ತುಮಕೂರು: ದೇಶ ಹಾಗೂ ಸಂಸ್ಕೃತಿಗೆ ದ್ರೋಹಿಯಾಗಿ ಬದುಕುವುದಕ್ಕಿಂತ ದೇಹಿಯಾಗಿ ಬದುಕುವುದೇ ಲೇಸು. ನಾಡು, ನೆಲ, ಸಂಸ್ಕೃತಿ, ಭಾಷೆ, ದೇಶ ಮರೆತರೆ ಅದಕ್ಕಿಂತ ದೊಡ್ಡ ದೇಶದ್ರೋಹ ಮತ್ತೊಂದಿಲ್ಲ ಎಂದು ವಾಗ್ಮಿ ಹಿರೇಮಗಳೂರು ಕಣ್ಣನ್ ಅಭಿಪ್ರಾಯಪಟ್ಟರು.
ತುಮಕೂರು ವಿಶ್ವವಿದ್ಯಾನಿಲಯದ ಪ್ರೇರಣಾ ಉಪನ್ಯಾಸ ಮಾಲೆಯ ಅಂಗವಾಗಿ ಸೋಮವಾರ ‘ಭಾಷೆ, ಸಂಸ್ಕೃತಿ ಮತ್ತುಯುವಜನತೆ’ ಕುರಿತು ವಿದ್ಯಾರ್ಥಿಗಳನ್ನುದ್ದೇಶಿಸಿ ಮಾತನಾಡಿದರು.
ಜಗತ್ತಿನ ಎಲ್ಲ ದೇಶಗಳ ಹುಟ್ಟಿದ ದಿನಾಂಕವನ್ನುಗುರುತಿಸಲು ಸಾಧ್ಯವಿದೆ. ಆದರೆ ಭಾರತ ದೇಶಕ್ಕೆ ಮಾತ್ರ ಹುಟ್ಟಿನ ದಿನಾಂಕವಿಲ್ಲ. ಯಾವ ದೇಶಕ್ಕೆ ಹುಟ್ಟಿನ ದಿನಾಂಕವಿರುವುದಿಲ್ಲವೋ, ಆ ದೇಶಕ್ಕೆ ಸಾವಿನ ದಿನಾಂಕವೂ ಇರುವುದಿಲ್ಲ. ಸನಾತನ ಭಾರತಕ್ಕೆ ಅಷ್ಟು ಆಳವಾದ ಇತಿಹಾಸವಿದೆ ಎಂದರು.
ವಿಶ್ವವಿದ್ಯಾನಿಲಯದ ವಿದ್ಯಾರ್ಥಿಗಳು ವಿಶ್ವವಿದ್ಯಾ ನಿಲಯದ ಆಶಯವನ್ನುಅರ್ಥಮಾಡಿಕೊಂಡು ವಿಶ್ವಮಾನವತೆಯನ್ನು ರೂಢಿಸಿಕೊಳ್ಳಬೇಕು. ವಿಜ್ಞಾನಿ ಬುದ್ಧಿ, ತತ್ವಜ್ಞಾನಿ ಮನಸ್ಸು ಹಾಗೂ ಕವಿ ಹೃದಯ ಬೆಳೆಸಿಕೊಂಡರೆ ಬದುಕು ಹಸನಾಗುತ್ತದೆ ಎಂದರು.
ತಾಯಿ, ತಾಯ್ನಾಡು, ತಂದೆ, ತಾಯ್ನುಡಿ– ಈ ನಾಲ್ಕನ್ನು ಜೀವನದಲ್ಲಿ ಮರೆಯಬೇಡಿ. ತಂದೆ ತಾಯಿಯರನ್ನು ವೃದ್ಧಾಶ್ರಮಕ್ಕೆ ಸೇರಿಸುವ ಸಂಸ್ಕೃತಿ ಯುವಜನಾಂಗದ್ದುಆಗಬಾರದು. ಸಾಧಕರ ಜೀವನ ಚರಿತ್ರೆಗಳನ್ನು ಓದಿ ಅದರಿಂದ ಪ್ರೇರಣೆ ಪಡೆಯುವುದನ್ನು ರೂಢಿಸಿಕೊಳ್ಳಿ ಎಂದು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.
ಬೀಗುವುದು ಬದುಕಲ್ಲ, ಬಾಗುವುದು ಬದುಕು. ನಾವು ಬಾಳೆಯಂತೆ ಬಾಗಬೇಕು. ಭಾಷೆ ಸಂವಹನಕ್ಕೆ ತೊಡಕಾಗಬಾರದು. ಭಾಷೆಗಿಂತ ಭಾವನೆ ಮುಖ್ಯ. ಅನುಕಂಪ, ಕಾಳಜಿ, ಪ್ರೀತಿ ಮತ್ತು ಸಹಕಾರ ನಮ್ಮ ಬದುಕಿನ ಧ್ಯೇಯವಾಗಬೇಕು ಎಂದರು.
ಪ್ರಾಸ್ತಾವಿಕ ಮಾತುಗಳನ್ನಾಡಿದ ಪಾವಗಡ ರಾಮಕೃಷ್ಣ ಸೇವಾಶ್ರಮದ ಅಧ್ಯಕ್ಷರಾದ ಸ್ವಾಮಿ ಜಪಾನಂದಜಿ ಮಹಾರಾಜ್, ಕನ್ನಡ ಮಾತನಾಡಲು ಕಷ್ಟಪಡುವ ನಾವು ನವೆಂಬರ್ಕನ್ನಡಿಗರಾಗಿದ್ದೇವೆ. ಮೊದಲು ನಮ್ಮ ದೇಶವನ್ನು ಪ್ರೀತಿಸಬೇಕು. ರಾಷ್ಟ್ರೀಯತೆ, ಜೀವನ, ಧರ್ಮದ ಮೂಲಗಳನ್ನು ಅರಿಯಬೇಕು ಎಂದರು.
ವಿವೇಕಾನಂದರ ವಿಚಾರಗಳಿಂದ ಎಷ್ಟೋ ಜನ ಭಾರತದ ಮೇಲೆ ಪ್ರೀತಿ ಬೆಳೆಸಿಕೊಂಡಿದ್ದಾರೆ. ವಿವೇಕಾನಂದರ ಧ್ಯೇಯಗಳನ್ನು ಕಾರ್ಯರೂಪಕ್ಕೆ ತಂದಾಗ ಮಾತ್ರ ಭವ್ಯ ಭಾರತದ ನಿರ್ಮಾಣವಾಗುತ್ತದೆ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಕುಲಪತಿ ಪ್ರೊ.ಎಂ.ವೆಂಕಟೇಶ್ವರಲು, ಶಿಕ್ಷಣದೊಂದಿಗೆ ಸಂಸ್ಕಾರ ಬೆಳೆಸುವ ಉದ್ದೇಶದಿಂದ ಪ್ರೇರಣಾ ಉಪನ್ಯಾಸ ಮಾಲೆಯನ್ನುಆರಂಭಿಸಲಾಗಿದೆ. ಅಂಕ ಮತ್ತು ಪದವಿಗಳಿಂದ ಮಾತ್ರ ಜೀವನ ಸಾರ್ಥಕವಾಗುವುದಿಲ್ಲ, ಯಾವುದೇ ಕೆಲಸವನ್ನು ಶ್ರದ್ಧೆಯಿಂದ, ನಿಷ್ಠೆಯಿಂದ ಮಾಡಿದರೆ ಮಾತ್ರ ಯಶಸ್ಸು ಸಾಧ್ಯ ಎಂದರು.
ತುಮಕೂರು ವಿಶ್ವವಿದ್ಯಾನಿಲಯದ ಕುಲಸಚಿವೆ ನಾಹಿದಾ ಜಮ್ ಜಮ್, ಮೌಲ್ಯಮಾಪನ ಕುಲಸಚಿವ ಪ್ರೊ.ಪ್ರಸನ್ನಕುಮಾರ್ ಕೆ., ಪ್ರೇರಣಾ ಉಪನ್ಯಾಸ ಕಾರ್ಯಕ್ರಮ ಸಮಿತಿಯ ಅಧ್ಯಕ್ಷ ಪ್ರೊ. ಬಿ. ರವೀಂದ್ರ ಕುಮಾರ್ ಉಪಸ್ಥಿತರಿದ್ದರು. ಡಾ. ಸಿಬಂತಿ ಪದ್ಮನಾಭ ಕೆ.ವಿ. ನಿರೂಪಿಸಿದರು. ಡಾ. ಅರುಣ್ ಕುಮಾರ್ ವಂದಿಸಿದರು.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/HirBanj7uz4I4A2vAG5yXx