ಬಹಳ ಹಿಂದೆ ಸರ್ವಸಿದ್ಧಕನೆಂಬ ವ್ಯಕ್ತಿ ಇದ್ದನು. ಈತನಿಗೆ ತನ್ನದೇ ನೆಲೆಯಾಗಲೀ, ಮಾತಾ ಪಿತೃಗಳಾಗಲೀ, ಬಂಧು ಬಾಂಧವರಾಗಲೀ ಯಾರೂ ಇರಲಿಲ್ಲ, ಸನ್ಯಾಸಿಯಂತೆ ಕೆಂಪು ವಸ್ತ್ರ ಧರಿಸಿ ಕಾಡು ಮೇಡು ಅಲೆಯುತ್ತಾ, ಊರಿಂದ ಊರು ಕಾಲ್ನಡಿಗೆಯಲ್ಲಿ ಅಲೆಯುತ್ತಾ ದೇವಸ್ಥಾನಗಳ ಪ್ರಸಾದವನ್ನೇ ಸ್ವೀರಿಸಿ, ಯಾರದರೂ ದಾನ ಮಾಡಿದರೆ ಅದನ್ನು ಸ್ವೀಕರಿಸುತ್ತಾ, ಅತ್ಯಂತ ದೈವ ಭಕ್ತನಾಗಿ ಕಾಲ ಕಳೆಯುತ್ತಿದ್ದನು. ಹೀಗಿರುವಾಗ ಒಮ್ಮೆ ಕಾಡಿನಲ್ಲಿ ನಡೆದುಕೊಂಡು ಬರುತ್ತಾ ನಾನೂ ಏಕೆ ಯಾವುದಾದರೂ ಗುರುಕುಲದಲ್ಲಿ ಕೆಲಸಕ್ಕೆ ಸೇರಿಕೊಂಡು ಸೇವೆ ಮಾಡಬಾರದು ಎಂದು ಯೋಚಿಸಿಕೊಂಡು ಬರುವಾಗ ಎದುರುಗಡೆ ಒಂದು ಗುರುಕುಲ ಕಾಣಿಸುತ್ತದೆ. ಅಲ್ಲಿ ಅರಳಿಮರದ ಕಟ್ಟೆಯ ಮೇಲೆ ಪ್ರಶಾಂತಚಿತ್ತದಿಂದ ಕುಳಿತಿದ್ದ ಗುರುಗಳಿಗೆ ಕೈ ಮುಗಿದು ಗುರುದೇವ ನನಗೆ ನಿಮ್ಮ ಗುರುಕುಲದಲ್ಲಿ ಏನಾದರೂ ಕೆಲಸ ನೀಡುವಿರಾ, ನೀವು ನನಗೆ ಮೂರು ಹೊತ್ತು ಊಟ, ಒಂದೆರಡು ಕಂಚಿನ ವರಹವನ್ನು ಮಾಸಿಕ ವೇತನ ರೂಪ ನೀಡಿದರೆ ಸಾಕು ನಾನು ತೃಪ್ತನಾಗುತ್ತೇನೆ, ನಾನು ಅನಾಥ ಕೃಪೆ ಮಾಡಿ ಎಂದಾಗ, ಗುರುಗಳು ಸರಿಯಾದ ಸಮಯಕ್ಕೇ ಬಂದಿರುವೆ, ಆದರೆ ಯಾವುದೇ ಪರೀಕ್ಷೆ ಇಲ್ಲದೇ ಯಾರನ್ನು ಗುರುಕುಲದಲ್ಲಿ ಕೆಲಸ ನೀಡಲಾಗದು, ನಾಳೆಯೇ ಇದರ ಪರೀಕ್ಷೆ ಇದೆ, ನಾಳೆ ನಿನ್ನಂತೆಯೇ ಹಲವರು ಪರೀಕ್ಷೆಗೆ ಬರಲಿರುವರು, ನಾಳೆ ಪ್ರಾತಃಕಾಲ ಸರಿಯಾಗಿ 5 ಗಂಟೆಗೆ ಬಂದು ಬಿಡಬೇಕು, ನಾನು ಕೊಡುವ ಪರೀಕ್ಷೆಯಲ್ಲಿ ಯಾರು ತೇರ್ಗಡೆ ಯಾಗುವರೋ ಅವರಿಗೆ ಇಲ್ಲಿ ಕೆಲಸ ತಿಳಿಯಿತೇ ಎಂದಾಗ ಸರ್ವಸಿದ್ಧಕನು ತಮ್ಮ ಚಿತ್ತ ಹಾಗೆಯೇ ಆಗಲಿ ನಾನು ನಾಳೆ ಪ್ರಾತಃ 5 ಗಂಟೆಗೆ ಬರುತ್ತೇನೆ ಎಂದು ಕೈಮುಗಿದು ಹಿಂತಿರುಗಿದನು.
ಸ್ವಲ್ಪ ದೂರದಲ್ಲಿ ನದಿ ತೀರದಲ್ಲಿ ಅಲ್ಲಿಯೇ ಬಿದ್ದಿರುವ ಕಟ್ಟಿಗೆ ಗಳಿಂದ ಒಂದು ಬಿಡಾರ ನಿರ್ಮಿಸಿಕೊಂಡು ನದಿ ನೀರು ಕುಡಿದು, ಭೀಕ್ಷಾ ಬುತ್ತಿಯಿಂದ ಬಂದ ಆಹಾರ ಸೇವಿಸುತ್ತಾ “ಹೇ ದೇವರೆ ನನಗಾಗಿ ಯಾರು ಇಲ್ಲ ನನಗಾಗಿ ಯಾರದರೂ ಒಳ್ಳೆ ಹೃದಯದ ವ್ಯಕ್ತಿಗಳನ್ನು ನೀನು ನನಗೆ ಕೊಟ್ಟಿದ್ದರೆ ನಾನು ಅವರೊಡನೆ ನೆಮ್ಮದಿಯಿಂದ ಇರುತ್ತಿದ್ದೆ ಆದರೆ ಏನು ಮಾಡುವುದು ಇವೆಲ್ಲ ನನ್ನ ಯಾವಜನ್ಮದ ಕರ್ಮವೋ” ಎಂದು ಬೇಸರದಿಂದ ಊಟ ಮುಗಿಸಿ ಮಲಗಿದನು. ಪ್ರಾತಃ ಬೇಗನೆ ಎದ್ದು ನದಿಯಲ್ಲಿ ಸ್ನಾನ ಮುಗಿಸಿ, ಸೂರ್ಯ ನಮಸ್ಕಾರ ಮಾಡಿ, ನಂತರ ಗುರುಗಳ ಪರೀಕ್ಷೆಗೆ ಹೊರಡಲು ಸಿದ್ದನಾಗಿ ಕಾಡಿನಲ್ಲಿ ನಡೆದುಕೊಂಡು ಬರುತ್ತಿರುವಾಗ ಎಲ್ಲಿಂದಲೋ ಎದುರು ಬಂದ ಒಂದು ಮೇಕೆ ಅವನು ಧರಿಸಿದ್ದ ಕೆಂಪು ವಸ್ತ್ರದಿಂದ ವಿಚಲಿತವಾಗಿ ಅವನನ್ನು ಮುಂದಕ್ಕೆ ಹೋಗದಂತೆ ತಡೆಯುತ್ತಾ ತಲೆಯಿಂದ ತಿವಿಯುತ್ತಾ ಅವನು ಒಂದು ಹೆಜ್ಜೆ ಮುಂದೆ ಇಡದಂತೆ ಕೆಲಕಾಲದವರೆಗೆ ಹಾಗೆಯೇ ಮಾಡಿತು, ಹೇಗೋ ಮಾಡಿ ತಪ್ಪಿಸಿಕೊಂಡು ಬರುವುದರಲ್ಲಿ 5 ಸಮಯ ದಾಟಿ ಅದಾಗಲೇ ಪರೀಕ್ಷೆಯಲ್ಲಿ ಮತ್ತೊಬ್ಬರು ತೇರ್ಗಡೆಯಾಗಿ ಗುರುಗಳಿಂದ ಪ್ರಶಂಸೆಗೆ ಒಳಗಾಗುತ್ತಿದ್ದ ದೃಶ್ಯವನ್ನು ಕಂಡು ಸರ್ವಸಿದ್ಧಕನಿಗೆ ಕಣ್ಣಲ್ಲಿ ನೀರು ಬಂತು. ಹೇ ದೇವ ನಾನೇನು ತಪ್ಪು ಮಾಡಿದ್ದೇ ಎಲ್ಲ ಆ ಮೇಕೆಯ ಕಾರಣದಿಂದ ಹೀಗೆ ಆಯಿತು ಎಂದು ದುಃಖಿಸುತ್ತಿರುವಾಗ ಅಲ್ಲಿಯೇ ನಿಂತಿದ್ದ ಮತ್ತೊಬ್ಬಸನ್ಯಾಸಿ, ಅವನು ದುಃಖಿಸುವುದನ್ನು ಗಮನಿಸಿ, ಆತನಿಂದ ಎಲ್ಲ ವಿವರ ಕೇಳಿದ ನಂತರ ಸರ್ವಸಿದ್ಧಕನಿಗೆ ಹೀಗೆ ಹೇಳಿದರು “ಆಗುವುದೆಲ್ಲಾ ಒಳ್ಳೆಯದಿಕ್ಕೆ, ವಿಚಲಿತನಾಗಬೇಡ ನಿನಗೆ ಮುಂದೆ ಏನೋ ಇದಕ್ಕಿಂತ ದೊಡ್ಡದ್ದು ಅದೃಷ್ಟ ಕಾದಿರಬೇಕು, ಅದಕ್ಕೆ ಹೀಗೆ ಮೇಕೆಯ ರೂಪದಿ ಬಂದು ತಡದಿದೆ, ಬಾ ನಾನು ನಿನ್ನಹಾಗೆಯೇ ಒಬ್ಬ ಅನಾಥ, ನಾನು ಕೂಡ ನಿನ್ನ ಹಾಗೆ ಪರೀಕ್ಷೆಗೆ ಬಂದಿದ್ದೆ ಆದರೆ ದುರಾದೃಷ್ಟವಶಾತ್ ನಾನು ಕೂಡ ತೇರ್ಗಡೆ ಯಾಗಲಿಲ್ಲ, ನಡೆ ನಾವು ಗುಹೆ ಗಂಗಾಧರನ ದರುಶನ ಮಾಡೋಣ ಎಲ್ಲ ಒಳ್ಳೆಯುದು ಆಗುತ್ತದೆ” ಎಂದಾಗ ಸನ್ಯಾಸಿಯ ಮಾತಿನಿಂದ ಸ್ವಲ್ಪ ಸಮಾಧಾನಗೊಂಡು, ಮನದಲ್ಲಿ ಹೌದು ದೇವರ ಪರೀಕ್ಷೆ ಇರಬಹುದು ನೋಡೋಣ ಎಂದುಕೊಳ್ಳುತ್ತಾ, ಸರಿ ನೀವು ಬನ್ನಿ ಪೂನ್ಯರೆ ಇಲ್ಲಿಯೇ ನನ್ನ ಬಿಡಾರವಿದೆ ಇಂದು ತಂಗಿದ್ದು ನಾಳೆ ಪ್ರಯಾಣ ಮುಂದುವರೆಸೋಣ ಎಂದಾಗ ಸನ್ಯಾಸಿ ಹಾಗೆಯೇ ಆಗಲೆಂದು ಬಿಡಾರಕ್ಕೆ ಬರುತ್ತಾರೆ. ಆದರೆ ಅವರು ಅಲ್ಲಿಗೆ ಬರುವುದರೊಳಗೆ ಅಲ್ಲಿ ಬಿಡಾರದ ಒಳಗೆ ವಯಸ್ಸಾದ ಇಬ್ಬರು ಅಜ್ಜ ಅಜ್ಜಿ ಕುಳಿತಿರುತ್ತಾರೆ, ಇದನ್ನು ಗಮನಿಸಿದ ಸರ್ವಸಿದ್ದಕ “ಅಯ್ಯಾ ತಾವು ಯಾರೆಂದು ನಮಗೆ ತಿಳಿಸುವಂತವರಾಗಿ, ಇದು ನನ್ನ ಬಿಡಾರ, ನೆನ್ನೆ ನಾನು ಇಲ್ಲಿ ತಂಗಲೆಂದು ನಿರ್ಮಾಣ ಮಾಡಿದ್ದೆ, ಆದರೆ ತಾವು ಇಲ್ಲಿ….” ಎಂದಾಗ ಅಜ್ಜನು ನೋಡಪ್ಪ ನಾವು ಮಕ್ಕಳಿಂದ ದೂಡಲ್ಪಟ್ಟ ದುರ್ದೈವ ತಂದೆ ತಾಯಿಗಳಪ್ಪಾ ದಿಕ್ಕು ದೆಸೆ ಕಾಣದೆ ಕಾಡಿನಲ್ಲಿ ಅಲೆಯುತ್ತಾ, ಬರುವಾಗ ಇಲ್ಲಿ ಬಿಡಾರ ಕಾಣಿಸಿತು ಆಯಾಸ ಪರಿಹಾರಕ್ಕಾಗಿ ಕುಳಿತೆವು” ಎಂದಾಗ ಸರ್ವಸಿದ್ಧಕನು ತನ್ನ ಮನದಲ್ಲಿ ತಾನು ನೆನ್ನೆಯ ದಿನ ಊಟದ ಸಮಯದಿ ದೇವರನ್ನು ಒಳ್ಳೆಯ ಮನಸ್ಸಿನವರನ್ನು ನನಗಾಗಿ ಕೊಡಪ್ಪ ಎಂದು ಬೇಡಿದ್ದ ಪ್ರಾರ್ಥನೆಯನ್ನು ನೆನೆದು ದೇವರು ನನಗಾಗಿ ಇವರನ್ನು ಕರುಣಿಸಿದ್ದಾನೆ ಎಂದು ಯೋಚಿಸಿ ಅತ್ಯಂತ ಹರ್ಷ ಚಿತ್ತನಾಗಿ ನಗುಮೊಗದಿಂದ ಜೋರಾಗಿ ಉದ್ಗರಿಸುತ್ತಾ“ ನೋಡಿ ಅಯ್ಯ, ತಾಯಿ ನೀವು ಎಲ್ಲಿಯೂ ಹೋಗುವುದು ಬೇಡ, ಇಂದಿನಿಂದ ನಾನೇ ನಿಮ್ಮ ಮಗನೆಂದು ಕಾಣಿರಿ, ದೇವರು ನನ್ನ ಪ್ರಾರ್ಥನೆಗೆ ಓಗೊಟ್ಟು ನಿಮ್ಮನ್ನು ನನ್ನಲ್ಲಿಗೆ ಕಳುಹಿಸಿದ್ದಾನೆ, ಆಗುವುದೆಲ್ಲಾ ಒಳ್ಳೆಯದಕ್ಕೆ” ಎಂದಾಗ ಅಜ್ಜ ಅಜ್ಜಿಯರು ಸರ್ವಸಿದ್ಧಕನಿಗೆ “ಇಂತಹ ಇಳೆ ವಯಸ್ಸಿನಲ್ಲಿ ದೇವರೇ ನಿನ್ನನ್ನು ನಮಗೆ ಮಗನ ಹಾಗೆ ಕರುಣಿಸಿದ್ದಾನಪ್ಪಾ, ನಿಜವಾಗಲೂ ಆ ದೇವರು ಕರುಣಾಮಯಿ ಕಣಪ್ಪ” ಎಂದಾಗ ಇದನ್ನೆಲ್ಲಾ ನೋಡುತ್ತಿದ್ದ ಸನ್ಯಾಸಿ ಇದು ಏನೋ ವಿಚಿತ್ರವಾಗಿ ಕಾಣಿಸುತ್ತಿದೆಯಲ್ಲಾ ಎಂದು ಸರ್ವಸಿದ್ದಕನ್ನನ್ನು ಸ್ವಲ್ಪ ಹಿಂದಕ್ಕೆ ಕರೆದು “ನೋಡು ಇವರು ಯಾರೆಂದು ನಮಗೆ ತಿಳಿಯದು, ತಿಳಿಯದವರನ್ನು ಒಮ್ಮಿದೊಮ್ಮೆ ಹೀಗೆ ನಂಬಬಾರದು, ಇವರನ್ನು ಇಲ್ಲಿಂದ ಕಳಿಸಿಬಿಡು ಬೇಡ”, ಎಂದಾಗ ಸರ್ವಸಿದ್ಧಕ “ ನೋಡಿ ಸ್ವಾಮಿ ನೆನ್ನೆ ನಾನು ದೇವರಲ್ಲಿ ಧೀನನಾಗಿ ಬೇಡಿದ್ದೆ, ನನಗಾಗಿ ಯಾರನ್ನಾದರು ಒಳ್ಳೆಯವರನ್ನು ಕರುಣಿಸು ಎಂದು, ಇವರು ದೇವರ ಕರುಣೆ ಇರಬಹುದು, ನೀವು ಆಗಲೇ ಹೇಳಲಿಲ್ಲವೇ ಆಗುವುದೆಲ್ಲಾ ಒಳ್ಳೆಯದಕ್ಕೇ ಎಂದು, ಇದು ಹಾಗೆಯೇ ಯಾಕೆ ಆಗಿರಬಾರದು ಅಲ್ಲವೇ” ಎಂದಾಗ, ಸನ್ಯಾಸಿ ಮನಸ್ಸಿಲ್ಲದೇ ಸುಮ್ಮನಾಗುತ್ತಾನೆ.
ನಂತರ ಸರ್ವಸಿದ್ಧಕ ಬಿಡಾರದ ಬಳಿ ಬಂದು ನೋಡಿ ಅಯ್ಯ ನಾವು ನಿಮಗಾಗಿ ಏನಾದರೂ ಆಹಾರ ಹುಡುಕಿ ತರುತ್ತೇವೆ ಅಲ್ಲಿಯವರೆಗೂ ಈ ನನ್ನ ಜೋಳಿಗೆ ನಿಮ್ಮ ಬಳಿಯೇ ಇರಲಿ ಎಂದು ಬಿಡಾರದೊಳಗೆ ಜೋಳಿಗೆ ಇಟ್ಟು ಸನ್ಯಾಸಿಯೊಡನೆ ತುಂಬ ಹರ್ಷದಿಂದ ಹೊರಡುತ್ತಾನೆ. ಅಜ್ಜ ಅಜ್ಜಿ ಹಾಗೆಯೇ ಆಗಲೆಂದು ಆಶೀರ್ವಾದದಂತೆ ಕೈ ಆಡಿಸುತ್ತಾರೆ. ಆದರೆ ಸನ್ಯಾಸಿ ಸರ್ವಸಿದ್ಧಕನಿಗೆ ಕಡೆ ಪಕ್ಷ ಆ ಜೋಳಿಗೆ ಅವರ ಬಳಿ ಬಿಡಬೇಡ ಎಂಬ ಸಲಹೆಗೂ ಮನ್ನಣೆ ನೀಡದೆ ಆಹಾರ ಹುಡುಕ ಹೊರಡುತ್ತಾರೆ. ಕೆಲ ಸಮಯದ ಬಳಿಕ ಸಿಕ್ಕಷ್ಟು ಆಹಾರ ತೆಗೆದುಕೊಂಡು ಬಿಡಾರದ ಬಳಿ ಬರುತ್ತಾರೆ ಆದರೆ ಬಿಡಾರದಲ್ಲಿ ಜೋಳಿಗೆಯ ಜೊತೆ ಆ ಅಜ್ಜ ಮತ್ತು ಅಜ್ಜಿ ಅಲ್ಲಿ ಇರುವುದಿಲ್ಲ. ಇದರಿಂದ ಸರ್ವಸಿದ್ಧಕ ವಿಚಲಿತನಾಗಿ ಅಲ್ಲಿ ಎಲ್ಲಿ ಹುಡುಕಿದರೂ ಸಿಗುವುದಿಲ್ಲ. ಆಗ ಅಲ್ಲಿಗೆ ಬರುತ್ತಿದ್ದ ಇಬ್ಬರು ದಾರಿಹೋಕರನ್ನು ಸ್ವಾಮಿ ಇಲ್ಲಿ ಇಬ್ಬರು ವಯಸ್ಸಾಗಿದ್ದ ಅಜ್ಜ ಅಜ್ಜಿಯರನ್ನು ನೋಡಿದಿರಾ ಎಂದು ವಿಚಾರಿಸಿದಾಗ ಆ ದಾರಿ ಹೋಕರು “ಓ ಆ ಮುದುಕ ಮುದುಕಿಯರೋ, ಓ ಅವರು ನಿಮಗೂ ನಾಮ ಹಾಕಿದರೇ, ಅವರು ಹೊಸಬರನ್ನು ನೋಡಿ ಬೆಣ್ಣೆಯ ಮಾತಾಡಿ ಕದಿಯುವ ಜಾಯಮಾನದವರು ಕಣಪ್ಪ, ಅವರಿನ್ನು ನಿಮಗೆ ಸಿಗೋದಿಲ್ಲೊ ಹೋಗಿ” ಎಂದಾಗ, ಸರ್ವಸಿದ್ಧಕನಿಗೆ ಅತ್ಯಂತ ಮನನೊಂದು “ ಹೇ ದೇವರೇ ಇದೇನು ಮಾಡಿಬಿಟ್ಟೆಯಪ್ಪಾ, ನೀನು ನನಗಾಗಿ ಕಳಿಸಿದ್ದೆ ಎಂದು ಕೊಂಡಿದ್ದೆ, ನೀನು ಇದೇನು ಮಾಡಿಬಿಟ್ಟೆಯಪ್ಪಾ” ಎಂದು ದುಃಖದಿಂದ ಗದ್ಗದಿತನಾದಾಗ, ಸನ್ಯಾಸಿಯ ಸರ್ವಸಿದ್ಧಕನನ್ನು ಸಮಾಧಾನ ಮಾಡುತ್ತಾ “ನಾನು ಆಗಲೇ ನಿನಗೆ ಹೇಳಿದೆ ಅಲ್ಲವೇ ಅವರನ್ನು ನಂಬಬಾರದು ಎಂದು ನೀನು ನನ್ನ ಮಾತನ್ನು ಕೇಳಲಿಲ್ಲ” ಎಂದಾಗ ಸರ್ವಸಿದ್ಧಕನು “ನಾನು ದೇವರನ್ನು ಬಲವಾಗಿ ನಂಬಿದ್ದೆ ನನ್ನ ಮೊರೆ ಕೇಳಿ ದೇವರು ನನಗಾಗೆ ಕಳಿಸಿದ್ದಾನೆಂದು ಆದರೆ ಇದು ಕೂಡ ಅವನ ಪರೀಕ್ಷೆಯೇ ಇರಬಹುದು, ಆಗುವುದೆಲ್ಲಾ ಒಳ್ಳೆಯದಕ್ಕೆ ಅಲ್ಲವೇ ಪೂಜ್ಯರೇ” ಎಂದಾಗ ಸನ್ಯಾಸಿ ಏನೂ ಹೇಳಲಾಗದೆ “ಇದ್ದರೂ ಇರಬಹುದು” ಎಂದು ಹೇಳಿ ನಂತರ “ಹೋಗಲಿ ಆ ಜೋಳಿಗೆಯಲ್ಲಿ ಏನಿತ್ತು” ಎಂದಾಗ ಸರ್ವಸಿದ್ದಕನು “ಅದರಲ್ಲಿ ನಾನು ಜೀವಮಾನದಲ್ಲಿ ದಾನ ಪಡೆದ ಕಂಚು, ಬೆಳ್ಳಿ ಮತ್ತು ಹೊನ್ನಿನ ನಾಣ್ಯಗಳು ಇದ್ದವು” ಎಂದಾಗ ಸನ್ಯಾಸಿಗೂ ಬೇಸರವಾಗುತ್ತದೆ ಮತ್ತೆ ಏನು ಹೇಳಲಾಗದೆ, “ ಸರಿ ನಾವು ಇನ್ನು ಗುಹೆ ಗಂಗಾಧರ ನಾಥ ಸ್ವಾಮಿ ಯಾತ್ರೆ ಪ್ರಾರಂಭಿಸೋಣವೇ” “ ಎಂದಾಗ ಸರ್ವಸಿದ್ಧಕ “ಹಾಗೆಯೇ ಆಗಲಿ” ಎಂದು ಯಾತ್ರೆ ಪ್ರಾರಂಭಿಸುತ್ತಾರೆ. 2 ದಿನಗಳ ಪ್ರಯಾಣದ ನಂತರ ಗುಹೆ ಗಂಗಾಧರ ನಾಥ ಸ್ವಾಮಿಯ ದೇವಸ್ಥಾನದ ಮುಂದೆ ಹರಿಯುವ ನದಿಯ ಎದುರು ಬದಿ ಬಂದು ಸೇರುತ್ತಾರೆ. ಈ ಬದಿಯಿಂದ ದೇವಸ್ಥಾನ ಇರುವ ಬದಿಗೆ ಬಹಳ ದೊಡ್ಡ ಹಳೆಯ ಕಾಲದ ಕಲ್ಲಿನ ಸೇತುವೆ ಇರುತ್ತದೆ. ದೇವಸ್ಥಾನಕ್ಕೆ ಹೋಗಲು ಸೇತುವೆ ಮೇಲೆಯೇ ನಡೆದುಕೊಂಡು ಹೋಗಬೇಕು, ಸೇತುವೆ ಕೆಳಗೆ ಭೋರ್ಗರೆದು ಹರಿಯುವ ನದಿ, ರಭಸವಾಗಿ ಹರಿಯುತ್ತಿರುತ್ತದೆ. ಸಾವಿರಾರು ಸಂಖ್ಯೆಯ ಭಕ್ತಾದಿಗಳೆಲ್ಲಾ ದಡದಲ್ಲಿ ಸ್ನಾನ ಮಾಡುತ್ತಿರುತ್ತಾರೆ, ಇವರು ಸ್ನಾನ ಮುಗಿಸಿ ಸೇತುವೆ ಬಳಿ ಬರುವ ಹೊತ್ತಿಗೆ ಅಲ್ಲಿಗೆ ಇಬ್ಬರು ವಯಸ್ಸಾಗಿದ್ದ ಅಜ್ಜ ಅಜ್ಜಿ ಸೇತುವೆ ಹೇಗೆ ದಾಟುವುದು ಎಂದು ಯೋಚಿಸುತ್ತಾ ನದಿಯ ಶಬ್ದಕ್ಕೆ ಅಂಜಿ ಸೇತುವೆಯ ಮೊದಲ ಹೆಜ್ಜೆಯಲ್ಲಿ ನಿಂತಿರುತ್ತಾರೆ. ಆಗ ಅಲ್ಲಿಗೆ ಬಂದ ಸರ್ವಸಿದ್ದಕ ಮತ್ತು ಸನ್ಯಾಸಿ ಯವರನ್ನು ಕಂಡ ಅಜ್ಜ ಅಜ್ಜಿಯವರು “ಸ್ವಾಮಿಯವರೆ ನೀವು ನದಿ ಹೇಗೆ ದಾಟುವುದು ಎಂದು ನಮಗೆ ಮಾರ್ಗದರ್ಶಕರಾಗಿ ಮುಂದೆ ನಡೆಯಿರಿ ನಾವು ನಿಮ್ಮನ್ನು ಹಿಂಭಾಲಿಸುತ್ತೇವೆ “ ಎಂದಾಗ ಸರ್ವಸಿದ್ಧಕನು ಸನ್ಯಾಸಿಗೆ “ಸ್ವಾಮಿ ತಾವು ಪೂಜ್ಯರು, ತಾವು ಮೊದಲು ನಡೆಯಿರಿ” ಎಂದಾಗ ಸನ್ಯಾಸಿಯು “ಇಲ್ಲ ಸರ್ವಸಿದ್ಧಿ, ಈಗ ಯೋಚಿಸು, ನಾನು ಮೊದಲೇ ನಿನಗೆ ಹೇಳಿದ್ದೆನಲ್ಲವೇ, ಆಗುವುದೆಲ್ಲಾ ಒಳ್ಳೆಯದಕ್ಕೆ ಎಂದು, ನಿನಗೆ ಮುಂದೆ ಏನೋ ಇದಕ್ಕಿಂತ ದೊಡ್ಡದ್ದು ಅದೃಷ್ಟ ಕಾದಿರಬೇಕು ಎಂದು, ಆ ದೇವರು ಮೊದಲ ಪೂಜೆ ನಿನ್ನಿಂದ ಅಪೇಕ್ಷಿಸಿರಬೇಕು ಅದಕ್ಕಾಗೆ ನಿನ್ನನ್ನು ಇಲ್ಲಿ ಮೊದಲು ಬರುವಂತೆ ಮಾಡಿಸುತ್ತಿದ್ದೇನೆ, ಹಾಗಾಗಿ ನೀನು ಮುಂದೆ ನಡೆ ನಾನು ನಿನ್ನ ಹಿಂದೆ ಬರುತ್ತೇನೆ, ಇವರು ನಮ್ಮನ್ನು ಹಿಂಬಾಲಿಸುತ್ತಾರೆ, ದೇಗುಲ ತಲುಪಿದ ನಂತರ ದೇವರ ಸೇವೆ ನಿನ್ನಿಂದಲೇ ಮೊದಲು ಆರಂಭವಾಗಲಿ” ಎಂದಾಗ ಸರ್ವಸಿದ್ದಕ ನಿಗೆ ಅತ್ಯಂತ ಆನಂದದಾಯಕನಾಗಿ ಹೇ ಭಗವಾನ್ ಇದಕ್ಕಾಗೆ ನೀನು ನನಗೆ ಇಷ್ಟೊಂದು ಪರೀಕ್ಷೆ ಮಾಡಿದೆಯಾ, ನೀನು ದಯಾಮಯಿ, ಕರಣಾ ಸಾಗರ, ಮೊದಲ ಪೂಜೆ ನನ್ನಿಂದ ಅಪೇಕ್ಷಿಸಿದೆಯಾ, ಹೇ ದೇವ, ಇದೋ ಬಂದೆ, ನನ್ನಿಂದಲೇ ನಿನಗೆ ಮೊದಲ ಪೂಜೆ, ಎಂದು ಗದ್ಗದಿತ ಕಂಠದಲ್ಲಿ ಉದ್ಗರಿಸುತ್ತಾ ಒಂದೊಂದೇ ಹೆಜ್ಜೆ ಮುಂದೆ ಇಡಲು ಪ್ರಾರಂಭಿಸುತ್ತಾನೆ, ಅದರಂತೆ ಸನ್ಯಾಸಿ, ಮತ್ತು ಅಜ್ಜ ಅಜ್ಜಿ ಮತ್ತು ಅವರ ಹಿಂದೆ ಬರುವ ಭಕ್ತಾದಿಗಳು ಹಾಗೆಯೇ ಹಿಂಭಾಲಿಸುತ್ತಾರೆ, ನದಿ ಸೇತುವೆ ಕೆಳಗೆ ಭೋರ್ಗರೆದು ರಭಸವಾಗಿ ಹರಿಯುತ್ತಿರುತ್ತದೆ, ಆದರೆ ಇನ್ನೇನು ದಡ ಹತ್ತಿರ ಬರುತ್ತಿದೆ ಎನ್ನುವಾಗಲೇ ಸೇತುವೆಯ ಕೊನೆಯ ಕಲ್ಲಿನ ಚಪ್ಪಡಿ ಮೇಲೆ ಸರ್ವಸಿದ್ಧಕ ದೇವರ ಸೇವೆಯ ಕನಸು ಕಾಣುತ್ತಾ ‘ಇದೋ ಬಂದೆ ದೇವ” ಎಂದು ಕಾಲಿಡುತ್ತಿದ್ದಂತೆ ಹಳೆಯ ಕಾಲದ ಸೇತುವೆ ಕಾರಣ ಇದ್ದಕ್ಕಿದ್ದಂತೆ ಕಲ್ಲಿನ ಚಪ್ಪಡಿ ಕಳಚಿ ನದಿಗೆ ಬಿದ್ದು ಬಿಡುತ್ತದೆ ಅಲ್ಲಿ ಉಂಟಾದ ಸಂದಿಯಲ್ಲಿ ಸರ್ವಸಿದ್ದಕ ಕೆಳಗೆ ಜಾರಿ ಒಂದೇ ಕೈಯಲ್ಲಿ ಸೇತುವೆ ಹಿಡಿದು ನೇತಾಡುತ್ತಾ “ ಹೇ ದೇವರೇ ನನ್ನ ಹಿಂದಿರುವವರ ಪ್ರಾಣ ರಕ್ಷಣೆಗಾಗಿ ನೀನು ನನ್ನನ್ನು ಮೊದಲು ಬರುವಂತೆ ಕರೆಸಿಕೊಂಡೆಯಾ, ಹೀಗೆ ಆಗುವುದು ಈ ಜನ್ಮದ ನನ್ನ ಕರ್ಮವಾಗಿತ್ತೇ, ಪೂಜ್ಯರೇ ನಿಮ್ಮ ಪ್ರಾಣ ರಕ್ಷಣೆಗಾಗಿ ಆ ದೇವರು ನನ್ನನ್ನು ಮೊದಲು ಹೀಗೆ ಬರುವಂತೆ ಮಾಡಿದ್ದಾನೆ, ಆಗುವುದೆಲ್ಲಾ ಒಳ್ಳೆಯದಕ್ಕೇ” ಎನ್ನುತ್ತಾ ಕೈ ಜಾರಿ ನದಿಗೆ ಬಿದ್ದು, ರಭಸವಾಗಿ ಕೊಚ್ಚಿಕೊಂಡು ಹೋಗುತ್ತಾನೆ. ಇದ್ದಕ್ಕಿದ್ದಂತೆ ಕಣ್ಣೆದುರು ಆದ ಅವಘಡದಿಂದಾಗಿ ಸನ್ಯಾಸಿಗೆ ಬಹಳ ದುಃಖವಾಗುತ್ತದೆ. ಅಲ್ಲಿ ಸನ್ಯಾಸಿಗೆ ಸರ್ವಸಿದ್ಧಕನ್ನನ್ನು ರಕ್ಷಿಸುವ ಕ್ಷಣಾರ್ಧದ ಸಮಯವೂ ಇರುವುದಿಲ್ಲ. ಕೊನೆಗೆ ದೇವರ ನೀತಿ ಏನೆಂಬುದು ಅರಿಯದಂತಾಗುತ್ತದೆ.
ನೀತಿ: ಕಥೆಯ ಶೀರ್ಷಿಕೆ “ಆಗುವುದೆಲ್ಲಾ ಒಳ್ಳೆಯದಕ್ಕೆ” ಎಂಬುದಾಗಿ ಇಲ್ಲ “ಆಗುವುದೆಲ್ಲಾ ಒಳ್ಳೆಯದಕ್ಕೇ”ನೀತಿ ಈ ಶೀರ್ಷಿಕೆಯಲ್ಲಿಯೇ ಇರುವುದು. ಯೋಚಿಸಿ..

ಸಂಪಾದಕರ ನುಡಿ
“ಆಗುವುದೆಲ್ಲಾ ಒಳ್ಳೆಯದಕ್ಕೇ ???” — ಈ ಕಥೆಯ ಶೀರ್ಷಿಕೆಯಲ್ಲೇ ಒಂದು ಆಳವಾದ ಜೀವನಸತ್ಯ ಅಡಗಿದೆ.
ಜೀವನದಲ್ಲಿ ನಡೆಯುವ ಪ್ರತಿಯೊಂದು ಘಟನೆ ನಮ್ಮ ನಿರೀಕ್ಷೆಯಂತೆ ನಡೆಯುವುದಿಲ್ಲ. ಕೆಲವೊಮ್ಮೆ ಅವಕಾಶ ಕೈತಪ್ಪುತ್ತದೆ, ನಂಬಿದವರು ಮೋಸ ಮಾಡುತ್ತಾರೆ, ಪ್ರಾರ್ಥನೆಗೆ ಉತ್ತರ ಸಿಗದಂತೆ ಕಾಣುತ್ತದೆ. ಆಗ ನಾವು “ಇದೇನು ದೇವರ ಪರೀಕ್ಷೆಯೇ?” ಎಂದು ಪ್ರಶ್ನಿಸುತ್ತೇವೆ. ಆದರೆ ಆ ಕ್ಷಣದಲ್ಲಿ ನಮಗೆ ಕಾಣುವುದು ಕೇವಲ ಘಟನೆ; ಅದರ ಹಿಂದಿರುವ ಸತ್ಯ ನಮಗೆ ತಿಳಿಯುವುದಿಲ್ಲ.
ಸರ್ವಸಿದ್ಧಕನ ಬದುಕಿನಲ್ಲಿ ಒಂದರ ಹಿಂದೆ ಒಂದರಂತೆ ಸಂಭವಿಸುವ ಘಟನೆಗಳು — ಗುರುಕುಲದ ಪರೀಕ್ಷೆ ತಪ್ಪಿಹೋಗುವುದು, ಅಜ್ಜ–ಅಜ್ಜಿಯರ ಮೇಲೆ ನಂಬಿಕೆ ಇಟ್ಟು ಮೋಸ ಹೋಗುವುದು, ಕೊನೆಗೆ ದೇವರ ದರ್ಶನದ ಆಶಯದಿಂದ ಸೇತುವೆ ದಾಟುವಾಗ ತನ್ನ ಪ್ರಾಣವನ್ನೇ ಕಳೆದುಕೊಳ್ಳುವುದು — ಇವೆಲ್ಲವೂ “ಆಗುವುದೆಲ್ಲಾ ಒಳ್ಳೆಯದಕ್ಕೆ” ಎಂಬ ಮಾತನ್ನು ಮತ್ತೊಂದು ರೀತಿಯಲ್ಲಿ ಯೋಚಿಸುವಂತೆ ಮಾಡುತ್ತವೆ.
ಒಳ್ಳೆಯದು ಎಂದರೆ ನಮಗೆ ಇಷ್ಟವಾದದ್ದು ನಡೆಯುವುದೇ? ಅಥವಾ ನಡೆಯುವ ಪ್ರತಿಯೊಂದಕ್ಕೂ ಯಾವುದೋ ಕಾರಣವಿದೆ ಎಂದು ಒಪ್ಪಿಕೊಳ್ಳುವುದೇ? ಕಥೆಯ ಅಂತ್ಯದಲ್ಲಿ ಸರ್ವಸಿದ್ಧಕನಿಗೆ ಏನಾಯಿತು ಎಂಬುದಕ್ಕೆ ಉತ್ತರ ಹುಡುಕುವುದು ಸುಲಭವಲ್ಲ. ಆದರೆ ಇದೇ ಕಥೆಯ ವಿಶೇಷತೆ. ದೇವರ ನಿರ್ಣಯವನ್ನು ಮನುಷ್ಯನ ಸೀಮಿತ ದೃಷ್ಟಿಯಿಂದ ಅಳೆಯಲು ಸಾಧ್ಯವಿಲ್ಲ ಎಂಬ ಪ್ರಶ್ನೆಯನ್ನು ಕಥೆ ನಮ್ಮ ಮುಂದೆ ಇಡುತ್ತದೆ.
ಶೀರ್ಷಿಕೆ “ಆಗುವುದೆಲ್ಲಾ ಒಳ್ಳೆಯದಕ್ಕೆ” ಎಂದಲ್ಲ; “ಆಗುವುದೆಲ್ಲಾ ಒಳ್ಳೆಯದಕ್ಕೇ” ಎಂದು ಹೇಳಲಾಗಿದೆ. ಈ ಸಣ್ಣ ವ್ಯತ್ಯಾಸದಲ್ಲೇ ಕಥೆಯ ದೊಡ್ಡ ಅರ್ಥ ಅಡಗಿದೆ. “ಕಂಡದ್ದೆಲ್ಲವೂ ನಮಗೆ ಅರ್ಥವಾಗಬೇಕೆಂದಿಲ್ಲ; ಅರ್ಥವಾಗದದ್ದೆಲ್ಲವೂ ಕೆಟ್ಟದ್ದಾಗಬೇಕೆಂದಿಲ್ಲ” ಎಂಬ ಚಿಂತನೆಗೆ ಕಥೆ ನಮ್ಮನ್ನು ಕರೆದೊಯ್ಯುತ್ತದೆ.
ಜೀವನದಲ್ಲಿ ಸೋಲು ಬಂದಾಗ ಕುಗ್ಗದೆ, ಮೋಸವಾದಾಗ ನಂಬಿಕೆಯನ್ನು ಸಂಪೂರ್ಣ ಕಳೆದುಕೊಳ್ಳದೆ, ಸಂಕಷ್ಟ ಬಂದಾಗ ತಾಳ್ಮೆಯಿಂದ ಮುಂದುವರಿಯುವುದು — ಇದೇ ಈ ಕಥೆ ನಮಗೆ ನೀಡುವ ಪ್ರಮುಖ ಸಂದೇಶ.
ಓದುಗರೇ, ಸರ್ವಸಿದ್ಧಕನ ಅಂತ್ಯವನ್ನು ಓದಿದ ನಂತರ ನಿಮ್ಮ ಮನಸ್ಸಿನಲ್ಲಿ ಮೂಡುವ ಪ್ರಶ್ನೆ ಒಂದೇ — “ನಿಜವಾಗಿಯೂ ಆಗುವುದೆಲ್ಲಾ ಒಳ್ಳೆಯದಕ್ಕೇನಾ?”
ಈ ಪ್ರಶ್ನೆಗೆ ಉತ್ತರವನ್ನು ಕಥೆ ಹೇಳುವುದಿಲ್ಲ.
ಉತ್ತರವನ್ನು ಹುಡುಕುವ ಜವಾಬ್ದಾರಿಯನ್ನು ನಮ್ಮ ಚಿಂತನೆಗೆ ಬಿಡುತ್ತದೆ.
ಇದೇ ಈ ಕಥೆಯ ಸೌಂದರ್ಯ.
ಇದೇ ಇದರ ನೀತಿ.
ಇದೇ ಇದರ ಶಕ್ತಿ.
— ಸಂಪಾದಕರು
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/CtZPUt7bwkaJkX2T6hAwZI
