ತುಮಕೂರು: ಕೇಂದ್ರ ಸರ್ಕಾರದ ಜಾತಿ ಗಣತಿ ಜಾರಿಗೊಳಿಸುವಿಕೆಯ ವಿಧಾನದ ವಿರುದ್ಧ ಉಪಮುಖ್ಯಮಂತ್ರಿ ಡಿಸಿಎಂ ಜಿ. ಪರಮೇಶ್ವರ ಅವರು ಕಟುವಾದ ಟೀಕೆ ವ್ಯಕ್ತಪಡಿಸಿದ್ದು, ಇದರ ದೋಷಪೂರಿತ ವಿಧಾನಗಳು ಸಾಮಾಜಿಕ ನ್ಯಾಯದ ಮೂಲ ಉದ್ದೇಶವನ್ನು ದುರ್ಬಲಗೊಳಿಸುವ ಅಪಾಯವಿದೆ ಎಂದು ಎಚ್ಚರಿಸಿದ್ದಾರೆ.
ಸಮಾಜದ ನಿರ್ಲಕ್ಷಿತ ಮತ್ತು ಅಂಚಿನಲ್ಲಿರುವ ಸ್ತರಗಳಿಗೆ ಸಮಾನ ಅವಕಾಶಗಳು ಹಾಗೂ ನ್ಯಾಯವನ್ನು ಖಚಿತಪಡಿಸುವುದು ಜಾತಿ ಗಣತಿಯಂತಹ ಕಾರ್ಯದ ಪ್ರಾಥಮಿಕ ಗುರಿಯಾಗಿರಬೇಕು ಎಂದು ಅವರು ಒತ್ತಿ ಹೇಳಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, “ಕೇಂದ್ರ ಸರ್ಕಾರ ಜಾತಿ ಗಣತಿಯನ್ನು ಅನುಷ್ಠಾನಗೊಳಿಸುತ್ತಿರುವ ರೀತಿ ಪ್ರಶ್ನಾರ್ಹವಾಗಿದೆ. ಎಲ್ಲರಿಗೂ ನ್ಯಾಯ ಸಿಗಬೇಕು ಎಂಬುದು ನಮ್ಮ ಮುಖ್ಯ ಉದ್ದೇಶ. ಅದು ಸಿಗದಿದ್ದಾಗ ನಾವು ಧ್ವನಿ ಎತ್ತಬೇಕು. ನಿರ್ಲಕ್ಷಿತ ಸಮುದಾಯಗಳಿಗೆ ಅವಕಾಶಗಳನ್ನು ಒದಗಿಸುವುದು ನಮ್ಮ ಕರ್ತವ್ಯ. ಸಮಾಜದಲ್ಲಿ ಹಲವು ಅಂತರಗಳಿವೆ” ಎಂದು ತಿಳಿಸಿದರು.
ಮುಂದುವರಿದು ಮಾತನಾಡಿದ ಅವರು, “21ನೇ ಶತಮಾನದಲ್ಲೂ ವ್ಯವಸ್ಥಿತ ಅಸಮಾನತೆಗಳು ಮುಂದುವರಿದರೆ ಸ್ವಾತಂತ್ರ್ಯದ ಉದ್ದೇಶ ಈಡೇರುವುದಿಲ್ಲ. ಅವರು (ಕೇಂದ್ರ ಸರ್ಕಾರ) ಮಾಡುತ್ತಿರುವ ರೀತಿ ಸರಿಯಾಗಿದ್ದರೆ, ಅನುಮಾನಗಳು ಏಕೆ ಉದ್ಭವಿಸುತ್ತವೆ? ಅವರು ಅದನ್ನು ಸರಿಯಾಗಿ ಮಾಡಬೇಕು ಮತ್ತು ಸಮಾಜದ ಎಲ್ಲ ಸ್ತರಗಳ ಜನರಿಗೆ ನ್ಯಾಯ ಸಿಗುವಂತೆ ಜಾತಿ ಗಣತಿ ನಡೆಸಬೇಕು” ಎಂದು ಆಗ್ರಹಿಸಿದರು.
ಇದೇ ವೇಳೆ, ಜಾತಿ ಗಣತಿಯು ಕೇವಲ ಜಾತಿಗಳ ಜನಸಂಖ್ಯೆಯನ್ನು ಎಣಿಸುವ ಕಸರತ್ತಲ್ಲ, ಬದಲಿಗೆ ಸರಿಯಾದ ದತ್ತಾಂಶವನ್ನು (Data) ಬಳಸಿ ಸಾಮಾಜಿಕ ನ್ಯಾಯವನ್ನು ಖಚಿತಪಡಿಸಿಕೊಳ್ಳುವ ಕಾರ್ಯಕ್ರಮವಾಗಿದೆ ಎಂದು ಕಾಂಗ್ರೆಸ್ ನಾಯಕರು ಈ ಹಿಂದೆ ವಾದಿಸಿರುವುದನ್ನು ಇಲ್ಲಿ ಸ್ಮರಿಸಬಹುದು.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/CtZPUt7bwkaJkX2T6hAwZI
