ಸರಗೂರು: ಸಂಸದರ ನಿಧಿಯಿಂದ 50ಲಕ್ಷ ರೂ. ವೆಚ್ಚದಲ್ಲಿ ಅತ್ಯಾವಶ್ಯಕತೆ ಇರುವ ಆಂಬ್ಯುಲೆನ್ಸ್ ಗಳನ್ನು ನೀಡಲಾಗುತ್ತಿದ್ದು, ಕಾಡಂಚಿನ ಭಾಗದ ವಾಹನ ಸಮಸ್ಯೆಗಳನ್ನು ಗಮನಿಸಿ ಬಿ.ಮಟಕೆರೆ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ನೀಡುತ್ತಿದ್ದೇನೆ. ಮುಂದಿನ ದಿನಗಳಲ್ಲಿ ಇಲ್ಲಿನ ಎನ್.ಬೇಗೂರು ಭಾಗಕ್ಕೂ ಪ್ರತ್ಯೇಕ ಆಂಬ್ಯುಲೆನ್ಸ್ ನೀಡಲಾಗುವುದು ಎಂದು ಸಂಸದ ವಿ.ಶ್ರೀನಿವಾಸ್ಪ್ರಸಾದ್ ಭರವಸೆ ನೀಡಿದರು.
ಪಟ್ಟಣದ ಸಾರ್ವಜನಿಕ ಆಸ್ಪತ್ರೆ ಆವರಣದಲ್ಲಿ ಬುಧವಾರ ಸರಗೂರು ತಾಲ್ಲೂಕಿನ ಬಿ.ಮಟಕೆರೆ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಸಂಸದರ ನಿಧಿಯಿಂದ ನೀಡಲಾದ ಆಂಬ್ಯುಲೆನ್ಸ್ ಗೆ ಚಾಲನೆ ನೀಡಿ ಬಳಿಕ ಮಾತನಾಡಿದ ಅವರು, ಈ ಭಾಗದಲ್ಲಿ ವೈದ್ಯರು, ವಿಶೇಷವಾಗಿ ಹೆರಿಗೆ ವೈದ್ಯರು, ತಜ್ಞರುಗಳ ಕೊರತೆ ಇದೆ ಎಂಬುದರ ಬಗ್ಗೆ ಮಾಹಿತಿ ಇದೆ. ಇದರ ಬಗ್ಗೆ ಸರ್ಕಾರದೊಂದಿಗೆ ಮಾತುಕತೆ ನಡೆಸಿ ಸಮಸ್ಯೆ ಬಗೆಹರಿಸುವ ಪ್ರಯತ್ನ ಮಾಡುತ್ತೇನೆ ಎಂದರು.
ನಾನು ಕಂದಾಯ ಮಂತ್ರಿಯಾಗಿದ್ದಾಗ ಸರಗೂರು ನೂತನ ತಾಲ್ಲೂಕ್ಕಾಗಿ ಮಾಡಲು ನೀಡಿದ ಸಲಹೆಯೇ ಬೇರೆ , ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯರವರು ನಾನು ಬಿಟ್ಟು ಹೋದಮೇಲೆ ಮಾಡಿದ ತಾಲ್ಲೂಕೇ ಬೇರೆ. ಸರಗೂರು ತಾಲ್ಲೂಕು ಆಗಬೇಕು ಅಲ್ಲಿಗೆ ಎಲ್ಲಾ ಅಧಿಕಾರಿ ವರ್ಗದವರು ಬರಬೇಕು ಎಂಬುದು ನನ್ನ ಉದ್ದೇಶವಾಗಿತ್ತು. ಆದರೆ ಓಟು ಬರಲಿ ಎಂಬ ಕಾರಣಕ್ಕೆ ಅತ್ತ ತಾಲ್ಲೂಕೂ ಅಲ್ಲ, ಇತ್ತ ಹೋಬಳಿಯು ಅಲ್ಲ ಎನ್ನುವಂತೆ ಸಿದ್ಧರಾಮಯ್ಯ ಮಾಡಿಬಿಟ್ಟರು ಎಂದು ಟೀಕಿಸಿದರು.
ತಾಲ್ಲೂಕು ಕನಿಷ್ಠ ಎಂದರೂ 5 ಕೋಟಿ ರೂ. ಅನುದಾನದಿಂದಾದರೂ ಅಭಿವೃದ್ಧಿ ಶುರುವಾಗಬೇಕಿತ್ತು. ಆದರೆ ಇನ್ನೂ ಅಭಿವೃದ್ಧಿ ಕಂಡಿಲ್ಲ. ಇಲಾಖೆಗಳು ಸಮರ್ಪಕವಾಗಿ ಬಂದಿಲ್ಲ. ಸಿದ್ದರಾಮಯ್ಯ ಅವರು ತಪ್ಪು ಮಾಡಿದ್ದಾರೆ. ಮೊದಲು ಸರಗೂರನ್ನು ಹೋಬಳಿ ಕೇಂದ್ರವನ್ನಾಗಿ ಅಭಿವೃದ್ಧಿ ಮಾಡುವ ಚಿಂತನೆ ಮಾಡಿದ್ದೆ. ನಂತರ ನಂಜನಗೂಡು ತಾಲ್ಲೂಕಿನ ಕೆಲ ಭಾಗವನ್ನು ಗುರುತಿಸಿ, ಅದನ್ನು ಸರಗೂರು ತಾಲ್ಲೂಕಿಗೆ ಸೇರಿಸಿ ಅಭಿವೃದ್ಧಿ ಮಾಡುವ ಉದ್ದೇಶ ನನ್ನದಾಗಿತ್ತು ಎಂದರು.
ಸರಗೂರು ಅಭಿವೃದ್ಧಿಯಾಗಬೇಕಾದರೆ ಕಬಿನಿ ಜಲಾಶಯದ ಬಳಿ ಉದ್ಯಾನವನ ಆಗಬೇಕು. ಆಗ ತಾಲ್ಲೂಕು ಹೆಚ್ಚಿನ ಅಭಿವೃದ್ಧಿ ಹೊಂದಲು ಸಾಧ್ಯ. ಇದರಲ್ಲಿ ಸಾರ್ವಜನಿಕರ ಪಾತ್ರವು ಮುಖ್ಯ. ಉದ್ಯಾವನ ನಿರ್ಮಾಣವಾದರೆ ನಂತರ ರಸ್ತೆಗಳ ಅಭಿವೃದ್ಧಿಯಾಗುತ್ತದೆ. ಇದರಿಂದ ವ್ಯಾಪಾರ ವಹಿವಾಟು ಹೆಚ್ಚಾಗಿ ತಾಲ್ಲೂಕಿನ ಜನ ಅಭಿವೃದ್ಧಿಯಾಗಿ ತಾಲ್ಲೂಕು ಸಹ ಅಭಿವೃದ್ಧಿಯಾಗುತ್ತದೆ. ಆದ್ದರಿಂದ ಉದ್ಯಾನವನ ನಿರ್ಮಿಸುವ ಬಗ್ಗೆ ಸರ್ಕಾರದೊಂದಿಗೆ ಚರ್ಚಿಸುವುದಾಗಿ ತಿಳಿಸಿದರು.
ಕಾರ್ಯಕ್ರಮದಲ್ಲಿ ಅರಣ್ಯ ವಸತಿ ಮತ್ತು ವಿಹಾರಧಾಮಗಳ ಅಧ್ಯಕ್ಷ ಅಪ್ಪಣ್ಣ, ಜಿಲ್ಲಾ ಆರೋಗ್ಯಾಧಿಕಾರಿ ಡಾ.ಕೆ.ಎಚ್.ಪ್ರಸಾದ್, ತಹಸೀಲ್ದಾರ್ ಚಲುವರಾಜು, ಇ.ಒ.ರಾಜೇಶ್, ತಾಲ್ಲೂಕು ಆರೋಗ್ಯಾಧಿಕಾರಿ ಡಾ.ಟಿ.ರವಿಕುಮಾರ್, ವೈದ್ಯಾಧಿಕಾರಿ ಡಾ.ಪಾರ್ಥಸಾರಥಿ, ಪಟ್ಟಣ ಪಂಚಾಯಿತಿ ಅಧ್ಯಕ್ಷೆ ರಾಧಿಕಾ, ಉಪಾಧ್ಯಕ್ಷ ವಿನಯ್, ಬಿ.ಮಟಕೆರೆ ಗ್ರಾಮ ಪಂಚಾಯಿತಿ ಅಧ್ಯಕ್ಷೆ ರೂಪಬಾಯಿ ಮಲ್ಲೇಶ್ನಾಯಕ, ಉಪಾಧ್ಯಕ್ಷ ದೇವದಾಸ್, ಪಟ್ಟಣ ಪಂಚಾಯಿತಿ ಸದಸ್ಯರಾದ ಶಿವಕುಮಾರ್, ಉಮಾ, ಗ್ರಾಮ ಪಂಚಾಯಿತಿ ಸದಸ್ಯರಾದ ಕುರ್ಣೇಗಾಲ ಬೆಟ್ಟಸ್ವಾಮಿ, ಸೋಮ, ಮಲ್ಲೇಶ್ನಾಯಕ, ಬೊಮ್ಮ, ರಾಣಿಬಾಯಿ ನಾಗನಾಯಕ, ಬಿಜೆಪಿ ಮುಖಂಡರಾದ ಡಿ.ಜಿ.ಶಿವರಾಜು, ಸಿ.ಕೆ.ಗೀರೀಶ್, ಗುರುಸ್ವಾಮಿ, ಪರಶಿವಮೂರ್ತಿ, ರಮೇಶ್, ಮಹೇಶ್ ಮುಂತಾದವರು ಹಾಜರಿದ್ದರು.
ವರದಿ: ಚಂದ್ರ ಹಾದನೂರು
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/LV1k4NzQEjNBnyYQyGVYP5