ಸರ್ಕಾರದ ಸಹಾಯಧನ ಯೋಜನೆಯಡಿ ‘ಭಾರತ್ ಗೌರವ್’ ದಕ್ಷಿಣ ಕ್ಷೇತ್ರಗಳ ಯಾತ್ರೆಯನ್ನು ಕೈಗೊಳ್ಳಲಾಗುತ್ತಿದ್ದು, ಪ್ರತಿ ಯಾತ್ರಾರ್ಥಿಗಳಿಗೆ 5,000 ರೂಪಾಯಿಗಳ ಸಹಾಯಧನ ಲಭ್ಯವಾಗುತ್ತದೆ. ಇದರ ಕುರಿತು ಸಾರ್ವಜನಿಕರಿಗೆ ಸಂಪೂರ್ಣ ಮಾಹಿತಿ ಇಲ್ಲಿದೆ.
ಯಾತ್ರಾರ್ಥಿಗಳು ರಾಮೇಶ್ವರದ ರಾಮೇಶ್ವರ ದೇವಾಲಯ, ಕನ್ಯಾಕುಮಾರಿಯ ಶ್ರೀ ಭಗವತಿ ದೇವಾಲಯ, ಮದುರೈಯ ಶ್ರೀ ಮೀನಾಕ್ಷಿ ದೇವಾಲಯ ಹಾಗೂ ತಿರುವನಂತಪುರಂನ ಶ್ರೀ ಅನಂತಪದ್ಮನಾಭ ಸ್ವಾಮಿ ದೇವಾಲಯಗಳ ದರ್ಶನವನ್ನು ಅತ್ಯಂತ ಕಡಿಮೆ ವೆಚ್ಚದಲ್ಲಿ ಪಡೆಯಬಹುದಾಗಿದೆ.
ಯಾತ್ರೆಯ ಒಟ್ಟು ಪ್ಯಾಕೇಜ್ ಮೊತ್ತ 15,000 ರೂಪಾಯಿಗಳಾಗಿದ್ದು, ಕರ್ನಾಟಕ ಸರ್ಕಾರದಿಂದ 5,000 ರೂಪಾಯಿ ಸಹಾಯಧನ ಲಭ್ಯವಾಗುವ ಕಾರಣ ಯಾತ್ರಿಕರು ಕೇವಲ ಹತ್ತು ಸಾವಿರ ರೂಪಾಯಿ ಪಾವತಿಸಿದರೆ ಸಾಕಾಗುತ್ತದೆ.
ಇನ್ನು ಧಾರ್ಮಿಕ ದತ್ತಿ ಇಲಾಖೆ ವ್ಯಾಪ್ತಿಯಲ್ಲಿ ಬರುವ ಪ್ರವರ್ಗ ಸಿ ಅಧಿಸೂಚನೆ ದೇವಾಲಯ/ಸಂಸ್ಥೆಗಳಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಅರ್ಚಕರು/ನೌಕರರು ಮತ್ತು ಅವರ ಕುಟುಂಬದ ಒಬ್ಬ ಸದಸ್ಯರನ್ನು ಕರ್ನಾಟಕ ಭಾರತ್ ಗೌರವ್ ದಕ್ಷಿಣ ಕ್ಷೇತ್ರಗಳ ಯಾತ್ರೆ ಯೋಜನೆಯಡಿ ಉಚಿತವಾಗಿ ಯಾತ್ರೆಗೆ ಕಳುಹಿಸಲಾಗುತ್ತದೆ.
ವಿಶೇಷ ರೈಲು ಜೂನ್ 23ರಂದು ಹೊರಡುತ್ತಿದ್ದು ಜುಲೈ 1 ರಂದು ಮರಳಲಿದೆ. ಮತ್ತೊಂದು ರೈಲು ಜೂನ್ 28 ರಂದು ಹೊರಡಲಿದ್ದು ಜುಲೈ 6ಕ್ಕೆ ಮರಳಲಿದೆ. ಈ ಯಾತ್ರೆಗೆ ನೋಂದಾಯಿಸಿಕೊಂಡವರು ಬೆಳಗಾವಿ, ಹುಬ್ಬಳ್ಳಿ, ಬೀರೂರು, ತುಮಕೂರು, ಹಾವೇರಿ, ದಾವಣಗೆರೆ ಹಾಗೂ ಯಶವಂತಪುರಗಳಲ್ಲಿ ಹತ್ತುವ ಹಾಗೂ ಇಳಿಯುವ ಸ್ಥಳಗಳನ್ನು ನಿಗದಿ ಮಾಡಲಾಗಿದೆ. ಯಾತ್ರಾರ್ಥಿಗಳ ಆರೋಗ್ಯ ಹಾಗೂ ಕ್ಷೇಮದ ದೃಷ್ಟಿಯಿಂದ ವೈದ್ಯಕೀಯ ವ್ಯವಸ್ಥೆಯನ್ನು ಸಹ ಒದಗಿಸಲಾಗುತ್ತದೆ.
IRCTC ವೆಬ್ಸೈಟ್ ಮೂಲಕ ಆಸಕ್ತರು ಬುಕ್ ಮಾಡಿಕೊಳ್ಳಬಹುದಾಗಿದ್ದು, ಆರು ದಿನಗಳ ಈ ಯಾತ್ರೆಯಲ್ಲಿ ಥ್ರೀ ಟೈರ್ ಎಸಿ ರೈಲು ಪ್ರಯಾಣ, ತಿಂಡಿ, ಊಟ, ವಸತಿ ಮತ್ತು ದರ್ಶನ ವ್ಯವಸ್ಥೆಯನ್ನು ಒಳಗೊಂಡಿದೆ.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/G7IPvItJj7JHrybOIW3296
ಯೂಟ್ಯೂಬ್ ಗೆ ಸಬ್ಸ್ ಕ್ರೈಬ್ ಆಗಿ: https://www.youtube.com/channel/UCtrQuDOToxHu8dzMaHjoYXA


