಷಗಳಿಂದ ಲಕ್ಷ್ಮೀ ಮತ್ತು ಕೈಲಾಶ್ ನಡುವೆ ಅನೈತಿಕ ಸಂಬಂಧವಿತ್ತು. ಈ ವಿಚಾರ ತಿಳಿದ ಪತಿ ಅವಿನಾಶ್ ಅವರು ಪತ್ನಿಗೆ ಎಚ್ಚರಿಕೆ ನೀಡಿದ್ದರು. ಇದರಿಂದ ಆಕ್ರೋಶಗೊಂಡ ಲಕ್ಷ್ಮೀ, ಪತಿಯನ್ನು ಹತ್ಯೆ ಮಾಡಲು ಪ್ರಿಯಕರನ ಜೊತೆ ಸೇರಿ ಸಂಚು ರೂಪಿಸಿದ್ದಳು. ಮಾರ್ಚ್ 6ರಂದು ಅವಿನಾಶ್ ಅವರು ಕ್ಲಿನಿಕ್ಗೆ ಹೋದಾಗ, ಕೈಲಾಶ್ ಅಲ್ಲಿಗೆ ತೆರಳಿ ತಂಪು ಪಾನೀಯದಲ್ಲಿ ನಿದ್ರೆ ಮಾತ್ರೆ ಬೆರೆಸಿ ನೀಡಿದ್ದ.
ಅವಿನಾಶ್ ಅರೆಪ್ರಜ್ಞಾವಸ್ಥೆಗೆ ತಲುಪುತ್ತಿದ್ದಂತೆ, ಕೈಲಾಶ್ ಅಲ್ಲೇ ಇದ್ದ ಗ್ಯಾಸ್ ಸಿಲಿಂಡರ್ನಿಂದ ಅವರ ತಲೆ ಮತ್ತು ಎದೆಗೆ ಬಲವಾಗಿ ಹೊಡೆದು ಹತ್ಯೆ ಮಾಡಿದ್ದಾನೆ. ಈ ವೇಳೆ ಲಕ್ಷ್ಮೀ ವಿಡಿಯೋ ಕಾಲ್ ಮೂಲಕ ಕೊಲೆಯನ್ನು ಖಚಿತಪಡಿಸಿಕೊಂಡಿದ್ದಳು ಎನ್ನಲಾಗಿದೆ.
ಹತ್ಯೆಯ ಬಳಿಕ ಏನೂ ತಿಳಿಯದವಳಂತೆ ಕ್ಲಿನಿಕ್ಗೆ ಬಂದ ಲಕ್ಷ್ಮೀ, ಪತಿ ಶುಗರ್ ಹೆಚ್ಚಾಗಿ ಕುಸಿದು ಬಿದ್ದು ಸಾವನ್ನಪ್ಪಿದ್ದಾರೆ ಎಂದು ನಾಟಕವಾಡಿದ್ದಳು. ಆದರೆ ಮೃತನ ತಾಯಿ ನೀಡಿದ ದೂರಿನ ಮೇರೆಗೆ ತನಿಖೆ ಕೈಗೊಂಡ ಟಿಳಕವಾಡಿ ಪೊಲೀಸರು, ಮೊಬೈಲ್ ಕರೆಗಳ ಆಧಾರದ ಮೇಲೆ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಸದ್ಯ ಆರೋಪಿಗಳು ಪೊಲೀಸ್ ವಶದಲ್ಲಿದ್ದು, ತನಿಖೆ ಮುಂದುವರಿದಿದೆ.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/ISmeQjik4LbG9KvWhKlbCC


