ತುಮಕೂರು/ಮಧುಗಿರಿ: ರಾಜ್ಯ ರಾಜಕಾರಣದಲ್ಲಿ ತೀವ್ರ ಕುತೂಹಲ ಮೂಡಿಸಿರುವ ಸಚಿವ ರಾಮಲಿಂಗಾರೆಡ್ಡಿ ಅವರ ರಾಜೀನಾಮೆ ಪ್ರಹಸನದ ಕುರಿತು ಕೆ.ಎನ್. ರಾಜಣ್ಣ ಅವರು ಮಾಧ್ಯಮಗಳಿಗೆ ಮಹತ್ವದ ಪ್ರತಿಕ್ರಿಯೆ ನೀಡಿದ್ದಾರೆ.
ರಾಮಲಿಂಗಾರೆಡ್ಡಿ ಅವರ ನಿರ್ಧಾರದ ಬಗ್ಗೆ ಮಾತನಾಡಿದ ಅವರು, “ಇದೇನು ಹೊಸ ಸುದ್ದಿಯಲ್ಲ, ಹಳೇ ಸುದ್ದಿ. ಸರ್ಕಾರದ ವಿಕೆಟ್ ಪತನವಾಗುವ ಪ್ರಶ್ನೆಯೇ ಇಲ್ಲ. ತಮ್ಮ ಆತ್ಮಸಾಕ್ಷಿಗೆ ಅನುಗುಣವಾಗಿ ಕೆಲಸ ನಿರ್ವಹಿಸಲು ಸಾಧ್ಯವಾಗುತ್ತಿಲ್ಲ ಎಂಬ ಕಾರಣಕ್ಕೆ ರಾಮಲಿಂಗಾರೆಡ್ಡಿ ಅವರು ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ” ಎಂದು ಸ್ಪಷ್ಟಪಡಿಸಿದರು.
ರಾಮಲಿಂಗಾರೆಡ್ಡಿ ಅವರು ಸಚಿವ ಸ್ಥಾನ ತೊರೆದರೂ ಪಕ್ಷ ಬಿಡುವುದಿಲ್ಲ ಎಂಬುದನ್ನು ರಾಜಣ್ಣ ನೆನಪಿಸಿದರು. “ತಾವು ಶಾಸಕರಾಗಿ ಕಾಂಗ್ರೆಸ್ ಪಕ್ಷದಲ್ಲೇ ಮುಂದುವರಿಯುವುದಾಗಿ ಮತ್ತು ನಿಷ್ಠಾವಂತ ಕಾರ್ಯಕರ್ತನಾಗಿ ಜವಾಬ್ದಾರಿ ನಿರ್ವಹಿಸುವುದಾಗಿ ಅವರೇ ತಮ್ಮ ಪತ್ರದಲ್ಲಿ ಬರೆದಿದ್ದಾರೆ. ಹಾಗಾಗಿ ಇದರಲ್ಲಿ ಬೇರೆ ವಿಶೇಷತೆ ಏನೂ ಇಲ್ಲ” ಎಂದರು.
ಡಿಕೆಶಿ ‘ಟ್ರಬಲ್ ಶೂಟರ್’ ಪದಕ್ಕೆ ರಾಜಣ್ಣ ವ್ಯಂಗ್ಯ
ಇದೇ ವೇಳೆ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ ‘ಟ್ರಬಲ್ ಶೂಟರ್’ ಇಮೇಜ್ ಬಗ್ಗೆ ಪತ್ರಕರ್ತರು ಪ್ರಶ್ನಿಸಿದಾಗ ಸಚಿವ ರಾಜಣ್ಣ ಅವರು ಲಘು ಧಾಟಿಯಲ್ಲಿ ವ್ಯಂಗ್ಯವಾಡಿದರು. “ನೀವೇ ಮಾಡಿರೋ ಟ್ರಬಲ್ ಶೂಟರ್ ಅವರು. ಹಂಗಿದ್ದಮೇಲೆ ಅಸ್ಸಾಂಗೆ ಹೋಗಿ ಯಾಕೆ ಟ್ರಬಲ್ ಶೂಟ್ ಮಾಡ್ಲಿಕ್ಕೆ ಆಗಲಿಲ್ಲ?” ಎಂದು ಪ್ರಶ್ನಿಸುವ ಮೂಲಕ ತಿವಿದರು.
ಖಾತೆ ಅಸಮಾಧಾನದ ಕುರಿತು ಕಿವಿಮಾತು
ಹಿರಿಯ ನಾಯಕರಿಗೆ ಸೀನಿಯರಿಟಿ ಆಧಾರದಲ್ಲಿ ಸೂಕ್ತ ಸ್ಥಾನಮಾನ ಅಥವಾ ಸಮಾಜ ಕಲ್ಯಾಣ, ಅರಣ್ಯದಂತಹ ಅಪೇಕ್ಷಿತ ಖಾತೆಗಳು ಸಿಕ್ಕಿಲ್ಲ ಎಂಬ ಅಸಮಾಧಾನದ ಚರ್ಚೆಗಳಿಗೆ ಉತ್ತರಿಸಿದ ಅವರು, “ಯಾವ ಇಲಾಖೆಯೂ ಯಾರೊಬ್ಬರ ಸ್ವತ್ತಲ್ಲ. ಬದಲಾದ ರಾಜಕೀಯ ಸನ್ನಿವೇಶಕ್ಕೆ ಅನುಗುಣವಾಗಿ ಅವಕಾಶಗಳು ಸಿಗುತ್ತವೆ. ಸಿಕ್ಕ ಅವಕಾಶಗಳನ್ನು ಬಳಸಿಕೊಂಡು ತಮ್ಮ ಬುದ್ಧಿಶಕ್ತಿಯಿಂದ ಜನಪರವಾದ ಕೆಲಸಗಳನ್ನು ಮಾಡಬೇಕು, ಅಷ್ಟೇ ನನ್ನ ನಿರೀಕ್ಷೆ” ಎಂದು ಖಡಕ್ ಆಗಿ ಹೇಳಿದರು.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/ISmeQjik4LbG9KvWhKlbCC


