ತುಮಕೂರು: ನಗರದ 30ನೇ ವಾರ್ಡಿನ ಸಪ್ತಗಿರಿ ಬಡಾವಣೆಯ ಗಾರೇನರಸಯ್ಯ ನಕಟ್ಟೆಯಲ್ಲಿ ಮಹಾನಗರಪಾಲಿಕೆ ಮತ್ತು ಬಡಾವಣೆಯ ನಾಗರಿಕ ಹಿತರಕ್ಷಣಾ ಸಮಿತಿ ವತಿಯಿಂದ ಶುಕ್ರವಾರ ಬೆಳಿಗ್ಗೆ ಸ್ವಚ್ಛತಾ ಕಾರ್ಯ ಹಮ್ಮಿ ಕೊಳ್ಳಲಾಗಿತ್ತು.
ಕೆರೆಯ ಸುತ್ತಮುತ್ತ ಬೆಳೆದಿದ್ದ ಗಿಡಗಂಟೆಗಳು, ಕಾಲುವೆಯ ಮೂಲಕ ಕೆರೆ ಅಂಗಳಕ್ಕೆ ಸೇರಿದ್ದ ಪ್ಲಾಸ್ಟಿಕ್, ಬಟ್ಟೆ ಹಾಗೂ ಇತರೆ ತ್ಯಾಜ್ಯಗಳನ್ನು ಪಾಲಿಕೆಯ ಆರೋಗ್ಯ ನಿರೀಕ್ಷಕರ ನೇತೃತ್ವದಲ್ಲಿ ಪೌರ ಕಾರ್ಮಿಕರು ಹಾಗೂ ನಾಗರಿಕರು ಜೊತೆಗೂಡಿ ತೆರವು ಕಾರ್ಯ ಮಾಡಿದರು. ಈ ವೇಳೆ ಮಾತನಾಡಿದ ಪಾಲಿಕೆ ಮಾಜಿ ಸದಸ್ಯ ವಿಷ್ಣುವರ್ಧನ್ ಅವರು ಗಾರೇನರಸಯ್ಯನ ಕಟ್ಟೆ ಸ್ವಚ್ಛತಾ ಕಾರ್ಯ ಶುಕ್ರವಾರ ಮಹಾನಗರಪಾಲಿಕೆ ಹಾಗೂ ಬಡಾವಣೆ ನಾಗರಿಕರ ಸಮಿತಿ ಸಹಯೋಗದಲ್ಲಿ ಯಶಸ್ವಿಯಾಗಿ ನೆರವೇರಿದ್ದು, ಈ ಕಾರ್ಯಕ್ಕೆ ಸಹಕರಿಸಿದ ಪಾಲಿಕೆ ಹಾಗೂ ನಾಗರಿಕರಿಗೆ ಧನ್ಯವಾದ ಅರ್ಪಿಸುವುದಾಗಿ ತಿಳಿಸಿದರು.
ಪಾಲಿಕೆಯಲ್ಲಿ ಸಿಬ್ಬಂದಿ ಕೊರತೆಯಿರುವುದರಿಂದ ನಾಗರಿಕರು ನಗರದ ಸ್ವಚ್ಛತಾ ಕಾರ್ಯಕ್ಕೆ ಕೈ ಜೋಡಿಸಬೇಕು. ಇದರಿಂದ ನಮ್ಮ ಬೀದಿ ಕೆರೆಕಟ್ಟೆ, ಸುತ್ತಮುತ್ತಲಿನ ಪ್ರದೇಶ ಸ್ವಚ್ಛತೆಯಿಂದ ಇರಲು ಸಾಧ್ಯವಾಗುತ್ತದೆ ಎಂದರು. ನಾಗರಿಕ ಸಮಿತಿ ಅಧ್ಯಕ್ಷ ರಮೇಶ್ ಕುಮಾರ್ ಸಿಂಧೆ ಮಾತನಾಡಿ ಗಾರೇನರಸಯ್ಯನ ಕಟ್ಟೆ ಈ ಭಾಗದ ಜನರಿಗೆ ಶುದ್ಧಗಾಳಿ ತಂಪಾದ ವಾತಾವರಣ ಒದಗಿಸುತ್ತಿದ್ದು ಇದನ್ನು ಸಂರಕ್ಷಿಸಬೇಕಾದ ಹೊಣೆಗಾರಿಕೆ ಪಾಲಿಕೆಯಷ್ಟೇ ನಾಗರಿಕರ ಮೇಲಿದೆ. ಇಂದು ಸ್ವಚ್ಛತಾ ಕಾರ್ಯಕ್ಕೆ ಪರಿಸರ ಕಾಳಜಿಯ ನಾಗರಿಕರೆಲ್ಲರೂ ಆಗಮಿಸಿ ಪಾಲಿಕೆಯೊಂದಿಗೆ ಕೈ ಜೋಡಿಸಿದ್ದು ಶ್ಲಾಘನೀಯವೆಂದರು.
ಸಮಿತಿ ಪ್ರಧಾನ ಕಾರ್ಯದರ್ಶಿ ದೇವರಾಜು ಮಾತನಾಡಿ, ನಾಗರಿಕರಲ್ಲಿ ಪರಿಸರ ಪ್ರಜ್ಞೆ ಮೂಡುವುದು ಅವಶ್ಯಕವಾಗಿದೆ. ಎಲ್ಲೆಂದರಲ್ಲಿ ಕಸ ಸುರಿಯದೆ ಪಾಲಿಕೆ ಕಸ ಸಂಗ್ರಹ ವಾಹನಕ್ಕೆ ಹಾಕಿ ಸಹಕರಿಸಬೇಕು. ಪ್ರತಿ 2 ತಿಂಗಳಿಗೊಮ್ಮೆ ಸಮಿತಿಯಿಂದ ಸ್ವಚ್ಛತಾ ಕಾರ್ಯ ಹಮ್ಮಿ ಕೊಂಡಿದ್ದು, ಇದರಲ್ಲಿ ಪಾಲ್ಗೊಂಡ ಪ್ರತಿಯೊಬ್ಬರಿಗೂ ಕೃತಜ್ಞತೆ ಸಲ್ಲಿಸಿದರು.
ಪಾಲಿಕೆಯ ಆರೋಗ್ಯ ನಿರೀಕ್ಷಕಿ ಪದ್ಮಪ್ರಿಯಾ ಮಾತನಾಡಿ, ಪಾಲಿಕೆಯ ಸ್ವಚ್ಛತಾ ಅಭಿಯಾನಕ್ಕೆ ತುಮಕೂರಿನ ಸಪ್ತಗಿರಿ ಬಡಾವಣೆ (ದಕ್ಷಿಣ) ಭಾಗದ ನಾಗರಿಕ ಹಿತರಕ್ಷಣಾ ಸಮಿತಿಯವರು ಕೈ ಜೋಡಿಸಿದ್ದು ಸ್ವಾಗತಾರ್ಹ. ನಮ್ಮ ಪರಿಸರವನ್ನು ನಾವೇ ಸ್ವಚ್ಛವಾಗಿಟ್ಟುಕೊಳ್ಳಲು ಎಲ್ಲರೂ ಮುಂದಾಗಬೇಕೆಂದರು.
ನಾಗರಿಕ ಹಿತರಕ್ಷಣಾ ಸಮಿತಿಯ ಮಾಜಿ ಅಧ್ಯಕ್ಷ ರಾಮಣ್ಣ, ಉಪಾಧ್ಯಕ್ಷತ್ಯಾಗರಾಜ್, ನಿರ್ದೇಶಕರಾದ ಅಮರನಾಥ್ಶೆಟ್ಟಿ, ಪ್ರಕಾಶ್, ಕುಮಾರ್ ಸೇರಿದಂತೆ ಪಾಲಿಕೆ ದಫ್ಫೇದಾರ್ ಎಸ್. ನಟರಾಜ್ ಹಾಗೂ ಸಿಬ್ಬಂದಿ ವರ್ಗದವರಿದ್ದರು.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/ISmeQjik4LbG9KvWhKlbCC
