ಮಧುಗಿರಿ: ತಾಲೂಕಿನ ರೈತರು, ಕೂಲಿ ಕಾರ್ಮಿಕರು ಬರಗಾಲ ಬರುತ್ತದೆ ಎಂದು ಭಯ ಪಡುವ ಅಗತ್ಯವಿಲ್ಲ, ನಮ್ಮ ಕಾಂಗ್ರೆಸ್ ಸರ್ಕಾರ ಹಾಗೂ ನಾನು ನಿಮ್ಮ ಜೊತೆ ಇರುತ್ತೇವೆ ಎಂದು ಶಾಸಕ ಕೆ.ಎನ್.ರಾಜಣ್ಣ ಜನತೆಗೆ ಭರವಸೆ ನೀಡಿದರು.
ಅವರು ಕೆಎಸ್ ಆರ್ ಟಿಸಿ ಬಸ್ ನಿಲ್ದಾಣ ಸಮೀಪದ ಪಶು ಇಲಾಖೆ ವತಿಯಿಂದ 94 ರಾಸುಗಳ ನೆಲ ಹುಲ್ಲು, 6 ರಾಸುಗಳ ಹಾಲು ಕರೆಯುವ ಯಂತ್ರ, 26 ವಲಸೆ ಕುರಿಗಾರರಿಗೆ ಗುರುತಿನ ಚೀಟಿ ಹಾಗೂ ಮೇವು ಬೀಜಗಳ ಕಿಟ್ ವಿತರಿಸಿ ಮಾತನಾಡಿದರು.
ಹತ್ತು ವರ್ಷಗಳ ಹಿಂದೆ ಇದೇ ರೀತಿಯ ವಾತಾವರಣ ಸೃಷ್ಟಿಯಾಗಿತ್ತು. ಅಂದೂ ಸಹ ಗೋ ಶಾಲೆ ಆರಂಭಿಸಿ ಗೋಪಾಲಕರಿಗೆ ಉಚಿತ ಊಟದ ವ್ಯವಸ್ಥೆ ಹಾಗೂ ಮೇವಿನ ಬೀಜಗಳ ಕಿಟ್ ವಿತರಿಸಲಾಗಿತ್ತು. ಇಂದು ಮನುಷ್ಯನಿಗೆ ಅನ್ನದ ಅಭಾವವಿಲ್ಲದಂತೆ ಮಾಡಿರುವ ವ್ಯಕ್ತಿ ಎಂದರೆ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ. ಆದರೆ ಅಗತ್ಯವಿರುವುದು ರಾಸುಗಳಿಗೆ ಮೇವು. ಇದರ ಕೊರತೆಯಾಗದಂತೆ ಮೇವು ಬೀಜಗಳನ್ನು ವಿತರಿಸಲಾಗುತ್ತಿದೆ. ಮುಂದಿನ ದಿನಗಳಲ್ಲಿ ಉತ್ತಮ ಗುಣಮಟ್ಟದ ಕುಡಿಯುವ ನೀರು ದೊರೆಯಲಿದೆ. ಇತ್ತೀಚೆಗೆ ಉಪ ಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್ ಬರಗಾಲವನ್ನು ಎದುರಿಸಲು ಅಗತ್ಯವಿರುವ ಸೌಲಭ್ಯಗಳನ್ನು ಒದಗಿಸಲು ಪಟ್ಟಣದಲ್ಲಿ ನಡೆಸಿದ ಸಭೆಯಲ್ಲಿ ಅಧಿಕಾರಿಗಳಿಗೆ ಮುನ್ನೆಚ್ಚರಿಕೆ ವಹಿಸುವಂತೆ ಸೂಚಿಸಿದ್ದಾರೆ ಎಂದರು.
ರೈತರು ತಾವುಗಳು ಬೆಳೆದಂತಹ ಮೇವನ್ನು ತಮ್ಮ ರಾಸುಗಳಿಗೆ ಅಗತ್ಯವಿರುವಷ್ಟು ತಮ್ಮ ಬಳಿಯೇ ಉಳಿಸಿಕೊಂಡು ಉಳಿದ ಹೆಚ್ಚುವರಿ ಮೇವನ್ನು ಸರ್ಕಾರಕ್ಕೆ ಮಾರಾಟ ಮಾಡಬಹುದಾಗಿದೆ. ದೊಡ್ಡೇರಿ ಹಾಗೂ ಕೊಡಿಗೇನಹಳ್ಳಿ ಹೋಬಳಿಗಳಲ್ಲಿ ಮೇವಿನ ಕೊರತೆ ಇದೆ ಎಂದು ತಿಳಿದು ಬಂದಿದೆ. ತಾಲೂಕಿಗೆ ಇನ್ನೂ 20 ಸಾವಿರ ಕಿಟ್ಗಳು ಬರಲಿವೆ. ರೈತರು ಮೇವು ಬೆಳೆಯಲು ಆಸಕ್ತಿ ಇರುವವರಿಗೆ ಮಾತ್ರ ಕಿಟ್ಗಳನ್ನು ವಿತರಣೆ ಮಾಡಬೇಕು. ತಕ್ಷಣ ಮೇವು ಬೀಜಗಳನ್ನು ವಿತರಣೆ ಮಾಡಲು ಅಧಿಕಾರಿಗಳು ಕ್ರಮ ಕೈಗೊಳ್ಳಬೇಕು ಹಾಗೂ ರೈತರು ನೆಮ್ಮದಿಯಿಂದ ಬದುಕುವಂತಹ ವಾತಾವರಣ ಸೃಷ್ಟಿಯಾಗಬೇಕು ಎಂದರು.
ಉಪವಿಭಾಗಾಧಿಕಾರಿ ಗೋಟೂರು ಶಿವಪ್ಪ ಮಾತನಾಡಿ, ರಾಸುಗಳ ಮೇವಿಗೆ ತೊಂದರೆಯಾಗದಂತೆ ಎರಡೇ ದಿನದಲ್ಲಿ 10 ಸಾವಿರ ಮೇವು ಬೀಜಗಳನ್ನು ಪಶು ಇಲಾಖೆಯ ವತಿಯಿಂದ ವಿತರಿಸಲು ಕ್ರಮ ಕೈಗೊಳ್ಳಲಾಗಿದೆ. ನಮ್ಮಲ್ಲಿ 14 ವಾರಗಳಿಗೆ ಆಗುವಷ್ಟು ಮೇವು ಇದ್ದರೂ ಸಹ ಮುಂದಾಲೋಚನೆಯಿಂದ ಮತ್ತಷ್ಟು ಮೇವು ಬೀಜಗಳನ್ನು ಸರಬರಾಜು ಮಾಡಲು ಅಗತ್ಯ ಕ್ರಮ ಕೈಗೊಳ್ಳಲಾಗುತ್ತಿದೆ. ಮಧುಗಿರಿ ವಿಧಾನಸಭಾ ಕ್ಷೇತ್ರದಲ್ಲಿನ ರೈತರು ಹೈನುಗಾರಿಕೆಯನ್ನು ಹೆಚ್ಚು ಅವಲಂಬಿತರಾಗಿರುವುದರಿಂದ ರಾಸುಗಳ ಮೇವಿನ ಅಗತ್ಯತೆ ಹೆಚ್ಚಿದೆ. ನೀರಿನ ಸೌಲಭ್ಯ ಇರುವವರು ಮೇವು ಬೀಜಗಳನ್ನು ಬಿತ್ತಿ ಬೆಳೆದು ರಾಸುಗಳ ಮೇವಿನ ಕೊರತೆಯನ್ನು ನೀಗಿಸಬಹುದಾಗಿದೆ ಎಂದರು.
ಎಸಿ.ಎಸ್.ಮಲ್ಲಿಕಾರ್ಜುನಯ್ಯ, ಪಶು ಇಲಾಖೆಯ ಉಪನಿರ್ದೇಶಕ ಶಿವಪ್ರಸಾದ್ ಹೆಚ್.ಎಂ, ಸಹಾಯಕ ನಿರ್ದೇಶಕ ಡಾ. ಜಗದೀಶ್ ಎಸ್.ಕೆ, ತಹಸೀಲ್ದಾರ್ ನಂದಿನಿ, ಇ.ಓ. ಉತ್ತಮ್, ಮುಖಂಡರುಗಳಾದ ಬಿ.ನಾಗೇಶ್ ಬಾಬು, ಪಿ.ಟಿ.ಗೋವಿಂದಯ್ಯ, ಎಂ.ಕೆ.ನಂಜುಂಡರಾಜು, ಶ್ರೀಧರ್, ಸಾಧಿಕ್, ಅಲೀಂ, ತುಂಗೋಟಿ ರಾಮಣ್ಣ, ಪಶು ವೈದ್ಯಾಧಿಕಾರಿಗಳು, ಸಿಬ್ಬಂದಿ, ಫಲಾನುಭವಿಗಳು ಇದ್ದರು.
ಬರಗಾಲದ ಭೀತಿಯಿಂದ ಯಾರೂ ಹೆದರುವ ಅಗತ್ಯತೆ ಇಲ್ಲ. ನನಗೆ ಮಳೆ ಬರುವ ವಿಶ್ವಾಸವಿದೆ. ನಮ್ಮಲ್ಲಿ ಹಣದ ಕೊರತೆ ಇಲ್ಲ. ಅಗತ್ಯವಿರುವೆಡೆ ಕುಡಿಯುವ ನೀರಿಗಾಗಿ ಪೈಪ್ ಲೈನ್ ಹಾಗೂ ಬೋರ್ ವೆಲ್ ವ್ಯವಸ್ಥೆ ಕಲ್ಪಿಸಿ ಕೊಡಲಾಗುವುದು. ನಮ್ಮಲ್ಲಿ ಇನ್ನೂ 14 ವಾರಗಳಿಗೆ ದೊರೆಯಬಹುದಾದ ಮೇವು ಇದೆ. ನಮ್ಮ ತಾಲೂಕಿನಲ್ಲಿ ಹೆಚ್ಚು ಚೆಕ್ ಡ್ಯಾಂಗಳನ್ನು ನಿರ್ಮಿಸಿರುವುದರಿಂದ ಅಂತರ್ಜಲ ಮಟ್ಟ ಪ್ರಮಾಣ ಹೆಚ್ಚಿದೆ. ಗ್ರಾ.ಪಂ ಮಟ್ಟದಲ್ಲಿ ಎಂ ಜಿ ನರೇ ಗ ಯೋಜನೆಯಡಿ ಮತ್ತಷ್ಟು ಚೆಕ್ ಡ್ಯಾಂ ನಿರ್ಮಿಸುವಂತೆ ಅಧಿಕಾರಿಗಳಿಗೆ ಸೂಚಿಸಲಾಗಿದೆ. ಇವುಗಳ ನಿರ್ಮಾಣದಿಂದ ಕುಡಿಯುವ ನೀರಿಗೆ ತೊಂದರೆ ಉಂಟಾಗುವುದಿಲ್ಲ.
— ಕೆ.ಎನ್.ರಾಜಣ್ಣ, ಶಾಸಕರು.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/CtZPUt7bwkaJkX2T6hAwZI
