ಮಧುಗಿರಿ: ಪಟ್ಟಣದ ಆರ್ ಎಂ ಸಿ ಯಲ್ಲಿ ಹಮಾಲಿ ಕೆಲಸ ಮಾಡುತ್ತಿದ್ದ ಕೂಲಿ ಕಾರ್ಮಿಕ ಕಾಂತರಾಜು ಬಿನ್ ಲಕ್ಷ್ಮೀನಾರಾಯಣ ಅವರು ತಮ್ಮ ಎರಡೂ ಕಣ್ಣುಗಳನ್ನು ಕಳೆದುಕೊಂಡು ಅಸಹಾಯಕ ಜೀವನ ನಡೆಸುತ್ತಿದ್ದು, ಈ ವಿಚಾರ ತಿಳಿದ ಶಿಕ್ಷಕರೊಬ್ಬರು ಮಾನವೀಯತೆ ಮೆರೆದ ಘಟನೆ ನಡೆದಿದೆ.
ಮುಂಜಾನೆ ವೇಳೆ ವಾಯು ವಿಹಾರಕ್ಕೆ ತೆರಳಿದ್ದ ಶಿಕ್ಷಕ ದಂಪತಿ ಫಣೀಂದ್ರನಾಧ್ ಹಾಗೂ ಇಂದ್ರಮ್ಮ ಅವರಿಗೆ ಕಾಂತರಾಜು ಕಂಡಿದ್ದು, ಕಣ್ಣುಗಳನ್ನು ಕಳೆದುಕೊಂಡಿರುವ ಅವರನ್ನು ಶಿಕ್ಷರು ವಿಚಾರಿಸಿದ್ದಾರೆ. ಈ ವೇಳೆ ತಾನು ಮೊದಲಿಗೆ ಒಂದು ಕಣ್ಣು ಕಳೆದುಕೊಂಡು ಹಮಾಲಿ ವೃತ್ತಿ ಮಾಡಿಕೊಂಡು ಜೀವನಸಾಗಿಸುತ್ತಿದ್ದೆ ಆದರೆ, ಬಳಿಕ ಆಕಸ್ಮಿಕವಾಗಿ ಮತ್ತೊಂದು ಕಣ್ಣನ್ನು ಕಳೆದುಕೊಂಡಿರುವುದಾಗಿ ಕಾಂತರಾಜು ತಿಳಿಸಿದ್ದಾರೆ.
ಕಾರ್ಮಿಕನ ನೋವು ಕೇಳಿ ಫಣೀಂದ್ರನಾಧ್ ಅವರ ಹೃದಯ ಕರಗಿದ್ದು, ಅವರು ಕಾರ್ಮಿಕ ಕಾಂತರಾಜುನನ್ನು ಕರೆದು ಮಧುಗಿರಿ ಸಾರ್ವಜನಿಕ ಆಸ್ಪತ್ರೆಗೆ ಕರೆದೊಯ್ದು ಕಣ್ಣು ತಜ್ಞ ಡಾ.ಗಂಗಾಧರ್ ಅವರಿಗೆ ತೋರಿಸಿ, ಚಿಕಿತ್ಸೆ ಕೊಡಿಸಿದ್ದಾರೆ. ವೈದ್ಯರು, ಇನ್ನೊಂದು ತಿಂಗಳಲ್ಲಿ ದೃಷ್ಟಿ ಮರಳಿ ಬರುತ್ತದೆ ಎಂದ ಭರವಸೆ ನೀಡಿದ್ದಾರೆ.
ಇನ್ನೂ ಸದ್ಯ ಅಂಧನ ದಿನ ನಿತ್ಯದ ಖರ್ಚು ವೆಚ್ಚವನ್ನು ತಾನೇ ಭರಿಸುವುದಾಗಿ ಶಿಕ್ಷಕ ಫಣೀಂದ್ರನಾಧ್ ಅವರು ಹೇಳಿದ್ದು, ಅವರ ಮಾನವೀಯ ಕಾರ್ಯಕ್ಕೆ ಸಾರ್ವಜನಿಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ವರದಿ : ಅಬಿದ್ ಮಧುಗಿರಿ
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/Co3qCxRDyz3FBQg7y8GfBB