ತುಮಕೂರು: ರಾಜ್ಯಾದ್ಯಂತ ಸದ್ಯ ಆರಂಭವಾಗಿರುವ ‘ವಿಶೇಷ ಸಮಗ್ರ ಪರಿಷ್ಕರಣೆ’ (ಎಸ್.ಐ.ಆರ್) ಕಾರ್ಯದ ನಡುವೆಯೇ, ರಾಜ್ಯ ಸರ್ಕಾರದ ಹೊಸ ಆದೇಶವೊಂದರ ವಿರುದ್ಧ ತುಮಕೂರು ನಗರ ಶಾಸಕರಾದ ಜಿ.ಬಿ.ಜ್ಯೋತಿಗಣೇಶ್ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಕರ್ನಾಟಕ ಸರ್ಕಾರ ಹೊರಡಿಸಿರುವ ‘ಕರ್ನಾಟಕ ಶಾಶ್ವತ ನಿವಾಸ ಪ್ರಮಾಣಪತ್ರ’ (ಪಿ.ಆರ್.ಸಿ.) 2026 ರ ಅಧಿಸೂಚನೆಯು ಅಕ್ರಮ ವಲಸಿಗರನ್ನು ಸಕ್ರಮಗೊಳಿಸುವ ವ್ಯವಸ್ಥಿತ ಹುನ್ನಾರವಾಗಿದೆ ಎಂದು ಅವರು ಗಂಭೀರವಾಗಿ ಆರೋಪಿಸಿದ್ದಾರೆ.
ಮಾಧ್ಯಮಗಳಿಗೆ ಪ್ರತಿಕ್ರಿಯಿಸಿರುವ ಶಾಸಕರು, ರಾಜ್ಯದಲ್ಲಿ ಸದ್ಯ ನಡೆಯುತ್ತಿರುವ ವಿಶೇಷ ಸಮಗ್ರ ಪರಿಷ್ಕರಣೆಯ ಮುಖ್ಯ ಉದ್ದೇಶವೇ ಅಕ್ರಮ ವಲಸಿಗರನ್ನು ಮತದಾರರ ಪಟ್ಟಿಯಿಂದ ಪತ್ತೆ ಹಚ್ಚಿ ಹೊರದಬ್ಬುವುದಾಗಿದೆ ಎಂದರು. ಈ ಪ್ರಕ್ರಿಯೆ ದೇಶಾದ್ಯಂತ ಅತ್ಯಂತ ಸುಸೂತ್ರವಾಗಿ ನಡೆಯುತ್ತಿದೆ ಹಾಗೂ ಭಾರತದ ಪ್ರತಿಯೊಬ್ಬ ನಾಗರಿಕನಿಗೂ ಮತದಾರನಾಗುವ ಹಕ್ಕಿದೆ, ಅದಕ್ಕೆ ನಮ್ಮ ಯಾವುದೇ ಆಕ್ಷೇಪಣೆ ಇಲ್ಲ ಎಂದು ಸ್ಪಷ್ಟಪಡಿಸಿದರು. ಆದರೆ, ಕರ್ನಾಟಕ ಸರ್ಕಾರವು ರಾಜ್ಯದಲ್ಲಿ ಕೇವಲ 10 ವರ್ಷ ವಾಸವಿರುವವರಿಗೆ ‘ಶಾಶ್ವತ ನಿವಾಸ ಪ್ರಮಾಣಪತ್ರ’ (PRC) ನೀಡಲು ಮುಂದಾಗಿರುವುದು ಅತ್ಯಂತ ಖಂಡನೀಯ ಹಾಗೂ ಸಾಂವಿಧಾನಿಕ ವಿರೋಧಿ ನಡೆ ಎಂದು ಕಿಡಿಕಾರಿದ್ದಾರೆ.
ಭಾರತದ ಸಂವಿಧಾನವು ಇಡೀ ದೇಶಕ್ಕೆ ಒಂದೇ ಪೌರತ್ವವನ್ನು ಕಲ್ಪಿಸಿದೆ. ಆದರೆ ರಾಜ್ಯ ಸರ್ಕಾರವು ಪ್ರತ್ಯೇಕವಾಗಿ ‘ಶಾಶ್ವತ ನಿವಾಸಿಗಳು’ ಎಂಬ ಹೊಸ ವರ್ಗವನ್ನು ಸೃಷ್ಟಿಸಲು ಹೊರಟಿದೆ. ಇದು ಸಂವಿಧಾನದ ಚೌಕಟ್ಟನ್ನು ಮೀರಿ, ಯಾವುದೇ ಅನುಮತಿಯಿಲ್ಲದ ವಿಶಿಷ್ಟ ಕಾನೂನು ಮಾನ್ಯತೆಯನ್ನು ನೀಡುವ ಪ್ರಯತ್ನವಾಗಿದೆ ಎಂದು ಶಾಸಕರು ದೂರಿದ್ದಾರೆ. ಯಾವುದೇ ಸೂಕ್ತ ಪೌರತ್ವ ಪರಿಶೀಲನೆ ನಡೆಸದೆ ಈ ರೀತಿಯ ಪ್ರಮಾಣಪತ್ರಗಳನ್ನು ವಿತರಿಸುವುದರಿಂದ, ಅಕ್ರಮವಾಗಿ ಭಾರತದೊಳಗೆ ನುಸುಳಿರುವ ವಿದೇಶಿ ವಲಸಿಗರು ಸುಲಭವಾಗಿ ಇಲ್ಲಿ ನೆಲೆ ಕಂಡುಕೊಳ್ಳುತ್ತಾರೆ. ಇದು ಭವಿಷ್ಯದಲ್ಲಿ ದೇಶದ ಆಂತರಿಕ ಸುರಕ್ಷತೆ ಮತ್ತು ರಾಷ್ಟ್ರೀಯ ಭದ್ರತೆಗೆ ದೊಡ್ಡ ಕಂಟಕವಾಗಿ ಪರಿಣಮಿಸಲಿದೆ. ಅಲ್ಲದೆ ಕೇಂದ್ರ ಸರ್ಕಾರದ ಏಕರೂಪದ ಚೌಕಟ್ಟನ್ನು ಇದು ಸಂಪೂರ್ಣವಾಗಿ ದುರ್ಬಲಗೊಳಿಸುತ್ತದೆ ಎಂದು ಆತಂಕ ವ್ಯಕ್ತಪಡಿಸಿದರು.
ರಾಷ್ಟ್ರೀಯ ಭದ್ರತೆ ಮತ್ತು ಸಂವಿಧಾನದ ಸಮಾನತೆಯ ತತ್ವವನ್ನು ರಕ್ಷಿಸಲು ಈ ತಕ್ಷಣವೇ ಅಗತ್ಯ ಕ್ರಮಗಳನ್ನು ಕೈಗೊಳ್ಳಬೇಕಾಗಿದೆ ಎಂದು ಶಾಸಕರು ಒತ್ತಾಯಿಸಿದ್ದಾರೆ. ಈ ಪಿ.ಆರ್.ಸಿ. ಅಧಿಸೂಚನೆಯನ್ನು ಹೊರಡಿಸಲು ರಾಜ್ಯ ಸರ್ಕಾರಕ್ಕೆ ಅಧಿಕಾರ ನೀಡಿದ ಸಾಂವಿಧಾನಿಕ ಮತ್ತು ಶಾಸನಬದ್ಧ ಪ್ರಾಧಿಕಾರದ ಕುರಿತು ಸರ್ಕಾರದಿಂದ ತಕ್ಷಣವೇ ವಿವರವಾದ ವರದಿ ಪಡೆಯಬೇಕಾಗಿದೆ. ಅದರೊಂದಿಗೆ ಕೇಂದ್ರ ಸರ್ಕಾರದ ಸಮರ್ಥ ತನಿಖಾ ಸಂಸ್ಥೆಗಳ ಮೂಲಕ ಕಟ್ಟುನಿಟ್ಟಿನ ಭಾರತೀಯ ಪೌರತ್ವ ಪರಿಶೀಲನೆ ನಡೆಸದೆ ಯಾವುದೇ ವ್ಯಕ್ತಿಗೆ ಶಾಶ್ವತ ನಿವಾಸ ಪ್ರಮಾಣಪತ್ರವನ್ನು ನೀಡಬಾರದು ಎಂದು ಆಗ್ರಹಿಸಿದರು. ಸೂಕ್ತ ದಾಖಲೆಗಳಿಲ್ಲದೆ ಪೌರತ್ವ ಪತ್ರಗಳನ್ನು ಪಡೆಯುವ ಅಕ್ರಮ ವಲಸಿಗರು ರಾಜ್ಯದಲ್ಲಿ ನೆಲೆಸಿ ದೇಶವಿರೋಧಿ ಹಾಗೂ ಕಾನೂನುಬಾಹಿರ ಚಟುವಟಿಕೆಗಳಲ್ಲಿ ತೊಡಗಿಕೊಳ್ಳುವುದನ್ನು ತಡೆಯಲು ಕಠಿಣ ಕ್ರಮ ಕೈಗೊಳ್ಳಬೇಕು. ಈ ಅಧಿಸೂಚನೆಯು ದೇಶದ ಸುರಕ್ಷತೆ ಮತ್ತು ಸಾಂವಿಧಾನಿಕ ವ್ಯವಸ್ಥೆಯ ಮೇಲೆ ತೀವ್ರವಾದ ದೂರಗಾಮಿ ಪರಿಣಾಮಗಳನ್ನು ಬೀರಲಿದ್ದು, ಕೇಂದ್ರ ಸರ್ಕಾರ ಈ ಕೂಡಲೇ ಮಧ್ಯಪ್ರವೇಶಿಸಿ ಇದನ್ನು ಪರಿಶೀಲಿಸಬೇಕು ಎಂದು ಶಾಸಕ ಜಿ.ಬಿ.ಜ್ಯೋತಿಗಣೇಶ್ ಒತ್ತಾಯಿಸಿದ್ದಾರೆ.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/ISmeQjik4LbG9KvWhKlbCC


