ಗುಬ್ಬಿ: ತಾಲೂಕಿನಲ್ಲಿ ಬೇಸಿಗೆಯಲ್ಲಿ ನೀರಿನ ಸಮಸ್ಯೆ ಹೆಚ್ಚಾಗಿ ಜಲ ಜೀವನ್ ಮಿಷನ್ ಯೋಜನೆಯಡಿ ನಡೆದ ಕಾಮಗಾರಿಗಳಿಂದ ಕಂಡು ಬರುತ್ತಿದೆ. ಎಲ್ಲೂ ಪೂರ್ಣವಾಗಿ ಕೆಲಸ ಮಾಡಿಲ್ಲ, ಪಂಚಾಯಿತಿಗೆ ಹಸ್ತಾಂತರ ಆಗಿಲ್ಲ. ಕಾಮಗಾರಿ ಅರ್ಧಕ್ಕೆ ನಿಂತ ಬಗ್ಗೆ ದೂರುಗಳು ಹೆಚ್ಚಾಗಿವೆ. ಬೆಸ್ಕಾಂ ಇಲಾಖೆಯ ವಿಳಂಬ ನೀತಿ ನೀರಿನ ಸಮಸ್ಯೆಗೆ ಕಾರಣವಾಗಿದೆ ಎಂದು ಶಾಸಕ ಎಸ್.ಆರ್.ಶ್ರೀನಿವಾಸ್ ಬೇಸರ ವ್ಯಕ್ತಪಡಿಸಿದರು.
ಪಟ್ಟಣದ ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ನಡೆದ ಟಾಸ್ಕ್ ಫೋರ್ಸ್ ಸಭೆಯಲ್ಲಿ ಮಾತನಾಡಿದ ಅವರು, ಶುದ್ಧ ಕುಡಿಯುವ ನೀರಿನ ಘಟಕವನ್ನು ಸ್ಥಳೀಯ ಗ್ರಾಮ ಪಂಚಾಯಿತಿ ಹಸ್ತಾಂತರಕ್ಕೆ ಪಡೆಯುವ ಮುನ್ನ ಸುಸ್ಥಿತಿಯಲ್ಲಿದೆಯೇ ಎಂಬುದನ್ನು ಗಮನಿಸಬೇಕು. ಹಾಗೆಯೇ ವಿಜಿನಿ ಗಡುವು ಮುಗಿದಿದೆಯೇ ಗಮನಿಸಿ ಮುಂದಿನ ಕ್ರಮ ಕೈಗೊಳ್ಳಿ. ಸರ್ಕಾರಿ ಜಾಗ ವಶಕ್ಕೆ ಪಡೆದು ನೀರಿನ ಟ್ಯಾಂಕ್ ನಿರ್ಮಿಸಲು ಅನುವು ಮಾಡಬೇಕು. ಬೇಸಿಗೆಯಲ್ಲಿ ಕುಡಿಯುವ ನೀರಿನ ಸಮಸ್ಯೆ ತಲೆದೋರದಂತೆ ಮುನ್ನೆಚ್ಚರಿಕೆ ಕ್ರಮ ವಹಿಸಬೇಕು ಎಂದು ಸೂಚನೆ ನೀಡಿದರು.
ಕೊಳವೆಬಾವಿ ಅವಶ್ಯವಿದ್ದಲ್ಲಿ ಕೊರೆಯಲಾಗುವುದು. ವಿದ್ಯುತ್ ಸಂಪರ್ಕ ಎಲ್ಲಿಯೂ ವಿಳಂಬವಾಗದಂತೆ ಬೆಸ್ಕಾಂ ಅಧಿಕಾರಿಗಳು ನಿಗಾ ವಹಿಸಬೇಕು. ಸಮಸ್ಯೆ ಕಂಡಲ್ಲಿ ಮೊದಲ ಆದ್ಯತೆ ನೀರಿಗೆ ನೀಡಿ ತಕ್ಷಣ ಸಮಸ್ಯೆ ಬಗೆಹರಿಸಬೇಕು. ಅರಣ್ಯ ಪ್ರದೇಶದ ಜಾಗವೆಂದು ಕೆಲವು ಸರ್ಕಾರಿ ಯೋಜನೆಗೆ ಅಡ್ಡಿಯಾಗಿದೆ. ಸರ್ವೆ ನಡೆಸಿ ಅರಣ್ಯ ಅಲ್ಲದ್ದನ್ನು ಬಿಟ್ಟುಕೊಡಬೇಕು. ಸರ್ಕಾರಿ ಶಾಲಾ ಆವರಣದಲ್ಲಿ ಅಂಗನವಾಡಿ ಕಟ್ಟಡ ನಿರ್ಮಿಸಲು ಸರ್ಕಾರ ಆದೇಶ ನೀಡಿದೆ. ಅದರಂತೆ ತಾಲೂಕಿನಲ್ಲಿ 38 ಶಾಲೆಯಲ್ಲಿ ಕಾಮಗಾರಿ ನಡೆಯಲಿದೆ.
ಮಣ್ಣಮ್ಮ ದೇವಸ್ಥಾನದ ಸಮೀಪದಲ್ಲಿ ನಿವೇಶನ ಎಂದು ಹೇಳಿಕೊಂಡೇ ಅರ್ಧ ಎಕರೆ ಒತ್ತುವರಿ ಮಾಡಿರುತ್ತಾರೆ. ಎಲ್ಲವನ್ನೂ ತೆರವು ಮಾಡಿ ಅರ್ಹರಿಗೆ ಸೈಟ್ ನೀಡಬೇಕು. ತಾಲೂಕಿನ ಎಲ್ಲಾ 34 ಗ್ರಾಮ ಪಂಚಾಯಿತಿ ವ್ಯಾಪ್ತಿಯ ಎಲ್ಲಾ ಗ್ರಾಮದ ಸಮಸ್ಯೆ ಆಲಿಸಿ ಸ್ಥಳೀಯ ಗ್ರಾಮ ಆಡಳಿತಾಧಿಕಾರಿಗಳು ಹಾಗೂ ಅಭಿವೃದ್ಧಿ ಅಧಿಕಾರಿಗಳ ಜೊತೆ ಸುದೀರ್ಘ ಸಭೆ ನಡೆಸಿ ನೀರು ಮತ್ತು ವಿದ್ಯುತ್ ಸಮಸ್ಯೆಗೆ ಸೂಕ್ತ ಪರಿಹಾರ ಸೂಚಿಸಿದರು.
ಸಭೆಯಲ್ಲಿ ತಹಶೀಲ್ದಾರ್ ಆರತಿ.ಬಿ, ತಾಪಂ ಇಒ ರಂಗನಾಥ್, ಪಪಂ ಮುಖ್ಯಾಧಿಕಾರಿ ಮಂಜುಳಾದೇವಿ, ಕುಡಿಯುವ ನೀರು ನೈರ್ಮಲ್ಯ ಇಲಾಖೆಯ ಎಇಇ ನಾಗೇಂದ್ರಪ್ಪ ಸೇರಿದಂತೆ ತಾಲೂಕು ಮಟ್ಟದ ಅಧಿಕಾರಿಗಳು ಇದ್ದರು.
“ಕೋಟಿಗಟ್ಟಲೆ ರೂಪಾಯಿ ವೆಚ್ಚದ ಹೋಬಳಿ ಕೇಂದ್ರದ ಜೆಜೆಎಂ ಕಾಮಗಾರಿಗಳು ಹಸ್ತಾಂತರ ಆಗದೇ ತನಿಖೆಗೆ ಒಳಪಟ್ಟಿವೆ ಎಂಬುದು ಬೇಸರ ಮೂಡಿಸಿದೆ. ಈ ಮಹತ್ವಾಕಾಂಕ್ಷಿ ಯೋಜನೆ ಆರಂಭದಲ್ಲೇ ದುರಸ್ತಿಗೆ ಬಂದಿವೆ. ಎರಡೂವರೆ ಕೋಟಿ ರೂ. ಗಳನ್ನು ರಿಪೇರಿಗೆ ಕೇಳಿರುವುದು ಅಚ್ಚರಿ ತಂದಿದೆ. ನೀರಿಗೆ ಸಂಬಂಧಪಟ್ಟ ಇಲಾಖೆಗಳು ಸಹಯೋಗದಲ್ಲಿ ಕೆಲಸ ಮಾಡಬೇಕಿದೆ. ಸಣ್ಣಪುಟ್ಟ ದೂರುಗಳು ಸ್ಥಳೀಯ ಪಿಡಿಒಗಳು ಹಾಗೂ ಗ್ರಾಮ ಆಡಳಿತಾಧಿಕಾರಿಗಳು ಹೇಳುತ್ತಾರೆ. ಅದಕ್ಕೂ ಸಭೆ ನಡೆಸಿಯೇ ಸರಿಪಡಿಸುವ ಸ್ಥಿತಿ ಎದುರಾಗಿದೆ. ಟಿಸಿ ಚಾರ್ಜ್ ಮಾಡಿಲ್ಲ, ಪೈಪ್ ಲೈನ್ ಅರ್ಧಕ್ಕೆ ನಿಂತಿದೆ, ಪಂಪ್ ಮೋಟಾರ್ ಅಳವಡಿಸಿಲ್ಲ. ಹೀಗೆ ಇಲಾಖೆ ಹಂತದಲ್ಲಿ ಆಗುವ ಕೆಲಸವನ್ನು ತುರ್ತು ಸಭೆಯಲ್ಲಿ ಚರ್ಚಿಸುವ ವಾತಾವರಣ ನೋಡಿದರೆ, ಅಧಿಕಾರಿ ವರ್ಗ ಯಾವ ಮಟ್ಟದಲ್ಲಿ ಕೆಲಸ ಮಾಡುತ್ತಿದೆ?”
— ಎಸ್.ಆರ್. ಶ್ರೀನಿವಾಸ್, ಶಾಸಕರು.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/ISmeQjik4LbG9KvWhKlbCC


