ಕೊರಟಗೆರೆ: ತಾಲ್ಲೂಕಿನ ಹೊಳವನಹಳ್ಳಿ ಬೆಸ್ಕಾಂ ಶಾಖೆಯಲ್ಲಿ ಸುಮಾರು 8 ವರ್ಷಗಳ ಕಾಲ ಸುದೀರ್ಘ ಸೇವೆ ಸಲ್ಲಿಸಿದ ಸಹಾಯಕ ಇಂಜಿನಿಯರ್ (AE) ಯೋಗೇಶ್ ಅವರಿಗೆ ಬೆಸ್ಕಾಂ ಇಲಾಖೆಯ ಸಿಬ್ಬಂದಿ ಹಾಗೂ ಅಧಿಕಾರಿಗಳಿಂದ ಆತ್ಮೀಯ ಬೀಳ್ಕೊಡುಗೆ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು.
ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಕೊರಟಗೆರೆ ಬೆಸ್ಕಾಂ ಸಹಾಯಕ ಕಾರ್ಯಪಾಲಕ ಇಂಜಿನಿಯರ್ (AEE) ಪ್ರಸನ್ನ ಕುಮಾರ್ ಅವರು ಯೋಗೇಶ್ ಅವರ ಸೇವೆಯನ್ನು ಶ್ಲಾಘಿಸಿ, “ಸಹಾಯಕ ಇಂಜಿನಿಯರ್ ಯೋಗೇಶ್ ಅವರು ಕಳೆದ 8 ವರ್ಷಗಳಿಂದ ಬೆಸ್ಕಾಂ ಇಲಾಖೆಯಲ್ಲಿ ಕರ್ತವ್ಯ ನಿರ್ವಹಿಸಿ, ಸಾರ್ವಜನಿಕರಿಂದ ಸಾಕಷ್ಟು ಜನಮನ್ನಣೆ ಗಳಿಸಿದ್ದಾರೆ. ಇಂತಹ ಪ್ರಾಮಾಣಿಕ ಅಧಿಕಾರಿಯನ್ನು ಕಳುಹಿಸಿಕೊಡುತ್ತಿರುವುದು ಇಲಾಖೆಗೆ ನೋವಿನ ಸಂಗತಿಯಾಗಿದೆ. ಮುಂದಿನ ದಿನಗಳಲ್ಲೂ ಅವರ ಸೇವೆ ಕೊರಟಗೆರೆ ಜನರಿಗೆ ದೊರೆಯುವಂತಾಗಲಿ” ಎಂದರು.
ಸನ್ಮಾನ ಸ್ವೀಕರಿಸಿ ಮಾತನಾಡಿದ ಸಹಾಯಕ ಇಂಜಿನಿಯರ್ ಯೋಗೇಶ್, “ಕೊರಟಗೆರೆ ಹಾಗೂ ಹೊಳವನಹಳ್ಳಿ ಹೋಬಳಿಯ ಜನರು ತುಂಬಾ ಸಹೃದಯರಾಗಿದ್ದಾರೆ. ನಾನು ಇಲ್ಲಿಗೆ ಬಂದು 8 ವರ್ಷಗಳೇ ಕಳೆದರೂ, ಇಲ್ಲಿನ ಜನ ನನ್ನನ್ನು ಪ್ರೀತಿ, ವಿಶ್ವಾಸ ಹಾಗೂ ಸ್ನೇಹದಿಂದ ನೋಡಿಕೊಂಡಿದ್ದಾರೆ. ಈ ತಾಲ್ಲೂಕಿನ ಜನರನ್ನು ನಾನು ಎಂದಿಗೂ ಮರೆಯುವುದಿಲ್ಲ ಎಂದರು.
“ನನಗೆ ಇಷ್ಟು ದಿನಗಳ ಕಾಲ ಕರ್ತವ್ಯದಲ್ಲಿ ಸಂಪೂರ್ಣ ಸಹಕಾರ ನೀಡಿದ ನನ್ನ ಮೇಲಾಧಿಕಾರಿಗಳು, ಸಹೋದ್ಯೋಗಿಗಳು, ಸಿಬ್ಬಂದಿ ವರ್ಗ ಹಾಗೂ ತಾಲ್ಲೂಕಿನ ಸಾರ್ವಜನಿಕರಿಗೆ ಧನ್ಯವಾದಗಳನ್ನು ಅರ್ಪಿಸುತ್ತೇನೆ. ಮುಂದಿನ ದಿನಗಳಲ್ಲಿ ಅವಕಾಶ ಸಿಕ್ಕರೆ ಖಂಡಿತವಾಗಿಯೂ ಮತ್ತೆ ಇಲ್ಲಿಗೆ ಸೇವೆ ಮಾಡಲು ಬರುತ್ತೇನೆ” ಎಂದರು.
ಇದೇ ಸಂದರ್ಭದಲ್ಲಿ ಬೆಸ್ಕಾಂ ಹಿರಿಯ ಸಹಾಯಕ ನಟರಾಜು, ಶಾಖಾಧಿಕಾರಿಗಳಾದ ಮಲ್ಲಯ್ಯ, ಜಬೀವೂಲ್ಲಾ, ಗೋವಿಂದಪ್ಪ ಸೇರಿದಂತೆ ಬೆಸ್ಕಾಂ ಅಧಿಕಾರಿಗಳು, ಗುತ್ತಿಗೆದಾರರು ಹಾಗೂ ಊರಿನ ಗ್ರಾಮಸ್ಥರು ಉಪಸ್ಥಿತರಿದ್ದು ಯೋಗೇಶ್ ಅವರಿಗೆ ಶುಭ ಹಾರೈಸಿದರು.
ವರದಿ: ಮಂಜುಸ್ವಾಮಿ ಎಂ.ಎನ್.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/ISmeQjik4LbG9KvWhKlbCC


