ಬೀದರ್: ಇಲ್ಲಿನ ಹೊರವಲಯದಲ್ಲಿರುವ ಕರ್ನಾಟಕ ಪಶು ವೈದ್ಯಕೀಯ, ಪಶು ಹಾಗೂ ಮೀನುಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯದಲ್ಲಿ (KVAFSU) ನಕಲಿ ಬಿಲ್ ಸೃಷ್ಟಿಸಿ ಬರೋಬ್ಬರಿ ₹45 ಕೋಟಿಗೂ ಅಧಿಕ ಹಣದ ಹಗರಣ ಎಸಗಿರುವ ಆರೋಪದ ಮೇಲೆ ಲೋಕಾಯುಕ್ತ ಪೊಲೀಸರು ಭರ್ಜರಿ ಕಾರ್ಯಾಚರಣೆ ನಡೆಸಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ವಿಶ್ವವಿದ್ಯಾಲಯದ ವಿಶ್ರಾಂತ ಕುಲಪತಿ ಹಾಗೂ ನಿವೃತ್ತ ಕಂಟ್ರೋಲರ್ ಸೇರಿದಂತೆ ಒಟ್ಟು ಆರು ಮಂದಿ ಆರೋಪಿಗಳನ್ನು ಬಂಧಿಸಲಾಗಿದೆ.
ಬಂಧಿತ ಆರೋಪಿಗಳು:
ಎಚ್. ಡಿ. ನಾರಾಯಣಸ್ವಾಮಿ (ವಿಶ್ರಾಂತ ಕುಲಪತಿ)
ಕೆ. ಎಲ್. ಸುರೇಶ್ (ನಿವೃತ್ತ ಪ್ರಭಾರ ಹಣಕಾಸು ನಿಯಂತ್ರಣಾಧಿಕಾರಿ)
ಮೃತ್ಯುಂಜಯ ಹಿರೇಮಠ (ವಿಶ್ವವಿದ್ಯಾಲಯದ ಎಫ್ಡಿಎ)
ಬೊಪ್ಪಣ್ಣ (ಬೆಂಗಳೂರು ಎಂಟರ್ಪ್ರೈಸಸ್ ಮಾಲೀಕರು)
ಮಂಜುನಾಥ (ಬೆಂಗಳೂರು ಎಂಟರ್ಪ್ರೈಸಸ್ ಮಾಲೀಕರು)
ರಾಮಗೊಂಡ
ಕಳೆದ 2017–18ರ ಅವಧಿಯಲ್ಲಿ ವಿಶ್ವವಿದ್ಯಾಲಯದಲ್ಲಿ ₹45 ಕೋಟಿಗೂ ಅಧಿಕ ಮೊತ್ತದ ನಕಲಿ ಬಿಲ್ಗಳನ್ನು ಸೃಷ್ಟಿಸಿ, ನಿಯಮಬಾಹಿರವಾಗಿ ಅಕ್ರಮ ಎಸಗಲಾಗಿತ್ತು. ಈ ಅವಧಿಯಲ್ಲಿ ಎಚ್. ಡಿ. ನಾರಾಯಣಸ್ವಾಮಿ ಅವರು ಕುಲಪತಿಯಾಗಿ ಹಾಗೂ ಕೆ.ಎಲ್.ಸುರೇಶ್ ಅವರು ಕಂಟ್ರೋಲರ್ ಆಗಿ ಕಾರ್ಯನಿರ್ವಹಿಸುತ್ತಿದ್ದರು. ವಿಶ್ವವಿದ್ಯಾಲಯದ ಎಫ್ ಡಿಎ ಆಗಿದ್ದ ಮೃತ್ಯುಂಜಯ ಹಿರೇಮಠ ಅವರು ಬೆಂಗಳೂರಿನ ಖಾಸಗಿ ಎಂಟರ್ಪ್ರೈಸಸ್ ಜೊತೆ ಕೈಜೋಡಿಸಿ ಈ ಬೃಹತ್ ಹಗರಣವನ್ನು ನಡೆಸಿದ್ದಾರೆ ಎಂದು ಆರೋಪಿಸಲಾಗಿದೆ.
ಈ ಭ್ರಷ್ಟಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ನ್ಯಾಯಾಲಯವು ವಾರೆಂಟ್ ಜಾರಿಗೊಳಿಸಿತ್ತು. ಇದರ ಬೆನ್ನಲ್ಲೇ ತಕ್ಷಣ ಕಾರ್ಯಪ್ರವೃತ್ತರಾದ ಲೋಕಾಯುಕ್ತ ಪೊಲೀಸರು ಜಂಟಿ ಕಾರ್ಯಾಚರಣೆ ನಡೆಸಿ, ಕೆಲ ಆರೋಪಿಗಳನ್ನು ಬೀದರ್ ನಲ್ಲಿ ಹಾಗೂ ಇನ್ನು ಕೆಲವರನ್ನು ಬೆಂಗಳೂರಿನಲ್ಲಿ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಸದ್ಯ ಬಂಧಿತರೆಲ್ಲರನ್ನೂ ಬೀದರ್ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ.
ಲೋಕಾಯುಕ್ತ ಎಡಿಜಿಪಿ ಮನೀಷ್ ಕರ್ಬಿಕರ್, ಐಜಿಪಿ ಎ. ಎಸ್. ಸುಬ್ರಹ್ಮಣ್ಯೇಶ್ವರ ರಾವ್ ಹಾಗೂ ಎಸ್ಪಿಗಳಾದ ಬದ್ರಿನಾಥ್ ಮತ್ತು ಸಿದ್ದರಾಜು ಅವರ ನೇರ ಮಾರ್ಗದರ್ಶನದಲ್ಲಿ, ಬೀದರ್ ಲೋಕಾಯುಕ್ತ ಡಿವೈಎಸ್ ಪಿಗಳಾದ ಹಣಮಂತರಾಯ ಮತ್ತು ಸಂತೋಷ್ ರಾಠೋಡ್ ನೇತೃತ್ವದ ಸಿಬ್ಬಂದಿ ತಂಡ ಈ ಯಶಸ್ವಿ ಕಾರ್ಯಾಚರಣೆಯನ್ನು ನಡೆಸಿದೆ.
ವರದಿ: ಅರವಿಂದ ಮಲ್ಲಿಗೆ, ಬೀದರ್
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/ISmeQjik4LbG9KvWhKlbCC


