ಚಿತ್ರದುರ್ಗ: ಜಿಲ್ಲೆಯ ಹಿರಿಯೂರು ತಾಲ್ಲೂಕಿನ ಕಸಬಾ ಹೋಬಳಿಯ ವಾಣಿವಿಲಾಸ ಸಾಗರಕ್ಕೆ 10 ಟಿ ಎಂ ಸಿ ನೀರು ಮೀಸಲಿಟ್ಟು, ಧರ್ಮಪುರ ಮತ್ತು ಜೆಜಿ ಹಳ್ಳಿ ಹೋಬಳಿಗಳ ಎಲ್ಲಾ ಕೆರೆಗಳನ್ನು ತುಂಬಿಸಬೇಕು ಎಂದು ತಾಲ್ಲೂಕು ರೈತಸಂಘದ ಅಧ್ಯಕ್ಷರಾದ ಕೆ.ಟಿ.ತಿಪ್ಪೇಸ್ವಾಮಿ ಒತ್ತಾಯಿಸಿದರು.
ಭದ್ರಾ ಮೇಲ್ದಂಡೆ ಯೋಜನೆಯನ್ನು ರಾಷ್ಟ್ರೀಯ ಯೋಜನೆಗೆ ಸೇರಿಸಲು ಹಾಗೂ ಹಿರಿಯೂರು ನಗರದ ಸಕ್ಕರೆ ಕಾರ್ಖಾನೆಯನ್ನು ಪುನಃ ಪ್ರಾರಂಭಿಸಲು ಒತ್ತಾಯಿಸಿ ಹಮ್ಮಿಕೊಳ್ಳಲಾಗಿದ್ದ ಧರಣಿ ಸತ್ಯಾಗ್ರಹದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಭದ್ರಾ ಮೇಲ್ದಂಡೆ ಯೋಜನೆ ಈ ಹಿಂದಿನ ಬಿಜೆಪಿ ಸರ್ಕಾರ ತಾತ್ಕಾಲಿಕವಾಗಿ 5 ಟಿಎಂಸಿ ನೀರನ್ನು ಮಂಜೂರು ಮಾಡಲಾಗಿತ್ತು. ಆದರೆ ತದ ನಂತರ ಬಂದ ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ಇದನ್ನು 2ಟಿಎಂಸಿ ನೀರಿಗೆ ಸೀಮಿತಗೊಳಿಸಲಾಯಿತು. ಈಗಾಗಲೇ ಸರ್ಕಾರ ಕುಡಿಯುವ ಸಲುವಾಗಿ ಹಿರಿಯೂರು ನಗರಕ್ಕೆ ಹಾಗೂ ತಾಲೂಕಿನ 168 ಗ್ರಾಮಗಳಿಗೆ, ಚಳ್ಳಕೆರೆನಗರಕ್ಕೆ ಹಾಗು ಹಳ್ಳಿಗಳಿಗೆ ಡಿ.ಆರ್.ಡಿ.ಓ ಹಾಗೂ ಚಿತ್ರದುರ್ಗ ನಗರಕ್ಕೆ ಹೊಳಲ್ಕೆರೆ ಗ್ರಾಮ ಮತ್ತು ತಾಲ್ಲೂಕಿನ 198 ಗ್ರಾಮಗಳಿಗೆ ಕುಡಿಯುವ ನೀರು ಹರಿಸಬೇಕಿದೆ. ಅಲ್ಲದೆ ತಾಲ್ಲೂಕಿನ ವಾಣಿವಿಲಾಸ ಸಾಗರದ ಅಚ್ಚುಕಟ್ಟು ಪ್ರದೇಶಕ್ಕೆ, ಕಾರ್ಖಾನೆಗಳಿಗೆ ಮತ್ತು ವ್ಯವಸಾಯದ ಉದ್ದೇಶಕ್ಕೆ ಎಲ್ಲಾ ಸೇರಿ ನೀರಾವರಿ ಇಲಾಖೆ ಮಾಹಿತಿ ಪ್ರಕಾರ 8.506 ಟಿ.ಎಂಸಿ ನೀರು ಮೀಸಲಿಟ್ಟಿರುವುದು ಆನೆಯ ಹೊಟ್ಟೆಗೆ ಹಪ್ಪಳವಿಟ್ಟಂತಾಗಿದೆ ಎಂಬುದಾಗಿ ಅವರು ಹೇಳಿದರು.
ಈ ಬಾರಿ ವಾಣಿವಿಲಾಸ ಸಾಗರಕ್ಕೆ ಹೆಚ್ಚಿನ ಮಳೆಯಿಂದ ಹೆಚ್ಚಿನ ನೀರು ಸಂಗ್ರಹವಾಗಿದ್ದು, ತುಮಕೂರು ಹಾಗೂ ಚಿತ್ರದುರ್ಗ ಭಾಗದ ಭದ್ರಾ ನಾಲೆಯ ಕಾಲುವೆಗಳಿಗೆ ನೀರು ಹರಿಸಲು ಪ್ರಾರಂಭವಾದರೆ, ಸಾಗರದ ನೀರಿನ ಪ್ರಮಾಣ ಡೆಡ್ ಸ್ಟೋರೇಜ್ ತಲುಪುವುದು ಗ್ಯಾರೆಂಟಿಯಾಗಿದೆ. ಇದರಿಂದ ತಾಲ್ಲೂಕಿನ ಅಂತರ್ಜಲ ಬತ್ತಿ ಹೋಗಿ 2 ವರ್ಷಗಳ ಹಿಂದಿನಂತೆ ಲಕ್ಷಾಂತರ ಅಡಕೆ-ತೆಂಗಿನ ಮರಗಳು ಸೇರಿದಂತೆ ಬಾಳೆ ದಾಳಿಂಬೆಯಂತಹ ತೋಟದ ಬೆಳೆಗಳು ಒಣಗಿಹೋಗುವ ಪರಿಸ್ಥಿತಿ ಮತ್ತೆ ಮರುಕಳಿಸಿ ರೈತರು ಆತ್ಮಹತ್ಯೆಯ ದಾರಿ ಹಿಡಿಯಬೇಕಾಗಿರುತ್ತದೆ. ಆದ್ದರಿಂದ ವಾಣಿವಿಲಾಸ ಸಾಗರಕ್ಕೆ ಸರ್ಕಾರ ಪ್ರತಿವರ್ಷ ಸುಮಾರು 10 ಟಿಎಂಸಿ ನೀರನ್ನು ಮೀಸಲಿಡಬೇಕು ಧರ್ಮಪುರ ಹಾಗೂ ಜೆಜಿಹಳ್ಳಿ ಹೋಬಳಿಗಳಿಗೆ ಹಾಗೂ ಕಲ್ಲುವಳ್ಳಿ ಭಾಗಕ್ಕೆ 2 ನಾಲೆಗಳ ಮುಖಾಂತರ ರೈತರ ಜಮೀನುಗಳಿಗೆ ನೀರು ಹರಿಸಿ ಎಲ್ಲಾ ಕೆರೆಗಳನ್ನು ತುಂಬಿಸಬೇಕು ಎಂದರು.
ತಾಲ್ಲೂಕಿನ ಕಸಬಾ ಹೋಬಳಿ ಮತ್ತು ಐಮಂಗಲ ಹೋಬಳಿ ಸೇರಿದಂತೆ ತಾಲೂಕಿನ ಎಲ್ಲಾ ಭಾಗಕ್ಕೆ ನೀರಾವರಿ ಸೌಲಭ್ಯ ಒದಗಿಸಬೇಕು, ಭದ್ರಾ ಮೇಲ್ದಂಡೆ ಯೋಜನೆಯನ್ನು ಕೇಂದ್ರ ಸರ್ಕಾರ ರಾಷ್ಟ್ರೀಯ ಯೋಜನೆಗೆ ಸೇರಿಸಬೇಕು. ವಾಣಿವಿಲಾಸ ಸಕ್ಕರೆ ಕಾರ್ಖಾನೆಯನ್ನು ಪ್ರಾರಂಭಿಸಬೇಕು ಎಂದು ಒತ್ತಾಯಿಸಿದರು.
ಈ ಸಂದರ್ಭದಲ್ಲಿ ರೈತ ಮುಖಂಡರುಗಳಾದ ಕೆ.ಟಿ.ತಿಪ್ಪೇಸ್ವಾಮಿ, ಆಲೂರು ಸಿದ್ದರಾಮಣ್ಣ, ಮಂಜುನಾಥ್, ದೇವೇಂದ್ರಪ್ಪ ತಿಮ್ಮಣ್ಣ, ಶ್ರೀರಂಗಮ್ಮ, ಗಂಗಮ್ಮ, ತಿಮ್ಮಣ್ಣ, ವೈ.ಶಿವಣ್ಣ, ರಮೇಶ್, ಸೇರಿದಂತೆ ಅನೇಕ ರೈತ ಮುಖಂಡರು ಉಪಸ್ಥಿತರಿದ್ದರು.
ವರದಿ: ಮುರುಳಿಧರನ್ ಆರ್., ಹಿರಿಯೂರು. ( ಚಿತ್ರದುರ್ಗ – ದಾವಣಗೆರೆ )
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/Co3qCxRDyz3FBQg7y8GfBB