ಸರಗೂರು: ಮುಂದಿನ ದಿನಗಳಲ್ಲಿ ಅಕ್ರಮ ಮದ್ಯ ಮಾರಾಟಕ್ಕೆ ಸಂಪೂರ್ಣವಾಗಿ ಕಡಿವಾಣ ಹಾಕಲಾಗುತ್ತದೆ ಎಂದು ಜಿಲ್ಲಾ ಪೊಲೀಸ್ ಅಧೀಕ್ಷಕರಾದ ಆರ್ .ಚೇತನ್ ಅವರು ತಿಳಿಸಿದರು.
ವಿವೇಕಾನಂದ ಸ್ಮಾರಕ ಆಸ್ಪತ್ರೆಯಲ್ಲಿರುವ ಜನಧ್ವನಿ ಸಮುದಾಯ ಬಾನುಲಿ ಕೇಂದ್ರದಲ್ಲಿ ನಡೆದ ನೇರಫೋನ್ ಇನ್ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ತಾಲ್ಲೂಕಿನಲ್ಲಿ ಅಕ್ರಮ ಮದ್ಯ ಮಾರಾಟ ಕುರಿತು ಸಾಕಷ್ಟು ದೂರುಗಳು ಬರುತ್ತಿವೆ. ಇದನ್ನು ನಿಯಂತ್ರಿಸಲು ಇಲಾಖೆಯು ಸಂಪೂರ್ಣವಾಗಿ ಸಿದ್ಧತೆಗೊಂಡಿದೆ ಎಂದರು.
ಹಾಡಿಗಳಿಗೆ ಹೆಚ್ಚಿನ ರೀತಿಯಲ್ಲಿ ಅಕ್ರಮ ಮದ್ಯ ಸರಬರಾಜು ಆಗುತ್ತಿದೆ. ಅಕ್ರಮ ಮದ್ಯ ಮಾರಾಟದಲ್ಲಿ ಎಷ್ಟೇ ಪ್ರಭಾವಿ ವ್ಯಕ್ತಿಗಳು ಒಳಗೊಂಡಿದ್ದರು ಸಹ ಅವರ ವಿರುದ್ಧವು ಕಾನೂನು ಕ್ರಮ ಕೈಗೊಳ್ಳಲಾಗುತ್ತದೆ. ಆದ್ದರಿಂದ ಸಾರ್ವಜನಿಕರು ಇಲಾಖೆಯೊಂದಿಗೆ ಸಹಕರಿಸಬೇಕು ಎಂದು ಹೇಳಿದರು.
ಇನ್ನೂ ಸಂಚಾರಿ ನಿಯಮಗಳ ಬಗ್ಗೆ ಕುರಿತು ಸಾರ್ವಜನಿಕರಿಗೆ ಅರಿವು ಮೂಡಿಸುವ ನಿಟ್ಟಿನಲ್ಲಿ ಇಲಾಖೆಯು ಮುಂದಿನ ದಿನಗಳಲ್ಲಿ ಕಿರು ನಾಟಕವನ್ನು ಏರ್ಪಡಿಸಲಾಗುವುದು. ಆರೋಗ್ಯದ ದೃಷ್ಠಿಯಿಂದ ದಯವಿಟ್ಟು ಹೆಲ್ಮೆಟ್ ಧರಿಸಿ ದ್ವಿಚಕ್ರ ವಾಹನಗಳನ್ನು ಚಾಲನೆ ಮಾಡಿ. ಹಾಗೂ ವಾಹನಗಳಿಗೆ ವಿಮೆಯನ್ನು ಕಡ್ಡಾಯವಾಗಿ ಮಾಡಿಸಿ ಎಂದು ಮನವಿ ಮಾಡಿದರು.
ಇದೇವೇಳೆ ತಾಲ್ಲೂಕಿನ ಕುನ್ನಪಟ್ಟಣ ಗ್ರಾಮದ ಚೆನ್ನಪ್ಪ ಎಂಬುವವರು ಕರೆ ಮಾಡಿ, ತಾಲ್ಲೂಕಿನ ಪ್ರಸಿದ್ಧ ಸ್ಥಳವಾದ ಶ್ರೀ ಚಿಕ್ಕದೇವಮ್ಮನ ಬೆಟ್ಟದಲ್ಲಿ ಆಕ್ರಮ ಮದ್ಯ ಮಾರಾಟ ಹೇರಳವಾಗಿ ನಡೆಯುತ್ತಿದೆ. ಇದನ್ನು ಶೀಘ್ರವೇ ತಟೆಗಟ್ಟಿ, ಅಲ್ಲಿಯೇ ಒಂದು ಉಪ ಪೊಲೀಸ್ ಠಾಣೆಯನ್ನು ನಿರ್ಮಿಸಬೇಕು ಎಂದು ಮನವಿ ಮಾಡಿದರು.
ಇದಕ್ಕೆ ಪ್ರತಿಕ್ರಿಯಿಸಿದ ಜಿಲ್ಲಾ ಪೊಲೀಸ್ ಅಧೀಕ್ಷಕರಾದ ಆರ್. ಚೇತನ್, ಬೆಟ್ಟದಲ್ಲಿ ಅಕ್ರಮ ಮಧ್ಯ ಮಾರಾಟ ಹಾಗೂ ಕಾನೂನು ಬಾಹಿರ ಆಕ್ರಮಗಳನ್ನು ತಡೆಗಟ್ಟಲು, ವಾರದ ಮೂರು ದಿನಗಳು ಪೊಲೀಸ್ ಸಿಬ್ಬಂದಿಯನ್ನು ನಿಯೋಜಿಸಲಾಗುವುದು ಎಂದರು.
ಮಹಿಳೆ ಮತ್ತು ದುರ್ಬಲ ವರ್ಗದವರಿಗೆ ನ್ಯಾಯ ಕೊಡಿಸುವುದೇ ಪೊಲೀಸ್ ಇಲಾಖೆಯ ಮುಖ್ಯ ಗುರಿಯಾಗಿದೆ. ಆನ್ ಲೈನ್ ಅಲ್ಲಿ ತುಂಬಾ ಎಚ್ಚರದಿಂದ ವ್ಯವಹರಿಸಿ, ಒಂದು ವೇಳೆ ಸಮಸ್ಯೆಯಾದಲ್ಲಿ ದಯವಿಟ್ಟು ತಕ್ಷಣವೇ 112 ಕ್ಕೆ ಕರೆ ಮಾಡಿ. ಇಲ್ಲವೇ ಹತ್ತಿರದ ಆರಕ್ಷಕ ಠಾಣೆಯನ್ನು ಸಂಪರ್ಕಿಸಿ ಎಂದು ಹೇಳಿದರು.
ಇದೇ ಸಂದರ್ಭದಲ್ಲಿ ವಿವೇಕಾನಂದ ಸ್ಮಾರಕ ಆಸ್ಪತ್ರೆಯ ಮುಖ್ಯಾಕಾರ್ಯನಿರ್ವಹಣಾಧಿಕಾರಿ ಡಾ.ಜಿ.ಎಸ್ ಕುಮಾರ್, ವೃತ್ತ ನಿರೀಕ್ಷಕರಾದ ಆನಂದ್, ಆರಕ್ಷಕ ನಿರೀಕ್ಷಕರಾದ ಶ್ರವಣ್ದಾಸ್ ರೆಡ್ಡಿ, ಜನಧ್ವನಿ ಸಮುದಾಯ ಬಾನುಲಿ ಕೇಂದ್ರದ ವ್ಯವಸ್ಥಾಪಕ ನಿಂಗರಾಜು ಹಾಗೂ ಇನ್ನಿತರರು ಇದ್ದರು.
ವರದಿ: ಚಂದ್ರ ಹಾದನೂರು
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/Co3qCxRDyz3FBQg7y8GfBB