ಕೊರಟಗೆರೆ : ದೇಶದ ಶೇ.60 ಭಾಗ ಉದ್ಯೋಗ ಸೃಷ್ಠಿ ಮಾಡಿ 140 ಕೋಟಿ ಜನಸಂಖ್ಯೆಗೆ ಅನ್ನ ನೀಡುವ ಕೃಷಿ ಕ್ಷೇತ್ರ. ಸರ್ಕಾರಗಳ ಅವೈಜ್ಞಾನಿಕ ನೀತಿಯಿಂದ ರೈತರು ಆತ್ಮಹತ್ಯೆ ಮಾಡಿಕೊಳ್ಳುತ್ತಿರುವುದು ನೋವಿನ ಸಂಗತಿ ಎಂದು ಕರ್ನಾಟಕ ರಾಜ್ಯ ರೈತ ಸಂಘ ಜಿಲ್ಲಾಧ್ಯಕ್ಷ ಗೋವಿಂದರಾಜು ಬೇಸರ ವ್ಯಕ್ತಪಡಿಸಿದರು.
ನಗರದ ಪ್ರವಾಸಿ ಮಂದಿರದಲ್ಲಿ ಕರ್ನಾಟಕ ರಾಜ್ಯ ರೈತ ಸಂಘ ತಾ.ಘಟಕದಿಂದ ಆಯೋಜಿಸಿಲಾದ ಕೊರಟಗೆರೆ ಘಟಕ ಪದಾಧಿಕಾರಿಗಳ ಆಯ್ಕೆ ಸಭೆಯಲ್ಲಿ ನೂತನ ಪದಾಧಿಕಾರಿಗಳ ಘೋಷಿಸಿ ಸಭೆ ಉದ್ದೇಶಿಸಿ ಮಾತನಾಡಿದರು.
ಸರ್ಕಾರದ ಅವೈಜ್ಞಾನಿಕ ನೀತಿಗೆ ವಿರುದ್ಧವಾಗಿ ರೈತರ ಬದುಕು, ಜಮೀನು ರಕ್ಷಣೆಯೇ ಕರ್ನಾಟಕ ರಾಜ್ಯ ರೈತ ಸಂಘಟನೆ ಉದ್ದೇಶ. ತಾಲೂಕಿನಲ್ಲಿ ಸುಮಾರು ೪೦ ವರ್ಷಗಳಿಂದ ಕೇಂದ್ರ ಮತ್ತು ರಾಜ್ಯ ಸರ್ಕಾರಗಳಿಗೆ ಹಲವು ಹೋರಾಟಗಳ ಮೂಲಕ ಎಚ್ಚರಿಕೆ ನೀಡಿದ್ದೇವೆ, ಕೊರಟಗೆರೆ ಘಟಕಕ್ಕೆ ಯುವಕರೇ ಹೆಚ್ಚಾಗಿ ಆಯ್ಕೆಯಾಗಿ ಸಂಘಟನೆ ಹೋರಾಟಕ್ಕೆ ಶಕ್ತಿ ತುಂಬಿದ್ದಾರೆ ಎಂದು ಹೇಳಿದರು.
ಜಿಲ್ಲಾ ಪ್ರಧಾನ ಕಾರ್ಯದರ್ಶಿ ಶಂಕರಪ್ಪ ಮಾತನಾಡಿ, ಸ್ವಾತಂತ್ರ್ಯದ ನಂತರದಲ್ಲಿ ಕಳೆದ ೭೯ ವರ್ಷಗಳಲ್ಲಿ ಆಡಳಿತ ನಡೆಸಿದ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಕೃಷಿ ಕ್ಷೇತ್ರವನ್ನು ನಿರ್ಲಕ್ಷ ಮಾಡಿರುವ ಪರಿಣಾಮ ಗ್ರಾಮೀಣ ಪ್ರದೇಶದ ಜನರು ಉದ್ಯೋಗಕ್ಕಾಗಿ ನಗರ ಪ್ರದೇಶಗಳಿಗೆ ವಲಸೆ ಹೋಗುತ್ತಿದ್ದಾರೆ. ಸರ್ಕಾರ ಕೃಷಿಯನ್ನು ಮೂಲ ಉದ್ಯೋಗವನ್ನಾಗಿ ಪರಿಗಣಿಸಿ ಕೃಷಿಕರ ಪರವಾದ ನೀತಿಗಳನ್ನು ಜಾರಿಗೊಳಿಸುವಂತೆ ತಿಳಿಸಿದರು.
ಬೆಂಗಳೂರು ವಿಭಾಗ ಸಂಘಟನಾ ಕಾರ್ಯದರ್ಶಿ ದೊಡ್ಡಮಲ್ಲಯ್ಯ ಮಾತನಾಡಿ, ತಾಲ್ಲೂಕಿನಲ್ಲಿ ಒಂದು ವರ್ಷಗಳ ಕಾಲ ನೂತನವಾಗಿ ನಗರ ಘಟಕವನ್ನು ಸ್ಥಾಪನೆ ಮಾಡಲಾಗಿದೆ. ರೈತ ಸಂಘ ಪ್ರಾರಂಭವಾಗಿ ೪೬ ವರ್ಷಗಳು ಕಳದಿದ್ದು, ರೈತ ಪರ ಹೋರಾಟ ಸೈದ್ಧಾಂತಿಕವಾಗಿ ಮುಂದುವರೆಯುತ್ತಿದೆ. ಸರ್ಕಾರ ಬಂಡವಾಳ ಶಾಹಿಗಳ ಪರವಾಗಿ ಕೆಲಸ ಮಾಡಿ ರೈತರಿಗೆ ಅನ್ಯಾಯ ಮಾಡಿದೆ ಆರೋಪಿಸಿದರು.
ತಾ.ಅಧ್ಯಕ್ಷ ರಂಗಹನುಮಯ್ಯ ಮಾತನಾಡಿ, ರೈತ ಸಂಘದ ಜಿಲ್ಲಾ ಸಮಿತಿ ಮತ್ತು ತಾಲ್ಲೂಕು ಸಮಿತಿ ನೇತೃತ್ವದಲ್ಲಿ ಕೊರಟಗೆರೆ ನಗರ ಘಟಕಕ್ಕೆ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಗಿದೆ. ಪದಾಧಿಕಾರಿಗಳು ತಾಲ್ಲೂಕಿನ ಪ್ರತಿ ಹಳ್ಳಿಗಳಲ್ಲಿ ರೈತ ಸಂಘ ಕಟ್ಟುವಂತಹ ಕೆಲಸ ಮಾಡಬೇಕಿದೆ ಎಂದು ಹೇಳಿದರು.
ಈ ವೇಳೆ ರೈತ ಸಂಘದ ಪ್ರಧಾನ ಕಾರ್ಯದರ್ಶಿ ಶಬ್ಬೀರ್ ಬಾಷಾ, ಜಿಲ್ಲಾ ಮಹಿಳಾ ಅಧ್ಯಕ್ಷೆ ನಾಗರತ್ನಮ್ಮ, ಸೋಮಶೇಖರಯ್ಯ, ದೇವರಾಜ್, ಲಕ್ಕಣ್ಣ, ನರಸಿಂಹಮೂರ್ತಿ, ಮುದ್ದಬಸವಯ್ಯ, ಕೃಷ್ಣಪ್ಪ, ಶ್ರೀನಿವಾಸ್, ಮೂಡ್ಲಪ್ಪ ಸೇರಿದಂತೆ ಇತರರು ಹಾಜರಿದ್ದರು.
ನೂತನ ಪದಾಧಿಕಾರಿಗಳ ಆಯ್ಕೆ:
ಕರ್ನಾಟಕ ರಾಜ್ಯ ರೈತ ಸಂಘದ ಜಿಲ್ಲಾ ಸಮಿತಿ ಮತ್ತು ತಾಲ್ಲೂಕು ಸಮಿತಿ ನೇತೃತ್ವದಲ್ಲಿ ನೂತನವಾಗಿ ಕೊರಟಗೆರೆ ನಗರ ಘಟಕವನ್ನು ರಚಿಸಿ ಪದಾಧಿಕಾರಿಗಳನ್ನು ಆಯ್ಕೆ ಮಾಡಿದ್ದು, ಗೌರವಾಧ್ಯಕ್ಷರಾಗಿ ಬಿ.ಜಿ ನರಸಿಂಹಯ್ಯ, ಅಧ್ಯಕ್ಷ ಮಾರುತಿ ಕೆ.ಆರ್, ಉಪಾಧ್ಯಕ್ಷ ಲಕ್ಷ್ಮೀಪತಿ ಪತಿ, ಲಕ್ಷ್ಮಣ ಕೆ.ವಿ, ಖಚಾಂಚಿ ಶ್ರೀನಿವಾಸ್ ಕೆ.ಆರ್, ಪ್ರಧಾನ ಕಾರ್ಯದರ್ಶಿ ಸಿದ್ಧರಾಜು ಕೆ.ಜೆ, ರಾಕೇಶ್ ಕೆ.ಆರ್, ಸಹ ಕಾರ್ಯದರ್ಶಿ ದಿನೇಶ್, ಕೆ.ಎಸ್ ಪುನೀತ್ ಕುಮಾರ್, ರಂಗನಾಥ್ ಕೆ.ಪಿ, ಸಂಘಟನಾ ಸಂಚಾಲಕ ರಂಗಯ್ಯ ಕೆ.ಎಚ್, ಮೈಲಾರಯ್ಯ ಕೆ.ಎಲ್, ಮಂಜುನಾಥ್, ಚೇತನ್, ಕೆ.ರಮೇಶ್, ಗೋಪಾಲ, ಮಹಿಳಾ ಮತ್ತು ತಾತ್ಕಲಿಕ ನಗರ ಘಟಕ ಸಂಚಾಲಕಿಯಾಗಿ ಅನಿತಲಕ್ಷ್ಮಿ, ಶಿವಮ್ಮ, ತಿಮ್ಮಕ್ಕ, ಗಂಗಮ್ಮ, ಸರಸ್ವತಮ್ಮ, ರಾಧಮ್ಮ ಆಯ್ಕೆಯಾಗಿದ್ದಾರೆ.
ವರದಿ: ಮಂಜುಸ್ವಾಮಿ ಎಂ.ಎನ್.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/ISmeQjik4LbG9KvWhKlbCC


