ಸರಗೂರು: ಕಸುಬಿಗೆ ತಕ್ಕಂತೆ ಪೇಟೆ, ಪಂಥಗಳಿಗೆ ತಕ್ಕಂತೆ ಗುಡಿಗೋಪುರ ಹಾಗೂ ವಸತಿಗೆ ತಕ್ಕಂತೆ ಕೆರೆ–ಕುಂಟೆಗಳನ್ನು ನಿರ್ಮಿಸಿ ಮಾದರಿ ನಗರ ನಿರ್ಮಾಣಕ್ಕೆ ಕಾರಣರಾದ ನಾಡಪ್ರಭು ಕೆಂಪೇಗೌಡರ ಜಾತ್ಯತೀತ ಮನೋಭಾವ ಎಲ್ಲರಿಗೂ ಸದಾ ಸ್ಮರಣೀಯ ಮತ್ತು ಆದರ್ಶಪ್ರಾಯ ಎಂದು ಒಕ್ಕಲಿಗರ ಸಂಘದ ತಾಲೂಕು ಅಧ್ಯಕ್ಷ ಎಚ್.ಎನ್. ಸುದೀರ್ ತಿಳಿಸಿದರು.
ಪಟ್ಟಣದ ತಹಶೀಲ್ದಾರ್ ಕಚೇರಿ ಆವರಣದಲ್ಲಿ ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ಹಾಗೂ ಒಕ್ಕಲಿಗರ ಸಂಘದ ಸಹಯೋಗದೊಂದಿಗೆ ಹಮ್ಮಿಕೊಳ್ಳಲಾಗಿದ್ದ ‘ಕೆಂಪೇಗೌಡ ಜಯಂತಿ’ ಕಾರ್ಯಕ್ರಮವನ್ನು ಜ್ಯೋತಿ ಬೆಳಗಿಸುವ ಮೂಲಕ ಉದ್ಘಾಟಿಸಿ ಅವರು ಮಾತನಾಡಿದರು. ಬೆಂಗಳೂರು ನಗರದ ನಿರ್ಮಾಣ ಮತ್ತು ಅಭಿವೃದ್ಧಿಗೆ ಕೆಂಪೇಗೌಡರು ನೀಡಿರುವ ಕೊಡುಗೆಗಳ ಬಗ್ಗೆ ಜನರಲ್ಲಿ, ಅದರಲ್ಲೂ ಮುಖ್ಯವಾಗಿ ಶಾಲಾ-ಕಾಲೇಜು ವಿದ್ಯಾರ್ಥಿಗಳಲ್ಲಿ ಅರಿವು ಮೂಡಿಸುವ ಕೆಲಸವಾಗಬೇಕು ಎಂದರು. ಕೆಂಪೇಗೌಡರು ದೂರದೃಷ್ಟಿಯಿಂದ ಎಲ್ಲಾ ಸಮುದಾಯದವರೂ ಸಹಬಾಳ್ವೆಯಿಂದ ಜೀವಿಸುವಂತೆ ಅಂದೇ ವ್ಯವಸ್ಥೆ ಮಾಡಿದ್ದರು ಎಂದು ನೆನೆದರು.
ಮುಖ್ಯ ಭಾಷಣಕಾರರಾಗಿ ಆಗಮಿಸಿದ್ದ ಎಂ.ಎಂ.ಕೆ.ಕಾಲೇಜಿನ ಉಪನ್ಯಾಸಕಿ ಮಹಾದೇವಿ ಮಾತನಾಡಿ, “ದೂರದೃಷ್ಟಿ ಹೊಂದಿದ್ದ ಕೆಂಪೇಗೌಡರು ಬೆಂಗಳೂರನ್ನು ವೈಜ್ಞಾನಿಕವಾಗಿ ಕಟ್ಟಿದರು. ಬೆಂಗಳೂರು ಕಟ್ಟಿದ ಕೆಂಪೇಗೌಡ ಹಾಗೂ ಗುಡಿಬಂಡೆ ಕಟ್ಟಿದ ಬೈರೇಗೌಡರ ಆಡಳಿತ ಶೈಲಿಯಲ್ಲಿ ಸಾಕಷ್ಟು ಸಾಮ್ಯತೆಗಳಿವೆ. ಇಬ್ಬರೂ ಜಲಕ್ಷಾಮ ನಿವಾರಣೆಗೆ ಕೆರೆಗಳನ್ನು ನಿರ್ಮಿಸಿದ್ದರು. ಇಂತಹ ಮಹಾನ್ ಪುರುಷರ ಜಯಂತಿಗಳು ಕೇವಲ ಆಚರಣೆಗೆ ಸೀಮಿತವಾಗದೆ, ಅವರ ಆದರ್ಶಗಳನ್ನು ನಾವು ಜೀವನದಲ್ಲಿ ಅಳವಡಿಸಿಕೊಳ್ಳಬೇಕು” ಎಂದರು.
ತಹಸೀಲ್ದಾರ್ ಮೋಹನಕುಮಾರಿ ಮಾತನಾಡಿ, “ಸುದೀರ್ಘ ಆಡಳಿತ ನಡೆಸಿ ಇಂದಿನ ಬಹುದೊಡ್ಡ ಸುಸಜ್ಜಿತ ನಗರಕ್ಕೆ ಶಾಶ್ವತ ಭದ್ರಬುನಾದಿ ಹಾಕಿದ ಕೆಂಪೇಗೌಡರ ತ್ಯಾಗ ಮತ್ತು ಶ್ರಮ ಅನನ್ಯವಾದದ್ದು. ಮೂಲಭೂತ ಸೌಕರ್ಯ, ನಗರಾಭಿವೃದ್ಧಿ, ಕೃಷಿ ಹಾಗೂ ನೀರಾವರಿ ಯೋಜನೆಗಳನ್ನು ಜಾರಿಗೆ ತಂದು ಸಮರ್ಥ ಆಡಳಿತ ನೀಡಿದ್ದಾರೆ” ಎಂದು ಶ್ಲಾಘಿಸಿದರು.
ಇದೇ ಸಂದರ್ಭದಲ್ಲಿ ತಾಲ್ಲೂಕು ಮಟ್ಟದಲ್ಲಿ ಒಕ್ಕಲಿಗ ಸಮಾಜದ ಸಮುದಾಯ ಭವನ ನಿರ್ಮಾಣಕ್ಕಾಗಿ ನಿವೇಶನ ಮಂಜೂರು ಮಾಡುವಂತೆ ಸಂಘದ ವತಿಯಿಂದ ತಹಸೀಲ್ದಾರ್ ಅವರಿಗೆ ಮನವಿ ಸಲ್ಲಿಸಲಾಯಿತು. ಪಟ್ಟಣದಲ್ಲಿ ಸರ್ಕಾರಿ ಜಾಗದ ಕೊರತೆಯಿರುವುದರಿಂದ ಪಟ್ಟಣ ಪಂಚಾಯಿತಿಯ ಸಿಎ (CA) ಸೈಟ್ನಲ್ಲಿ ಜಾಗ ಗುರುತಿಸಿಕೊಡುವಂತೆ ಪಪಂ ಅಧ್ಯಕ್ಷೆ ಚೈತ್ರಾ ಸ್ವಾಮಿ ಅವರ ಗಮನಕ್ಕೆ ತರಲಾಯಿತು. ಇದಕ್ಕೆ ಸ್ಪಂದಿಸಿದ ತಹಸೀಲ್ದಾರ್, ಕಂದಾಯ ಅಧಿಕಾರಿಗಳಿಗೆ ಸೂಕ್ತ ಸರ್ಕಾರಿ ಜಾಗವನ್ನು ಗುರುತಿಸಲು ಸೂಚನೆ ನೀಡುವುದಾಗಿ ಭರವಸೆ ನೀಡಿದರು.
ಸಾಗರೆ ಗ್ರಾಮದಲ್ಲಿ ಸರ್ಕಾರಿ ಶಾಲೆಗೆ ಜಾಗವನ್ನು ದಾನವಾಗಿ ನೀಡಿದ ಸಮಾಜದ ಹಿರಿಯರಾದ ಪುಟ್ಟೇಗೌಡ ಅವರನ್ನು ತಾಲ್ಲೂಕು ಆಡಳಿತ ಹಾಗೂ ಸಮಾಜದ ವತಿಯಿಂದ ಗೌರವಿಸಲಾಯಿತು. ಇದೇ ವೇಳೆ ಎಸ್ಎಸ್ಎಲ್ಸಿ ಪರೀಕ್ಷೆಯಲ್ಲಿ ಅತಿ ಹೆಚ್ಚು ಅಂಕ ಗಳಿಸಿದ ಒಕ್ಕಲಿಗ ಸಮುದಾಯದ ವಿದ್ಯಾರ್ಥಿಗಳಿಗೆ ಸನ್ಮಾನಿಸಿ ಪ್ರೋತ್ಸಾಹಿಸಲಾಯಿತು.
ಕಾರ್ಯಕ್ರಮದಲ್ಲಿ ಒಕ್ಕಲಿಗ ಸಂಘದ ಉಪಾಧ್ಯಕ್ಷರಾದ ಬಿ.ಜೆ. ಅಶೋಕ್ ಕುಮಾರ್, ಶಿವರಾಜು, ಕಾರ್ಯದರ್ಶಿ ಅಶೋಕ್, ನಾಗೇಶ್, ಸಕಲೇಶ್ ಸಾಗರೆ, ಪಪಂ ಅಧ್ಯಕ್ಷೆ ಚೈತ್ರಾ ಸ್ವಾಮಿ, ಇಓ ಪ್ರೇಮಕುಮಾರ್, ಕೆಇಬಿ ಎಇಇ ರಮೇಶ್, ಮುಖಂಡರಾದ ಮಹೇಂದ್ರ, ಸಂಘದ ನಿರ್ದೇಶಕರುಗಳಾದ ರವಿ ಬಡಗಲಪುರ, ಮಹದೇವಸ್ವಾಮಿ, ಶಿವರಾಜು, ಶಿವಕುಮಾರ್, ನಾಗೇಗೌಡ, ಸುರೇಶ್, ವೆಂಕಟೇಶ್, ನಟರಾಜು, ರವಿಗೌಡ, ಕೇಶವ, ಬಾಬು, ಅಣ್ಣಯ್ಯಸ್ವಾಮಿ ಸೇರಿದಂತೆ ವಿವಿಧ ಗ್ರಾಮಗಳ ಯಜಮಾನರು ಹಾಗೂ ಯುವಕರು ಉಪಸ್ಥಿತರಿದ್ದರು.
ವರದಿ: ಹಾದನೂರು ಚಂದ್ರ
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/ISmeQjik4LbG9KvWhKlbCC




