ತುಮಕೂರು: ಮಹಾನಗರಪಾಲಿಕೆ ವ್ಯಾಪ್ತಿಯ ಅನಧಿಕೃತ ಆಸ್ತಿಗಳನ್ನು ಬಿ–ಖಾತಾ ರಿಜಿಸ್ಟರ್ ನಲ್ಲಿ ದಾಖಲಿಸಲು ನಗರದಾದ್ಯಂತ ಹಮ್ಮಿಕೊಂಡಿರುವ ಬಿ–ಖಾತಾ ಆಂದೋಲನಕ್ಕೆ ಶಾಸಕ ಜಿ.ಬಿ.ಜ್ಯೋತಿಗಣೇಶ್ ಗುರುವಾರ ಚಾಲನೆ ನೀಡಿದರು.
ನಗರದ ಸಿರಾಗೇಟ್ ಐ.ಡಿ.ಎಸ್.ಎಂ.ಟಿ. ಕಾಂಪ್ಲೆಕ್ಸ್ ನಲ್ಲಿಂದು ಆಂದೋಲನಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಆಂದೋಲನದಲ್ಲಿ ಇ–ಆಸ್ತಿ ತಂತ್ರಾಂಶದಲ್ಲಿ ಆಸ್ತಿಗಳನ್ನು ಬಿ–ಖಾತಾ ರಿಜಿಸ್ಟರ್ ನಲ್ಲಿ ದಾಖಲಿಸಲು ಮಾಲೀಕರಿಗೆ ನಿಗದಿತ ಅರ್ಜಿಯನ್ನು ವಿತರಿಸಲಾಗುವುದು.
ಭರ್ತಿ ಮಾಡಿದ ಅರ್ಜಿಯನ್ನು ಅಗತ್ಯ ದಾಖಲೆಗಳೊಂದಿಗೆ ಸ್ವೀಕರಿಸಲು ವಾರ್ಡ್ ವಾರು ಸ್ಥಳಗಳನ್ನು ನಿಗದಿಪಡಿಸಲಾಗಿದೆ. ಸಾರ್ವಜನಿಕರು ಸೀಮಿತ ಕಾಲಾವಧಿಯೊಳಗೆ ಅರ್ಜಿ ಸಲ್ಲಿಸಿ ತಮ್ಮ ಆಸ್ತಿಯನ್ನು ಬಿ–ಖಾತಾ ರಿಜಿಸ್ಟರ್ ನಲ್ಲಿ ದಾಖಲಿಸಬಹುದಾಗಿದೆ ಎಂದು ತಿಳಿಸಿದರು.
ಸಾರ್ವಜನಿಕರಿಗೆ ಅನುಕೂಲವಾಗುವಂತೆ ಮಹಾನಗರ ಪಾಲಿಕೆ ವ್ಯಾಪ್ತಿಯ 11 ಸ್ಥಳಗಳಲ್ಲಿ ಬಿ–ಖಾತಾ ರಿಜಿಸ್ಟರ್ ದಾಖಲಾತಿ ಆಂದೋಲನ ನಡೆಯಲಿದ್ದು, ಇದರ ಪ್ರಯೋಜನವನ್ನು ಸಾರ್ವಜನಿಕರು ಪಡೆದುಕೊಳ್ಳಬೇಕು ಎಂದು ತಿಳಿಸಿದರು.
ಸಾರ್ವಜನಿಕರು ಸಕಾಲದಲ್ಲಿ ತೆರಿಗೆ ಹಣವನ್ನು ಪಾವತಿಸಬೇಕು. ಇದರಿಂದ ನಗರವನ್ನು ಮತ್ತಷ್ಟು ಅಭಿವೃದ್ಧಿಪಡಿಸಲು ಹಾಗೂ ಮೂಲಭೂತ ಸೌಕರ್ಯಗಳನ್ನು ಒದಗಿಸಲು ನೆರವಾಗುತ್ತದೆ ಎಂದು ತಿಳಿಸಿದರು.
ಸಾರ್ವಜನಿಕರು ತಮ್ಮ ಆಸ್ತಿಗೆ ಸಂಬಂಧಿಸಿದಂತೆ ಬಿ ಅಥವಾ ಎ ಖಾತಾ ಪಡೆಯಲು ಮಧ್ಯವರ್ತಿಗಳನ್ನು ಸಂಪರ್ಕಿಸದೆ ನೇರವಾಗಿ ಸಂಬಂಧಪಟ್ಟ ಅಧಿಕಾರಿಗಳನ್ನ ಭೇಟಿ ಮಾಡಬೇಕು ಎಂದು ಸೂಚನೆ ನೀಡಿದರು.
ಮಹಾನಗರ ಪಾಲಿಕೆ ಆಯುಕ್ತ ಅಶ್ವಿಜ ಮಾತನಾಡಿ, ಕಳೆದ 4 ತಿಂಗಳಿಂದ ಪಾಲಿಕೆ ವ್ಯಾಪ್ತಿಯಲ್ಲಿ ಆಸ್ತಿ ಮಾಲೀಕರಿಗೆ 10 ಸಾವಿರ ಎ–ಖಾತೆಗಳನ್ನು ವಿತರಿಸಲಾಗಿದೆ. ಬಿ–ಖಾತಾ ಪಡೆಯಲು ಮೇ 10ರವರಗೆ ಕಾಲಾವಕಾಶವಿದ್ದು, ನಾಗರಿಕರು ಈ ಅವಕಾಶವನ್ನು ಸದುಪಯೋಗಪಡಿಸಿಕೊಳ್ಳಬೇಕು ಎಂದು ತಿಳಿಸಿದರು.
ಬಿ–ಖಾತಾಗೆ ದಾಖಲಿಸಲಿಚ್ಛಿಸುವ ಆಸ್ತಿ ಮಾಲೀಕರು ತಮ್ಮ ಆಸ್ತಿಗೆ ಸಂಬಂಧಿಸಿದಂತೆ ಸ್ವತ್ತಿನ ಮಾಲೀಕತ್ವ ಸಾಬೀತುಪಡಿಸುವ 2024ರ ಸೆಪ್ಟೆಂಬರ್ 10ರ ಪೂರ್ವದಲ್ಲಿ ನೋಂದಾಯಿತ ಮಾರಾಟ ಪತ್ರ/ದಾನಪತ್ರ/ವಿಭಾಗ ಪತ್ರ/ಹಕ್ಕು ಖುಲಾಸೆ ಪತ್ರ, ಪ್ರಸಕ್ತ ಸಾಲಿನವರೆಗೆ ಋಣಭಾರ ಪ್ರಮಾಣ ಪತ್ರ(ಇಸಿ/ನಮೂನೆ-15), ಚಾಲ್ತಿ ಸಾಲಿನ ಆಸ್ತಿ ತೆರಿಗೆ ಪಾವತಿ ರಸೀದಿ, ಮಾಲೀಕರ ಮತ್ತು ಸ್ವತ್ತಿನ ಫೋಟೋ ಹಾಗೂ ಗುರುತಿನ ದಾಖಲೆ ಪ್ರತಿ ಸೇರಿದಂತೆ ಮತ್ತಿತರ ಅಗತ್ಯ ದಾಖಲೆಗಳನ್ನು ಸಲ್ಲಿಸಬೇಕು ಎಂದು ಮಾಹಿತಿ ನೀಡಿದರು.
ಬಿ–ಖಾತಾ ರಿಜಿಸ್ಟರ್ಗೆ ದಾಖಲಿಸಲು ನಿಗದಿಪಡಿಸಿರುವ ಸ್ಥಳಗಳ ವಿವರ:
ಸಾರ್ವಜನಿಕರ ಅನುಕೂಲಕ್ಕಾಗಿ ಬಿ–ಖಾತಾ ರಿಜಿಸ್ಟರ್ಗೆ ದಾಖಲಿಸಲು ಪಾಲಿಕೆ ವತಿಯಿಂದ ವಾರ್ಡ್ ಗನುಗುಣವಾಗಿ ದಿನಾಂಕವಾರು ಸ್ಥಳವನ್ನು ನಿಗದಿಪಡಿಸಲಾಗಿದ್ದು, ಫೆಬ್ರವರಿ 21ರಂದು ವಾರ್ಡ್ ಸಂಖ್ಯೆ 1, 2, 3ರ ನಾಗರಿಕರು ಶಿರಾಗೇಟ್ ಐಡಿಎಸ್ಎಂಟಿ ಕಾಂಪ್ಲೆಕ್ಸ್ ಹಾಗೂ ವಾರ್ಡ್ ಸಂಖ್ಯೆ 4, 5, 6-ಚಿಕ್ಕಪೇಟೆಯ ಪೂರ್ಣಯ್ಯ ಛತ್ರ; ಫೆ.27 ಮತ್ತು 28ರಂದು ವಾರ್ಡ್ ಸಂಖ್ಯೆ 7 ರಿಂದ 11–ಪಿ.ಎಚ್ ಕಾಲೋನಿಯ ಆಜಾದ್ ಪಾರ್ಕ್ ಹಾಗೂ ವಾರ್ಡ್ ಸಂಖ್ಯೆ 10, 14, 15, 23, 29–ಕುಣಿಗಲ್ ಮುಖ್ಯರಸ್ತೆಯ ವಾಲ್ಮೀಕಿ ಸಮುದಾಯ ಭವನ; ಮಾರ್ಚ್ 3 ಮತ್ತು 4ರಂದು ವಾರ್ಡ್ ಸಂಖ್ಯೆ 12,13,17,22- ಮಹಾನಗರ ಪಾಲಿಕೆ ಆವರಣ ಹಾಗೂ ವಾರ್ಡ್ ಸಂಖ್ಯೆ 16, 18, 19, 20–ಕೋತಿತೋಪು ಸರ್ಕಾರಿ ಶಾಲೆ; ಮಾ.6 ಮತ್ತು 7ರಂದು ವಾರ್ಡ್ ಸಂಖ್ಯೆ 24 ರಿಂದ 27- ಅಶೋಕ ನಗರದ ಆಜಾದ್ ಪಾರ್ಕ್ ಹಾಗೂ ವಾರ್ಡ್ ಸಂಖ್ಯೆ 21, 28–ಹನುಮಂತಪುರದ ಕೊಲ್ಲಾಪುರದಮ್ಮನ ದೇವಸ್ಥಾನ; ಮಾ.11 ಮತ್ತು 12ರಂದು ವಾರ್ಡ್ ಸಂಖ್ಯೆ 33, 34-ಎಸ್.ಎಲ್.ಎನ್.ನಗರದ ಮಹಾನಗರಪಾಲಿಕೆ ಪಂಪ್ಹೌಸ್ ಹಾಗೂ ವಾರ್ಡ್ ಸಂಖ್ಯೆ 30, 31–ಮಾರುತಿ ನಗರ ಪಾರ್ಕ್; ಮಾ.14ರಂದು ವಾರ್ಡ್ ಸಂಖ್ಯೆ 32, 35ರ ನಾಗರಿಕರಿಗಾಗಿ ಬಟವಾಡಿಯ ಬಸವ ಭವನದಲ್ಲಿ ಬಿ-ಖಾತಾ ರಿಜಿಸ್ಟರ್ಗೆ ದಾಖಲಿಸಲು ಅರ್ಜಿಗಳನ್ನು ಸ್ವೀಕರಿಸಲಾಗುವುದು. ಕಾರ್ಯಕ್ರಮದಲ್ಲಿ ಪಾಲಿಕೆ ಹಾಗೂ ಕಂದಾಯ ಇಲಾಖೆ ಅಧಿಕಾರಿಗಳು ಹಾಜರಿದ್ದರು.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Bc4BbJiZ9pF3L0M4QgZdQ4