ಎಚ್.ಡಿ.ಕೋಟೆ: ಚಿಕ್ಕದೇವಮ್ಮ ಜಾತ್ರೆಯಲ್ಲಿ ಪ್ರಾಣಿಬಲಿ ತಡೆ ಸಂಪೂರ್ಣ ಯಶಸ್ವಿಯಾಗಿದ್ದು, ಶತ-ಶತಮಾನಗಳ ಮೌಢ್ಯ-ಅಂಧ ಸಂಪ್ರದಾಯಕ್ಕೆ ಅಂತಿಮ ವಿದಾಯ, ಭಾರತೀಯ ಧಾರ್ಮಿಕ ಇತಿಹಾಸದಲ್ಲಿ ಮತ್ತೊಂದು ಮೈಲಿಗಲ್ಲುಎಂದು ವಿಶ್ವಪ್ರಾಣಿ ಕಲ್ಯಾಣ ಮಂಡಳಿ, ಪಶು ಪ್ರಾಣಿ ಬಲಿ ನಿರ್ಮೂಲನಾ ಜಾಗೃತಿ ಮಹಾಸಂಘ ಮತ್ತು ಬಸವ ಧರ್ಮ ಜ್ಞಾನಪೀಠದ ಅಧ್ಯಕ್ಷರಾದ ದಯಾನಂದ ಸ್ವಾಮೀಜಿ ತಿಳಿಸಿದರು.
ಪಟ್ಟಣದ ತಾಲ್ಲೂಕು ಪತ್ರಕರ್ತರ ಸಂಘದ ಕಚೇರಿಯಲ್ಲಿ ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಚಿಕ್ಕದೇವಮ್ಮ ಬೆಟ್ಟದ ದೇವಾಲಯದ ಪರಿಸರ, ಪಾದಗಟ್ಟೆ ಹಾಗೂ ಹಾಲುಗಡ ಪರಿಸರದಲ್ಲಿ, ಕಪಿಲಾನದಿ ತೀರದಲ್ಲಿ ಪ್ರಾಣಿಬಲಿ ತಡೆ ಸಂಪೂರ್ಣ ಯಶಸ್ವಿಯಾಗಿದೆ ಎಂದರು.
ಇಟ್ನ ಗ್ರಾಮದ ಕಪಿಲಾ ನದಿ ತೀರದಲ್ಲಿ ಸಾವಿರಾರು ಭಕ್ತಾಧಿಗಳಿಗೆ ಶುದ್ಧ ಸಸ್ಯಾಹಾರ ಹಾಗೂ ಸಿಹಿ ಊಟದ-ಅನ್ನ ದಾಸೋಹ ನೆರವೇರಿಸಲಾಯಿತು. ಸಾಗರೆ ಮಾರಮ್ಮದೇವಿ (ತ್ರಿಪುರಸುಂದರಿ ಲಲಿತಾದೇವಿ) ಜಾತ್ರೆಯಲ್ಲಿಯೂ ಪ್ರಾಣಿಬಲಿ ತಡೆ ಬಹುತೇಕ ಯಶಸ್ವಿ ಕುರಿತು ಮತ್ತು ಪ್ರಾಣಿಬಲಿ ತಡೆ ಯಶಸ್ವಿಯಾಗಿದೆ ಎಂದರು.
ಇದೇ 7, 8ರ ಏಪ್ರಿಲ್ 2022 ರಂದು ನಡೆಯಲಿರುವ ತೆರಣಿಮುಂಟಿ ಮಾಂಕಾಳಮ್ಮದೇವಿ ಹಬ್ಬ-ಜಾತ್ರೆಯಲ್ಲಿ ಪ್ರಾಣಿಬಲಿ ತಡೆಯಲು ಸರ್ಕಾರ ಜಿಲ್ಲಾಡಳಿತ, ತಾಲ್ಲೂಕು ಆಡಳಿತ, ಮತ್ತು ಪೋಲೀಸ್ ಇಲಾಖೆಗೆ ಮನವಿ ಮಾಡಲಾಗಿದೆ ಹಾಗೂ ಪ್ರಾಣಿಬಲಿ ತ್ಯಜಿಸಿ ಅಹಿಂಸಾತ್ಮಕ ಪೂಜೆ ಸಲ್ಲಿಸಲು ಭಕ್ತರಲ್ಲಿ ವಿನಂತಿಸಲಾಗಿದೆ ಎಂದರು.
ಭಕ್ತರು ಪ್ರಾಣಿಬಲಿ ನೀಡದೆ ಬೂದುಕುಂಬಳಕಾಯಿ, ತೆಂಗಿನಕಾಯಿ, ಅರಿಸಿಣ-ಕುಂಕುಮ, ಧೂಪ-ದೀಪ, ಇತ್ಯಾದಿ ಮಂಗಳ ದ್ರವ್ಯಗಳಿಂದ ಪೂಜೆ ಸಲ್ಲಿಸಬೇಕೆಂದು ದಯಾನಂದ ಸ್ವಾಮೀಜಿ ಮನವಿ ಮಾಡಿದರು.
ಚಿಕ್ಕದೇವಮ್ಮ ತಾಯಿಯ ಉತ್ಸವಮೂರ್ತಿ ಬೆಟ್ಟದಿಂದ ಇಳಿದು ಹಾಲುಗಡಕ್ಕೆ ಬರುವ ಸಂದಂರ್ಭದಲ್ಲಿ ಬೆಟ್ಟದ ಪಾದಗಟ್ಟೆಯಲ್ಲಿ, ರಸ್ತೆಗಳಲ್ಲಿ, ರಸ್ತೆಗಳ ಅಕ್ಕಪಕ್ಕಗಳಲ್ಲಿ ಹಾಗೂ ಹಾಲುಗಡದ ಪರಿಸರದಲ್ಲಿ, ಕಪಿಲಾನದಿ ತೀರದಲ್ಲಿ ಸಾವಿರಾರು ಪ್ರಾಣಿಗಳ ಬಲಿ, ಪ್ರಾಣಿಗಳ ಸಾಮೂಹಿಕ ಹತ್ಯಾಕಾಂಡ, ರಕ್ತದೋಕುಳಿ ನಡೆಯುತ್ತಿದ್ದುದನ್ನು ಸುಮಾರು ಹತ್ತು ವರ್ಷಗಳಿಂದ 1959ರ ಕರ್ನಾಟಕ ಪ್ರಾಣಿಬಲಿಗಳ ಪ್ರತಿಬಂಧಕ ಕಾನೂನು ಅಡಿಯಲ್ಲಿ ಪ್ರಾಣಿಬಲಿ ತಡೆ ಕುರಿತು ಜಾಗೃತಿ ಮೂಡಿಸುವ ಮುಖಾಂತರ ನಿಲ್ಲಿಸಲಾಗಿದೆ ಎಂದರು.
ಅನಾಗರಿಕ-ಅಮಾನುಷ, ಭೀಭತ್ಸ ಹಾಗೂ ದೈವ-ಧರ್ಮ ಮತ್ತು ಕಾನೂನು ವಿರೋಧಿಯಾದ ಪ್ರಾಣಿಬಲಿ ಪದ್ದತಿಗೆ ಅಂತಿಮ ವಿದಾಯ ಹೇಳಲಾಯಿತು ಎಂದರು. ಈ ಸಂದರ್ಭದಲ್ಲಿ ಮಹಿಳಾ ಸಂಚಾಲಕಿ ಸುನಂದಾದೇವಿ ಇದ್ದರು.
ವರದಿ: ಚಂದ್ರ ಹಾದನೂರು
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/LV1k4NzQEjNBnyYQyGVYP5