ದಾವಣಗೆರೆ: 2022-23ನೇ ಸಾಲಿನ ರಾಜ್ಯ ಬಜೆಟ್ ನಲ್ಲಿ ಆಶಾ ಕಾರ್ಯಕರ್ತೆಯರಿಗೆ ನಿಶ್ಚಿತ ಗೌರವಧನದಲ್ಲಿ ಹೆಚ್ಚಳ ಮಾಡಿರುವುದನ್ನು ಹೊರತುಪಡಿಸಿ , ಇತರ ಎಲ್ಲಾ ಪ್ರಮುಖ ಬೇಡಿಕೆಗಳನ್ನು ಸರ್ಕಾರ ಕಡೆಗಣಿಸಿದ್ದು, ಇದರ ವಿರುದ್ಧ ಎ.ಐ.ಯು.ಟಿ.ಯು.ಸಿ. ಸಂಯೋಜಿತ ಕರ್ನಾಟಕ ರಾಜ್ಯ ಸಂಯುಕ್ತ ಆಶಾ ಕಾರ್ಯಕರ್ತೆಯರ ಸಂಘದ ರಾಜ್ಯ ಹಾಗೂ ಜಿಲ್ಲಾ ಸಮಿತಿಯು ತೀವ್ರ ಪ್ರತಿಭಟನೆ ನಡೆಸಿದೆ.
ನಗರದ ಜಯದೇವ ವೃತ್ತದಲ್ಲಿ ಆಶಾಕಾರ್ಯಕರ್ತೆಯರು ತಮ್ಮ ಬೇಡಿಕೆಗಳನ್ನು ಈಡೇರಿಸಬೇಕೆಂದು ಆಗ್ರಹಿಸಿ ಪ್ರತಿಭಟನೆ ನಡೆಸಿದರು. ಬಳಿಕ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗಳು ಹಾಗೂ ಮುಖ್ಯಮಂತ್ರಿಗಳಿಗೆ ಆರೋಗ್ಯ ಸಚಿವರಿಗೆ ಮನವಿ ಸಲ್ಲಿಸಲಾಯಿತು.
ರಾಜ್ಯ ಸರ್ಕಾರದ ಮಾಸಿಕ ನಿಶ್ಚಿತ ಗೌರವಧನವನ್ನು ಕನಿಷ್ಠ ರೂ. 2,000 ಹೆಚ್ಚಳ ಮಾಡುತ್ತೇವೆ ಎಂದು ಭರವಸೆ ನೀಡಿದ್ದರೂ , ಕಡೆಗೆ 1000 ರೂ.ಗಳಾದರೂ ಹೆಚ್ಚಳ ಮಾಡಿರುವುದನ್ನು ಸಂಘದಿಂದ ಸ್ವಾಗತಿಸುತ್ತೇವೆ. ಆದರೆ ಸಂಘದ ರಾಜ್ಯ ಸಮಿತಿಯಿಂದ ಸರ್ಕಾರ ಮತ್ತು ಇಲಾಖೆಗೆ ಸಲ್ಲಿಸಿರುವ ಪ್ರಮುಖ ಬೇಡಿಕೆಗಳಿಗೆ ಪರಿಹಾರ ಕ್ರಮಗಳನ್ನು ಘೋಷಣೆ ಮಾಡದೆ ಕಡೆಗಣಿಸಿದೆ ಎಂದು ಪ್ರತಿಭಟನಾಕಾರರು ಅಸಮಾಧಾನ ಹೊರ ಹಾಕಿದರು.
ಬಜೆಟ್ ಪೂರ್ವದಲ್ಲಿ ಸಲ್ಲಿಸಿರುವ ಬೇಡಿಕೆಗಳ ಕುರಿತು ಚರ್ಚಿಸಿ, ಸೂಕ್ತ ಪರಿಹಾರ ಕಂಡುಕೊಳ್ಳಲು ಅಶಾ ಸಂಘದ ಪದಾಧಿಕಾರಿಗಳ ಜೊತೆಯಲ್ಲಿ ಸಭೆ ಕರೆಯಬೇಕು ಹಾಗೂ ಕೂಡಲೇ ಸೂಕ್ತ ಪರಿಹಾರ ಕ್ರಮಗಳನ್ನು ಪ್ರಕಟಿಸಬೇಕೆಂದು ಪ್ರತಿಭಟನೆಯಲ್ಲಿ ಒತ್ತಾಯಿಸಲಾಯಿತು .
ಚಟುವಟಿಕೆ ಆಧರಿಸಿ ಪ್ರೋತ್ಸಾಹಧನ ಪಡೆಯಲು ಆಶಾ ನಿಧಿ ಪೋರ್ಟಲ್ನಲ್ಲಿ ಚಟುವಟಿಕೆಗಳ ಕಡ್ಡಾಯ ನೋಂದಣಿ ತೆಗೆದು ಹಾಕಬೇಕು. ಮಾಡಿದ ಎಲ್ಲಾ ಚಟುವಟಿಕೆಗಳಿಗೆ ಸಂಪೂರ್ಣ ಪ್ರೋತ್ಸಾಹಧನ ಪಾವತಿ ಮಾಡಬೇಕು. ಎಲ್ಲಾ ಕಾರ್ಯಕರ್ತೆಯರಿಗೆ ದಿನ ಭತ್ಯೆ ಮತ್ತು ಸಾರಿಗೆ ಭತ್ಯೆ ನಿಗದಿಪಡಿಸಬೇಕು . ತೀವ್ರ ಅನಾರೋಗ್ಯ ತೊಂದರೆಯಾದರೆ 3 ತಿಂಗಳುಗಳ ಕಾಲ ನಿಶ್ಚಿತ ಗೌರವಧನ ಮತ್ತು ನಿಗದಿತ ಪ್ರೋತ್ಸಾಹಧನ ನೀಡಲು ಸೂಕ್ತ ಆದೇಶ ಮಾಡಬೇಕು. ನಗರ ಪ್ರದೇಶದಲ್ಲೂಆಶಾ ಫೆಸಿಲಿಟೇಟರ್ ಗಳನ್ನು ನೇಮಿಸುವುದು ಸೇರಿದಂತೆ ಒಟ್ಟು 14 ಬೇಡಿಕೆಗಳನ್ನು ಈಡೇರಿಸಲು ಆಗ್ರಹಿಸಲಾಯಿತು .
ಈ ಸಂದರ್ಭದಲ್ಲಿ ಸಂಘಟನೆಯ ದಾವಣಗೆರೆ ಸಂಚಾಲಕ ತಿಪ್ಪೇಸ್ವಾಮಿ, ಮಧು ತೊಗಲೇರಿ, ಸುಮಾ ನಲ್ಲೂರು, ನಾಗವೇಣಿ ಹಿರೇಮಳಲಿ, ಲಕ್ಷ್ಮೀ ದೇವಿ ಬೆಳಗುತ್ತಿ, ಮಂಜಮ್ಮ ಚೀಲೂರು, ಮಾರಕ್ಕ ಕಲ್ಲೇದೇವರ ಪುರ, ಲೀಲಾವತಿ ಬಿದರಕೆರೆ, ಮಂಜುಳ ಶಿರಮಗೊಂಡನ ಹಳ್ಳಿ ತಿಪ್ಪಮ ನೀರ್ಥಡಿ, ಮಮತ ಹಾಲಿವಾಣ, ಮಂಜುಳ ಕುರುಬರಹಳ್ಳಿ ಸೇರಿದಂತೆ ನೂರಾರು ಕಾರ್ಯಕರ್ತೆಯರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.
ವರದಿ: ಮುರುಳಿಧರನ್ ಆರ್. ಹಿರಿಯೂರು. ( ಚಿತ್ರದುರ್ಗ – ದಾವಣಗೆರೆ ).
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/Co3qCxRDyz3FBQg7y8GfBB