ತುಮಕೂರು: ಉದ್ಯೋಗಿಗಳ ಭವಿಷ್ಯ ನಿಧಿ ಸಂಸ್ಥೆಯು (EPFO) ಸ್ವಯಂಪ್ರೇರಿತ ನಿಯಮ ಅನುಸರಣೆಯನ್ನು ಉತ್ತೇಜಿಸಲು, ಸಾಮಾಜಿಕ ಭದ್ರತಾ ವ್ಯಾಪ್ತಿಯನ್ನು ವಿಸ್ತರಿಸಲು ಹಾಗೂ ಹಳೆಯ ಬಾಕಿ ವಿವಾದಗಳನ್ನು ಸೌಹಾರ್ದಯುತವಾಗಿ ಬಗೆಹರಿಸಿಕೊಳ್ಳಲು ಉದ್ಯೋಗದಾತರ ಕೇಂದ್ರಿತ ಎರಡು ಪ್ರಮುಖ ಯೋಜನೆಗಳನ್ನು ಜಾರಿಗೆ ತಂದಿದೆ.
ಇದರಲ್ಲಿ ಮೊದಲನೆಯದಾದ ‘ಉದ್ಯೋಗಿಗಳ ನೋಂದಣಿ ಅಭಿಯಾನ (EEC) 2026’ ಜುಲೈ 1 ರಿಂದ ಅಕ್ಟೋಬರ್ 31 ರವರೆಗೆ ಜಾರಿಯಲ್ಲಿದ್ದು, 2009 ರ ಏಪ್ರಿಲ್ 1 ರಿಂದ 2026 ರ ಮಾರ್ಚ್ 31 ರವರೆಗೆ ಇಪಿಎಫ್ ವ್ಯಾಪ್ತಿಯಿಂದ ಹೊರಗುಳಿದಿದ್ದ ಅರ್ಹ ಉದ್ಯೋಗಿಗಳನ್ನು ನೋಂದಾಯಿಸಲು ಒಂದು ವಿಶೇಷ ಅವಕಾಶ ಒದಗಿಸುತ್ತದೆ. ಈ ಅಭಿಯಾನದಡಿ ಉದ್ಯೋಗಿಯ ವೇತನದಿಂದ ಅವರ ಪಾಲಿನ ಕೊಡುಗೆಯನ್ನು ಕಡಿತಗೊಳಿಸದೇ ಇದ್ದರೆ, ಅಂತಹ ಉದ್ಯೋಗಿಯ ಪಾಲಿನ ವಂತಿಗೆಯನ್ನು ಸಂಪೂರ್ಣವಾಗಿ ಮನ್ನಾ ಮಾಡಲಾಗುತ್ತದೆ. ಉದ್ಯೋಗದಾತರು ಕೇವಲ ತಮ್ಮ ಪಾಲಿನ ವಂತಿಗೆಯನ್ನು ಅನ್ವಯವಾಗುವ ಬಡ್ಡಿ, ಆಡಳಿತಾತ್ಮಕ ಶುಲ್ಕ ಮತ್ತು ನೂರು ರೂಪಾಯಿಗಳ ನಿಗದಿತ ದಂಡದೊಂದಿಗೆ ಪಾವತಿಸಿದರೆ ಸಾಕಾಗುತ್ತದೆ.
ಮತ್ತೊಂದೆಡೆ, ಜೂನ್ 29 ರಿಂದ ಆರು ತಿಂಗಳ ಅವಧಿಗೆ ಜಾರಿಗೆ ಬಂದಿರುವ ‘ವಿಶ್ವಾಸ್ (VISHWAS) 2026’ ಯೋಜನೆಯು ವಿವಿಧ ಹಂತಗಳಲ್ಲಿ ಬಾಕಿ ಉಳಿದಿರುವ ಅಥವಾ ವಿಚಾರಣೆ ನಡೆಯುತ್ತಿರುವ ದಂಡದ ಮೊತ್ತಕ್ಕೆ (Damages) ಸಂಬಂಧಿಸಿದ ವಿವಾದಗಳನ್ನು ಬಗೆಹರಿಸಲು ಸಹಕಾರಿಯಾಗಿದೆ. ಈ ಯೋಜನೆಯಡಿ ದಂಡದ ಮೊತ್ತವನ್ನು ಅತ್ಯಂತ ರಿಯಾಯಿತಿ ದರಗಳಲ್ಲಿ ಮರು ಲೆಕ್ಕಾಚಾರ ಮಾಡಲಾಗುತ್ತದೆ. ಆದರೆ ಭವಿಷ್ಯ ನಿಧಿಯ ಮೂಲ ಕೊಡುಗೆ ಅಥವಾ ಕಾನೂನುಬದ್ಧ ಬಡ್ಡಿಯಲ್ಲಿ ಯಾವುದೇ ಮನ್ನಾ ಇರುವುದಿಲ್ಲ ಹಾಗೂ ಪೂರ್ಣ ಬಡ್ಡಿ ಪಾವತಿ ಕಡ್ಡಾಯವಾಗಿದೆ. ಇಡೀ ಪ್ರಕ್ರಿಯೆಯು ಆನ್ಲೈನ್ನಲ್ಲಿ ಇಪಿಎಫ್ ಒ ಪೋರ್ಟಲ್ ಮೂಲಕ ನಡೆಯಲಿದ್ದು, ಅಂತಿಮವಾಗಿ ಡಿಜಿಟಲ್ ಪ್ರಮಾಣಪತ್ರವನ್ನು ನೀಡಲಾಗುತ್ತದೆ.
ತುಮಕೂರು ಸಿರಾ ಗೇಟ್ ನ ಚಾಮುಂಡೇಶ್ವರಿ ನಗರದಲ್ಲಿರುವ ಇಪಿಎಫ್ ಒ ಪ್ರಾದೇಶಿಕ ಕಚೇರಿಯ ಪ್ರಾದೇಶಿಕ ಭವಿಷ್ಯ ನಿಧಿ ಆಯುಕ್ತರಾದ ವಂಶಿ ಕೃಷ್ಣ ದಿಂಡಿ ಅವರು, ಜಿಲ್ಲೆಯ ಶೈಕ್ಷಣಿಕ ಸಂಸ್ಥೆಗಳು, ಆಸ್ಪತ್ರೆಗಳು, ಹೋಟೆಲ್ಗಳು ಮತ್ತು ಗುತ್ತಿಗೆದಾರರು ಸೇರಿದಂತೆ ಎಲ್ಲಾ ಅರ್ಹ ಉದ್ಯೋಗದಾತರು ಈ ಅಭಿಯಾನಗಳಲ್ಲಿ ಸಕ್ರಿಯವಾಗಿ ಭಾಗವಹಿಸಿ ಹಳೆಯ ವ್ಯಾಜ್ಯಗಳನ್ನು ಇತ್ಯರ್ಥಪಡಿಸಿಕೊಳ್ಳುವಂತೆ ಹಾಗೂ ಉದ್ಯೋಗಿಗಳಿಗೆ ಸಾಮಾಜಿಕ ಭದ್ರತೆಯನ್ನು ಖಚಿತಪಡಿಸುವಂತೆ ಮನವಿ ಮಾಡಿದ್ದಾರೆ.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/CtZPUt7bwkaJkX2T6hAwZI
